ಬಳ್ಳಾರಿ ಜೈಲಲ್ಲೇ ಕುಳಿತು ಬೆಂಗಳೂರು ಸ್ಫೋಟಕ್ಕೆ ಸಂಚು ಹೂಡಿದ್ದ ಶಂಕಿತ ಉಗ್ರ ಎನ್​ಐಎ ವಶಕ್ಕೆ

| Updated By: ಗಣಪತಿ ಶರ್ಮ

Updated on: Mar 08, 2024 | 6:44 AM

Rameshwaram Cafe Bomb Blast Case: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸುಳಿವೊಂದನ್ನು ಭೇದಿಸುವಲ್ಲಿ ಎನ್​ಐಎ ಪೊಲೀಸರು ಯಶಸ್ವಿಯಾಗಿದ್ದಾರೆ. ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಶಂಕಿತ ಉಗ್ರ ನೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಶಂಕಿತ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್​ನ ಹಿನ್ನೆಲೆಯ ಮಾಹಿತಿ ಇಲ್ಲಿದೆ.

ಬಳ್ಳಾರಿ ಜೈಲಲ್ಲೇ ಕುಳಿತು ಬೆಂಗಳೂರು ಸ್ಫೋಟಕ್ಕೆ ಸಂಚು ಹೂಡಿದ್ದ ಶಂಕಿತ ಉಗ್ರ ಎನ್​ಐಎ ವಶಕ್ಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮಾರ್ಚ್​ 8: ಬೆಂಗಳೂರು ರಾಮೇಶ್ವರಂ ಕೆಫೆ (Rameshwaram Cafe) ಬಾಂಬ್ ಸ್ಫೋಟಕ್ಕೆ (Bpmb Blast) ಸಂಬಂಧಿಸಿ ಪ್ರಮುಖ ಸಂಚುಕೋರನೊಬ್ಬನನ್ನು ಬಳ್ಳಾರಿ ಜೈಲಿನಿಂದ (Ballari Central Jail) ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದ ಶಂಕಿತ ಉಗ್ರ ಮಿನಾಜ್ (Minaj) ಅಲಿಯಾಸ್ ಸುಲೇಮಾನ್​ನನ್ನು ಎನ್​ಐಎ ವಶಕ್ಕೆ ಪಡೆದಿದೆ. ಎರಡು ದಿನಗಳಿಂದ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಸುಲೇಮಾನ್ ಬಾಂಬ್ ಸ್ಫೋಟಕ್ಕೆ ಸ್ಕೆಚ್ ಹಾಕಿದ್ದ ಸುಳಿವು ಆಧರಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈತ ಬಳ್ಳಾರಿಯ ಕೌನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದಾನೆ.

ಸುಲೇಮಾನ್​ಗೆ ಐಸಿಸ್ ಉಗ್ರರ ಜತೆ ಸಂಪರ್ಕ ಇತ್ತು. ಈತ ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡುತ್ತಿದ್ದ. 2023 ರ ಡಿಸೆಂಬರ್ 18 ರಂದು ಎನ್​ಐಎ ಅಧಿಕಾರಿಗಳು ಮಿನಾಜ್​​ನನ್ನು ಬಂಧಿಸಿದ್ದರು. ಬಳಿಕ ಆತನನ್ನು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು.

ಮಹತ್ವದ ಸುಳಿವು ಆಧರಿಸಿ ಮಾರ್ಚ್ 6 ರಂದೇ ಶಂಕಿತ ಉಗ್ರ ಮಿನಾಜ್​ನನ್ನು ಎನ್​ಐಎ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ನಂತರ ನ್ಯಾಯಾಲಯಕ್ಕೆ ಬಾಡಿ ವಾರಂಟ್ ಸಲ್ಲಿಸಿ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರಾಮೇಶ್ವರಂ ಕೆಫೆ ಸ್ಪೋಟಕ್ಕೂ ಮಿನಾಜ್​ಗೂ ಸಂಬಂಧವೇನು?

‘ಟಿವಿ9’ಗೆ ಉನ್ನತ ಪೊಲೀಸ್ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಬಳ್ಳಾರಿ ಕೌಲ್ ಬಜಾರ್​​​ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಮಿನಾಜ್ ನಿಷೇಧಿತ ಪಿಎಫ್ಐ ಕಾರ್ಯಕರ್ತನಾಗಿದ್ದ. ಐಸಿಸ್ ಉಗ್ರರ ಜತೆ ನಂಟು ಹೊಂದಿದ್ದ. ಅಲ್ಪಸಂಖ್ಯಾತ ಸಮುದಾಯದ ಯುವಕರನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿದ್ದ. 2023 ರ ಡಿಸೆಂಬರ್ 18 ರಂದು ದೆಹಲಿ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಎನ್​ಐಎ ದಾಳಿ ನಡೆಸಿತ್ತು. ಆಗ ಈತನನ್ನು ಬಂಧಿಸಲಾಗಿತ್ತು.

ಮತ್ತೊಂದೆಡೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವನಿಗಾಗಿ ಎನ್​ಐಎ ಪೊಲೀಸರ ಹಾಗೂ ಸಿಸಿಬಿ ಪೊಲೀಸರ ಶೋಧ ಕಾರ್ಯ ತೀವ್ರಗೊಂಡಿದೆ. ಇದೀಗ ಸುಲೇಮಾನ್​ನನ್ನು ಮತ್ತೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುತ್ತಿರುವುದು, ಕೆಫೆಯಲ್ಲಿ ಬಾಂಬ್ ಇಟ್ಟವನ ಪತ್ತೆಗೆ ನೆರವಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಪೊಲೀಸರಿಗೆ ಸಿಕ್ತು ಶಂಕಿತನ ಟೋಪಿ, ಸುಳಿವು

ಮಾರ್ಚ್ ಒಂದರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಸ್ಪೋಟದಲ್ಲಿ ಐವರ್ ಗಾಯಗೊಂಡಿದ್ದರು. ನಂತರ ಶಂಕಿತ ಉಗ್ರ ತಲೆಮೆರೆಸಿಕೊಂಡಿದ್ದ. ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮತ್ತೊಂದೆಡೆ, ರಾಮೇಶ್ವರಂ ಕೆಫೆ ಇಂದಿನಿಂದ (ಶುಕ್ರವಾರ, ಮಾರ್ಚ್​ 8) ಪುನರಾರಂಭವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ