ಬಿಡದಿಯಲ್ಲಿ ಪಾಕ್ ಪರ ಜೈಕಾರ, ಕನ್ನಡಿಗರ ಬಗ್ಗೆ ಅವಹೇಳನ ಬರಹ: ಇಬ್ಬರ ಬಂಧನ
ಬಿಡದಿಯ ಟೊಯೋಟಾ ಬುಷೋಕೊ ಕಾರ್ಖಾನೆಯ ಶೌಚಾಲಯದ ಗೋಡೆಯ ಮೇಲೆ ದೇಶದ್ರೋಹಿ ಬರಹ ಬರೆದ ಆರೋಪದ ಮೇಲೆ ಇಬ್ಬರು ಯುವಕರನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕರ್ನಾಟಕದ ಹೈಮದ್ ಹುಸೇನ್ ಮತ್ತು ಸಾದಿಕ್ ಎಂಬುವವರು ಬಂಧಿತರು. ಕನ್ನಡಿಗರನ್ನು ಅವಮಾನಿಸುವ ಪದಗಳನ್ನೂ ಬಳಸಲಾಗಿತ್ತು. ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ರಾಮನಗರ, ಮಾರ್ಚ್ 19: ಬಿಡದಿಯ (Bidadi) ಕಾರ್ಖಾನೆಯಲ್ಲಿ ಪಾಕಿಸ್ತಾನದ ಪರ ಗೋಡೆ ಬರಹ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಿಡದಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ (arrests). ಉತ್ತರ ಕರ್ನಾಟಕದ ಹೈಮದ್ ಹುಸೇನ್(24) ಮತ್ತು ಸಾದಿಕ್(20) ಬಂಧಿತರು. ಟೊಯೋಟಾ ಬೊಶೋಕು ಕಾರ್ಖಾನೆಯಲ್ಲಿ ಇಬ್ಬರೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನದ ಪರ ಬರಹ ಬರೆಯಲಾಗಿತ್ತು. ಜೊತೆಗೆ ಕನ್ನಡಿಗರ ಬಗ್ಗೆಯೂ ಅವಹೇಳನ ಪದ ಬಳಕೆ ಮಾಡಿದ್ದರು. ಹೀಗಾಗಿ ದೇಶದ್ರೋಹದ ಆರೋಪದಡಿ ಇದೀಗ ಇಬ್ಬರನ್ನು ಬಂಧಿಸಲಾಗಿದೆ.
ಜಿಲ್ಲೆಯ ಬಿಡದಿ ಬಳಿ ಇರುವ ಟೊಯೋಟಾ ಬೋಷೂಕೂ ಆಟೋಮೇಟಿವ್ ಇಂಡಿಯಾ ಕಂಪನಿಯ ಒಳಗಿರುವ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನ ಕೀ ಜೈ, ಪಾಕಿಸ್ತಾನಕ್ಕೆ ಜಯವಾಗಲಿ ಹಾಗೂ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಬರಹ ಒಂದನ್ನು ಬರೆಯಲಾಗಿತ್ತು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಇದನ್ನೂ ಓದಿ: ರಾಮನಗರ: ಪ್ರತಿಷ್ಠಿತ ಕಂಪನಿಯಲ್ಲಿ ದೇಶದ್ರೋಹ ಕೃತ್ಯ, ಪಾಕಿಸ್ತಾನ ಪರ ಬರಹ
ಹೌದು. ಒಟ್ಟು 2 ಸಾವಿರಕ್ಕೂ ಹೆಚ್ಚು ಕಾರ್ಮಿಕರಿರುವ ಈ ಕಂಪನಿಯಲ್ಲಿ ಮೂರು ಶಿಫ್ಟ್ ಆಗಿ ಕಾರ್ಮಿಕರು ಕೆಲಸ ಮಾಡ್ತಿದ್ದು, ಪ್ರತಿ ಶಿಫ್ಟ್ಗೂ 600 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮಾರ್ಚ್ 16ರಂದು ಮೊದಲನೇ ಶಿಫ್ಟ್ನಲ್ಲಿ ಕೆಲಸ ಮಾಡುವ ವೇಳೆ ಕಿಡಿಗೇಡಿಗಳು, ಈ ರೀತಿ ಪದ ಬರೆದಿದ್ದು, ಈ ಪ್ರಕರಣವನ್ನು ಕಂಪನಿಯ ಆಡಳಿತ ಮಂಡಲಿ ಮುಚ್ಚಾಕುವ ಹುನ್ನಾರ ಮಾಡಿತ್ತು. ಕೇವಲ ನೋಟಿಸ್ ಬೋರ್ಡ್ನಲ್ಲಿ ಒಂದು ಪೋಸ್ಟರ್ ಅಂಟಿಸುವ ಮೂಲಕ ಕೇವಲ ವಾರ್ನಿಂಗ್ ಕೊಡುವ ಕೆಲಸಕ್ಕೆ ಮುಂದಾಗಿತ್ತು. ಈ ಸಂಬಂಧ ಬಿಡದಿ ಪೋಲಿಸರು ಕಂಪನಿಗೆ ಭೇಟಿ ನೀಡಿ ಪರಿಶೀಲಿಸಲಾಗಿ ಕಿಡಿಗೇಡಿ ವಿರುದ್ದ ಪ್ರಕರಣ ದಾಖಲಾಗಿತ್ತು.
ಇನ್ನೂ ಈ ವಿಚಾರ ಬೆಳಕಿಗೆ ಬರ್ತಿದ್ದಂತೆ ಕನ್ನಡಪರ ಸಂಘಟನೆಗಳು ಕಾರ್ಖಾನೆ ಬಳಿ ಜಮಾಹಿಸಿದ್ದರು. ಕಂಪನಿಯ ಆಡಳಿತ ಮಂಡಲಿಯ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ದೇಶದ್ರೋಹಿ ಪದ ಬಳಕೆ ಹಾಗೂ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವ ಆ ಕಿಡಿಗೇಡಿ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಕಳೆದ 1 ವರ್ಷದ ಹಿಂದೆ ಕೂಡ ಇದೇ ರೀತಿ ಘಟನೆ ನಡೆದ್ರೂ ಕೂಡ ಆಡಳಿತ ಮಂಡಲಿ ಮುಚ್ಚಾಕುವ ಕೆಲಸ ಮಾಡಿತ್ತು. ಈಗಲೂ ಸಹ ಕೇವಲ ನೋಟಿಸ್ ನೀಡಿ ಈ ಪ್ರಕರಣಕ್ಕೆ ಸುಖಾಂತ್ಯ ಮಾಡೋದಕ್ಕೆ ಮುಂದಾಗಿತ್ತು. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಈ ರೀತಿ ಬರಹ ಬರೆದಿರುವ ಕಿಡಿಗೇಡಿಯನ್ನು ಕೆಲಸದಿಂದ ವಜಾಗೊಳಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಲಾಗಿತ್ತು.
ಇದನ್ನೂ ಓದಿ: ಮಹಾ ಶಿವರಾತ್ರಿಯಂದೇ ಬಾಡೂಟ ಸವಿದ ಜನರು
ಆದಷ್ಟು ಬೇಗ ಕ್ರಮ ಆಗಬೇಕು, ಇಲ್ಲವಾದಲ್ಲಿ ಮುಂದೆ ಎಲ್ಲಾ ಕನ್ನಡಪರ ಸಂಘಟನೆಗಳು ನಿಮ್ಮ ಕಾರ್ಖಾನೆಯ ಮುಂಭಾಗ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ಸಹ ನೀಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:02 pm, Wed, 19 March 25