
ಶಿವಮೊಗ್ಗ, (ಸೆಪ್ಟೆಂಬರ್ 05): ಶಿವಮೊಗ್ಗದ (Shivamogga) ಕೋಟೆ ರಸ್ತೆಯ ಭೀಮೇಶ್ವರ ದೇಗುಲದಲ್ಲಿ ಹಿಂದೂ ಮಹಾಸಭಾ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದ್ದು, ನಾಳೆ(ಸೆಪ್ಟೆಂಬರ್ 06) 11 ದಿನಕ್ಕೆ ಗಣೇಶನ ವಿಸರ್ಜನೆ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆ ಹಿನ್ನಲೆಯಲ್ಲಿ ನಗರವು ಸಂಫೂರ್ಣವಾಗಿ ಕೇಸರಿಮಯವಾಗಿದೆ.ಹಿಂದೂ ಕೇಸರಿ ಅಲಂಕಾರ ಸಮಿತಿಯು ನಗರದ ವಿವಿಧ ವೃತ್ತದಲ್ಲಿ ಪೌರಾಣಿಕ ಸನ್ನಿವೇಶಗಳ ಅಲಂಕಾರ ಮಾಡಿದೆ. ನಗರದ ಕೋಟೆ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕವೃತ್ತ, ಅಮೀರ್ ಅಹ್ಮದ್ ವೃತ್ತ, ನೆಹರು ರಸ್ತೆ, ಗೋಪಿ ವೃತ್ತ, ಎಂಆರ್ ಎಸ್ ಸರ್ಕಲ್ ಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಶಿವಪ್ಪನಾಯಕ ವೃತ್ತದಲ್ಲಿ ಸಮುದ್ರ ಮಂಥನ ಸನ್ನಿವೇಶವಿದೆ. ಇಲ್ಲಿ ಶಿವನ ಮೂರ್ತಿಯು ಪ್ರಮುಖ ಆಕರ್ಷಣೆ ಆಗಿದೆ. ಇನ್ನು ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಪೊಲೀಸರು ಸಹ ನಗರದಲ್ಲಿ ಬಿಗಿಬಂದೋಬಸ್ತ್ ಕೈಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ನಾಳೆ ಶಿವಮೊಗ್ಗ ನಗರದ ಶಾಲೆ ಕಾಲೇಜುಗಳಿಗೆ (ಅಂಗನವಾಡಿಯಿಂದ ಪಿಯುಸಿ) ರಜೆ ಘೋಷಣೆ ಮಾಡಲಾಗಿದೆ.
ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ನಾಳೆ 1ನೇ ತರಗತಿಯಿಂದ ಪಿಯುಸಿವರೆಗೆ ರಜೆ ಶಿವಮೊಗ್ಗ ಬಿಇಒ ರಮೇಶ್ ಆದೇಶ ಹೊರಡಿಸಿದ್ದರೆ, ಪಿಯುಸಿ ಕಾಲೇಜುಗಳಿಗೆ ರಜೆ ನೀಡಿ ಪಿಯು ಡಿಡಿ ಚಂದ್ರಪ್ಪ ಆದೇಶಿಸಿದ್ದಾರೆ.
ನಗರದಲ್ಲಿ ಮಾಡಲಾಗಿರುವ ಅಲಂಕಾರದ ಫೋಟೋ, ಸೇಲ್ಫಿ ಪಡೆಯುತ್ತಿದ್ದಾರೆ. ಇಲ್ಲಿ ತಡರಾತ್ರಿ ವರೆಗೆ ಈ ಸನ್ನಿವೇಶ ನೋಡಲು ಜನರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ರಾತ್ರಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಗಣೇಶನ ಭಕ್ತರು ಇನ್ನೂ ಬಿ.ಎಚ್ ರಸ್ತೆಯಲ್ಲಿ ಧರ್ಮಸ್ಥಳ ಮಂಜುನಾಥ್ ನ ಮುಖ್ಯದ್ವಾರ ಸಿದ್ಧಪಡಿಸಲಾಗಿದೆ. ಅಮೀರ್ ಅಹ್ಮದ್ ವೃತ್ತದಲ್ಲಿ ಆಪರೇಶನ್ ಸಿಂಧೂರ್ ನ ಕಟೌಟ್ ರಾರಾಜಿಸುತ್ತಿವೆ. ಎಂಆರ್ ಎಸ್ ವೃತ್ತದಲ್ಲಿ 10 ಅಡಿ ಎತ್ತರದ ಕತ್ತಿ ಹಿಡಿದ ಶಿವಾಜಿ ಮೂರ್ತಿ ಮತ್ತೊಂದಡೆ ರಾಮ ಬಾಣ ಬಿಡುತ್ತಿರುವ ಮೂರ್ತಿವಿದೆ. ನ್ಯೂಮಂಡ್ಲಿ ವೃತ್ತದಲ್ಲಿ ಮಹಾಭಾರತದ ಸನ್ನಿವೇಶವಿದೆ. ಇಲ್ಲಿ ಕೃಷ್ಣ ಕೈಯಲ್ಲಿ ಚಕ್ರ ಹಿಡಿದಿರುವುದು. ಕೃಷ್ಣನ ಕಾಲು ಹಿಡದಿರುವ ಅರ್ಜುನ. ಎದುರಿನಲ್ಲಿ ಭೀಷ್ಮ ಪಿತಮಹ ರಥದಲ್ಲಿ ನಿಂತಿರುವ ಮೂರ್ತಿ ಇದೆ. ಹೀಗೆ ನಗರದಲ್ಲಿ ಏಲ್ಲಿ ನೋಡಿದ್ರೂ ಹಬ್ಬದ ವಾತಾವರಣ. ನಾಳೆ ಗಣೇಶನ ವಿಸರ್ಜನೆ ಗೆ ಸಂಪೂರ್ಣ ನಗರವು ಸಿದ್ಧಗೊಂಡಿದೆ.
ಹಿಂದೂ ಮಹಾಸಭಾ ಗಣೇಶನ ವಿಸರ್ಜನೆ ಅಂದ್ರೆ ಜನರಿಗೆ ಎಲ್ಲಿಲ್ಲದ ಉತ್ಸಾಹ. ನಾಳೆ ಗಣೇಶನನ್ನು ಅದ್ಧೂರಿಯಾಗಿ ಬಿಳ್ಕೋಡಿಗೆಗೆ ವಿವಿಧ ಸಂಘ ಸಂಸ್ಥೆಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಶಿವಮೊಗ್ಗದಲ್ಲಿ ಗಣೇಶೋತ್ಸವ ಮೆರಣಿಗೆಯ ಒಂದಡೆ ಆದ್ರೆ ಮತ್ತೊಂದಡೆ ದೇಶಾಭಿಮಾನದ ಕಿಚ್ಚು ಜಾಸ್ತಿ ಆಗಿರುತ್ತದೆ. ಹೀಗಾಗಿ ನಗರದೆಲ್ಲಡೆ ಎಲ್ಲಿ ನೋಡಿದ್ರೂ ದೇಶಾಭಿಮಾನದ ಪ್ಲೇಕ್ಸ್, ಬ್ಯಾನರ್ , ಕಟೌಟ್ ಗಳನ್ನು ಹಾಕಲಾಗಿದೆ. ಈಗಾಗಲೇ ಅನೇಕ ಸಂದರ್ಭದಲ್ಲಿ ಶಿವಮೊಗ್ಗದ ಹಿಂದೂ ಮಹಾಸಭಾ ಗಣೇಶನ ವಿಸರ್ಜನೆ ವೇಳೆ ಗಲಾಟೆಗಳು ನಡೆದಿವೆ. ಈ ಹಿನ್ನಲೆಯಲ್ಲಿ ಹಿಂದೂ ಮಹಾಸಭಾ ಗಣೇಶನ ವಿಸರ್ಜನೆ ಆಗುವವರೆಗೆ ಪೊಲೀಸ್ ಇಲಾಖೆಗೆ ಎಲ್ಲಿಲ್ಲದ ಟೆನ್ಷನ್. ನಾಳಿನ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸೇರಿದಂತೆ ಹೊರಜಿಲ್ಲೆಯಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ನಗರದಲ್ಲಿ ಜನಸಾಗರವೇ ಸೇರುವುದರಿಂದ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಬಹುತೇಕ ಬಂದ್ ಆಗಲಿವೆ. ಮದ್ಯ ಮಾರಾಟಕ್ಕೆ ಜಿಲ್ಲಾಢಳಿತ ನಿಷೇಧ ಹೇರಿದೆ.
ಇನ್ನು ಇಂದು (ಸೆಪ್ಟೆಂಬರ್ 5) ಪೊಲಿಸರು ಶಿವಮೊಗ್ಗ ನಗರದ ಪ್ರಮುಖ ರಸ್ತೆಯಲ್ಲಿ ಪಥಸಂಚಲನ ನಡೆಸಿದ್ದಾರೆ. ಶಿವಮೊಗ್ಗದ ಡಿಎಆರ್ ಪೊಲೀಸ್ ಮೈದಾನದಿಂದ ಪಥಸಂಚಲನ ಆರಂಭವಾಗಿದ್ದು, ಅಮೀರ್ ಅಹ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ತೀರ್ಥಹಳ್ಳಿ ರಸ್ತೆಯಲ್ಲಿ ಪಥಸಂಚಲನ ಮಾಡಲಾಗಿದೆ. ಇನ್ನು ಇದರಲ್ಲಿ ಡಿಎಆರ್, ಆರ್ಎಎಫ್, ಕೆಎಸ್ಆರ್ಪಿ, ಸಿವಿಲ್ ಪೊಲೀಸರು ಭಾಗಿಯಾಗಿದ್ದರು.
ಗಣೇಶ ಮೆರವಣಿಗೆ ವೇಳೆ ಸಾವಿರಾರು ಜನರು ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಐವರು ಎಎಸ್ಪಿ, 14 ಡಿವೈಎಸ್ಪಿ, 40 ಪಿಐ, 75 ಪಿಎಸ್ಐ ಸೇರಿದಂತೆ ಶಿವಮೊಗ್ಗದಾದ್ಯಂತ ಭದ್ರತೆಗಾಗಿ 5,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಶಿವಮೊಗ್ಗಕ್ಕೆ ಪೊಲೀಸರು ಆಗಮಿಸಿದ್ದಾರೆ. 15 ಡಿಎಆರ್ ತುಕಡಿ, 20 ಕೆಎಸ್ಆರ್ಪಿ ತುಕಡಿ, ಹೋಮ್ಗಾರ್ಡ್ಸ್ ಬಳಕೆ ಮಾಡಲಾಗಿದೆ. ಇನ್ನು 1 ಸಾವಿರ ಸಿಸಿಕ್ಯಾಮರಾ ಅಳವಡಿಕೆ, 100 ವಿಡಿಯೋ ಕ್ಯಾಮರಾ, ಜನಸಂದಣಿ ಮೇಲೆ ನಿಗಾವಹಿಸಲು 20 ಡ್ರೋನ್ ಕ್ಯಾಮರಾಗಳ ಬಳಕೆ ಮಾಡಲಾಗುತ್ತದೆ.
Published On - 10:34 pm, Fri, 5 September 25