Lease Golmaal: ಸಿಟಿ ಸೆಂಟ್ರಲ್ ಮಾಲ್ ಲೀಸ್ ವಿಸ್ತರಣೆ ವಿವಾದ ಸದ್ಯಕ್ಕೆ ಬಗೆ ಹರಿಯುವ ಲಕ್ಷಣ ಕಾಣುತ್ತಿಲ್ಲ, ಕಾಂಗ್ರೆಸ್ ಹೇಳೊದೇನು?

ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಸಿಟಿ ಸೆಂಟ್ರಲ್ ಮಾಲ್ ಅನ್ನು ಲೀಸ್ ಗೆ ನೀಡಿದ ವಿವಾದವು ಮತ್ತೆ ತಾರಕ್ಕೇರಿದೆ. ಚುನಾವಣೆ ದಿನಗಳು ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಪಾಲಿಕೆಯ ವಿಚಾರದಲ್ಲಿ ಫುಲ್ ಆಕ್ಟೀವ್ ಆಗಿದೆ.

Lease Golmaal: ಸಿಟಿ ಸೆಂಟ್ರಲ್ ಮಾಲ್ ಲೀಸ್ ವಿಸ್ತರಣೆ ವಿವಾದ ಸದ್ಯಕ್ಕೆ ಬಗೆ ಹರಿಯುವ ಲಕ್ಷಣ ಕಾಣುತ್ತಿಲ್ಲ, ಕಾಂಗ್ರೆಸ್ ಹೇಳೊದೇನು?
ಸಿಟಿ ಸೆಂಟ್ರಲ್ ಲೀಸ್ ವಿಸ್ತರಣೆ ವಿವಾದ ಸದ್ಯಕ್ಕೆ ಬಗೆ ಹರಿಯುವ ಲಕ್ಷಣ ಕಾಣುತ್ತಿಲ್ಲ, ಕಾಂಗ್ರೆಸ್ ಹೇಳೊದೇನು?
Follow us
| Updated By: ಸಾಧು ಶ್ರೀನಾಥ್​

Updated on:Dec 08, 2022 | 10:39 AM

ಶಿವಮೊಗ್ಗ (shivamogga) ಮಹಾನಗರ ಪಾಲಿಕೆಯ ಶಿವಪ್ಪ ನಾಯಕ ಮಾರುಕಟ್ಟೆ ವಾಣಿಜ್ಯ ಸಂಕೀರ್ಣದ (shopping mall) ಲೀಸ್ ವಿಸ್ತರಣೆ ವಿವಾದವು ಸದ್ಯಕ್ಕೆ ಬಗೆ ಹರಿಯುವ ಲಕ್ಷಣ ಕಾಣುತ್ತಿಲ್ಲ. ಬಿಜೆಪಿ ಆಡಳಿತದ ಪಾಲಿಕೆಯಲ್ಲಿ ಲೀಸ್ ಮುಗಿಯುವ ಮೊದಲೇ ಸಿಟಿ ಸೆಂಟ್ರಲ್ ಮಾಲ್ ಲೀಸ್ ಅವಧಿಯ (Lease Golmaal) 99 ವರ್ಷದ ಲೀಸ್ ವಿಸ್ತರಣೆಗೆ ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಲೀಸ್ ವಿಸ್ತರಣೆ ಮಾಡಿಸುವುದಕ್ಕೆ ದೊಡ್ಡ ಡೀಲ್ ನಡೆದಿದೆ. ಸಮಿತಿ ಕೊಟ್ಟಿರುವ ತನಿಖಾ ವರದಿ ಬಹಿರಂಗಕ್ಕೆ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು (congress protest) ಹೋರಾಟಕ್ಕೆ ಮುಂದಾಗಿದ್ದಾರೆ.

ಪಾಲಿಕೆ ಮುಖ್ಯದ್ವಾರದ ಬಳಿ ಬುಧವಾರ ಹೈಡ್ರಾಮಾ ನಡೆದಿದೆ. ಪಾಲಿಕೆಯ ಕಾಂಗ್ರೆಸ್ ನ ವಿಪಕ್ಷ ನಾಯಕಿ ರೇಖಾ ರಂಗನಾಥ್ ನೇತೃತ್ವದಲ್ಲಿ ಪಾಲಿಕೆ ಮುತ್ತಿಗೆ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಪಾಲಿಕೆ ಆಡಳಿತ ಇರುವ ಬಿಜೆಪಿಯ ಮೇಯರ್ ಮತ್ತು ಪಾಲಿಕೆಯ ಅಧಿಕಾರಿಗಳ ವಿರುದ್ಧ ಇವರು ಆಕ್ರೋಶ ಹೊರಹಾಕಿದರು. ಪಾಲಿಕೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರನ್ನು ಕೋಟೆ ಪೊಲೀಸರು ತಮ್ಮ ವಶಕ್ಕೆ ಪಡೆದರು. ಅಷ್ಟಕ್ಕೂ ಇವರೆಲ್ಲರೂ ಪಾಲಿಕೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದು ಯಾಕೆ ಅಂತೀರಾ?

ಶಿವಮೊಗ್ಗ ನಗರದ ಅಮೀರ್ ಅಹ್ಮದ್ ವೃತ್ತದ ಬಳಿ ಇರುವ ಶಿವಪ್ಪ ನಾಯಕ ವಾಣಿಜ್ಯ ಮಾರುಕಟ್ಟೆಯನ್ನು ಬ್ಯಾರಿಸ್ ಸಿಟಿ ಸೆಂಟ್ರಲ್ ಮಾಲ್ ಗೆ ಈ ಹಿಂದೆ 33 ವರ್ಷಕ್ಕೆ ಲೀಸ್ ನೀಡಲಾಗಿತ್ತು. ಇನ್ನೂ ಲೀಸ್ ಅವಧಿ 23 ವರ್ಷ ಬಾಕಿಯಿದೆ. ಪ್ರತಿ ತಿಂಗಳು 6.5 ಲಕ್ಷ ರೂಪಾಯಿ ಪಾಲಿಕೆಗೆ ಬಾಡಿಗೆ ಬರುತ್ತಿದೆ. ಈ ನಡುವೆ ಬ್ಯಾರಿಸ್ ಸಿಟಿ ಸೆಂಟ್ರಲ್ ಮಾಲ್ ಗೆ ಅವಧಿ ಮುಗಿಯುವ ಮೊದಲೇ ಮತ್ತೆ 99 ವರ್ಷದ ಅವಧಿಯ ವರೆಗೆ ಲೀಸ್ ಅವಧಿಗೆ ವಿಸ್ತರಣೆಗೆ ಪ್ರಸ್ತಾವನೆ ಮುಂದಿಡಲಾಗಿದೆ.

ಇದನ್ನೂ ಓದಿ: ನೂತನ ಎಎಪಿ ಕೌನ್ಸಿಲರ್‌ಗಳನ್ನು ಬೇಟೆಯಾಡಲು ಯತ್ನಿಸುತ್ತಿರುವ ಬಿಜೆಪಿ: ದೆಹಲಿ ಡಿಸಿಎಂ ಆರೋಪ

ನವೆಂಬರ್ 2020 ಕ್ಕೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಲೀಸ್ ಕುರಿತು ಪ್ರಸ್ತಾವನೆ ತಂದಿದ್ದು ಯಾರು. ಈ ಕುರಿತು ಇಬ್ಬರು ಬಿಜೆಪಿ, ಇಬ್ಬರು ಕಾಂಗ್ರೆಸ್, ಓರ್ವ ಜೆಡಿಎಸ್ ಪಾಲಿಕೆ ಸದಸ್ಯರನ್ನು ಒಳಗೊಂಡ ಒಂದು ಸಮಿತಿ ರಚನೆ ಆಗಿತ್ತು. ಈ ಸಮಿತಿಯು ಈಗಾಗಲೇ ಮೇಯರ್ ಗೆ ವರದಿಯನ್ನು ಕೊಟ್ಟಿದೆ. ಸಮಿತಿಯು ಕೊಟ್ಟ ತನಿಖಾ ವರದಿಯನ್ನು ಬಹಿರಂಗ ಪಡಿಸಲು ಕಾಂಗ್ರೆಸ್ ಪಟ್ಟು ಹಿಡಿದಿದೆ. ವಿರೋಧದ ನಡುವೆ 99 ವರ್ಷ ಲೀಸ್ ಮುಂದುವರೆಸಲು ಆಡಳಿತ ಪಕ್ಷ ಬಿಜೆಪಿಯು ಮುಂದಾಗಿದ್ದು ಏಕೆ ಎನ್ನುವುದು ಮಾತ್ರ ವಿವಾದಕ್ಕೆ ಸದ್ಯ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಹೀಗೆ ಸಿಟಿ ಸೆಂಟ್ರಲ್ ಮಾಲ್ ಲೀಸ್ ಅವಧಿ ಮುಗಿಯುವ ಮುನ್ನವೇ ಅದನ್ನು 99 ವರ್ಷವರೆಗೆ ಪಾಲಿಕೆ ಅಧಿಕಾರಿಗಳು ವಿಸ್ತರಣೆಯ ಪ್ರಸ್ತಾವನೆಯನ್ನು ಸಾಮಾನ್ಯ ಸಭೆ ಮುಂದೆ ತಂದಿದ್ದರು. ಈ ಲೀಸ್ ಅವಧಿ ವಿಸ್ತರಣೆಗೆ ಕುಮ್ಮಕ್ಕು ಕೊಟ್ಟಿದ್ದು ಯಾರು. ಆ ಪಾಲಿಕೆ ಸದಸ್ಯರ ಹೆಸರುಗಳನ್ನು ಬಹಿರಂಗ ಪಡಿಸಬೇಕೆಂದು ಕಾಂಗ್ರೆಸ್ ಪಾಲಿಕೆ ಸದಸ್ಯರು ಮತ್ತು ಕಾರ್ಯಕರ್ತರು ಈಗ ಪಟ್ಟು ಹಿಡಿದ್ದಾರೆ. ಇದರ ಹಿಂದೆ ಬಿಜೆಪಿ ಪಾಲಿಕೆ ಸದಸ್ಯರು ಇರುವುದು ಸದ್ಯ ಗುಟ್ಟು ಆಗಿ ಉಳಿದಿಲ್ಲ. ಹೀಗಾಗಿ ಬಿಜೆಪಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರಸ್ ಪಕ್ಷವು ಮುಂದಾಗಿದೆ.

ಸಮಿತಿಯು ನೀಡಿದ ತನಿಖೆಯ ವರದಿಯನ್ನು ಬಹಿರಂಗ ಪಡಿಸಿ ಎಂದು ಕಾಂಗ್ರೆಸ್ ಪಾಲಿಕೆ ಸದಸ್ಯರು ಪಾಲಿಕೆಯ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು. ಈ ಹಿಂದೆ ಪಾಲಿಕೆಯ ಸಾಮಾನ್ಯ ಸಭೆಗಳು ನಡೆದಾಗ ಈ ಲೀಸ್ ವಿಚಾರವಾಗಿ ಆಡಳಿತ ಮತ್ತು ವಿಪಕ್ಷ ಪಕ್ಷಗಳ ನಡುವೆ ವಾಕ್ ಸಮರಕ್ಕೆ ಸಾಕ್ಷಿಯಾಗಿತ್ತು. ಈ ಲೀಸ್ ವಿಸ್ತರಣೆಗೆ ಶಿವಮೊಗ್ಗ ನಗರದ ಅನೇಕ ನಾಗರಿಕರು ವಿರೋಧ ವ್ಯಕ್ತಪಡಿಸಿದ್ದರು. ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಈ ವಿಷಯವನ್ನು ತರಲು ಹೇಳಿದವರು ಯಾರು? ಹಾಗೂ ಸಭೆಗೆ ತಂದವರು ಯಾರು? ಎಂಬುದರ ಬಗ್ಗೆ ಬಹುಮುಖ್ಯವಾಗಿ ಚರ್ಚಿಸಲಾಗಿತ್ತು.

ಏಕೆಂದರೆ ಅವಧಿ ಮುಗಿಯುವ 3 ತಿಂಗಳ ಮುಂಚಿತವಾಗಿ ಮಾತ್ರ ಬ್ಯಾರಿಸ್ ಸಂಸ್ಥೆಯವರು ಬಾಡಿಗೆ ಮುಂದುವರಿಸಲು ಕೇಳುವ ಅಧಿಕಾರವಿರುತ್ತದೆ. ಇನ್ನೂ 23 ವರ್ಷ ಲೀಸ್ ಅವಧಿ ಇದೆ. ಈ ನಡುವೆ ಲೀಸ್ ಅವಧಿ ವಿಸ್ತರಣೆ ನೆಪದಲ್ಲಿ ಮಾಲ್ ಈ ವಿಚಾರವಾಗಿ ಬಹಳಷ್ಟು ಚರ್ಚೆಗಳು ನಡೆದಿವೆ. ಲೀಸ್ ವಿಸ್ತರಣೆ ಹಿಂದೆ ನಡೆದಿರುವ ಗೋಲ್ ಮಾಲ್ ಕುರಿತು ಸೂಕ್ತ ತನಿಖೆ ಆಗಬೇಕೆಂದು ಪ್ರತಿಭಟನಾಕಾರರು ಮತ್ತು ಕಾಂಗ್ರೆಸ್ ಮುಖಂಡರು ಜಿಲ್ಲಾಡಳಿತಕ್ಕೆ ಒತ್ತಾಯಿಸಿರುವುದಾಗಿ ಮಾಜಿ ನಗರ ಶಾಸಕ ಕೆ.ಬಿ ಪ್ರಸನ್ನಕುಮಾರ್ ಮಾಹಿತಿ ನೀಡಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಸಿಟಿ ಸೆಂಟ್ರಲ್ ಮಾಲ್ ಅನ್ನು ಲೀಸ್ ಗೆ ನೀಡಿದ ವಿವಾದವು ಮತ್ತೆ ತಾರಕ್ಕೇರಿದೆ. ಚುನಾವಣೆ ದಿನಗಳು ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಪಾಲಿಕೆಯ ವಿಚಾರದಲ್ಲಿ ಫುಲ್ ಆಕ್ಟೀವ್ ಆಗಿದೆ. ಪಾಲಿಕೆಯಲ್ಲಿರುವ ಆಡಳಿತ ಪಕ್ಷ ಬಿಜೆಪಿ ಮಾಡಿರುವ ಯಡವಟ್ಟ ಮತ್ತು ಗೋಲ್ ಮಾಲ್ ಸದ್ಯ ಈ ಹೋರಾಟದ ಮೂಲಕ ಬಹಿರಂಗವಾಗುತ್ತಿವೆ. ಲೀಸ್ ವಿಚಾರದ ವರದಿಯಲ್ಲಿ ಏನಿದೆ ಎನ್ನುವುದನ್ನು ಬಹಿರಂಗ ಪಡಿಸದೇ ಇರುವುದು ಮತ್ತಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. (ವರದಿ: ಬಸವರಾಜ್ ಯರಗಣವಿ, ಟಿವಿ 9, ಶಿವಮೊಗ್ಗ)

ಇದನ್ನೂ ಓದಿ: Assembly Election Results 2022 LIVE: ಗುಜರಾತ್​ನಲ್ಲಿ 157 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ; ಹಿಮಾಚಲದಲ್ಲಿ ಕಾಂಗ್ರೆಸ್ ಮುನ್ನಡೆ

Published On - 10:38 am, Thu, 8 December 22