ಡಾ. ಶಿವಕುಮಾರ ಸ್ವಾಮೀಜಿ ಆಧುನಿಕ ಬಸವಣ್ಣ: ಸಿದ್ದಗಂಗಾ ಮಠದಲ್ಲಿ ಅಮಿತ್ ಶಾ ಹೇಳಿಕೆ

ತ್ರಿವಿಧ ದಾಸೋಹದ ಸಿದ್ಧಾಂತದ ಸಂದೇಶವನ್ನು ಮಠ ಸಾರಿದೆ. ಇಲ್ಲಿಗೆ ಯಾರೇ ಬಂದರೂ ಊಟ ಮಾಡದೆ ವಾಪಸ್​ ಹೋಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಡಾ. ಶಿವಕುಮಾರ ಶ್ರೀಗಳ ಗುರುವಂದನಾ ಕಾರ್ಯಕ್ರಮದಲ್ಲಿ ಅಮಿತ್ ಶಾ ಮಾತನಾಡಿದ್ದಾರೆ.

ಡಾ. ಶಿವಕುಮಾರ ಸ್ವಾಮೀಜಿ ಆಧುನಿಕ ಬಸವಣ್ಣ: ಸಿದ್ದಗಂಗಾ ಮಠದಲ್ಲಿ ಅಮಿತ್ ಶಾ ಹೇಳಿಕೆ
ಸಿದ್ದಗಂಗಾ ಮಠದಲ್ಲಿ ಅಮಿತ್ ಶಾ
Edited By:

Updated on: Apr 01, 2022 | 3:15 PM

ತುಮಕೂರು: ಸಿದ್ದಗಂಗಾ ಮಠದ ಡಾ. ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆಯಲು ಆಗಮಿಸಿದ್ದೇವೆ. ಸಿದ್ಧಗಂಗಾ ಮಠಕ್ಕೆ ನಾನು ಇದುವರೆಗೆ ಮೂರು ಬಾರಿ ಬಂದಿದ್ದೇನೆ. ಹೊಸ ಚೇತನ, ಉತ್ಸಾಹದೊಂದಿಗೆ ಇಲ್ಲಿಂದ ವಾಪಸ್​ ಹೋಗಿದ್ದೆ. ಬಸವಣ್ಣನವರ ತತ್ವವನ್ನು ಪಸರಿಸಲು ಸ್ವಾಮೀಜಿ ಶ್ರಮಿಸಿದ್ದಾರೆ. ಉತ್ತರದಲ್ಲಿ ಗಂಗಾ ದಕ್ಷಿಣದಲ್ಲಿ ಸಿದ್ಧಗಂಗಾ ಎಂದು ಅಟಲ್ ಜಿ ಹೇಳಿದ್ದರು. ಡಾ. ಶಿವಕುಮಾರ ಸ್ವಾಮೀಜಿ ಆಧುನಿಕ ಬಸವಣ್ಣ. ತ್ರಿವಿಧ ದಾಸೋಹದ ಸಿದ್ಧಾಂತದ ಸಂದೇಶವನ್ನು ಮಠ ಸಾರಿದೆ. ಇಲ್ಲಿಗೆ ಯಾರೇ ಬಂದರೂ ಊಟ ಮಾಡದೆ ವಾಪಸ್​ ಹೋಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಡಾ. ಶಿವಕುಮಾರ ಶ್ರೀಗಳ ಗುರುವಂದನಾ ಕಾರ್ಯಕ್ರಮದಲ್ಲಿ ಅಮಿತ್ ಶಾ ಮಾತನಾಡಿದ್ದಾರೆ.

ಇದಕ್ಕೂ ಮೊದಲು ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತೋತ್ಸವ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತುಮಕೂರಿಗೆ ಆಗಮಿಸಿದ್ದರು. ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ವಾಗತಿಸಿದ್ದರು. ಬಳಿಕ, ಅಮಿತ್ ಶಾ ರಸ್ತೆ ಮಾರ್ಗವಾಗಿ ಸಿದ್ದಗಂಗಾ ಮಠದತ್ತ ತೆರಳಿದ್ದರು. ಸಿದ್ದಗಂಗಾ ಮಠದಲ್ಲಿ ಅಮಿತ್ ಶಾ ಮೇಲೆ ಹೂವಿನ ಮಳೆಗೈದು ಅದ್ಧೂರಿ ಸ್ವಾಗತ ಕೋರಲಾಗಿತ್ತು. ಬಿಜೆಪಿ ಕಾರ್ಯಕರ್ತರಿಂದ ಅಮಿತ್ ಶಾಗೆ ಅದ್ಧೂರಿ ಸ್ವಾಗತ ನೀಡಲಾಗಿತ್ತು. ವಿದ್ಯಾರ್ಥಿಗಳು ಅಮಿತ್ ಶಾಗೆ ಪೂರ್ಣಕುಂಭ ಸ್ವಾಗತ ಕೋರಿದ್ದರು. ನಂತರ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ಶಾ, ಗದ್ದುಗೆಗೆ ಪೂಜೆ ಸಲ್ಲಿಸಿದ್ದರು.

ಪರಮಪೂಜ್ಯರನ್ನು ಇಲ್ಲಿ ನೆರೆದಿರುವ ನಿಮ್ಮಲ್ಲಿ ಕಾಣುತ್ತಿದ್ದೇನೆ: ಸಿದ್ದಲಿಂಗ ಸ್ವಾಮೀಜಿ

ನಾನು ಪರಮಪೂಜ್ಯರನ್ನು ಇಲ್ಲಿ ನೆರೆದಿರುವ ನಿಮ್ಮಲ್ಲಿ ಕಾಣುತ್ತಿದ್ದೇನೆ. ಸುತ್ತೂರು ಮಠ, ಸಿದ್ಧಗಂಗಾ ಮಠ ಸಮಾಜದ 2 ಕಣ್ಣುಗಳು ಇದ್ದಂತೆ. ಅಮಿತ್​ ಶಾ ಅವರು ಸಾಕಷ್ಟು ಖಾತೆಗಳನ್ನು ನಿಭಾಯಿಸಿದ್ದಾರೆ. ಉಕ್ರೇನ್ ಯುದ್ಧದ ವೇಳೆ ಮಕ್ಕಳನ್ನು ಜೀವಂತವಾಗಿ ಕರೆ ತಂದಿದ್ದಾರೆ. ಕೇಂದ್ರ ಸರ್ಕಾರದ ಬದ್ಧತೆ ಬಗ್ಗೆ ಇದರಲ್ಲಿ ಗೊತ್ತಾಗುತ್ತೆ. ನರೇಂದ್ರ ಮೋದಿ, ಅಮಿತ್ ಶಾ ಅವರು ರಾಮ ಲಕ್ಷ್ಮಣ ಇದ್ದಂತೆ. ಇವರ ಮಾರ್ಗದರ್ಶನದಲ್ಲಿ ಬೊಮ್ಮಾಯಿರಿಂದ ಉತ್ತಮ ಕೆಲಸ ಆಗಿದೆ ಎಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ. ಡಾ. ಶಿವಕುಮಾರ ಶ್ರೀಗಳ ಗುರುವಂದನಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದಾರೆ.

ಅಪರೂಪದ ದಿವ್ಯ ಚೇತನ ನಮ್ಮ ಪೂಜ್ಯರು: ಸುತ್ತೂರು ಶ್ರೀಗಳ ಹೇಳಿಕೆ

ಅಪರೂಪದ ದಿವ್ಯ ಚೇತನ ನಮ್ಮ ಪೂಜ್ಯರು. ಮಠದ ಪರಂಪರೆಯಗೆ ಸ್ವಲ್ಪವೂ ಚ್ಯುತಿ ಬಾರದಂತೆ ನೋಡಿಕೊಂಡವರು ಶ್ರೀಗಳು. ಪ್ರತಿ ದಿನ ಹತ್ತು ಸಾವಿರ ದಾಸೋಹ ಮಾಡೋದು ಸಣ್ಣ ಮಾತಲ್ಲ. ನಾವು ಮನೆಯಲ್ಲಿ ಎರಡು ಮಕ್ಕಳಿದ್ರೆ ಹೇಗೆ ಸಾಕೋದು ಒಂದು ಮಗು ಸಾಕು ಅನ್ನುತ್ತೆವೆ. ದಾಸೋಹದ ಜೊತೆಗೆ ಮಕ್ಕಳಿಗೆ ಮಾತೃ ವಾತ್ಸಲ್ಯ ನೀಡಿದವರು ಶಿವಕುಮಾರ ಸ್ವಾಮಿಗಳು. ಶ್ರೀ ಮಠದ ಏಳಿಗೆಗೆ ಪೂಜ್ಯರು ಸಾಕಷ್ಟು ಶ್ರಮಿಸಿದ್ದಾರೆ. ಈಗ ಸಿದ್ದಗಂಗಾ ಸ್ವಾಮೀಜಿಯವರು ಮಠವನ್ನು ಸಮರ್ಥವಾಗಿ ಮುನ್ನೆಡುಸುತ್ತಿದ್ದಾರೆ ಎಂದು ಸುತ್ತೂರು ಶ್ರೀಗಳು ಮಾತನಾಡಿದ್ದಾರೆ.

ಇದನ್ನೂ ಓದಿ: ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಶಿವಕುಮಾರ ಶ್ರೀ ಹೆಸರು: ಬಸವರಾಜ ಬೊಮ್ಮಾಯಿ ಘೋಷಣೆ

ಇದನ್ನೂ ಓದಿ: ಡಾ. ಶಿವಕುಮಾರ ಸ್ವಾಮೀಜಿ 115ನೇ ಜಯಂತ್ಯುತ್ಸವ: ಟ್ವೀಟ್ ಮಾಡಿ ಗೌರವ ಅರ್ಪಿಸಿದ ಪ್ರಧಾನಿ ಮೋದಿ