ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಕೇಸ್: ಪೊಲೀಸರ ಬೆನ್ನಿಗೆ ನಿಂತ ಸಿಎಂ ಸಿದ್ದರಾಮಯ್ಯ

ಮೈಸೂರಿನ ಉದಯಗಿರಿ ಪೊಲೀಸ್​ ಠಾಣೆ ಮುಂದೆ ಗಲಾಟೆ, ರಾಜಕೀಯವಾಗಿ ತಿರುವು ಪಡೆದುಕೊಳ್ಳುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ-ಪ್ರತ್ಯಾರೋಪ ಜೋರಾಗಿದೆ. ಪ್ರಕರಣದ ಪ್ರಮುಖ ರೂವಾರಿಯೇ ಮಾಜಿ ಸಂಸದ ಪ್ರತಾಪ್ ಸಂಹ ಎಂದು ಕಾಂಗ್ರೆಸ್ ಮುಖಂಡರು ದೂರು ಕೊಟ್ಟಿದ್ದಾರೆ. ಮತ್ತೊಂದೆಡೆ ಬಿಜೆಪಿ ನಾಯಕರು ಸಹ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಓಲೈಕೆ ರಾಜಕಾರಣದಿಂದಲೇ ಈ ರೀತಿಯ ಪ್ರಕಟಣಗಳು ನಡೆಯುತ್ತಿವೆ ಎಂದು ಟೀಕಿಸುತ್ತಿದ್ದಾರೆ. ಇದರ ಮಧ್ಯ ಇದೀಗ ಸಿಎಂ ಸಿದ್ದರಾಮಯ್ಯನವರೇ ಪೊಲೀಸರ ಬೆನ್ನಿಗೆ ನಿಂತಿದ್ದಾರೆ.

ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಕೇಸ್: ಪೊಲೀಸರ ಬೆನ್ನಿಗೆ ನಿಂತ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated By: ರಮೇಶ್ ಬಿ. ಜವಳಗೇರಾ

Updated on: Feb 14, 2025 | 10:06 PM

ಬೆಂಗಳೂರು, (ಫೆಬ್ರವರಿ 14): ಮೈಸೂರಿನ ಉದಯಗಿರಿ ಪೊಲೀಸ್ ಸ್ಟೇಷನ್ (Udayagiri Police Station) ಮೇಲೆಯೇ ರೋಷಾವೇಷ ತೋರಿರುವ ಕಿಡಿಗೇಡಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈಗಾಗಲೇ 20 ಆರೋಪಿಗಳನ್ನ ಬಂಧಿಸಿದ್ದು, ಡಿಸಿಪಿ ಕಾರಿಗೆ ಕಲ್ಲೆಸೆದ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಸಿಸಿಕ್ಯಾಮರಾ, ಮೊಬೈಲ್ ವಿಡಿಯೋ ಆಧರಿಸಿ ನಾಲ್ವರನ್ನ ಬಂಧಿಸಲಾಗಿದ್ದು, ಇನ್ನಷ್ಟು ಆರೋಪಿಗಳಿಗಾಗಿ ಸಿಸಿಬಿ ಬಲೆ ಬೀಸಿದೆ. ಇದರ ಮಧ್ಯ ಇದೀಗ ಸಿಎಂ ಸಿದ್ದರಾಮಯ್ಯನವರೇ (Siddaramaiah) ಪೊಲೀಸರ ಬೆನ್ನಿಗೆ ನಿಂತಿದ್ದು, ಘಟನೆಯಲ್ಲಿ ಭಾಗಿಯಾದವರನ್ನು ಮುಲಾಜಿಲ್ಲದೇ ಬಂಧಿಸಿ ಎಲ್ಲರ ಮೇಲೂ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.

ಮೈಸೂರು ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಫೆಬ್ರವರಿ 14) ಕಾವೇರಿ ನಿವಾಸದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ಸಭೆಯಲ್ಲಿ ಮೈಸೂರು ಡಿಸಿ, ಎಸ್ಪಿ ಹಾಗೂ ಮೈಸೂರು ಪೊಲೀಸ್‌ ಆಯುಕ್ತರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಘಟನೆಯಲ್ಲಿ ಭಾಗಿಯಾದವರನ್ನು ಮುಲಾಜಿಲ್ಲದೇ ಬಂಧಿಸಿ ಎಲ್ಲರ ಮೇಲೂ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಮೈಸೂರು ಉದಯಗಿರಿ ಗಲಭೆಗೆ ಅಸಲಿ ಕಾರಣವೇನು? ಏನೇನಾಯ್ತು? ಇಲ್ಲಿದೆ ಸಮಗ್ರ ಮಾಹಿತಿ

ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದವರು, ಅದಕ್ಕೆ ಪ್ರಚೋದನೆ ನೀಡಿದ ಎಲ್ಲರನ್ನೂ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಇದರ ಜೊತೆಗೆ ತಪ್ಪು ಮಾಡದವರಿಗೆ ಕೂಡ ತೊಂದರೆ ಆಗಬಾರದು. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಬೇಕು. ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ಮಾಡಿದ ಎಲ್ಲರನ್ನೂ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಅಧಿಕಾರಿಕಾರಿಗಳಿಗೆ ನೀಡಿದ್ದಾರೆ.


ಮತ್ತೊಂದೆಡೆ ಘಟನೆ ನಡೆದು ನಾಲ್ಕು ದಿನದ ಬಳಿಕ ಉದಯಗಿರಿ ಠಾಣೆಗೆ ಗೃಹ ಸಚಿವ ಪರಮೇಶ್ವರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು, ಮೈಸೂರು ಅಧಿಕಾರಿಗಳ ಜೊತೆ ಸಭೆ ನಡೆಸಿ ಎಲ್ಲಾ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಮಾತನಾಡಿದ ಪರಮೇಶ್ವರ್, ಆರೋಪಿಗಳು ಎಷ್ಟೇ ಬಲಿಷ್ಟವಾಗಿದ್ರೂ ಅರೆಸ್ಟ್​ ಮಾಡ್ತೀವಿ ಎಂದಿದ್ದಾರೆ.