ನರ್ಸ್​​​​ ಆಗುತ್ತಿದ್ದಂತೆಯೇ ಬದಲಾಯ್ತು ಲೈಫ್ ಸ್ಟೈಲ್: ವಿಚ್ಛೇದನ ಬಯಸಿದ ಪತ್ನಿಗೆ ಮಚ್ಚಿನೇಟು, ಪತಿ ದುರಂತ ಸಾವು

ಪ್ರೀತಿಸಿ ಮದುವೆಯಾದ ದಂಪತಿ ನಡುವೆ ದೊಡ್ಡ ಗಲಾಟೆಯಾಗಿದ್ದು, ಗಂಡನ ಮಚ್ಚಿನೇಟು ತಿಂದ ಹೆಂಡತಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇನ್ನೊಂದೆಡೆ ಪತ್ನಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಪತಿ ದುರಂತ ಸಾವುಕಂಡಿದ್ದು, ಎರಡು ಮಕ್ಕಳು ಅನಾಥವಾಗಿವೆ. ಅಷ್ಟಕ್ಕೂ ಗಂಡ-ಹೆಂಡ್ತಿ ನಡುವೆ ಆಗಿದ್ದೇನು? ಎನ್ನುವ ವಿವರ ಇಲ್ಲಿದೆ.

ನರ್ಸ್​​​​ ಆಗುತ್ತಿದ್ದಂತೆಯೇ ಬದಲಾಯ್ತು ಲೈಫ್ ಸ್ಟೈಲ್: ವಿಚ್ಛೇದನ ಬಯಸಿದ ಪತ್ನಿಗೆ ಮಚ್ಚಿನೇಟು, ಪತಿ ದುರಂತ ಸಾವು
Maruthi
Edited By:

Updated on: Apr 07, 2026 | 7:59 PM

ತುಮಕೂರು, (ಏಪ್ರಿಲ್ 07): ವಿಚ್ಛೇದನ (divorce) ಬಯಸಿದ ಪತ್ನಿಗೆ (Wife) ಪತಿ (Husband) ಮಚ್ಚಿನೇಟು ಕೊಟ್ಟು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು (Tumakuru) ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕೋಟೆಯಲ್ಲಿ ನಡೆದಿದೆ. ದಂಪತಿ ನಡುವೆ ನಿನ್ನೆ (ಏಪ್ರಿಲ್ 06) ಗಲಾಟೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪತಿಯ ಮಚ್ಚಿನೇಟಿನಿಂದ ಗಾಯಗೊಂಡಿರುವ ಪತ್ನಿ ನಾಗಮಣಿ ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಪತಿ ಮಾರುತಿ, ಇಂದು (ಏಪ್ರಿಲ್ 07) ಬೆಳಗ್ಗೆ ಕೊರಟಗೆರೆ ತಾಲ್ಲೂಕಿನ ದೊಡ್ಡನಹಳ್ಳಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೈಸೂರಿನ ಸರ್ಕಾರಿ ಆಸ್ಪತ್ರೆಯ ನರ್ಸ್ ಆಗಿರುವ ನಾಗಮಣಿ ಹಾಗೂ ಮಾರುತಿ ಕಳೆದ 15 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಈ ದಂಪತಿಗೆ ಎರಡು ಮಕ್ಕಳು ಸಹ ಇವೆ. ಮಾರುತಿ ವೃತ್ತಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರೆ, ನಾಗಮಣಿಗೆ ಮದುವೆ ನಂತರ ಸರ್ಕಾರಿ ನರ್ಸ್ ಕೆಲಸ ಸಿಕ್ಕಿತ್ತು. ಆದ್ರೆ, ಯಾವಾಗ ನಾಗಮಣಿಗೆ ಸರ್ಕಾರಿ ನರ್ಸ್ ಕೆಲಸ ಒಲಿದುಬಂತೋ ಅಂದಿನಿಂದ ಆಕೆಯ ಜೀವನ ಶೈಲಿಯೇ ಬದಲಾಗಿದ್ದು, ಗಾರೆ ಕೆಲಸ ಮಾಡಿಕೊಂಡಿದ್ದ ಪತಿ ಮಾರುತಿಯಿಂದ ನಾಗಮಣಿ ವಿವಾಹ ವಿಚ್ಛೇದನ ಪಡೆದುಕೊಳ್ಳಲು ಚಿಂತನೆ ನಡೆಸಿದ್ದಳು.

ಇದನ್ನೂ ಓದಿ: ಮದುವೆ ನಿಶ್ಚಯವಾಗಿದ್ದ ಯುವಕನ ಬರ್ಬರವಾಗಿ ಕೊಂದ ಸಹೋದರ; ಅತ್ತಿಗೆ ಜೊತೆಗೆ ಅಕ್ರಮ ಸಂಬಂಧ ಆರೋಪಕ್ಕೆ ಹರಿದಿದ್ದು ನೆತ್ತರು

ಇನ್ನೊಂದೆಡೆ ನಾಗಮಣಿಗೆ ಮತ್ತೊಬ್ಬನ ಜೊತೆ ಸಂಬಂಧ ಇರುವ ಬಗ್ಗೆ ಮಾರುತಿಗೆ ಅನುಮಾನ ಬಂದಿದ್ದು, ಇದೇ ವಿಚಾರವಾಗಿ ಗಲಾಟೆ ಮಾಡಿದ್ದ. ಅಲ್ಲದೇ ಈ ಗಂಡ ಹೆಂಡತಿ ಜಗಳ ಮೈಸೂರಿನ ಸ್ಥಳೀಯ ಠಾಣೆ ಮೆಟ್ಟಿಲೇರಿತ್ತು. ಇದಾದ ಬಳಿಕ ಮೊನ್ನೆ ಗಂಡನ ಜೊತೆ ಕೋಟೆಯಲ್ಲಿ ವಾಸವಾಗಿದ್ದ ಮಕ್ಕಳ ನೋಡಲು ನಾಗಮಣಿ ಬಂದಿದ್ದಳು. ಈ ವೇಳೆ ದಂಪತಿ ನಡುವೆ ಮತ್ತೆ ಗಲಾಟೆಯಾಗಿದ್ದು, ಈ ಸಂದರ್ಭದಲ್ಲಿ ಮಾರುತಿ, ಮಚ್ಚಿನಿಂದ ನಾಗಮಣಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರು ಗಾಯಾಳು ನಾಗಮಣಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು,  ಸದ್ಯ ನಾಗಮಣಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.

ಇನ್ನೊಂದೆಡೆ ಪತಿ ಮಾರುತಿ ಇಂದು (ಏಪ್ರಿಲ್ 07) ಕೊರಟಗೆರೆ ತಾಲ್ಲೂಕಿನ ದೊಡ್ಡನಹಳ್ಳಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Jagadisha B

ಜಗದೀಶ್​ ಬಸವರಾಜು ಟಿವಿ9 ಕನ್ನಡದ ವರದಿಗಾರರಲ್ಲಿ ಒಬ್ಬರು. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ.

Read More
Follow Us