ಸಿದ್ದರಾಮಯ್ಯ ಸರ್ಕಾರ ಪೂರೈಸಿದ್ದು ವರುಷ, ಸಾಧಿಸಿದ್ದು ಶೂನ್ಯ: ವಿಜಯೇಂದ್ರ ಟೀಕೆ

|

Updated on: May 20, 2024 | 8:35 AM

ಕರ್ನಾಟಕದ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಭರ್ಜರಿ ಬಹುತ ದೊರೆಯಿತು. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿ ಇಂದಿಗೆ (ಮೇ 20) ಒಂದು ವರ್ಷವಾಗಿದೆ. ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ ಶೂನ್ಯ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪ ಮಾಡಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಪೂರೈಸಿದ್ದು ವರುಷ, ಸಾಧಿಸಿದ್ದು ಶೂನ್ಯ: ವಿಜಯೇಂದ್ರ ಟೀಕೆ
ಕಾಂಗ್ರೆಸ್​ ವಿರುದ್ಧ ಬಿವೈ ವಿಜಯೇಂದ್ರ ವಾಗ್ದಾಳಿ
Follow us on

ಬೆಂಗಳೂರು, ಮೇ 10: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್​ ಸರ್ಕಾರ (Congress Government) ಅಧಿಕಾರಿಕ್ಕೆ ಬಂದು ಇಂದಿಗೆ (ಮೇ 20) ವರ್ಷವಾಯಿತು. ಆದರೆ ಸಾಧಿಸಿದ್ದು ಮಾತ್ರ ಶೂನ್ಯ ಎಂದು ಬಿಜೆಪಿ (BJP) ರಾಜ್ಯಾಧ್ಯಾಕ್ಷ ಬಿವೈ ವಿಜಯೇಂದ್ರ (BY Vijayendra) ಟೀಕೆ ಮಾಡಿದ್ದಾರೆ. “ಪೂರೈಸಿದ್ದು ವರುಷ ಮಾತ್ರ ಆದರೆ, ಸಾಧಿಸಿದ್ದು ಶೂನ್ಯ. ಖಜಾನೆ ಖಾಲಿ ಖಾಲಿ, ವಸೂಲಿ ಭಾರಿ ಭಾರಿ” ಎಂದು ಟ್ವೀಟ್​ ಮೂಲಕ ಹರಿಹಾಯ್ದಿದ್ದಾರೆ.

ರಾಜ್ಯದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್​ ಸರ್ಕಾರ ಒಂದು ವರ್ಷದಲ್ಲಿ ಬಿಟ್ಟಿ ಭಾಗ್ಯಗಳಿಗಾಗಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಪರಿಣಾಮ, ನಿರುದ್ಯೋಗ ಭವಣೆ ಹೆಚ್ಚಾಗಿದೆ. ಶಿಕ್ಷಣ ಕ್ಷೇತ್ರ ಎಡವಿ ಬಿದ್ದಿತು, ಉತ್ಪನ್ನ ಕ್ಷೇತ್ರ ಸೊರಗಿತು. ನಾರಿ ಕುಲ ರಕ್ಷಣೆ ಇಲ್ಲದೆ ನಲುಗಿತು, ಬೆಳೆಯೆಲ್ಲ ಒಣಗಿತು. ದಲಿತ ಕಲ್ಯಾಣ ಕಾರ್ಯಗಳು ಕುಸಿಯಿತು. ಹಿಂದುಳಿದವರ ಅಭಿವೃದ್ಧಿ ಹಿಂದುಳಿಯಿತು. ರೈತರ ಬಾಳು ಗೋಳಾಯಿತು ಎಂದು ಬಿವೈ ವಿಜಯೇಂದ್ರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಜನಪರ ಸರ್ಕಾರದ ಸಾರ್ಥಕ ಒಂದು ವರ್ಷ: ರಣದೀಪ್ ಸುರ್ಜೆವಾಲ ಶ್ಲಾಘನೆ

ವಿಪಕ್ಷದಿಂದ ರಾಜ್ಯಾದ್ಯಂತ ಪ್ರತಿಭಟನೆ

ಸಿದ್ದರಾಮಯ್ಯ ಅವರು ತಮ್ಮ ಸರ್ಕಾರ ಒಂದು ವರ್ಷದಲ್ಲಿ ಏನೇನು ಮಾಡಿದೆ ಎಂದು ಇಂದು (ಮೇ 20) ಸುದ್ದಿಗೋಷ್ಠಿ ನಡೆಸಿ ರಾಜ್ಯದ ಜನತೆ ಮುಂದೆ ಬಿಚ್ಚಿಡಲಿದ್ದಾರೆ. ಮತ್ತೊಂದೆಡೆ ವಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿವೆ.

ಒಂದು ವರ್ಷದಲ್ಲಿ ಸರ್ಕಾರ ಲೋಪ-ದೋಷಗಳು, ವೈಫಲ್ಯಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ರಾಜ್ಯ ಬಿಜೆಪಿ, ತನ್ನ ಎಲ್ಲ ಘಟಕಗಳಿಗೆ ಸೂಚನೆ ನೀಡಿದೆ. ಮತ್ತೊಂದೆಡೆ ವಿಪಕ್ಷದ ಹಿರಿಯ ನಾಯಕರು ಸಹ ಸುದ್ದಿಗೋಷ್ಠಿ ನಡೆಸಿ ಸಮಾಜ ಕಲ್ಯಾಣ, ಆಹಾರ, ಕೃಷಿ ಮತ್ತು ಗೃಹ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ವೈಫಲ್ಯಗಳ ಕುರಿತು ಜನರ ಮುಂದಿಡಲು ತೀರ್ಮಾನಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ