‘ಅಧಿಕಾರವೊಂದೇ ಜೆಡಿಎಸ್ ಮಂತ್ರ’: ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ತಪ್ಪಿದ ಬೆನ್ನಲ್ಲೇ ಹೆಚ್​ಡಿಕೆ ವಿರುದ್ಧ ಸುರ್ಜೇವಾಲ ವ್ಯಂಗ್ಯ

ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರಿಗೆ ಎನ್​ಡಿಎ ರಾಜ್ಯಸಭಾ ಟಿಕೆಟ್ ನಿರಾಕರಿಸಿದ್ದನ್ನು ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೇಂದ್ರ ಸಚಿವ ಸ್ಥಾನದ ಆಸೆಗೆ ಹೆಚ್​ಡಿ ಕುಮಾರಸ್ವಾಮಿ ತಂದೆಗೆ ಆದ ಅಪಮಾನವನ್ನು ಸಹಿಸಿಕೊಳ್ಳುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ. ಎನ್​ಡಿಎ ಅಭ್ಯರ್ಥಿಯಾಗಿ ಪ್ರೊ. ಎಂ ನಾಗರಾಜ ಅವರನ್ನು ಬಿಜೆಪಿ ಭಾನುವಾರ ತಡರಾತ್ರಿ ಘೋಷಣೆ ಮಾಡಿದೆ.

‘ಅಧಿಕಾರವೊಂದೇ ಜೆಡಿಎಸ್ ಮಂತ್ರ’: ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ತಪ್ಪಿದ ಬೆನ್ನಲ್ಲೇ ಹೆಚ್​ಡಿಕೆ ವಿರುದ್ಧ ಸುರ್ಜೇವಾಲ ವ್ಯಂಗ್ಯ
ಹೆಚ್​ಡಿ ಕುಮಾರಸ್ವಾಮಿ, ಹೆಚ್​ಡಿ ದೇವೇಗೌಡ ಹಾಗೂ ರಣದೀಪ್ ಸುರ್ಜೇವಾಲ (ಪಿಟಿಐ ಚಿತ್ರ)
Image Credit source: PTI

Updated on: Jun 09, 2026 | 9:03 AM

ಬೆಂಗಳೂರು, ಜೂನ್ 8: ರಾಜ್ಯಸಭೆ ಚುನಾವಣೆಗೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರಿಗೆ (HD Deve Goda) ಎನ್​ಡಿಎ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಮೈತ್ರಿಕೂಟದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ (Congress) ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಕೇವಲ ಮಂತ್ರಿ ಕುರ್ಚಿಗೆ ಅಂಟಿಕೊಳ್ಳಲು ಕುಮಾರಸ್ವಾಮಿ ಅವರು ತಮ್ಮ ತಂದೆ, ಮಾಜಿ ಪ್ರಧಾನಿಗಳಿಗೆ ಆಗುತ್ತಿರುವ ನಿರಂತರ ಅಪಮಾನಗಳನ್ನು ಸಹಿಸಿಕೊಳ್ಳುತ್ತಿದ್ದಾರೆ’ಎಂದು ಸುರ್ಜೇವಾಲ ಲೇವಡಿ ಮಾಡಿದ್ದಾರೆ.

ಮುಖ್ಯಾಂಶಗಳು

  • ದೇವೇಗೌಡರಿಗೆ ಟಿಕೆಟ್ ನಿರಾಕರಣೆಗೆ ಕಾಂಗ್ರೆಸ್ ಕಿಡಿ
  • ಕುರ್ಚಿ ಉಳಿಸಿಕೊಳ್ಳಲು ಹೆಚ್‌ಡಿಕೆ ಪರದಾಟ: ವ್ಯಂಗ್ಯ.
  • ಸೋನಿಯಾ ಗಾಂಧಿ ತೋರಿದ್ದ ಗೌರವ ನೆನೆದ ಸುರ್ಜೇವಾಲ.

ಮಾಜಿ ಪ್ರಧಾನಿಗಿಂತ ‘ಕಟ್ಟಡ ನಿರ್ಮಾಣ’ ಉಸ್ತುವಾರಿಯೇ ಬಿಜೆಪಿಗೆ ದೊಡ್ಡವರಾದರೇ: ಸುರ್ಜೇವಾಲ ಪ್ರಶ್ನೆ

ಎಕ್ಸ್ ಪೋಸ್ಟ್‌ನಲ್ಲಿ ತೀಕ್ಷ್ಣ ಪದಗಳನ್ನು ಬಳಸಿರುವ ರಣದೀಪ್ ಸಿಂಗ್ ಸುರ್ಜೇವಾಲ, ‘ಭಾನುವಾರ ಮಧ್ಯರಾತ್ರಿ ಬಿಜೆಪಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರಿಗೆ ರಾಜ್ಯಸಭಾ ನಾಮನಿರ್ದೇಶನವನ್ನು ನಿರಾಕರಿಸಿದೆ. ಮಾಜಿ ಪ್ರಧಾನಿಗಿಂತ ಬಿಜೆಪಿಯ ಜಿಲ್ಲಾ ಮಟ್ಟದ ಕಟ್ಟಡ ನಿರ್ಮಾಣ ಉಸ್ತುವಾರಿಯಾಗಿದ್ದ ರಾಜ್ಯ ಉಪಾಧ್ಯಕ್ಷ ಎಂ. ನಾಗರಾಜ ಅವರಿಗೆ ಮಣೆ ಹಾಕಲಾಗಿದೆ. ಯಾವುದೇ ಬೆಲೆ ತೆತ್ತಾದರೂ ಸಚಿವ ಸ್ಥಾನ ಉಳಿಸಿಕೊಳ್ಳಬೇಕು ಎಂಬ ಒಂದೇ ಕಾರಣಕ್ಕೆ ಬಿಜೆಪಿ ನಾಯಕರು ಜೆಡಿಎಸ್‌ಗೆ ಮಾಡುತ್ತಿರುವ ನಿರಂತರ ಅವಮಾನಗಳನ್ನು ಕುಮಾರಸ್ವಾಮಿ ಸಹಿಸಿಕೊಳ್ಳುತ್ತಿರುವುದು ಅತ್ಯಂತ ಆಶ್ಚರ್ಯಕರ’ ಎಂದು ಟೀಕಿಸಿದ್ದಾರೆ.

ಇತಿಹಾಸ ನೆನಪಿಸಿದ ಕಾಂಗ್ರೆಸ್ ಸುರ್ಜೇವಾಲ

ಜೆಡಿಎಸ್‌ನ ಹಳೆಯ ನಿಲುವುಗಳು ಹಾಗೂ ಇತಿಹಾಸವನ್ನು ನೆನಪಿಸಿರುವ ಸುರ್ಜೇವಾಲ ಐದು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಸ್. ಬಸವರಾಜು ಅವರು ದೇವೇಗೌಡರನ್ನು ಸೋಲಿಸಿದ್ದರು. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಕರ್ನಾಟಕದ ಮಾಜಿ ಪ್ರಧಾನಿ ಎಂಬ ಗೌರವ ನೀಡಿ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ದೇವೇಗೌಡರನ್ನು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಲು ಬೆಂಬಲ ನೀಡಿತ್ತು ಎಂದು ಸುರ್ಜೇವಾಲ ನೆನಪಿಸಿದ್ದಾರೆ.

ಸುರ್ಜೇವಾಲ ಎಕ್ಸ್ ಸಂದೇಶ


ಕುಮಾರಸ್ವಾಮಿ ಏನಾದರೂ ಬಿಜೆಪಿಯೊಂದಿಗೆ ಕೈಜೋಡಿಸಿದರೆ ನಾನು ಅವರನ್ನು ನನ್ನ ಮಗನೆಂದು ಒಪ್ಪುವುದಿಲ್ಲ, ತ್ಯಜಿಸುತ್ತೇನೆ ಎಂದು ಸ್ವತಃ ದೇವೇಗೌಡರೇ ಈ ಹಿಂದೆ ಸಾರ್ವಜನಿಕವಾಗಿ ಹೇಳಿದ್ದರು. ಈ ಎಲ್ಲಾ ಹೇಳಿಕೆಗಳನ್ನು ಗಾಳಿಗೆ ತೂರಿ ಅಕ್ಟೋಬರ್ 2023ರಲ್ಲಿ ಜೆಡಿಎಸ್ ಮತ್ತು ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮೋದಿ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಸಚಿವರಾದರು ಎಂಬುದನ್ನು ಸುರ್ಜೇವಾಲ ನೆನಪಿಸಿದ್ದಾರೆ.

ಇದನ್ನೂ ಓದಿ: ಹೆಚ್​ಡಿ ದೇವೇಗೌಡಗೆ ತಪ್ಪಿದ ಎನ್​ಡಿಎ ರಾಜ್ಯಸಭೆ ಟಿಕೆಟ್: ಪ್ರೊ ಎಂ ನಾಗರಾಜಗೆ ಬಿಜೆಪಿ ಮಣೆ

ಇದೀಗ 2026 ರ ಜೂನ್ 7 ರಂದು ಅದೇ ಬಿಜೆಪಿ ಮಾಜಿ ಪ್ರಧಾನಿಗೆ ರಾಜ್ಯಸಭಾ ಟಿಕೆಟ್ ನಿರಾಕರಿಸಿ ಪಕ್ಷದ ಸಾಮಾನ್ಯ ನಾಯಕನಿಗೆ ಮಣೆ ಹಾಕಿದೆ. ಯಾವ ಬೆಲೆ ತೆತ್ತಾದರೂ ಸರಿ, ಯಾವುದೇ ಪರಿಸ್ಥಿತಿಯಲ್ಲಾದರೂ ಸರಿ, ಅಧಿಕಾರ ಹಿಡಿಯುವುದು ಮತ್ತು ಕುರ್ಚಿ ಉಳಿಸಿಕೊಳ್ಳುವುದು ಮಾತ್ರವೇ ಸದ್ಯ ಕರ್ನಾಟಕದಲ್ಲಿ ಜೆಡಿಎಸ್‌ನ ಏಕೈಕ ಮೂಲಮಂತ್ರ ಮತ್ತು ಸಿದ್ಧಾಂತವಾಗಿದೆ ಎಂಬುದು ಈ ಬೆಳವಣಿಗೆಯಿಂದ ಸಾಬೀತಾಗಿದೆ ಎಂದು ಸುರ್ಜೇವಾಲ ಕುಟುಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:47 am, Mon, 8 June 26

Loading...
Unable to load recommendations.
Follow Us