ಪ್ರತ್ಯೇಕ ರಸ್ತೆ ಅಪಘಾತ: ನವ ವಿವಾಹಿತೆ ಸೇರಿ ಮೂವರು ದಾರುಣ ಸಾವು; ಹಲವರಿಗೆ ಗಂಭೀರ ಗಾಯ

ತುಮಕೂರು, ಮೈಸೂರು ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನವವಿವಾಹಿತೆ ಸೇರಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಟ್ರ್ಯಾಕ್ಟರ್​​​ಗೆ ಲಾರಿ ಡಿಕ್ಕಿಯಾಗಿ, ಬೈಕ್​​ ಸ್ಕಿಡ್​​ ಆಗಿ ಮತ್ತು ಬಸ್​​​ನ ಆ್ಯಕ್ಸೆಲ್​​ ಕಟ್​​ ಆಗಿ ಅಪಘಾತಗಳು ಸಂಭವಿಸಿವೆ.

ಪ್ರತ್ಯೇಕ ರಸ್ತೆ ಅಪಘಾತ: ನವ ವಿವಾಹಿತೆ ಸೇರಿ ಮೂವರು ದಾರುಣ ಸಾವು; ಹಲವರಿಗೆ ಗಂಭೀರ ಗಾಯ
ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ
Image Credit source: Tv9 Kannada

Updated on: Jul 17, 2026 | 4:19 PM

ಮುಖ್ಯಾಂಶಗಳು

  • ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರ ದಾರುಣ ಸಾವು
  • ತುಮಕೂರು, ಮೈಸೂರು, ಬಾಗಲಕೋಟೆಯಲ್ಲಿ ಅಪಘಾತ
  • ಮೈಸೂರಿನಲ್ಲಿ ದುರಂತ ಅಂತ್ಯ ಕಂಡ ನವ ವಿವಾಹಿತೆ

ತುಮಕೂರು/ಮೈಸೂರು, ಜುಲೈ 17: ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಟ್ರ್ಯಾಕ್ಟರ್​​ನಲ್ಲಿದ್ದ ಛತ್ತೀಸ್‌ಗಢದ ಬಾರಿ ಲಾಲ್(30) ಮತ್ತು ಗೋಲು(35) ಮೃತ ದುರ್ದೈವಿಗಳಾಗಿದ್ದಾರೆ. ಬೆಂಗಳೂರು ಕಡೆ ಬರುತ್ತಿದ್ದ ಟ್ರ್ಯಾಕ್ಟರ್‌ಗೆ ಬೆಳಿಗ್ಗಿನ ಜಾವ 3 ಗಂಟೆ ಸುಮಾರಿಗೆ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಟ್ರ್ಯಾಕ್ಟರ್​​ನಲ್ಲಿ ಕೂಲಿಗೆಂದು ಬಂದಿದ್ದ ಹಲವರು ಇದ್ದರು ಎನ್ನಲಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ನವವಿವಾಹಿತೆ ದುರ್ಮರಣ

ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದ ಪರಿಣಾಮ ನವವಿವಾಹಿತೆ ದುರ್ಮರಣ ಹೊಂದಿರುವ ಘಟನೆ ಮೈಸೂರಿನ ಆರ್.ಟಿ.ನಗರದ ಸಮೀಪ ನಡೆದಿದೆ. ಮೇಘನಾ(20) ಮೃತ ದುರ್ದೈವಿಯಾಗಿದ್ದು, 15 ದಿನಗಳ ಹಿಂದಷ್ಟೇ ಈಕೆಯನ್ನು ಮೂಕನಹುಂಡಿಯಿಂದ ಬಿದರಗೂಡಿಗೆ ವಿವಾಹ ಮಅಡಿಕೊಡಲಾಗಿತ್ತು. ಹೆಲ್ಮೆಟ್ ಧರಿಸದಿದ್ದರಿಂದ ಗಂಭೀರ ಗಾಯವಾಗಿ ಮೇಘನಾ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಘಟನೆ ಬಗ್ಗೆ ಕುವೆಂಪುನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಬೇಟೆ; 70 ಅಪರಾಧ ಪ್ರಕರಣ ಭೇದಿಸಿ 94 ಖದೀಮರ ಬಂಧನ!

KSRTC ಬಸ್​​ ಎಕ್ಸೆಲ್​​ ಕಟ್​​ ಆಗಿ ಅಪಘಾತ

Bus Accident In Bagalkot

ಹೆದ್ದಾರಿ ಬಿಟ್ಟು ಪಕ್ಕದ ಜಮೀನಿಗೆ ನುಗ್ಗಿರುವ KSRTC ಬಸ್​​

ಮುಂಭಾಗದ ಆ್ಯಕ್ಸೆಲ್​​ ಕಟ್​​ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬಿಟ್ಟು ಪಕ್ಕದ ಜಮೀನಿಗೆ KSRTC ಬಸ್​​ ನುಗ್ಗಿರುವ ಘಟನೆ ಬಾಗಲಕೋಟೆ ಸಮೀಪದ ವಿಜಯಪುರ-ಹುಬ್ಬಳ್ಳಿ ಹೆದ್ದಾರಿಯ ಕುಳಗೇರಿ ಕ್ರಾಸ್ ಮತ್ತು ಗೋವನಕೊಪ್ಪ ಗ್ರಾಮದ ಮಧ್ಯೆ ನಡೆದಿದೆ. ಅಪಘಾತದಲ್ಲಿ ಬಸ್​​ನಲ್ಲಿದ್ದ 6-7 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸಂಭವನೀಯ ದೊಡ್ಡ ಅವಘಡ ತಪ್ಪಿದ್ದು, ಬಸ್​​ನಲ್ಲಿ ಚಾಲಕ ಕಂ ನಿರ್ವಾಹಕರಾಗಿ ಓರ್ವ ಸಿಬ್ಬಂದಿ ಮಾತ್ರ ಇದ್ದರು ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:13 pm, Fri, 17 July 26

Follow Us