ರಾಮನಗರದಿಂದ ಕನಕಪುರಕ್ಕೆ ಮೆಡಿಕಲ್ ಕಾಲೇಜು ಸ್ಥಳಾಂತರದ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

| Updated By: ಗಣಪತಿ ಶರ್ಮ

Updated on: Sep 05, 2023 | 4:52 PM

ರಾಮನಗರದಲ್ಲಿ ರಾಜೀವ್‌ ಗಾಂಧಿ ಮೆಡಿಕಲ್‌ ಕಾಲೇಜು ಸ್ಥಾಪನೆ ಗೊಂದಲ ಮುಂದುವರಿದಿರುವ ಬೆನ್ನಲ್ಲೇ ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸೆ.8 ರಂದು ರಾಮನಗರ ಬಂದ್​ಗೆ ಕರೆ ಕೊಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಬಂದ್ ಮಾಡುವವರನ್ನು ಬೇಡ ಎನ್ನಲು ಆಗುತ್ತದೆಯೇ ಎಂದರು.

ರಾಮನಗರದಿಂದ ಕನಕಪುರಕ್ಕೆ ಮೆಡಿಕಲ್ ಕಾಲೇಜು ಸ್ಥಳಾಂತರದ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಡಿಕೆ ಶಿವಕುಮಾರ್
Follow us on

ರಾಮನಗರ, ಸೆಪ್ಟೆಂಬರ್ 5: ರಾಮನಗರದಿಂದ (Ramanagara) ಕನಕಪುರಕ್ಕೆ (Kanakapura) ಮೆಡಿಕಲ್ ಕಾಲೇಜು (Medical College) ಸ್ಥಳಾಂತರಗೊಳ್ಳುವ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರ ಜಿಲ್ಲೆ ಕನಕಪುರದಲ್ಲಿ ಮಂಗಳವಾರ ಮಾತನಾಡಿದ ಅವರು, ಕನಕಪುರಕ್ಕೆ ಮೊದಲೇ ಮೆಡಿಕಲ್ ಕಾಲೇಜು ಮಂಜೂರು ಆಗಿತ್ತು. ಹೆಚ್​ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಬಜೆಟ್​ನಲ್ಲಿ ಘೋಷಣೆ ಮಾಡಿದ್ದರು. ಈಗ ಎರಡೂ ಕಡೆ ಮೆಡಿಕಲ್ ಕಾಲೇಜಿನ ಅವಶ್ಯಕತೆ ಇದೆ. ಕನಕಪುರದಲ್ಲಿ ನಿರ್ಮಾಣ ಆಗುತ್ತಿರುವ ಕಾಲೇಜು ರಾಮನಗರ ಬಳಿ ಇದೆ. ರಾಮನಗರದಲ್ಲಿ ಯೂನಿವರ್ಸಿಟಿ ಆಗಲಿದೆ ಎಂದು ಹೇಳಿದ್ದಾರೆ.

ಮೆಡಿಕಲ್ ಕಾಲೇಜಿಗೆ ರಾಮನಗರ, ಕನಕಪುರದಲ್ಲಿ ಟೆಂಡರ್ ಆಗಿದೆ. ನನ್ನ ಆದ್ಯತೆ ಮೊದಲು ರಾಮನಗರ, ನಂತರ ಕನಕಪುರ ಎಂದು ಶಿವಕುಮಾರ್ ಹೇಳಿದ್ದಾರೆ.

ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸೆ.8 ರಂದು ರಾಮನಗರ ಬಂದ್​ಗೆ ಕರೆ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಂದ್ ಮಾಡುವವರನ್ನು ಬೇಡ ಎನ್ನಲು ಆಗುತ್ತದೆಯೇ ಎಂದರು.

ರಾಮನಗರದಲ್ಲಿ ರಾಜೀವ್‌ ಗಾಂಧಿ ಮೆಡಿಕಲ್‌ ಕಾಲೇಜು ಸ್ಥಾಪನೆ ಗೊಂದಲ ಮುಂದುವರಿದಿರುವ ಬೆನ್ನಲ್ಲೇ ಸಮಿತಿ ಬಂದ್​ಗೆ ಕರೆ ನೀಡಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿಯ ಮೆಡಿಕಲ್ ಕಾಲೇಜು ಯೋಜನೆಯನ್ನು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಬಲವಂತವಾಗಿ ರಾಜೀವ್ ಗಾಂಧಿ ವಿವಿ ಅವರಣದಿಂದ ಕನಕಪುರಕ್ಕೆ ಶಿಫ್ಟ್ ಮಾಡುತ್ತಿದ್ದಾರೆ ಎಂದು‌ ಸಮಿತಿ ಆರೋಪಿಸಿದೆ.

ಇದನ್ನೂ ಓದಿ: ನಮ್ಮ ಮೆಡಿಕಲ್ ಕಾಲೇಜು- ನಮ್ಮ ಹಕ್ಕು ಘೋಷಣೆಯಡಿ ಪೋಸ್ಟರ್, ಸೆ.8ರಂದು ರಾಮನಗರ ಬಂದ್​ಗೆ ಕರೆ

ಭಾರತ್ ಜೋಡೋ ಯಾತ್ರೆ ಸ್ಮರಣಾರ್ಥ ಕಾಲ್ನಡಿಗೆ; ಡಿಕೆ ಶಿವಕುಮಾರ್

ಸೆಪ್ಟೆಂಬರ್ 7ರಂದು ಭಾರತ್ ಜೋಡೋ ಯಾತ್ರೆ 1 ವರ್ಷ ಪೂರೈಸುತ್ತಿರುವ ಕಾರಣ ಅದರ ಸ್ಮರಣಾರ್ಥ ರಾಮನಗರದಲ್ಲಿ ಕಾಲ್ನಡಿಗೆ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್​ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಹಾಗೂ ಕೆಲವು ಮಂದಿ ಸಚಿವರು 1 ಗಂಟೆ ಪಾದಯಾತ್ರೆ ಮಾಡುತ್ತೇವೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಕಾಲ್ನಡಿಗೆ ಮಾಡುತ್ತೇವೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಪಾದಯಾತ್ರೆ ಮಾಡ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಮನಗರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ