Bus Accident: ಪಾವಗಡದ ಭೀಕರ ಬಸ್ ಅಪಘಾತಕ್ಕೆ ನಾಲ್ಕು ಮುಖ್ಯ ಕಾರಣಗಳು; ಏನದು?

| Updated By: ganapathi bhat

Updated on: Mar 20, 2022 | 11:13 AM

ಖಾಸಗಿ ಬಸ್ ಪಲ್ಟಿ ದುರಂತದಲ್ಲಿ ಮೃತರ ಸಂಖ್ಯೆ 6 ಕ್ಕೆ ಏರಿಕೆ ಆಗಿದೆ. 40 ಕ್ಕೂ ಹೆಚ್ಚು ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 7 ಗಾಯಾಳುಗಳಿಗೆ ವಿಕ್ಟೋರಿಯಾ, ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

Bus Accident: ಪಾವಗಡದ ಭೀಕರ ಬಸ್ ಅಪಘಾತಕ್ಕೆ ನಾಲ್ಕು ಮುಖ್ಯ ಕಾರಣಗಳು; ಏನದು?
ಪಾವಗಡ ಬಸ್ ಅಪಘಾತದ ದೃಶ್ಯ
Follow us on

ತುಮಕೂರು: ಇಲ್ಲಿನ ಪಾವಗಡದ ಪಳವಳ್ಳಿ ಕಟ್ಟೆ ಬಳಿ ಶನಿವಾರ ಭೀಕರ ಅಪಘಾತ ಸಂಭವಿಸಿದ್ದು ಕರ್ನಾಟಕದ ಜನತೆ ಮರುಗುವಂತೆ ಮಾಡಿದೆ. ಬಸ್​ನಲ್ಲಿದ್ದ ವಿದ್ಯಾರ್ಥಿಗಳು ಸಹಿತ ಹಲವು ಮಂದಿ ಅಪಘಾತದಲ್ಲಿ ಗಾಯಗೊಂಡಿದ್ದು 6 ಮಂದಿ ಸಾವನ್ನಪ್ಪಿದ್ದಾರೆ. ಖಾಸಗಿ ಬಸ್ ಪಲ್ಟಿ ದುರಂತದಲ್ಲಿ ಮೃತರ ಸಂಖ್ಯೆ 6 ಕ್ಕೆ ಏರಿಕೆ ಆಗಿದೆ. 40 ಕ್ಕೂ ಹೆಚ್ಚು ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 7 ಗಾಯಾಳುಗಳಿಗೆ ವಿಕ್ಟೋರಿಯಾ, ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ದುರಂತ ಸಂಭವಿಸಿದ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದರು, ಬಳಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಒಬ್ಬರು ಮೃತಪಟ್ಟಿದ್ದರು. ಚಿಕಿತ್ಸೆ ಫಲಿಸದೆ ರಾತ್ರಿ ವಿಕ್ಟೋರಿಯಾದಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಅಜಿತ್, ಕಲ್ಯಾಣ್, ಶಾನವಾಜ್, ಬಾಬು ವಲಿ ಹಾಗೂ ಒಂದೇ ಕುಟುಂಬದ ಅಮೂಲ್ಯ, ಹರ್ಷಿತಾ ಸಾವನ್ನಪ್ಪಿದ್ದಾರೆ. ಈ ಅಪಘಾತದ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಸಾರಿಗೆ ವಿಭಾಗದಲ್ಲಿ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಸಾರಿಗೆ ವಿಚಾರದಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ. ಈ ಮಧ್ಯೆ, ಜನರು, ಅಪಘಾತದ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯಂತೆ ಪಾವಗಡ ಬಸ್ ಅಪಘಾತಕ್ಕೆ ಕಾರಣಗಳು ನಾಲ್ಕು ಎಂದು ಹೇಳಲಾಗಿದೆ. ಅವುಗಳು ಏನು? ಇಲ್ಲಿ ತಿಳಿದುಕೊಳ್ಳೋಣ.

ಕಾರಣ ಒಂದು, ಚಾಲಕನ ಅಜಾಗರೂಕತೆ:
ಎಸ್.ವಿ.ಟಿ ಬಸ್ ಚಾಲಕನ ಅಜಾಗರೂಕತಯೇ ಬಸ್ ಅಪಘಾತಕ್ಕೆ ಮೊದಲ ಕಾರಣ ಎಂದು ಹೇಳಲಾಗಿದೆ. ತಿರುವು ರಸ್ತೆಯಲ್ಲಿ ಅತಿ ವೇಗವಾಗಿ ಬಸ್ ಚಾಲನೆ ಮಾಡಲಾಗಿದೆ. ನಿಧಾನವಾಗಿ ಬಸ್ ಓಡಿಸುವಂತೆ ಪ್ರಯಾಣಿಕರು‌ ಹೇಳಿದ್ದರೂ ವೇಗದ ಚಾಲನೆ ಮಾಡಲಾಗಿದೆ. ಕಂಟ್ರೋಲ್ ಸಿಗದೆ ಬಸ್ ಪಲ್ಟಿ ಆಗಿದೆ.

ಕಾರಣ ಎರಡು, ಬಸ್ ಕೊರತೆ: ವೈ.ಎನ್ ಹೊಸಕೋಟೆ ಪೊಲೀಸರಿಂದ ಎರಡು ಬಸ್ ಸೀಜ್ ಮಾಡಲಾಗಿತ್ತು. ಎರಡು ದಿನದ ಹಿಂದೆ ದಾಖಲಾತಿ ಸರಿಯಿಲ್ಲದ ಕಾರಣ ವೈ.ಎನ್ ಹೊಸಕೋಟೆ ಪೊಲೀಸರು ಎರಡು ಬಸ್ ಸೀಜ್ ಮಾಡಿದ್ದರು. ವೈ.ಎನ್ ಹೊಸಕೋಟೆ – ಪಾವಗಡಕ್ಕೆ ಪ್ರತಿದಿನ ಸಂಚಾರ ಮಾಡುತ್ತಿದ್ದ ಬಸ್​ಗಳು ಇದಾಗಿದ್ದು ಎರಡು ಬಸ್ ಸೀಜ್ ಮಾಡಿದ್ದಕ್ಕೆ ಎಸ್.ವಿ.ಟಿ ಬಸ್​ಗೆ ಪ್ರಯಾಣಿಕರ ದಟ್ಟಣೆ ಹೆಚ್ಚಿತ್ತು. ಹಾಗಾಗಿ, ಬಸ್​ನ ಟಾಪ್​ನಲ್ಲಿಯೂ ಪ್ರಯಾಣಿಕರು ಕುಳಿತು ಪ್ರಯಾಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಾರಣ ಮೂರು, ರಸ್ತೆಯಲ್ಲಿ ಸೂಚನಾ ಫಲಕಗಳು ಇಲ್ಲ:
ಪಳವಳ್ಳಿ ಕಟ್ಟೆ ಬಳಿ ರಸ್ತೆ ಸೂಚನಾ ಫಲಕಗಳನ್ನು ಪಿಡಬ್ಲ್ಯೂಡಿ ಇಲಾಖೆ ಅಳವಡಿಸಿಲ್ಲ. ಪಳವಳ್ಳಿ ಕಟ್ಟೆ ಅಪಘಾತ ವಲಯವಾಗಿದ್ದು, ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಹೀಗಿದ್ದರೂ ಅಪಘಾತ ವಲಯ ಎಂದು ಸೂಚನಾ ಫಲಕ, ಹಂಪ್​ಗಳನ್ನು ಪಿಡಬ್ಲ್ಯೂಡಿ ಅಧಿಕಾರಿಗಳು ಅಳವಡಿಸಿಲ್ಲ.

ಕಾರಣ ನಾಲ್ಕು, ಸರ್ಕಾರಿ ಬಸ್ ಓಡಾಟದ ಕೊರತೆ:
ಪಾವಗಡ ತಾಲ್ಲೂಕಿನಲ್ಲಿ ಅತಿ ಹೆಚ್ಚು ಖಾಸಗಿ ಬಸ್​ಗಳ ಓಡಾಟವಿದ್ದು, ಸರ್ಕಾರಿ ಬಸ್​ಗಳ ಓಡಾಟ ಕೊರತೆಯಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಸ್ ಓಡಾಟ ನಡೆಸಿದರೆ ಅಪಘಾತ ಹಾಗೂ ಸಾವು ನೋವು ತಡೆಗಟ್ಟಬಹುದಿತ್ತು ಎಂದು ಹೇಳಲಾಗಿದೆ. ಇದೀಗ ಅಪಘಾತದ ಬಳಿಕ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರೂ ಆದ ಸಾವು ನೋವನ್ನು ಮತ್ತೆ ಸರಿಮಾಡಲಾಗುವುದಿಲ್ಲ.

ಈ ಮಧ್ಯೆ, ಚಾಲಕ ಬಸ್ ಓಡಿಸುವಾಗ ಮೊಬೈಲ್ ಬಳಸುತ್ತಿದ್ದ ಎಂದೂ ಹೇಳಲಾಗಿದೆ. ಒಂದು ಕೈಯಲ್ಲಿ ಮೊಬೈಲ್, ಮತ್ತೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು ಡ್ರೈವ್ ಮಾಡುತ್ತಿದ್ದ. ಚಾಲನಿಂದಲೇ ಬಸ್ ಅಪಘಾತ ವಾಗಿದೆ ಎಂದು ಪ್ರತ್ಯಕ್ಷದರ್ಶಿ ರಘು ಎಂಬವರು ಹೇಳಿದ್ದಾರೆ. ರಘು ರೈಲ್ವೆ ಕಾಮಗಾರಿ ಕೆಲಸ ಮಾಡಲು ಬರುತ್ತಿದ್ದರು. ಬಸ್ ಬೀಳುವುದಕ್ಕೂ ಮುನ್ನ ನೋಡಿದ್ದರು ಎಂದು ತಿಳಿಸಿದ್ದಾರೆ.

ತುರ್ತು ಕೆಲಸ, ಅನಿವಾರ್ಯ ಆದಾಗ ಇರುವ ಬಸ್​ನಲ್ಲಿ ಹೋಗಲೇಬೇಕು

ವಾರದಲ್ಲಿ ಪ್ರತಿ ಶುಕ್ರವಾರ, ಶನಿವಾರ ತುಂಬಾ ರಷ್ ಇರುತ್ತೆ. ಶುಕ್ರವಾರ ಪಾವಗಡದ ಸಂತೆಗೆ ಜನ ಹೆಚ್ಚಾಗಿ ಖಾಸಗಿ ಬಸ್ ಬಳಕೆ ಮಾಡ್ತಾರೆ. ಪಾವಗಡದ ಶನಿಮಾಹತ್ಮ ದೇವಲಯಕ್ಕೂ ಜನ ಹೆಚ್ಚಾಗಿ ತೆರಳುತ್ತಾರೆ. ಬೆಳಗ್ಗೆ ಇರೋದು ಎರಡು ಖಾಸಗಿ ಬಸ್. ಒಂದು ಮಿಸ್ ಆಯಿತು ಅಂದ್ರೆ ಬಸ್ ರಷ್ ಇರುತ್ತದೆ. ಸರ್ಕಾರಿ ಬಸ್ ಹಳ್ಳಿಗಳಿಗೆ ಬರಲ್ಲ. ಹಳ್ಳಿಗಳ ಬಳಿ ಹಾದು ಹೋಗುವ ರಸ್ತೆಯಲ್ಲಿ ಬಸ್ ಸ್ಟಾಪ್ ಕೊಡಲ್ಲ. ತುರ್ತು ಕೆಲಸ ಇದ್ದಾಗ ನಾವು ಹೋಗಲೇಬೇಕು. ನಮ್ಮ ಕೆಲಸ ಕಾರ್ಯಗಳನ್ನು ಮಾಡಲೇ ಬೇಕು ಎಂದು ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರು ತಿಳಿಸಿದ್ದಾರೆ.

ಸಹಾಯ ಕೇಳಿದ ಗಾಯಾಳು

ಪಳವಳ್ಳಿ ಗ್ರಾಮದ ಬಳಿ ಖಾಸಗಿ ಬಸ್ ಪಲ್ಟಿ ದುರಂತ ಪ್ರಕರಣದಲ್ಲಿ ಗಾಯಗೊಂಡ ವಿದ್ಯಾರ್ಥಿ ಮಹೇಂದ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆನ್ನು ನೋವಿನಿಂದ ನರಳಾಡುತ್ತಿರುವ ವಿದ್ಯಾರ್ಥಿ ಮಹೇಂದ್ರಗೆ ನಿಮ್ಹಾನ್ಸ್‌ನಲ್ಲಿ ಐಸಿಯು ಬೆಡ್ ಸಿಗದ ಹಿನ್ನೆಲೆ ಪರದಾಡುವಂತಾಗಿದೆ. ಸಹಾಯ ಮಾಡುವಂತೆ ಮಹೇಂದ್ರ ಪೋಷಕರಿಂದ ಮನವಿ ಮಾಡಲಾಗಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಮಹೇಂದ್ರ ಪೋಷಕರು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ.

ತುಮಕೂರಿಗೆ ಇಂದು ಆರಗ ಜ್ಞಾನೇಂದ್ರ ಭೇಟಿ

ಪಾವಗಡ ತಾಲೂಕಿನ ಪಳವಳ್ಳಿ ಬಸ್ ಅಪಘಾತ ಪ್ರಕರಣದಲ್ಲಿ ಗಾಯಗೊಂಡ 15 ಕ್ಕೂ ಹೆಚ್ಚು ಗಾಯಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ವತಿಯಿಂದ ಉಚಿತ ಟೀ, ಬ್ರೆಡ್ ವಿತರಣೆ ಮಾಡಲಾಗಿದೆ. ತುಮಕೂರು ಜಿಲ್ಲಾಸ್ಪತ್ರೆಗೆ ಇಂದು ಆರಗ ಜ್ಞಾನೇಂದ್ರ ಭೇಟಿ ನೀಡಲಿದ್ದಾರೆ. ಗಾಯಾಳುಗಳ ಆರೋಗ್ಯ ವಿಚಾರಿಸಲಿದ್ದಾರೆ. ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರಗ ಜ್ಞಾನೇಂದ್ರ ತುಮಕೂರಿಗೆ ತೆರಳಲಿದ್ದಾರೆ.

ಇದನ್ನೂ ಓದಿ: ಬಸ್ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ, ವೈಯಕ್ತಿಕವಾಗಿ 1 ಲಕ್ಷ ರೂ. ಪರಿಹಾರ ಘೋಷಿಸಿದ ಬಿ ಶ್ರೀರಾಮುಲು

ಇದನ್ನೂ ಓದಿ: ಭೀಕರ ಅಪಘಾತ: ತುಮಕೂರಿನ ಪಳವಳ್ಳಿ ಕಟ್ಟೆಯ ಬಳಿ ಖಾಸಗಿ ಬಸ್ ಪಲ್ಟಿ; 4 ಮಂದಿ ಸ್ಥಳದಲ್ಲೇ ಸಾವು

Published On - 9:03 am, Sun, 20 March 22