
ಬೆಂಗಳೂರು, (ಫೆಬ್ರವರಿ 03): ಕರ್ನಾಟಕದಲ್ಲಿಂದು (ಫೆಬ್ರವರಿ 03) ಒಂದೇ ದಿನ ಬರೋಬ್ಬರಿ ಏಳು ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ ಐದು ಜನರು ಸಾಲಬಾಧೆಯಿಂದ ಸಾವಿನ ಹಾದಿ ತುಳಿದಿದ್ದರೆ,. ಸಾಲಬಾಧೆಯಿಂದ ಚಿಕ್ಕಬಳ್ಳಾಪುರದಲ್ಲಿ ಇಬ್ಬರು, ಹಾಸನ-1 , ಬೀದರ್-1, ದಾವಣಗೆರೆ ಜಿಲ್ಲೆಯಲ್ಲಿ ಓರ್ವ ರೈತ ಸಾವಿನ ಹಾದಿ ತುಳಿದಿದ್ದಾರೆ. ಇನ್ನು ತುಮಕೂರಿನ ವ್ಯಕ್ತಿ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಇನ್ನು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗೆಳೆಯ ಮೋಸ ಮಾಡಿದ್ದಾನೆಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೀದರ್: ಕೃಷಿಗಾಗಿ ತಾಯಿ ಮಾಡಿದ ಸಾಲದಿಂದ ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ (Bidar) ಜಿಲ್ಲೆಯ ಚಿಟಗುಪ್ಪ ತಾಲೂಕಿನ ರಾಂಪೂರ್ ಗ್ರಾಮದಲ್ಲಿ ನಡೆದಿದೆ. ಗಣೇಶ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಗಣೇಶ್ ತಾಯಿ ಕೃಷಿಗಾಗಿ ಬ್ಯಾಂಕ್ನಲ್ಲಿ ಐದು ಲಕ್ಷ ಸಾಲ ಮಾಡಿದ್ದರು. ಇನ್ನೂ ಗಣೇಶ್ ಕೃಷಿಯನ್ನು ತಾವೇ ನೋಡಿಕೊಳ್ಳುತ್ತಿದ್ದರು. ಬಂದ ಸಾಲದಿಂದ ತೊಗರಿ ಬಿತ್ತನೆ ಮಾಡಿದ್ದರು. ಆದರೆ ಬೆಳೆ ಫಲವತ್ತಾಗಿ ಬರದೇ ಹಾಳಾಗಿ ಹೋಗಿತ್ತು. ಹೀಗಾಗಿ ಸಾಲ ಮರುಪಾವತಿಸಲು ಸಾಧ್ಯವಾಗದೇ ಮನನೊಂದು ಗಣೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನ: ಇನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ರೈತರೊಬ್ಬರು ಆತ್ಮಹತ್ಯೆ ಹಾದಿ ತುಳಿದಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕಂಟೇನಹಳ್ಳಿ ಗ್ರಾಮದ ರೈತ ಕೆ.ಡಿ.ರವಿ(50) ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಮಸ್ತ ಫೈನಾನ್ಸ್ ಬಳಿ 70 ಸಾವಿರ, ಚೈತನ್ಯ ಫೈನಾನ್ಸ್ 60 ಸಾವಿರ, BSS ಬಳಿ ₹60 ಸಾವಿರ, L&T 65 ಸಾವಿರ ಸೇರಿ 9 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದ. ಸಾಲದ ನಡುವೆ ಶುಂಠಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ. ಇದರ ಮಧ್ಯ ಸಾಲದ ಹಣ ಪಾವತಿಸುವಂತೆ ಒತ್ತಡಗಳು ಹೆಚ್ಚಾಗಿದ್ದವು. ಇದರಿಂದ ರೈತ ರವಿ ಸಾವಿನ ಹಾದಿ ಹಿಡಿದಿದ್ದಾನೆ.
ದಾವಣಗೆರೆ: ಸಾಲಬಾಧೆಗೆ ಮನನೊಂದು ನೇಣು ಬಿಗಿದುಕೊಂಡು ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ದೀಟೂರು ಗ್ರಾಮದಲ್ಲಿ ನಡೆದಿದೆ. ದೀಟೂರು ಗ್ರಾಮದ ರೈತ ಸುರೇಶ್(42) ನೇಣಿಗೆ ಶರಣಾದ ರೈತ. ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 32 ಲಕ್ಷ ರೂಪಾಯಿ ಸಾಲ ಮಾಡಿದ್ದ. ಇತ್ತ ಸರಿಯಾಗಿ ಬೆಳೆ ಬಾರದ ಹಿನ್ನೆಲೆಯಲ್ಲಿ ಸಾಲ ಕಟ್ಟಲು ಕಷ್ಟವಾಗಿತ್ತು. ಹೀಗಾಗಿ ಸಾಲ ಮರುಪಾವತಿಸುವಂತೆ ಬ್ಯಾಂಕ್ನಿಂದ ಎರಡು ಬಾರಿ ನೋಟಿಸ್ ಬಂದಿತ್ತು. ಇದರಿಂದ ಮನನೊಂದು ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುಮಕೂರು: ಇನ್ನೊಂದೆಡೆ ತುಮಕೂರಿನಲ್ಲಿ ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಜಿ.ಹೊಸಹಳ್ಳಿ ನಿವಾಸಿ ಪಾಂಡುರಂಗಯ್ಯನ ಮೃತದೇಹ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಸಂಬಂಧಿಕರ ಮನೆಗೆ ಹೋಗುವುದಾಗಿ ಶನಿವಾರ ಹೆಂಡತಿಗೆ ಹೇಳಿ ಮನೆಯಿಂದ ಹೋಗಿದ್ದ. ಆದ್ರೆ, ಇದೀಗ ಪಾಂಡುರಂಗಯ್ಯ ಶವವಾಗಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಕೈ ಸಾಲ ಹೆಚ್ಚಾಗಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ: ಮೈಕ್ರೋ ಫೈನಾನ್ಸ್ ಸಾಲಭಾದೆಯಿಂದ ಮನನೊಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಗಸಂದ್ರ-ಇಡಗೂರು ಗ್ರಾಮದ ಬಳಿ ನಡೆದಿದೆ. ಎಚ್ ನಾಗಸಂದ್ರ ಗ್ರಾಮದ ನಿವಾಸಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ನರಸಿಂಹಯ್ಯ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ನರಸಿಂಹಯ್ಯ, ಎರಡು ಮೂರು ಬಾರಿ ಆಟೋ ಸಹ ಒತ್ತೆ ಒಟ್ಟು ಹಣ ಕಟ್ಟಿದ್ದ ಎನ್ನಲಾಗಿದೆ. ಐಐಎಫ್ಎಲ್ ಸಮಸ್ತಾ ಫೈನಾನ್ಸ್ ಲಿಮಿಟೆಡ್, ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್, ಸ್ಪಂದನ ಸ್ಪೂರ್ತಿ ಫೈನಾನ್ಸ್ ಗಳಲ್ಲಿ 3 ಲಕ್ಷಕ್ಕೂ ಅಧಿಕ ಹಣವನ್ನ ಸಾಲವಾಗಿ ಪಡೆದಿದ್ರು.
ಇನ್ನೂ ಪ್ರತಿ ತಿಂಗಳು ಸಹ 15 ಸಾವಿರಕ್ಕೂ ಅಧಿಕ ಹಣ ಕಂತುಗಳ ರೂಪದಲ್ಲಿ ಕಟ್ಟುತ್ತಿದ್ದು, ನಾಳೆ ಸಹ ಕಂತಿನ ಹಣ ಕಟ್ಟಬೇಕಾಗಿತ್ತು. ಪತ್ನಿ ಪ್ರಭಾವತಿಗೆ ಹಣ ಹೊಂದಿಸಿಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದರು. ಆದ್ರೆ ಮನೆಗೆ ಬರಲಿಲ್ಲ. ಇದರಿಂದ ಆತಂಕಗೊಂಡ ಹೆಂಡ್ತಿ, ಮಗನ ಜೊತೆಗೆ ಹುಡುಕಿಕೊಂಡು ಹೋಗಿದ್ದಾರೆ. ಆದರೆ ನರಸಿಂಹಯ್ಯ ಗ್ರಾಮದ ಇಡಗೂರು ರಸ್ತೆ ಬದಿಯ ಜಮೀನೊಂದರಲ್ಲಿ ಮರಕ್ಕೆ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪಿಎಸ್ಐ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ಮೃತನ ಪತ್ನಿ ಪ್ರಭಾವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ: ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಬೀಚನಹಾನಹಳ್ಳಿ ಗ್ರಾಮದಲ್ಲೂ ಸಹ ಮೈಕ್ರೋಫೈನಾನ್ಸ್ ಸೇರಿದಂತೆ ವಿವಿಧ ಕಡೆ ಟ್ರ್ಯಾಕ್ಟರ್, ಬೈಕ್ ಹಾಗೂ ಮೊಬೈಲ್ ಗೆ ಸಾಲ ಮಾಡಿಕೊಂಡಿದ್ದ 26 ವರ್ಷದ ಗಿರೀಶ್ ಎಂಬಾತ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ತಡರಾತ್ರಿ ಮನೆಯಿಂದ ತೋಟದ ಕಡೆ ಹೋಗಿದ್ದವ ಮಧ್ಯರಾತ್ರಿ ಮನೆಗೆ ಬಂದು ನೇಣಿಗೆ ಶರಣಾಗಿದ್ದಾನೆ. ಬೆಳಿಗ್ಗೆ ಎದ್ದು ಮನೆಯವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಒಂದು ವರ್ಷದ ಹಿಂದೆ ಸಹ ಕೃಷಿಕಾಯಕಕ್ಕೆ ಲೋನ್ ಮಾಡಿ ತಗೊಂಡಿದ್ದ ಟ್ರಾಕ್ಟರ್ ನ್ನ ಸಹ ಜಪ್ತಿ ಮಾಡಲಾಗಿತ್ತಂತೆ, ಇನ್ನೂ ಲೋನ್ ಮೇಲೆ ತಗೊಂಡಿದ್ದ ಬೈಕ್ ಕಂತು ಸಹ ಕಟ್ಟಲು ಕಷ್ಟವಾಗಿತ್ತು. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ನಾಯಿ ಕೊಡೆಗಳಂತೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಬೇರು ಬಿಟ್ಟಿದ್ದು, ಬಡ ಮಧ್ಯಮವರ್ಗದವರಿಗೆ ಇತಿ ಮಿತಿಯಿಲ್ಲದೇ ಸಾಲ ಕೊಟ್ಟು ಕೊನೆಗೆ ಸಾಲ ಕಟ್ಟಲಾಗದೆ ಸಾಯುವಂತಹ ಪರಿಸ್ಥಿತಿಗೆ ದೂಡುತ್ತಿದೆ. ಈ ಬಗ್ಗೆ ಸರ್ಕಾರ ಅದಷ್ಟು ಬೇಗ ಸುಗ್ರೀವಾಜ್ಞೆ ಜಾರಿ ಮಾಡಿ ಮೈಕ್ರೋ ಫೈನಾನ್ಸ್ ಗಳಿಗೆ ಮೂಗುದಾರ ಹಾಕಬೇಕಿದೆ.
ಬೆಂಗಳೂರು: ನಂಬಿದ ಗೆಳೆಯನೊಬ್ಬ ಮೋಸ ಮಾಡಿದನೆಂದು ಬೆಂಗಳೂರು ವಿಶ್ವವಿದ್ಯಾಲಯ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ (death) ಶರಣಾಗಿರುವಂತಹ ಘಟನೆ ನಡೆದಿದೆ. ಕನ್ನಡ ವಿಭಾಗದ ದ್ವಿತೀಯ ವರ್ಷದ ಎಂಎ ಓದುತ್ತಿದ್ದ ಹೆಚ್.ಎನ್.ಪಾವನ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತ ಹೆಚ್.ಎನ್.ಪಾವನ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದ ನಿವಾಸಿ. ನಾನು ಗೆಳೆಯನೊಬ್ಬನನ್ನು ನಂಬಿದ್ದೆ, ಆತನಿಂದ ಮೋಸವಾಗಿದೆ. ಕ್ಷಮಿಸಿ ಅಪ್ಪ, ಅಮ್ಮ.. ಐ ಲವ್ ಯೂ ಎಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಾವುದೇ ಒಂದು ವಿಚಾರಕ್ಕೆ ಮನನೊಂದು ಸಾಯಲು ತವಕಿಸಿ, ಕೊನೆಗೆ ಆತ್ಮಹತ್ಯೆ ಎನ್ನುವ ಕೆಟ್ಟ ಮಾರ್ಗಗಳನ್ನು ಹುಡುಕುತ್ತಾರೆ. ಮನಸ್ಸು ತುಂಬಾ ಸೂಕ್ಷ್ಮವಾದುದು. ಅದಕ್ಕೆ ಸ್ವಲ್ಪ ಘಾಸಿಯಾದರೂ ಅದು ಸಹಿಸಿ ಕೊಳ್ಳುವುದಿಲ್ಲ. ದುರ್ಬಲಗೊಂಡ ಮನಸ್ಸು ಸದಾ ಸಾವಿನ ಕಡೆಯೇ ಆಲೋಚಿಸುತ್ತಿರುತ್ತದೆ. ಸಾಯಲು ಇಂತಹದೇ ಕಾರಣಗಳು ಬೇಕಿಲ್ಲ. ಎಷ್ಟೋ ಸಲ ಕ್ಷುಲ್ಲಕವೆನಿಸಬಹುದಾದ ಘಟನೆಗಳು ಸಾವಿಗೆ ಕಾರಣವಾಗಿರುವುದನ್ನು ಗಮನಿಸಬಹುದಾಗಿದೆ. ಹಲವರು ಹಲವಾರು ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಾಣಬಹುದಾಗಿದೆ. ಎಲ್ಲಾ ಸಮಸ್ಯೆಗೆ ಸಾವು ಒಂದೇ ಪರಿಹಾರವಲ್ಲ. ಈ ಜೀವ ಇರುವುದೇ ಕಷ್ಟಗಳನ್ನು ಭೇದಿಸಿ ಬದುಕಿ ತೋರಿಸಬೇಕು. ಆಗಿದ್ದಾಗ ಮಾತ್ರ ಈ ಜೀವಕ್ಕೆ ಒಂದು ಬೆಲೆ. ಸಮಾಜದಲ್ಲಿ ಮನ್ನಣೆ, ಗೌರವ ಸಿಗುವುದು.
ಸತ್ತು ಸಾಧಿಸುವುದು ಏನಿದೆ? ಇದ್ದು ಸಾಧಿಸುವುದು ಬಹಳಷ್ಟಿದೆ. ಹೀಗಾಗಿ ಎಷ್ಟೇ ಕಷ್ಟ, ನೋವು ಬಂದರೂ ಎದುರಿಸುತ್ತೇನೆಂಬ ದೈರ್ಯ ಮಾಡಬೇಕು. ನಿಮ್ಮ ಮನಸನ್ನು ಗಟ್ಟಿಮಾಡಿಕೊಳ್ಳಬೇಕು. ನಮಗೆ ಅದಾಗಿಯೇ ಬರುವವರೆಗೂ ಇದ್ದಷ್ಟು ದಿನ ಎಲ್ಲರೊಟ್ಟಿಗೆ ನಾವು ನಮ್ಮವರು ಎಂದು ಖುಷಿ ಖುಷಿಯಿಂದ ಸಮಯ ಕಳೆಯಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:23 pm, Mon, 3 February 25