AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಸ್ನೇಹಮಯಿ ಕೃಷ್ಣ ಪ್ರತ್ಯಕ್ಷ: ಹೋರಾಟ ನಿಲ್ಲಿಸಲು ಸಿಎಂ ಪತ್ನಿ ಆಪ್ತರು ಆಮಿಷವೊಡ್ಡಿದ್ದ ಬಗ್ಗೆ ಗಂಭೀರ ಆರೋಪ

ಮುಡಾ ಹಗರಣದ ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಮೂರು ದಿನಗಳ ನಾಪತ್ತೆಯ ನಂತರ ಮತ್ತೆ ಕಾಣಿಸಿಕೊಂಡಿದ್ದಾರೆ. ಹೋರಾಟ ನಿಲ್ಲಿಸಲು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಆಪ್ತರು ಆಮಿಷವೊಡ್ಡಿದ್ದಾರೆ ಮತ್ತು ಸುಳ್ಳು ಕೇಸು ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಲೋಕಾಯುಕ್ತರಿಗೆ ಈ ಬಗ್ಗೆ ದೂರು ನೀಡುವುದಾಗಿ ಹೇಳಿದ್ದು, ಸಿಬಿಐ ತನಿಖೆಗೆ ತಡೆ ಒಡ್ಡಲು ಯತ್ನಿಸುತ್ತಿರುವುದರ ಬಗ್ಗೆಯೂ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸ್ನೇಹಮಯಿ ಕೃಷ್ಣ ಪ್ರತ್ಯಕ್ಷ: ಹೋರಾಟ ನಿಲ್ಲಿಸಲು ಸಿಎಂ ಪತ್ನಿ ಆಪ್ತರು ಆಮಿಷವೊಡ್ಡಿದ್ದ ಬಗ್ಗೆ ಗಂಭೀರ ಆರೋಪ
ಸ್ನೇಹಮಯಿ ಕೃಷ್ಣ
ದಿಲೀಪ್​, ಚೌಡಹಳ್ಳಿ
| Edited By: |

Updated on:Dec 18, 2024 | 12:57 PM

Share

ಬೆಂಗಳೂರು, ಡಿಸೆಂಬರ್ 18: ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಮುಡಾ ಹಗರಣದ ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಕೊನೆಗೂ ಪ್ರತ್ಯಕ್ಷರಾಗಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬರುವ ಹರಕೆ ಸೀರೆಯಲ್ಲಿ ಗೋಲ್​ಮಾಲ್ ನಡೆದಿರುವ ಬಗ್ಗೆ ಧ್ವನಿ ಎತ್ತಿದ್ದ ಅವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಎಫ್​ಐಆರ್ ದಾಖಲಿಸಲಾಗಿತ್ತು. ಆ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್​ ಮಂಗಳವಾರ ತಡೆಯೊಡ್ಡಿತ್ತು. ಅದರ ಬೆನ್ನಲ್ಲೇ ಅವರು ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಹೋರಾಟ ಹತ್ತಿಕ್ಕಲು ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಆರೋಪಿಸಿರುವ ಅವರು, ಹೋರಾಟ ನಿಲ್ಲಿಸಲು ಆಮಿಷವೊಡ್ಡಿದ್ದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ‘ಟಿವಿ9’ ಜತೆ ಮಾತನಾಡಿರುವ ಅವರು, ಮುಡಾ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ. ಹೋರಾಟ ನಿಲ್ಲಿಸಲು ನನಗೆ ಆಮಿಷವೊಡ್ಡಿದ್ದರು. ಆದರೆ, ನಾನು ಯಾವುದಕ್ಕೂ ಒಪ್ಪಲಿಲ್ಲ. ಆ ಕಾರಣಕ್ಕೆ ನನ್ನ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ. ಲೋಕಾಯುಕ್ತ ತನಿಖೆಯಾಗಲಿ, ಸಿಬಿಐಗೆ ಬೇಡ ಎಂದು ನನಗೆ ಆಮಿಷವೊಡ್ಡಿದ್ದರು ಎಂದು ತಿಳಿಸಿದ್ದಾರೆ.

ಸಿಎಂ ಪತ್ನಿಯ ಆಪ್ತರ ಹೆಸರು ಹೇಳಿಕೊಂಡು ಆಮಿಷ: ಸ್ನೇಹಮಯಿ ಕೃಷ್ಣ

ಹರ್ಷ ಹಾಗೂ ಶ್ರೀನಿಧಿ ಎಂಬ ಇಬ್ಬರು ವ್ಯಕ್ತಿಗಳು ಹಣದ ಆಮಿಷವೊಡ್ಡಿದ್ದಾರೆ. ಸಿಎಂ ಪತ್ನಿ ಪಾರ್ವತಿ ಆಪ್ತ ಸಹಾಯಕ ಎಂದು ಹೇಳಿಕೊಂಡಿರುವ ಹರ್ಷ ಹಾಗೂ ಶ್ರೀನಿಧಿ ಡಿಸೆಂಬರ್ 13 ರಂದು ಮುಡಾ ಬಳಿ ಸ್ನೇಹಮಯಿ ಕೃಷ್ಣರನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ.

ಪಾರ್ವತಮ್ಮ ಮಾನಸಿಕವಾಗಿ ನೊಂದಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕೆನ್ನುವ ಅರ್ಜಿ ವಾಪಸ್ ಪಡೆಯಿರಿ. ಲೋಕಾಯುಕ್ತ ಸಮಸ್ಯೆ ನಮಗೆ ಏನು ಸಮಸ್ಯೆ ಇಲ್ಲ. ಸಿಬಿಐ ಆದರೆ ನಮಗೆ ಸಮಸ್ಯೆ ಇದೆ. ನಿಮಗೆ ಎಷ್ಟು ಹಣ ಬೇಕು ಕೇಳಿ ನಾವು ಕೊಡುತ್ತೇವೆಂದು ಹರ್ಷ ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನ ಸ್ನೇಹಮಯಿ ಕೃಷ್ಣ ನಿರಾಕರಿಸಿದ್ದಾರೆ.

ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಕೆ

ಡಿಸೆಂಬರ್ 15 ರಂದು ಸ್ನೇಹಮಯಿ ಕೃಷ್ಣ ಮನೆಗೆ ತೆರಳಿ ಮಗನ ಬಳಿಯಲ್ಲಿ ಇದೇ ವಿಚಾರ ಪ್ರಸ್ತಾಪ ಮಾಡಲಾಗಿದೆ. ಈಗಾಗಲೇ ಇನ್ನೊಬ್ಬ ಹೋರಾಟಗಾರ ಗಂಗರಾಜ್​ಗೆ ಮೂರು ಕೋಟಿ ರೂಪಾಯಿ ಮಾತನಾಡಿ ಒಂದುವರೆ ಕೋಟಿ ಕೊಟ್ಟಿದ್ದೇವೆ ಎಂದು ಹರ್ಷ ಹಣದ ಬ್ಯಾಗ್ ತೋರಿಸಿದ್ದಾರೆ ಎನ್ನಲಾಹಿದೆ. ಆದರೆ, ಹಣದ ಆಮಿಷಕ್ಕೆ ಒಪ್ಪದ ಸ್ನೇಹಮಯಿ ಕೃಷ್ಣ ಮಗ ಒಪ್ಪಿಲ್ಲ. ಮನೆ ಬಳಿ ಬಂದಿರುವ ವಿಡಿಯೋ, ಫೋನ್ ಮಾಡಿದ ದಾಖಲೆ ಎಲ್ಲಾ ಇಟ್ಟುಕೊಂಡು ಜಾರಿ ನಿರ್ದೇಶನಾಲಯಕ್ಕೆ ಸ್ನೇಹಮಯಿ ಕೃಷ್ಣ ದೂರು ಕೊಟ್ಟಿದ್ದಾರೆ.

ಲೋಕಾಯಕ್ತಕ್ಕೆ ದೂರು ನೀಡುವೆ: ಸ್ನೇಹಮಯಿ ಕೃಷ್ಣ

ಸಿಬಿಐ ತನಿಖೆ ಬೇಡ ಎಂದು ಆಮಿಷವೊಡ್ಡಿದ್ದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡುತ್ತೇನೆ. ಯಾರು, ಯಾವಾಗ ಆಮಿಷವೊಡ್ಡಿದ್ದರು ಎಂಬ ಬಗ್ಗೆ ದೂರಿನಲ್ಲಿ ಉಲ್ಲೇಖಿಸುತ್ತೇನೆ. ಸಿಬಿಐ ತನಿಖೆಯಾದರೆ ಸಿಕ್ಕಿ ಹಾಕಿಕೊಳ್ಳುವ ಭಯ ಶುರುವಾಗಿದೆ. ಹೀಗಾಗಿ ನನ್ನ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವೇ ಇಲ್ಲ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಈ ಹಿಂದೆಯೇ ನನಗೆ ಭದ್ರತೆ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದೆ. ಆದರೆ ಅವರು ಭದ್ರತೆ ನೀಡಿಲ್ಲ, ಕನಿಷ್ಠ ಹಿಂಬರಹ ಸಹ ನೀಡಿಲ್ಲ. ನನಗೆ ಯಾವ ಪೊಲೀಸ್ ಭದ್ರತೆಯೂ ಬೇಡ. ಸಿಎಂ ಸಿದ್ದರಾಮಯ್ಯ ಕೃಪಾಕಟಾಕ್ಷದ ಅಧಿಕಾರಿ ನನಗೆ ಯಾವ ರೀತಿ ರಕ್ಷಣೆ ನೀಡುತ್ತಾರೆ? ಅಲ್ಲವೇ ಎಂದು ಸ್ನೇಹಮಯಿ ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ನಾಪತ್ತೆ

ನನಗೆ ರಾಜ್ಯದ ಜನರ ರಕ್ಷೆ ಇದೆ, ದೇವರ ಕೃಪೆ ಇದೆ, ಅಷ್ಟೇ ಸಾಕು. ನಾಳೆ ಸಿಬಿಐಗೆ ವಹಿಸುವ ಮಹತ್ವದ ವಿಚಾರಣೆ ನಡೆಯಲಿದೆ. ಜಾರಿ ನಿರ್ದೇಶನಾಲಯವನ್ನು ಪ್ರತಿವಾದಿ ಮಾಡುವಂತೆ ಮನವಿ ಮಾಡಲಿದ್ದೇವೆ. ಇದರಿಂದ ಇ.ಡಿ ತನಿಖೆ ಮಾಹಿತಿ ಸಹ ಹೈಕೋರ್ಟ್‌ಗೆ ಸಿಗಲಿದೆ. ಇದು ನಮ್ಮ ಆರೋಪ ಸಾಬೀತುಪಡಿಸಲು ಅನುಕೂಲವಾಗಲಿದೆ. ಹೋರಾಟ ಹತ್ತಿಕ್ಕುವ ಪ್ರಯತ್ನದ ಬಗ್ಗೆಯೂ ಹೈಕೋರ್ಟ್ ಗಮನಕ್ಕೆ ತರುತ್ತೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:21 am, Wed, 18 December 24

Follow Us
Dileep CP
Dileep CP

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಅದನ್ನು ಹೊರತು ಪಡಿಸಿದರೆ ಒಂದಷ್ಟು ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More