ಶಬರಿಮಲೆ ಯಾತ್ರೆ ಆರಂಭದಲ್ಲೇ ಮತ್ತೆ ಮುನ್ನೆಲೆಗೆ ಬಂದ ವಾವರ್ ಮಸೀದಿ ವಿವಾದ

ವಾವರ್ ಒಬ್ಬ ಬಾಬರ್ ಆಗಿದ್ದ, ಈತ ಮುಸ್ಲಿಂ, ಈತ ಅಯ್ಯಪ್ಪನ ಸ್ನೇಹಿತ ಎಂದು ಬಿಂಬಿಸಿ ಮಸೀದಿ ನಿರ್ಮಾಣ ಮಾಡಿ ಕೋಟಿ ಕೋಟಿ ಹಣ ಮಸೀದಿಗೆ ಸುರಿಯುವುದು ಅಯ್ಯಪ್ಪನಿಗೆ ಮಾಡಿದ ಅಪಮಾನ ಎಂದು ಹಿಂದೂ ಸಂಘಟನೆಗಳು ಹೇಳಿವೆ.

ಶಬರಿಮಲೆ ಯಾತ್ರೆ ಆರಂಭದಲ್ಲೇ ಮತ್ತೆ ಮುನ್ನೆಲೆಗೆ ಬಂದ ವಾವರ್ ಮಸೀದಿ ವಿವಾದ
ಶಬರಿಮಲೆಯ ಯಾತ್ರೆ ಆರಂಭದಲ್ಲೇ ಮತ್ತೆ ವಾವರ್ ಮಸೀದಿ ಮುನ್ನೆಲೆಗೆ
Edited By:

Updated on: Nov 26, 2022 | 9:52 PM

ಬೆಂಗಳೂರು: ಶಬರಿಮಲೆಯ ಯಾತ್ರೆ ಆರಂಭದಲ್ಲೇ ವಾವರ್ ಮಸೀದಿ ವಿವಾದ (Vavar Mosque Controversy) ಮತ್ತೆ ಮುನ್ನೆಲೆಗೆ ಬಂದಿದ್ದು, ವಾವರ್ ಮಸೀದಿಗೆ ಹಿಂದೂಗಳು ಹೋಗದಂತೆ ಹಿಂದೂ ಜನ ಜಾಗೃತಿ ಸಮಿತಿ ಮನವಿ ಮಾಡಿದೆ. ಈಗಾಗಲೇ ಶಬರಿಮಲೆ ವ್ರತ ಆರಂಭವಾಗಿದೆ. ನಾವು ಶಬರಿಮಲೆಗೆ ಹೋಗುವಾಗ ಘೋರ ತಪ್ಪನ್ನು ಮಾಡುತ್ತಿದ್ದೇವೆ. ಅಲ್ಲಿನ ವಾವರ್ ಮಸೀದಿಗೆ ಹೋಗುವಂತ ಕೆಟ್ಟ ಸಂಪ್ರದಾಯ ಇತ್ತೀಚೆಗೆ ಶುರುವಾಗಿದೆ. ವಾವರ್ ಒಬ್ಬ ಬಾಬರ್ ಆಗಿದ್ದ, ಒಬ್ಬ ಮುಸ್ಲಿಂ ಆಗಿದ್ದ. ಒಬ್ಬ ಕಳ್ಳನನ್ನು, ದರೋಡೆಕೊರನನ್ನು ಅಯ್ಯಪ್ಪ ಸ್ವಾಮಿಯ ಸ್ನೇಹಿತ ಎಂದು ಬಿಂಬಿಸಿ ಅವನ ಘೋರಿಯನ್ನು ಮಸೀದಿಯನ್ನಾಗಿ ಮಾಡಿ ಹಿಂದೂಗಳು ಕೋಟಿಗಟ್ಟಲೇ ಹಣವನ್ನು ಆ ಮಸೀದಿ ಸುರಿಯುವಂತದ್ದು ಹಿಂದೂ ಧರ್ಮಕ್ಕೆ, ಶಬರಿಮಲೆಯ ಅಯ್ಯಪ್ಪನಿಗೆ ಮಾಡಿದ ಅಪಮಾನವಾಗಿದೆ ಎಂದು ಹಿಂದೂ ಜನ ಜಾಗೃತಿ ಸಮಿತಿ ರಾಜ್ಯ ಸಂಚಾಲಕ ಮೋಹನ್ ಗೌಡ ಹೇಳಿದ್ದಾರೆ.

ಹಿಂದೂಗಳ ಮೂರ್ತಿ ಪೂಜೆಯನ್ನು ಒಪ್ಪದ ಒಬ್ಬ ಮುಸ್ಲಿಂ ವಾವರ್ ಹೇಗೆ ಅಯ್ಯಪ್ಪ ಸ್ವಾಮಿ ಭಕ್ತ ಆಗಲು ಸಾಧ್ಯವಿದೆ? ಇಸ್ಲಾಂ ಧರ್ಮ ಹುಟ್ಟಿದ್ದು ಯಾವಾಗ? ಲಕ್ಷ ಲಕ್ಷ ವರ್ಷಗಳ ಹಿಂದೆ ಅಯ್ಯಪ್ಪ ಸ್ವಾಮಿಯ ಜನನ ಆಗಿದೆ. ಹೀಗಿದ್ದಾಗ ಅಯ್ಯಪ್ಪ ಸ್ವಾಮಿ ಮತ್ತು ವಾವರ್​ಗೆ ಹೇಗೆ ಸಂಬಂಧ ಎಂದು ಮಹೋನ್ ಗೌಡ ಪ್ರಶ್ನಿಸಿದರು.

ಇದನ್ನೂ ಓದಿ: House For Rent: ಬೆಂಗಳೂರಲ್ಲಿ ಬಾಡಿಗೆಗೆ ಮನೆ ಬೇಕೆ? ನೀವು ಐಐಟಿ, ಐಐಎಂನಲ್ಲಿ ಓದಿರಬೇಕು!

ಇವತ್ತು ಅಯ್ಯಪ್ಪ ಸ್ವಾಮಿಯ ಭಕ್ತರು ಆ ಮಸೀದಿಗೆ ಹಾಕುವಂತಹ ಹಣ ಯಾವ ರೀತಿ ವಿನಿಯೋಗ ಆಗುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ. ಅಯ್ಯಪ್ಪ ಸ್ವಾಮಿಯ ಭಕ್ತಾಧಿಗಳಲ್ಲಿ ಕಳಕಳಿಯ ವಿನಂತಿ ಇದೆ, ಯಾವುದೇ ಕಾರಣಕ್ಕೂ ಹಿಂದೂಗಳು ವಾವರ್ ಮಸೀದಿಗೆ ಹೋಗಬಾರದು, ಕಾಣಿಕೆಯನ್ನು ಹಾಕಬಾರದು. ಯಾವುದಾದರೂ ಒಬ್ಬ ಮುಸಲ್ಮಾನ ಅಯ್ಯಪ್ಪ ಸ್ವಾಮಿ ಪ್ರಸಾದ ಸ್ವೀಕಾರ ಮಾಡುತ್ತಾರೆಯೇ? ಇಲ್ಲ. ಹೀಗಿರುವಾಗ ಹಿಂದೂ ಅಯ್ಯಪ್ಪ ಭಕ್ತಾಧಿಗಳು ವಾವರ್ ಮಸೀದಿಗೆ ಹೋಗಿ ಯಾಕೆ ಪ್ರಾರ್ಥನೆ ಮಾಡಬೇಕು, ಯಾಕೆ ಕಾಣಿಕೆ ಹಾಕಬೇಕು? ನಾವು ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಮಾತ್ರ ಪಡೆಯಬೇಕು. ವಾವರ್ ದರ್ಶನ ಪಡೆಯಬಾರದು ಎಂದು ಮನವಿ ಮಾಡುತ್ತಿದ್ದೇವೆ ಎಂದರು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:52 pm, Sat, 26 November 22