ಕುತಂತ್ರಿಗಳು ನಮ್ಮ ಕುಟುಂಬ ಒಡೆಯೋಕೆ ಸಾಧ್ಯವಿಲ್ಲ; ನನ್ನ ರಾಜಕಾರಣವನ್ನು ಮಂಡ್ಯದಲ್ಲೇ ತೋರಿಸುವೆ: ಸುಮಲತಾ ವಿರುದ್ಧ ಕುಮಾರಸ್ವಾಮಿ ಗರಂ

| Updated By: Skanda

Updated on: Jul 07, 2021 | 12:58 PM

ಸಿನಿಮಾದಲ್ಲಿ ನಡೆಸುವ ರಾಜಕಾರಣವನ್ನು ಇಲ್ಲಿಯೂ ನಡೆಸಬಹುದು ಅಂದುಕೊಂಡಿದ್ದಾರೆ ಅವರು. ಆದರೆ, ಮುಂದಿನ ರಾಜಕಾರಣವನ್ನು ನಾನು ಮಂಡ್ಯದಲ್ಲಿ ತೋರಿಸುತ್ತೇನೆ. ಮಂಡ್ಯದಲ್ಲಿ ನಮ್ಮನ್ನು ಸೋಲಿಸಿದ್ದೀರಾ? ಅಲ್ಲಿಂದಲೇ ಪ್ರಾರಂಭ ಮಾಡುತ್ತೇನೆ: ಹೆಚ್​.ಡಿ.ಕುಮಾರಸ್ವಾಮಿ

ಕುತಂತ್ರಿಗಳು ನಮ್ಮ ಕುಟುಂಬ ಒಡೆಯೋಕೆ ಸಾಧ್ಯವಿಲ್ಲ; ನನ್ನ ರಾಜಕಾರಣವನ್ನು ಮಂಡ್ಯದಲ್ಲೇ ತೋರಿಸುವೆ: ಸುಮಲತಾ ವಿರುದ್ಧ ಕುಮಾರಸ್ವಾಮಿ ಗರಂ
ಹೆಚ್ ಡಿ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್
Follow us on

ಬೆಂಗಳೂರು: ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವಿನ ವಾದ, ಪ್ರತಿವಾದ ತಾರಕಕ್ಕೇರಿದ್ದು, ಸುಮಲತಾಗೆ ನಾನೇಕೆ ಕ್ಷಮೆ ಕೇಳಬೇಕು? ನಾನು ಕ್ಷಮೆ ಕೇಳಬೇಕಾದ ಪದ ಬಳಕೆ ಮಾಡಿಲ್ಲ ಎಂದು ಹೆಚ್​.ಡಿ.ಕುಮಾರಸ್ವಾಮಿ ತಮ್ಮ ಹೇಳಿಕೆಗಳ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣರನ್ನು ನೋಡಿ ಕಲಿತುಕೊಳ್ಳಿ ಎಂದು ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನಮ್ಮ ಕುಟುಂಬ ಒಡೆಯಲು ಪ್ರಜ್ವಲ್ ರೇವಣ್ಣ ಹೆಸರು ಬಳಕೆ ಮಾಡಿಕೊಂಡಿದ್ದಾರೆ. ಕುಟುಂಬ ಒಡೆಯುವ ಕೆಲಸ ಮಾಡುವ ಅವಶ್ಯಕತೆಯಿಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಅವರಂತಹ ಕುತಂತ್ರಿಗಳು ನಮ್ಮ ಕುಟುಂಬ ಒಡೆಯಲು ಸಾಧ್ಯವಿಲ್ಲ. ಇಂಥವರನ್ನ ಬೆಳೆಸಿದರೆ ನನಗೆ ನಷ್ಟವಿಲ್ಲ, ಜನರಿಗೆ ನಷ್ಟವಾಗುತ್ತದೆ. ಮಂಡ್ಯದ ಜನರು, ರಾಜ್ಯದ ಜನರಿಗೆ ನಷ್ಟವಾಗುತ್ತದೆ ಎಂದು ಹೇಳಿರುವ ಹೆಚ್.ಡಿ.ಕುಮಾರಸ್ವಾಮಿ. ಸುಮಲತಾರಿಂದ ನಾನು ಸಂಸ್ಕೃತಿ ಬಗ್ಗೆ ಹೇಳಿಸಿಕೊಳ್ಳಬೇಕಿಲ್ಲ. ಕನ್ನಡ ಪದ ಬಳಕೆ, ಸಂಸ್ಕೃತಿಯ ಬಗ್ಗೆ ನನಗೂ ಗೊತ್ತಿದೆ. ಕ್ಷಮೆ ಕೇಳಬೇಕಾದ ಪದ ಬಳಕೆಯನ್ನು ನಾನು ಮಾಡಿಲ್ಲ ಎಂದು ಹೇಳಿದ್ದಾರೆ.

ಅಂತೆಯೇ, ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡುತ್ತಾ ನಾನು ಅಕ್ರಮ ಗಣಿಗಾರಿಕೆ ಮಾಡಲು ಹೇಳಿದ್ದೆನಾ? ಇದು ನನಗೆ ಸಂಬಂಧ ಇಲ್ಲದ ವಿಚಾರ. ನಾನು ಮುಖ್ಯಮಂತ್ರಿ ಆಗಿದ್ದಾಗ ಅಕ್ರಮ ಗಣಿಗಾರಿಕೆ ನಿಲ್ಲಬೇಕೆಂದು ಆದೇಶ ಮಾಡಿದ್ದೇನೆ. ಕೆಆರ್​ಎಸ್​ ಬಿರುಕು ಬಿಟ್ಟಿದ್ದರೆ ಅಲ್ಲಿಗೆ ಮಾಧ್ಯಮದವರನ್ನು ಕರೆದುಕೊಂಡು ಹೋಗಿ ತೋರಿಸಬೇಕಾಗಿತ್ತು. ಆದರೆ, ಅದರ ಬದಲಿಗೆ ಗಣಿಗಾರಿಕೆ ತೋರಿಸಲು ಹೋಗಿದ್ದಾರೆ. ಸಕ್ರಮ ಗಣಿಗಾರಿಕೆ ಮಾಡುತ್ತಿರುವವರ ಬಳಿ ಹೆದರಿಸಿ ದುಡ್ಡು ವಸೂಲಿ ಮಾಡುವುದು ಅವರ ಮೂಲ ಉದ್ದೇಶ. ಅದಕ್ಕಾಗಿಯೇ ಅವರು ಅಲ್ಲಿಗೆ ಹೋಗಿದ್ದಾರೆ ಎಂದು ದೂಷಿಸಿದ್ದಾರೆ.

ಸಿನಿಮಾದಲ್ಲಿ ನಡೆಸುವ ರಾಜಕಾರಣವನ್ನು ಇಲ್ಲಿಯೂ ನಡೆಸಬಹುದು ಅಂದುಕೊಂಡಿದ್ದಾರೆ ಅವರು. ಆದರೆ, ಮುಂದಿನ ರಾಜಕಾರಣವನ್ನು ನಾನು ಮಂಡ್ಯದಲ್ಲಿ ತೋರಿಸುತ್ತೇನೆ. ಮಂಡ್ಯದಲ್ಲಿ ನಮ್ಮನ್ನು ಸೋಲಿಸಿದ್ದೀರಾ? ಅಲ್ಲಿಂದಲೇ ಪ್ರಾರಂಭ ಮಾಡುತ್ತೇನೆ. ಸಹೋದರ ಅಂಬರೀಶ್ ಮೃತಪಟ್ಟಾಗ ನಾನು ಯಾವ ರೀತಿ ಗೌರವ ಕೊಟ್ಟಿದ್ದೇನೆ ಅಂತ ಜನತೆಗೆ ಗೊತ್ತಿದೆ. ಅವತ್ತು ಅಂಬರೀಶ್ ಮೃತದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದು ಬೇಡ ಅಂದಿದ್ದ ಅವರು ಮಂಡ್ಯಕ್ಕೆ ತೆಗೆದುಕೊಂಡು ಹೋದ ಮೇಲೆ ಮಣ್ಣನ್ನು ಹಚ್ಚಿಕೊಂಡರು. ಇವತ್ತು ಮಂಡ್ಯ ಬಗ್ಗೆ ಮಾತನಾಡುತ್ತಿದ್ದಾರೆ. ಜನರಿಗೆ ಎಲ್ಲವೂ ಗೊತ್ತಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:
ಅಕ್ರಮ ಗಣಿಗಾರಿಕೆ ಪ್ರದೇಶಗಳಿಗೆ ಸುಮಲತಾ ಖುದ್ದು ‘ಟಾರ್ಗೆಟ್​’ ಭೇಟಿ; ಜೆಡಿಎಸ್​ ದಳಪತಿಗಳು ಸಿಡಿಮಿಡಿ 

ನಾನು ಬೆದರಿಕೆಗಳಿಗೆಲ್ಲಾ ಬಗ್ಗೋದಿಲ್ಲ, ಎಂತಹ ಸವಾಲಿದ್ದರೂ ಎದರಿಸೋಕೆ ಸಿದ್ಧ: ಸುಮಲತಾ