ಸುಹಾಸ್ ಶೆಟ್ಟಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ಇಬ್ಬರು ಹಿಂದೂಗಳು ಯಾರು? ಅವರ ಹಿನ್ನೆಲೆ ಏನು?
ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧನ ಬೆನ್ನಲ್ಲೇ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದ ಮಾಹಿತಿಯನ್ನು ಮಂಗಳೂರು ಪೊಲೀಸರು ಬಹಿರಂಗಪಡಿಸಿದ್ದಾರೆ, ಈ 8 ಜನರಲ್ಲಿ ಆರು ಜನರು ಮುಸ್ಲಿಂಗಳಾಗಿದ್ದರೆ, ಇನ್ನಿಬ್ಬರು ನಾಗರಾಜ್ ಮತ್ತು ರಂಜಿತ್ ಹಿಂದೂಗಳಾಗಿದ್ದಾರೆ. ಹಾಗಾದ್ರೆ, ಈ ನಾಗರಾಜ್ ಮತ್ತು ರಂಜಿತ್ ಯಾರು? ಇವರ ಹಿನ್ನೆಲೆ ಏನು ಎನ್ನುವ ಡಿಟೇಲ್ಸ್ ಇಲ್ಲಿದೆ.

ಚಿಕ್ಕಮಗಳೂರು/ಮಂಗಳೂರು, (ಮೇ 03): ಹಿಂದೂ ಕಾರ್ಯಕರ್ತ (Hindu Activist), ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ (Suhas Shetty Murder Case) ಸಂಬಂಧಿಸಿದಂತೆ ಈಗಾಗಲೇ ಮಂಗಳೂರು ಪೊಲೀಸರು (Mangaluru Police) 8 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲೇ ಅವಿತುಕೊಂಡಿದ್ದ ವಿಚಾರ ತಿಳಿದಿದ್ದ ಪೊಲೀಸರು, ಎಂಟು ಮಂದಿಯ ಹೆಡೆಮುರಿ ಕಟ್ಟಿದ್ದಾರೆ. ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ಮೊಹಮ್ಮದ್ ರಿಜ್ವಾನ್, ರಂಜಿತ್ ಹಾಗೂ ನಾಗರಾಜ್ನನ್ನ ಬಂಧಿಸಿದ್ದಾರೆ. ಈ ಎಂಟು ಆರೋಪಿಗಳ ಪೈಕಿ ಆರು ಜನರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದರೆ, ಉಳಿದ ಇಬ್ಬರು ರಂಜಿತ್ ಹಾಗೂ ನಾಗರಾಜ್ ಚಿಕ್ಕಮಗಳೂರು ಮೂಲದವರಾಗಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ 8 ಆರೋಪಿಗಳಲ್ಲಿ ನಾಗರಾಜ್ ಮತ್ತು ರಂಜಿತ್ ಎನ್ನುವರು ಹಿಂದೂಗಳಾಗಿದ್ದರೆ, ಇನ್ನುಳಿದ ಆರು ಜನರು ಮುಸ್ಲಿಮರು. ನಾಗರಾಜ್ ಮತ್ತು ರಂಜಿತ್ ಕೂಡ ಸುಹಾಸ್ ಶೆಟ್ಟಿ ಕೇಸ್ನಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಶಂಕಿತ ನಾಗರಾಜ್ , ರಂಜಿತ್ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದವರಾಗಿದ್ದು, ಇವರಿಗೆ ಕಳಸ ಪಟ್ಟಣದಲ್ಲಿ ಮೀನಿನ ವ್ಯಾಪಾರ ಮಾಡುತ್ತಿದ್ದ ನಿಯಾಜ್ ಸ್ನೇಹಿತನಾಗಿದ್ದ.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಕೊಲೆಯಲ್ಲಿ ಯಾರೆಲ್ಲ ಶಾಮೀಲು? ಹತ್ಯೆ ಮಾಡಿದ್ದೇಕೆ? ಇಲ್ಲಿದೆ ಸಮಗ್ರ ಮಾಹಿತಿ
ಹೀಗಾಗಿ ಕಳೆದ ಒಂದು ತಿಂಗಳ ಹಿಂದೆ ಈ ನಾಗರಾಜ್ ,ರಂಜಿತ್ ನಿಯಾಜ್ ಜೊತೆ ತೆರಳಿದ್ದರು. ಇದೀಗ ನಾಗರಾಜ್ ,ರಂಜಿತ್ ಇಬ್ಬರು ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಗೊತ್ತಾಗಿದೆ. ಇತ್ತ ಮಗನ ಬಂಧನದ ವಿಚಾರ ತಿಳಿಯುತ್ತಿದ್ದಂತೆ ಆತನ ಮನೆಯವರು ಬೀಗ ಹಾಕಿ ಹೊರ ಹೋಗಿದ್ದಾರೆ. ಹೀಗಾಗಿ ಕೋಟೆಹೋಳೆ ಗ್ರಾಮದ ನಾಗರಾಜ್ ಮನೆಯ ಹತ್ತಿರ ಪೊಲೀಸರ ನಿಯೋಜನೆ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್, ನಿಯಾಜ್ ಇಬ್ಬರು ಸ್ನೇಹಿತರಾದ ರಂಜಿತ್ ಹಾಗೂ ನಾಗರಾಜ್ ಚಿಕ್ಕಮಗಳೂರಿನ ಕಳಸದಲ್ಲಿ ವಾಸವಿದ್ದಾರೆ. ರಂಜಿತ್ ಹಾಗೂ ನಾಗರಾಜ್ 15 ದಿನಗಳ ಹಿಂದೆ ಅಬ್ದುಲ್ ಸಫ್ವಾನ್ ಮನೆಯಲ್ಲಿ ವಾಸ ಮಾಡಿದ್ದಾರೆ. ಸಫ್ವಾನ್ ಮನೆಗೆ ಬಂದಿದ್ದ ಇವರು, ಸುಹಾಸ್ ಶೆಟ್ಟಿಯನ್ನು ಫಾಲೋ ಮಾಡಿದ್ದಾರೆ. ಈ ಇಬ್ಬರಿಗೆ ಕೆಲವರು ಸುಹಾಸ್ ಶೆಟ್ಟಿ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಇಲ್ಲಿ ಸಿಕ್ಕ ಖಚಿತ ಆಧಾರದ ಮೇಲೆ ಅಂದು ರಾತ್ರಿ ಸುಹಾಸ್ ಶೆಟ್ಟಿ ಮೇಲೆ ದಾಳಿ ಆಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:44 pm, Sat, 3 May 25