ಸುಮಲತಾ ಅಂಬರೀಶ್ ಸ್ವಂತ ಹಣದಿಂದ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಿದ್ದಾರೆ; ಮಂಡ್ಯ ಉಪ ವಿಭಾಗಾಧಿಕಾರಿ ಸ್ಪಷ್ಟನೆ

| Updated By: ganapathi bhat

Updated on: Aug 23, 2021 | 12:43 PM

ಮಂಡ್ಯ ಉಪವಿಭಾಗಾಧಿಕಾರಿಗಳ ಕಾರ್ಯಾಲಯ ಸುಮಲತಾ ಅಂಬರೀಷ್ ಆಕ್ಸಿಜನ್ ಸಿಲಿಂಡರ್ ರಿಫಿಲ್ ಮಾಡಿಸಿಕೊಟ್ಟಿರುವ ಬಗ್ಗೆ ಪತ್ರದ ಮುಖೇನ ಸ್ಪಷ್ಟೀಕರಣ ನೀಡಿದ್ದಾರೆ.

ಸುಮಲತಾ ಅಂಬರೀಶ್ ಸ್ವಂತ ಹಣದಿಂದ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಿದ್ದಾರೆ; ಮಂಡ್ಯ ಉಪ ವಿಭಾಗಾಧಿಕಾರಿ ಸ್ಪಷ್ಟನೆ
ಸುಮಲತಾ ಅಂಬರೀಷ್
Follow us on

ಮಂಡ್ಯ: ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಗೆ ಸಂಸದೆ ಸುಮಲತಾ ಅಂಬರೀಷ್​ ಸ್ವಂತ ಹಣ ಖರ್ಚು ಮಾಡಿ 2 ಸಾವಿರ ಲೀಟರ್​ ಸಾಮರ್ಥ್ಯದ 20 ಜಂಬೋ ಸಿಲಿಂಡರ್​ಗಳನ್ನು ಕೊಡಿಸಿದ್ದಾರೆ ಎಂಬುದು ಸತ್ಯ ಎಂದು ರುಜುವಾತಾಗಿದೆ. ಸಂಸದೆ ಆಕ್ಸಿಜನ್ ಸಿಲಿಂಡರ್ ಕೊಡಿಸಿದ್ದಾರೆ ಎಂದು ಸುದ್ದಿಯಾದ ಬೆನ್ನಲ್ಲೇ ಶಾಸಕರಾದ ರವೀಂದ್ರ ಶ್ರೀಕಂಠಯ್ಯ ಹಾಗೂ ಸುರೇಶ್​ ಗೌಡ ಆ ಸುದ್ದಿ ಸುಳ್ಳು ಎಂದಿದ್ದರು. ಸರ್ಕಾರದಿಂದ ಮಂಜೂರಾದ ಆಕ್ಸಿಜನ್​ ಸಿಲಿಂಡರ್​ಗಳನ್ನೇ ಖರೀದಿಸಿ, ಅದನ್ನು ತಾವೇ ಸ್ವಂತ ಹಣದಲ್ಲಿ ನೀಡಿರುವುದಾಗಿ ಸುಮಲತಾ ಪ್ರಚಾರ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಸುಮಲತಾ ಸ್ವತಃ ತಾವು ವೈದ್ಯಕೀಯ ಆಮ್ಲಜನಕ ಪೂರೈಸಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಲಾಗಿದೆ.

ಮಂಡ್ಯ ಉಪವಿಭಾಗಾಧಿಕಾರಿಗಳ ಕಾರ್ಯಾಲಯ ಸುಮಲತಾ ಅಂಬರೀಷ್ ಆಕ್ಸಿಜನ್ ಸಿಲಿಂಡರ್ ರಿಫಿಲ್ ಮಾಡಿಸಿಕೊಟ್ಟಿರುವ ಬಗ್ಗೆ ಪತ್ರದ ಮುಖೇನ ಸ್ಪಷ್ಟೀಕರಣ ಹಾಗೂ ದೃಢೀಕರಣ ನೀಡಿದೆ. ಕೊವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಉಪವಿಭಾಗದ ಮದ್ದೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊವಿಡಗ ಸೋಂಕಿತರಿಗೆ ಚಿಕಿತ್ಸೆ ನೀಡಲು ಮಾನ್ಯ ಸಂಸದರು ಮಂಡ್ಯ ಲೋಕಸಭಾ ಕ್ಷೇತ್ರ ಇವರು ದಿನಾಂಕ 05.05.2021 ರಿಂದ 06.05.2021ರವರೆಗೆ 18 ಆಕ್ಸಿಜನ್ ಸಿಲಿಂಡರ್​ಗಳನ್ನು ಮತ್ತು 06.05.2021 ರಿಂದ 07.05.2021 ವರೆಗೆ 20 ಆಕ್ಸಿಜನ್ ಸಿಲಿಂಡರ್​ಗಳಿಗೆ ಅಂದರೆ ಒಟ್ಟು 38 ಆಕ್ಸಿಜನ್ ಸಿಲಿಂಡರ್​ಗಳಿಗೆ ರಿಫಿಲಿಂಗ್ ಮಾಡಿಸಿಕೊಟ್ಟಿರುತ್ತಾರೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಇದಕ್ಕೂ ಮೊದಲು ನಡೆದ ಬೆಳವಣಿಗೆಯಲ್ಲಿ, ಸುಮಲತಾ ಅವರ ಕ್ರಮವನ್ನು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ನಾಗಮಂಗಲ ಶಾಸಕ ಸುರೇಶ್ ಗೌಡ ವಿರೋಧಿಸಿದ್ದರು. ಸರ್ಕಾರಿ ಕೋಟದಲ್ಲಿ ಮಂಜೂರಾಗಿದ್ದ ಸಿಲಿಂಡರ್ ಖರೀದಿಗೆ ಅವಕಾಶ ನೀಡಿದ್ದೀರಿ. ಅದಕ್ಕಾಗಿ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬೇಕಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಲಾಗಿತ್ತು.

ಸಭೆಯ ನಡುವೆ ಸಂಸದೆ ಸುಮಲತಾ ಹೊರ ನಡೆದಿದ್ದರು. ಸಭೆಯಿಂದ ಹೋಗಿದ್ದು ಜಿಲ್ಲೆಯ ಜನರಿಗೆ ಮೋಸ ಮಾಡಿದಂತೆ ಎಂದು ರವೀಂದ್ರ ಶ್ರೀಕಂಠಯ್ಯ ಹೇಳಿದ್ದರು. ಇವರು 50 ದಿನಗಳಿಂದ ಮಂಡ್ಯಗೆ ಬಂದಿದ್ದಾರಾ? ಸರ್ಕಾರ ಹಂಚಿಕೆ ಮಾಡಿದ್ದ ಸಿಲಿಂಡರ್ ಖರೀದಿಸಿ ಪ್ರಚಾರ ಪಡೆದರೆ ಮಂಡ್ಯ ಜಿಲ್ಲೆಯ ಜನರಿಗೆ ಮಾಡ್ತಿರೋ ದ್ರೋಹ ಅನ್ನಿಸಲ್ವಾ ಎಂದು ಸುಮಲತಾ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು.

ಮಂಡ್ಯದಲ್ಲಿ ದಿನವೊಂದಕ್ಕೆ 3,000 ಲೀಟರ್ ಆಕ್ಸಿಜನ್ ಕೊರತೆ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಈ ವರ್ಷ ಎಂ.ಪಿ. ಫಂಡ್ ಇಲ್ಲ. ಸರ್ಕಾರಿ ಅನುದಾನ ಮೂಲಗಳು ಬರುವವರೆಗೂ ಕಾಯುವಂತ ಸ್ಥಿತಿಯಲ್ಲಿ ನಾವಿಲ್ಲ. ಅಲ್ಲಿಯವರೆಗೂ ಪ್ರತಿದಿನ 2,000 ಲೀಟರ್ ಆಕ್ಸಿಜನ್ ಸ್ವಂತ ಖರ್ಚಿನಲ್ಲಿ ತಲುಪಿಸುವ ವ್ಯವಸ್ಥೆ ಮಾಡಿದ್ದೇನೆ. ಇದು ನನ್ನ ಕರ್ತವ್ಯ ಎಂದು ಸುಮಲತಾ ಹೇಳಿದ್ದರು.

ಇದನ್ನೂ ಓದಿ: ಕಲಬುರಗಿ ಜಿಲ್ಲೆಗೆ ಬೋಯಿಂಗ್ ಇಂಡಿಯಾ ಸಂಸ್ಥೆಯ 250 ಆಕ್ಸಿಜನ್ ಬೆಡ್ ಆಸ್ಪತ್ರೆ ನಿರ್ಮಾಣ: ಮುರುಗೇಶ್ ನಿರಾಣಿ ಮಾಹಿತಿ

ಆಕ್ಸಿಜನ್ ಪೂರೈಕೆಗಾಗಿ 12 ಸದಸ್ಯರ ಟಾಸ್ಕ್​ಫೋರ್ಸ್ ರಚಿಸಿದ ಸುಪ್ರೀಂ; ಕರ್ನಾಟಕದ ಡಾ.ದೇವಿ ಪ್ರಸಾದ್ ಶೆಟ್ಟಿಗೂ ಸ್ಥಾನ

Published On - 9:26 pm, Sat, 8 May 21