SIR ಕರ್ತವ್ಯಕ್ಕೆ ತೆರಳುವಾಗ ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಭುವನಾ ಸಾವು; ಸಿಬ್ಬಂದಿಯಿಂದ ಪ್ರತಿಭಟನೆ

SIR ಕರ್ತವ್ಯಕ್ಕೆ ತೆರಳುವಾಗ ಬೈಕ್​​​ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ವಿಎಒ ಭುವನಾ ಕೊನೆಗೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಇತ್ತ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನೂರಾರು ಕಂದಾಯ ಇಲಾಖೆ ಸಿಬ್ಬಂದಿ ನ್ಯಾಯಕ್ಕಾಗಿ ಪ್ರತಿಭಟನೆ ಮುಂದುವರೆಸಿದ್ದಾರೆ. ಇನ್ನು ದುರಂತಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಯ ಅಮಾನತ್ತಿಗೆ ಒತ್ತಾಯಿಸಿದ್ದಾರೆ.

SIR ಕರ್ತವ್ಯಕ್ಕೆ ತೆರಳುವಾಗ ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಭುವನಾ ಸಾವು; ಸಿಬ್ಬಂದಿಯಿಂದ ಪ್ರತಿಭಟನೆ
ವಿಎಒ ಭುವನಾ
Image Credit source: tv9 kannada
Edited By:

Updated on: Jul 04, 2026 | 7:30 PM

ಮುಖ್ಯಾಂಶಗಳು

  • SIR ಕರ್ತವ್ಯಕ್ಕೆ ತೆರಳುವಾಗ ಭೀಕರ​ ಅಪಘಾತ
  • ಚಿಕಿತ್ಸೆ ಫಲಿಸದೇ ವಿಎಒ ಭುವನಾ ಕೊನೆಯುಸಿರು
  • ಜಿಲ್ಲಾಧಿಕಾರಿ ಕಚೇರಿ ಎದುರು ಭುಗಿಲೆದ್ದ ಆಕ್ರೋಶ

ತುಮಕೂರು, ಜುಲೈ 04: ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ​ ಪ್ರಕ್ರಿಯೆ (SIR) ಕರ್ತವ್ಯಕ್ಕೆ ತೆರಳುವಾಗ ದ್ವಿಚಕ್ರ ವಾಹನ​ ಅಪಘಾತದಲ್ಲಿ ಗಾಯಗೊಂಡಿದ್ದ ವಿಎಒ ಭುವನಾ ಚಿಕಿತ್ಸೆ ಫಲಿಸದೇ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಕೊನೆಯುಸಿರೆಳೆದಿದ್ದಾರೆ (death). ಇಂದು ಬೆಳಗ್ಗೆ ತುಮಕೂರು ತಾಲೂಕಿನ ಗೂಳೂರು ಬಳಿ ಬೈಕ್​​ನಲ್ಲಿ ಎಸ್‌ಐಆರ್ ಪ್ರಕ್ರಿಯೆಯ ವಿಎಒ ಸೂಪರ್‌ವೈಸರ್ ಆಗಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ದುರಂತ ಸಂಭವಿಸಿತ್ತು.

ನಡೆದಿದ್ದೇನು?

ತುಮಕೂರಿನ ಹುಲ್ಲೇನಹಳ್ಳಿಯ ಗ್ರಾಮಲೆಕ್ಕಾಧಿಕಾರಿ ಟಿ. ಬೇಗೂರು ನಿವಾಸಿ ಭುವನಾ, ಇಂದು ಬೆಳಿಗ್ಗೆ ಎಸ್ಐಆರ್ ಕರ್ತವ್ಯಕ್ಕೆ ಸೂಚನೆ ಹಿನ್ನಲೆ ನಿಯುಕ್ತಿಗೊಂಡ ಸ್ಥಳಕ್ಕೆ ತೆರಳುತ್ತಿದ್ದರು. ಹೀಗಾಗಿ ತುಮಕೂರು ಬಸ್ ನಿಲ್ದಾಣದ ಬಳಿ ನಿಲ್ಲಿಸಿದ ತಮ್ಮ ಬೈಕ್​​ನಲ್ಲಿ ಗೂಳೂರಿನ ನಾಡಕಚೇರಿಗೆ ತೆರಳಿದ್ದಾರೆ. ಕುಣಿಗಲ್ ರಸ್ತೆಯ ಗೂಳೂರು ಬಳಿ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ.

ಇದನ್ನೂ ಓದಿ: ತುಮಕೂರು: SIR ಕರ್ತವ್ಯಕ್ಕೆ ತೆರಳುತ್ತಿದ್ದಾಗ ಅಪಘಾತ; ಇಬ್ಬರು ಮಹಿಳಾ ಸಿಬ್ಬಂದಿ ಪೈಕಿ ಓರ್ವರ ಸ್ಥಿತಿ ಗಂಭೀರ

ಹೆಲ್ಮಟ್ ಧರಿಸಿದ್ದರೂ ತಲೆಗೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಭುವನಾ ಕೊನೆಯುಸಿರೆಳೆದಿದ್ದಾರೆ. ತುಮಕೂರು ಜಿಲ್ಲಾಸ್ಪತ್ರೆಗೆ ಮೃತದೇಹ ರವಾನಿಸಲಾಗಿದ್ದು, ಮರಣೋತ್ತರ ಪರಿಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು.

ತಪ್ಪಿತಸ್ಥ ಅಧಿಕಾರಿಯ ಅಮಾನತ್ತಿಗೆ ಒತ್ತಾಯ

ಇನ್ನು ಅಪಘಾತದ ವಿಚಾರ ತಿಳಿದ ತುಮಕೂರಿನ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಕ್ರೋಶಗೊಂಡಿದ್ದಾರೆ. ಈ ಘಟನೆಗೆ ಒತ್ತಡದ ಕೆಲಸವೇ ಹಾಗೂ ಆ ಪರಿಸ್ಥಿತಿಗೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಕಾರಣ ಎಂದು ಆರೋಪಿಸಿದ್ದಾರೆ. ಡಿಸಿ ಕಚೇರಿ ಮುಂದೆ ಮಧ್ಯಾಹ್ನದಿಂದ ಕಂದಾಯ ಇಲಾಖೆಯ ಸಿಬ್ಬಂದಿ ಪ್ರತಿಭಟನೆಗೆ ಕುಳಿತಿದ್ದು, ತಪ್ಪಿತಸ್ಥ ಅಧಿಕಾರಿಯ ಅಮಾನತ್ತಿಗೆ ಒತ್ತಾಯಿಸಿದ್ದಾರೆ.

ನ್ಯಾಯ ಬೇಕೇಬೇಕು: ಶಿವಾನಂದ ಕೆ.ಎಸ್​​

ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಶಿವಾನಂದ ಕೆ.ಎಸ್​​ ಮಾತನಾಡಿದ್ದು, ಬೆಳಗ್ಗೆನೇ ಆಕೆಯ ಜೀವ ಹೋಗಿದೆ ಅಂತ ನಮಗೆ ಮಾಹಿತಿ ಇತ್ತು. ಇದುವರೆಗೆ ವೆಂಟಿಲೇಟರ್ ಏಕೆ ಇಟ್ಟಿದ್ದರು ಗೊತ್ತಿಲ್ಲ. ಆದರೆ ಬೆಳಿಗ್ಗೆ 6 ಗಂಟೆಗೆ ಕೆಲಸ ಶುರು ಮಾಡಿ ಎಂದು ಯಾರು ಹೇಳಿದರು. ಬೆಳಿಗ್ಗೆ 6:30ಕ್ಕೆ ಹೋಗಬೇಕು ಇಲ್ಲವಾದರೇ ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಅಂತ ಯಾರೋ ಹೇಳಿದ್ದಾರೆ. ಹೀಗೆ ಹೇಳಿ ಗ್ರೂಪ್​ಗಳಿಗೆ ಕಳುಹಿಸಿದ ಆಡಿಯೋ ರೆಕಾರ್ಡ್​ ನಮ್ಮ ಬಳಿ ಇದೆ. ಆ ರೀತಿ ಹೇಳಿದವರು ಯಾರು, ಅವರಿಗೆ ಶಿಕ್ಷೆ ಆಗಬೇಕು. ತಹಶೀಲ್ದಾರ್​​​ ಅಥವಾ ಎಸಿ ಯಾರು ಹೇಳಿದ್ದಾರೋ ಅವರು ಅಮಾನತು ಆಗಬೇಕು. ಕ್ರಮ ಆಗುವವರೆಗೂ ನಾವು ಪ್ರತಿಭಟನೆ ಬಿಡುವುದಿಲ್ಲ. ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ನಾವು ಮಾಡುವ ಎಸ್​ಐಆರ್​​​ ಪ್ರಕ್ರಿಯೆ ನಿಲ್ಲಿಸುತ್ತೇವೆ. ನ್ಯಾಯ ಬೇಕೇಬೇಕು ಎಂದು ಹೇಳಿದ್ದಾರೆ.

ಲಾರಿ ಚಾಲಕನ ಬಂಧನ

ಇನ್ನು ಅಪಘಾತಕ್ಕೆ ಕಾರಣವಾದ ತಮಿಳುನಾಡು ಮೂಲದ ಲಾರಿ ಚಾಲಕ ಮುರುಗನ್​​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಿಗ್ಗೆ ತುಮಕೂರಿನಿಂದ ಕುಣಿಗಲ್​ನತ್ತ ತೆರಳುತಿದ್ದ ಲಾರಿ, ಈ ವೇಳೆ ಗೂಳೂರು ಬಳಿ ಭುವನಾ ತೆರಳುತಿದ್ದ ಬೈಕ್​​ ಮುಖಾಮುಖಿ ಡಿಕ್ಕಿ ಹೊಡೆದಿದೆ. ಭುವನಾ ಸಂಬಂಧಿಕರು ತುಮಕೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಲಾರಿ ಚಾಲಕನನ್ನು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:27 pm, Sat, 4 July 26

Follow Us