TV9 Kannada News Live: SSLC-2 ಪರೀಕ್ಷೆ, ಹಿಜಾಬ್ ಧರಿಸಿ ಬಂದವರಿಗಿಲ್ಲ ಅವಕಾಶ! ಈ ಹೊತ್ತಿನ ಪ್ರಮುಖ 4 ಸುದ್ದಿಗಳು ಇಲ್ಲಿವೆ

ಕರ್ನಾಟಕದಾದ್ಯಂತ ಎಸ್‌ಎಸ್‌ಎಲ್‌ಸಿ-2 ಪರೀಕ್ಷೆ ಆರಂಭವಾಗಿದ್ದು, ಹಿಜಾಬ್‌ಗೆ ಅನುಮತಿ ನಿರಾಕರಿಸಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರ 94ನೇ ಜನ್ಮದಿನದ ಸಂಭ್ರಮ ಒಂದೆಡೆಯಾದರೆ, ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಸಾರಿಗೆ ಮುಷ್ಕರದ ಆತಂಕ ದಟ್ಟವಾಗಿದೆ. ಈ ಹೊತ್ತಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

TV9 Kannada News Live: SSLC-2 ಪರೀಕ್ಷೆ, ಹಿಜಾಬ್ ಧರಿಸಿ ಬಂದವರಿಗಿಲ್ಲ ಅವಕಾಶ! ಈ ಹೊತ್ತಿನ ಪ್ರಮುಖ 4 ಸುದ್ದಿಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ (ಎಐ)
Image Credit source: Google Gemini

Updated on: May 18, 2026 | 1:35 PM

ಬೆಂಗಳೂರು, ಮೇ 18: ಬೆಂಗಳೂರು (Bengaluru) ಸೇರಿದಂತೆ ಕರ್ನಾಟಕದಾದ್ಯಂತ ಎಸ್​ಎಸ್​ಎಲ್​​ಸಿ 2ನೇ (SSLC 2 Exam) ಪರೀಕ್ಷೆ ಇಂದಿನಿಂದ (ಮೇ 18) ಆರಂಭವಾಗಿದೆ. ಸರ್ಕಾರ ಇತ್ತೀಚೆಗೆ ಧಾರ್ಮಿಕ ಸಂಕೇತಗಳನ್ನು ಧರಿಸಿ ಪರೀಕ್ಷೆ ಬರೆಯುವ ಬಗ್ಗೆ ಹೊಸ ಆದೇಶ ಹೊರಡಿಸಿದೆ. ಅದರಂತೆ, ಜನಿವಾರ, ಶಿವ ದಾರ, ಲಿಂಗ, ರುದ್ರಾಕ್ಷಿ, ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿದೆ. ಆದಾಗ್ಯೂ, ಎಸ್​ಎಸ್​ಎಲ್​​ಸಿ 2ನೇ ಪರೀಕ್ಷೆಯಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ.

ಎಸ್​ಎಸ್​​ಎಲ್​ಸಿ ಒಂದನೇ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬಿಟ್ಟಿಲ್ಲ. ಅದರಂತೆಯೇ ಈಗ 2ನೇ ಪರೀಕ್ಷೆಯನ್ನೂ ನಡೆಸಲಾಗುತ್ತಿದೆ. ಸರ್ಕಾರದಿಂದ ವಸ್ತ್ರಸಂಹಿತೆ ಬಗ್ಗೆ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಕಳೆದ ಬಾರಿಯಂತೆ ಈಗ ಪರೀಕ್ಷೆ ನಡೆಸುತ್ತಿದ್ದೇವೆ. ಹಿಜಾಬ್ ಧರಿಸಿ ಬಂದ್ ವಿದ್ಯಾರ್ಥಿಗಳಿಗೆ ಹಿಜಾಬ್ ತೆಗಸಿ ಪರೀಕ್ಷೆಗೆ ಅವಕಾಶ ನೀಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದಿನಿಂದ ಮೇ 25 ರವರೆಗೆ SSLC -2 ಪರೀಕ್ಷೆ ನಡೆಯಲಿದೆ. ಈ ವರ್ಷ ಎರಡನೇ ಪರೀಕ್ಷೆಗೆ 1,15,112 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಈ ಪೈಕ 7658 ವಿದ್ಯಾರ್ಥಿಗಳು ಅಂಕ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ.

ಹೆಚ್​ಡಿ ದೇವೇಗೌಡರಿಗೆ 94ನೇ ಹುಟ್ಟುಹಬ್ಬದ ಸಂಭ್ರಮ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​​ಡಿ ದೇವೇಗೌಡರಿಗೆ ಇಂದು 94ನೇ ಜನ್ಮದಿನದ ಸಂಭ್ರಮ. ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದರು. ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಹಾಸನದ ನೀಲವಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಜೆಡಿಎಸ್ ನಾಯಕರು ವಿಶೇಷ ಪೂಜೆ ಸಲ್ಲಿಸಿ ಹಿರಿಯ ನಾಯಕನಿಗೆ ಆಯುರಾರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದರು.

ಕೇರಳ ಸಿಎಂ ಸತೀಶನ್ ಪ್ರಮಾಣವಚನ ಸ್ವೀಕಾರ

ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಪ್ರಮಾಣವಚನ ಸ್ವೀಕರಿಸಿದರು. ನೂತನ ಯುಡಿಎಫ್​ ಸರ್ಕಾರದ ಸಚಿವರಾಗಿ ವಿಡಿ ಸತೀಶನ್ ಜತೆ 20 ಮಂದಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇತ್ತೀಚೆಗೆ ನಡೆದ ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ ನೇತೃತ್ವದ ಯುಡಿಎಫ್ ಭರ್ಜರಿ ಗೆಲುವು ಸಾಧಿಸಿದ್ದು, ದಶಕದ ನಂತರ ಮರಳಿ ಅಧಿಕಾರಕ್ಕೇರಿದೆ.

ಇದನ್ನೂ ಓದಿ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸತೀಶನ್

ಸಾರಿಗೆ ಮುಷ್ಕರ ಬಹುತೇಕ ಫಿಕ್ಸ್

ವೇತನ ಪರಿಷ್ಕರಣೆ ಮತ್ತು ಬಾಕಿ ಹಣ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿರಿಸಿ ಕರ್ನಾಟಕ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿದೆ. ಹೀಗಾಗಿ ಮೇ 20 ರಿಂದ ಕರ್ನಾಟಕದಾದ್ಯಂತ BMTC ಮತ್ತು KSRTC ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ.

ಇದನ್ನೂ ಓದಿ: ಬುಧವಾರದಿಂದ ಸಿಗಲ್ಲ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್! ಸಾರಿಗೆ ಮುಷ್ಕರ ಬಹುತೇಕ ಫಿಕ್ಸ್

ಮುಷ್ಕರ ತಪ್ಪಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸಭೆ ನಿಗದಿಯಾಗಿದ್ದು, ಇದು ಫಲಪ್ರದವಾದರೆ ಮುಷ್ಕರ ಹಿಂಪಡೆಯುವ ಸಾಧ್ಯತೆಯೂ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Mon, 18 May 26

Follow Us