AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿ ಆತ್ಯಹತ್ಯೆ

ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಬಸವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಹತ್ಯೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಬಸವರಾಜ್, ಶರಾವತಿ ವಾರ್ಡ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ರಾಯಚೂರಿನಲ್ಲಿ ಕಾರು ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾಳೆ.

ಶಿವಮೊಗ್ಗ: ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿ ಆತ್ಯಹತ್ಯೆ
ಮೃತ ಬಸವರಾಜ
Basavaraj Yaraganavi
| Edited By: |

Updated on: Aug 03, 2025 | 3:01 PM

Share

ಶಿವಮೊಗ್ಗ, ಆಗಸ್ಟ್​ 03: ಶಿವಮೊಗ್ಗದ (Shivamogga) ಕೇಂದ್ರ ಕಾರಾಗೃಹದಲ್ಲಿನ (Central Jail) ವಿಚಾರಣಾಧೀನ ಓರ್ವ ಕೈದಿ ನೇಣಿಗೆ ಶರಣಾಗಿದ್ದಾನೆ. ಕಾರಾಗೃಹದಲ್ಲಿನ ಶರಾವತಿ ವಾರ್ಡ್​ನ 42ನೇ ರೂಮ್​ನಲ್ಲಿ ವಿಚಾರಣಾಧೀನ ಕೈದಿ ಬಸವರಾಜ್ (38) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಿವಾಸಿಯಾಗಿದ್ದ ಬಸವರಾಜ್ ಕೊಲೆ ಕೇಸ್​ನಲ್ಲಿ ಜೂನ್ 13ರಂದು ಜೈಲು ಸೇರಿದ್ದನು. ಬಸವರಾಜ್​ ಪತ್ನಿ ಮಂಜುಳಾ (32) ರನ್ನು ಶಿಕಾರಿಪುರದ ಸೊಸೈಟಿಕೇರಿಯಲ್ಲಿ ಕೊಲೆ ಮಾಡಿದ್ದನು. ಬಸವರಾಜ್ ಮತ್ತು ಮಂಜುಳಾ ಮದುವೆಯಾಗಿ 15 ವರ್ಷಗಳು ಕಳೆದಿವೆ.

ಮೃತ ಮಂಜುಳಾ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಪತಿ ಬಸವರಾಜ್​ ಪತ್ನಿ ಮಂಜುಳಾಗೆ ಕಿರುಕುಳ ನೀಡುತ್ತಿದ್ದನು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೂನ್ 11ರಂದು ಬಸವರಾಜ್​ ಕುಡಿದ ಅಮಲಿನಲ್ಲಿ ಮಂಜುಳಾ ಕುತ್ತಿಗೆಗೆ ಚಿಮಟದಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದನು. ಪತ್ನಿ ಕೊಂದು ಪರಾರಿಯಾಗಿದ್ದ ಬಸವರಾಜ್​ನನ್ನು ಶಿಕಾರಿಪುರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದರು.

ಬಸವರಾಜ್ ಮತ್ತು ಮಂಜುಳಾ ದಂಪತಿಗೆ ಇಬ್ಬರು ಪುತ್ರಿಯರು, ಓರ್ವ ಪುತ್ರನಿದ್ದಾನೆ. ವಿಚಾರಣಾಧೀನ ಕೈದಿ ಬಸವರಾಜ್ ಶವ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆ ಎದುರು ಮಕ್ಕಳು ಮತ್ತು ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

ಕಾರು ಪಲ್ಟಿ, ಓರ್ವ ಮಹಿಳೆ ಸಾವು

ರಾಯಚೂರು: ಕಾರು ಪಲ್ಟಿಯಾಗಿ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ರಾಯಚೂರು ಹೊರವಲಯದ ಮನ್ಸಲಾಪೂರ ಕ್ರಾಸ್ ಬಳಿ ಘಟನೆ ನಡೆದಿದೆ. ಕಾರಿನಲ್ಲಿದ್ದ ಓರ್ವ ಮಹಿಳೆ‌ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರಿಗೆ ಗಾಯವಾಗೊದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿ‌ನ ಕೊಟ್ರೇಶ್ವರ ನಿವಾಸಿಗಳಾದ ಹಾಜೀರಾ(65) ಸಾವು, ಇಶಾನ್ ಅಬ್ದುಲ್, ಇಲಾನ್ ಇಸ್ಮಾಯಿಲ್, ಮೊಹಮ್ಮದ್ ಇಜಾನ್ ಹಾಗೂ ಮೊಹಮ್ಮದ್ ಇಮ್ರಾನ್​ಗೆ ಗಾಯಗೊಂಡವರು.

ಇದನ್ನೂ ಓದಿ: ದೆವ್ವ ಮೆಟ್ಕೊಂಡಿದೆ ಎಂದು ಮನಸೋ ಇಚ್ಛೆ ಥಳಿತ, ಮಹಿಳೆ ಸಾವು

ಕುಟಂಬ ಉಡುಪಿಯಿಂದ ಕಾರಿನಲ್ಲಿ ಹೈದರಾಬಾದ್​ಗೆ ತೆರಳುತ್ತಿತ್ತು. ಅತೀ ವೇಗ ಹಿನ್ನೆಲೆಯಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ‌ ಕಲ್ಲಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಗಾಯಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ‌ ನೀಡಲಾಗಿದೆ. ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ