ಕರ್ನಾಟಕ ಸರ್ಕಾರದ ಸಾಲ ಹೆಚ್ಚಳ, ಮೀಸಲಾತಿ ಘೋಷಣೆಯಲ್ಲಿ ಲೋಪ: ಜೆಡಿಎಸ್​ ನಾಯಕ ಎಚ್​ಡಿ ಕುಮಾರಸ್ವಾಮಿ ಕಳವಳ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 30, 2022 | 2:31 PM

ಖಜಾನೆಯಲ್ಲಿ ಲೂಟಿ ಹೊಡೆಯಲು ಮಾತ್ರವೇ ಹಣವಿದೆ ಎಂದು ಅವರು ತಿಳಿದುಕೊಂಡಂತೆ ಇದೆ. ಜನರ ಕಷ್ಟ ತೀರಿಸಲು, ಮಾಸಾಶನ ಅಥವಾ ಸೈಕಲ್ ನೀಡಲು ಇವರ ಬಳಿ ಹಣವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಕರ್ನಾಟಕ ಸರ್ಕಾರದ ಸಾಲ ಹೆಚ್ಚಳ, ಮೀಸಲಾತಿ ಘೋಷಣೆಯಲ್ಲಿ ಲೋಪ: ಜೆಡಿಎಸ್​ ನಾಯಕ ಎಚ್​ಡಿ ಕುಮಾರಸ್ವಾಮಿ ಕಳವಳ
ಹೆಚ್ ಡಿ ಕುಮಾರಸ್ವಾಮಿ
Follow us on

ತುಮಕೂರು: ಕರ್ನಾಟಕ ಸರ್ಕಾರದ ಸಾಲದ ಪ್ರಮಾಣವು ವಿಪರೀತ ಎನಿಸುವಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನಿಭಾಯಿಸುವುದು ತುಂಬಾ ಕಷ್ಟವಾಗುತ್ತದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಜಾನೆಯಲ್ಲಿ ಹಣವಿದೆ ಎನ್ನುವ ಕಂದಾಯ ಸಚಿವ ಆರ್.ಅಶೋಕ್ (R Ashok) ಹೇಳಿಕೆ ಪ್ರಸ್ತಾಪಿಸಿದ ಅವರು, ಖಜಾನೆಯಲ್ಲಿ ಲೂಟಿ ಹೊಡೆಯಲು ಮಾತ್ರವೇ ಹಣವಿದೆ ಎಂದು ಅವರು ತಿಳಿದುಕೊಂಡಂತೆ ಇದೆ. ಜನರ ಕಷ್ಟ ತೀರಿಸಲು, ಮಾಸಾಶನ ಅಥವಾ ಸೈಕಲ್ ನೀಡಲು ಇವರ ಬಳಿ ಹಣವಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಇಲ್ಲ ಎಂದು ಟೀಕಿಸಿದರು.

ಮೀಸಲಾತಿ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ಹಲವು ಜನಾಂಗಗಳು ಮೀಸಲಾತಿ ವಿಚಾರವಾಗಿ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಈ ಹಿನ್ನೆಲೆಯಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಕೆಲವು ಮಾರ್ಪಾಡು ಮಾಡಿಕೊಂಡಿದ್ದಾರೆ. ಇಷ್ಟು ದಿನ ರಂಗ ಎಂದು ಕರೆತಿದ್ರು. ಈಗ ಮಂಗ ಎಂದು ಕರೆದಿದ್ದಾರೆ. ರಂಗನನ್ನು ಮಂಗನನ್ನಾಗಿ ಮಾಡಲಿಕ್ಕೆ ಹೊರಟ್ಟಿದ್ದಾರೆ. ಈ ಮೂಲಕ ವೀರಶೈವ-ಲಿಂಗಾಯತ ಹಾಗೂ ಒಕ್ಕಲಿಗರನ್ನು ಮಂಗ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.

3ಎ, 3ಬಿ ಕೆಟಗರಿಗಳನ್ನು 2ಸಿ, 2ಡಿ ಎಂದು ಬದಲಿಸಿದ್ದಾರೆ. ನಮ್ಮ ಮುಂದಿನ ವರದಿ ಬಂದ ಮೇಲೆ ಇಂಕ್ರಿಮೆಂಟ್ ಕೊಡುವುದಾಗಿ ಹೇಳಿದ್ದಾರೆ. ಇವರು ಕೊಡುವಷ್ಟರಲ್ಲಿ ಈ ಸರ್ಕಾರವೇ ಇರುವುದಿಲ್ಲ. ಹಿಂದೆ ಇದೇ ರೀತಿ ಉತ್ತರ ಪ್ರದೇಶದಲ್ಲಿ ಮಾಡಿದ್ದ ಆದೇಶವನ್ನು ಅಲ್ಲಿನ ಹೈಕೋರ್ಟ್​ ತಿರಸ್ಕರಿಸಿತ್ತು. ಕರ್ನಾಟಕದಲ್ಲಿಯೂ ಅದೇ ಪರಿಸ್ಥಿತಿ ಬರಬಹುದು. ಯಾವ ಪಕ್ಷ ಅಧಿಕಾರದಲ್ಲಿದ್ದರೂ ಕಾನೂನುಗಳಿಗೆ ತಲೆಬಾಗಲೇಬೇಕು. ಅವರು ಚುನಾವಣೆಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಪಂಚಮಸಾಲಿ ಲಿಂಗಾಯತರು ತಮ್ಮನ್ನು ‘2ಎ’ಗೆ ಸೇರಿಸಿ ಎಂದು ಬೇಡಿಕೆ ಇಟ್ಟಿದ್ದರು. ಆದರೆ ಸರ್ಕಾರದವರು ‘2ಡಿ’ಗೆ ಸೇರಿಸಿದ್ದರು. ಇವರು ಜನರಿಗೆ ಹೂ ಮುಡಿಸುವ ತಿರ್ಮಾನ ಮಾಡಿದ್ದಾರೆ. ಹಲವು ಜನಾಂಗವನ್ನು ಎತ್ತಿ ಕಟ್ಟುವ ಕೆಲಸ ಮಾಡಿದ್ದರು. ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಈ ರೀತಿ ಮಾಡಿದ್ದಾರೆ. ಈಗ ಸರ್ಕಾರವು ಅದರ ಸುಳಿಯಲ್ಲಿಯೇ ಸಿಲುಕಿದೆ. ಮೀಸಲಾತಿ ವಿಚಾರವನ್ನು ಸಂತೆಯಲ್ಲಿ ನಿಂತು ತೀರ್ಮಾನಿಸಲು ಆಗುವುದಿಲ್ಲ. ಸರ್ಕಾರದ ನಿನ್ನೆಯ ತೀರ್ಮಾನ ನಾಡಿನ ಜನತೆಗೆ ಮಾಡಿದ ದ್ರೋಹ. ಮೀಸಲಾತಿ ಅನ್ನೋದು ಧ್ವನಿ ಇಲ್ಲದ ವರ್ಗಕ್ಕೆ ಅನುಕೂಲ ಆಗಬೇಕು ಎಂದು ಕಿವಿಮಾತು ಹೇಳಿದರು.

ಪಂಚಮಸಾಲಿ ಸ್ವಾಮೀಜಿಗಳನ್ನ ಬೀದಿಗಳಲ್ಲಿ ಪಾದಯಾತ್ರೆ ಮಾಡಿಸಿದರು. ಸರ್ಕಾರದ ತೀರ್ಮಾನವು ಅವರ ಹೋರಾಟಕ್ಕೆ ಕೊಟ್ಟ ಗೌರವವೋ, ಅಗೌರವವೋ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಬಡತನವು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ಎಲ್ಲಾ ಸಮಾಜಗಳಲ್ಲೂ ಬಡತನ ಇದೆ. ಹಿಂದುಳಿದವರನ್ನು ಈ ಸರ್ಕಾರಗಳು ಎಷ್ಟರಮಟ್ಟಿಗೆ ಮೇಲೆತ್ತಿವೆ ಎನ್ನುವುದನ್ನು ಗಮನಿಸಬೇಕು. ಅದಕ್ಕಾಗಿ ಗಂಭೀರ ಸಂಶೋಧನೆ ಆಗಬೇಕಿದೆ ಎಂದು ತಿಳಿಸಿದರು.

ಮೀಸಲಾತಿಯ ಬಗ್ಗೆ ವಿಸ್ತೃತ ಸಂಶೋಧನೆ ನಡೆಯಬೇಕಿದೆ. ಮೀಸಲಾತಿ ವಿಚಾರದಲ್ಲಿ ಬಿಜೆಪಿಯು ಕೇವಲ ಆಕಾಂಕ್ಷಿಗಳ ಮೂಗಿಗೆ ಮಾತ್ರವೇ ಅಲ್ಲ, ಹಣೆಗೂ ತುಪ್ಪ ಸವರುತ್ತಿದೆ. ಮೀಸಲಾತಿಯು ಶೇ 50 ಮೀರಬಾರದು ಎಂಬ ನಿಯಮವಿದೆ. ತಮಿಳುನಾಡು ಸರ್ಕಾರವು ಶೇ 67ರಷ್ಟು ಮೀಸಲಾತಿ ನೀಡಿರುವ ವಿಚಾರವು ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಿದೆ. ಯಾವುದೇ ರಾಜ್ಯ ಸರ್ಕಾರವು ಕಾನೂನು ಮಾಡಿದರೂ ಅದು ಕಾನೂನಿನ ಚೌಕಟ್ಟಿನಲ್ಲಿಯೇ ಜಾರಿಗೆ ಬರಬೇಕಿದೆ ಎಂದು ಹೇಳಿದರು.

ಸಮಾಜದ ವಾಸ್ತವ ಪರಿಶೀಲಿಸಿದರೆ ಇವರು ರಾಜ್ಯವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಪಂಚರತ್ನ ಯಾತ್ರೆಯ ಬಗ್ಗೆಯೂ ಕೆಲವರು ವ್ಯಂಗ್ಯವಾಡಿದ್ದಾರೆ. ಜಿಡಿಪಿ ಮೇಲೆ ನಾವು ಚರ್ಚೆ ಮಾಡ್ತಿವಿ. ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ‌. ಕಳಸಾ ಬಂಡೂರಿ ವಿಚಾರ ಒಂದು ಹಂತದಲ್ಲಿ ಇತ್ಯರ್ಥವಾಗಿದೆ. ಡಿಪಿಆರ್​ಗೆ ಅಪ್ರೂವಲ್ ಸಿಕ್ಕಿದೆ‌ ಅಷ್ಟೇ. ಅರಣ್ಯ ಇಲಾಖೆ ಹಾಗೂ ಸುಪ್ರೀಂಕೋರ್ಟ್​ನಿಂದ ಇನ್ನಷ್ಟೇ ಅನುಮತಿ ಸಿಗಬೇಕಿದೆ. ಈ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ಚುನಾವಣೆ ಮುಗಿದು ಹೋಗುತ್ತದೆ ಎಂದರು.

ಕೇವಲ ಸಾಲ ಮಾಡಿ ಹಣ ಸಂಗ್ರಹಿಸಿ, ಬೇರೆ ರೀತಿ ಹಣವನ್ನು ದುರ್ಬಳಕೆ ಮಾಡಿಕೊಂಡರೆ ಹೇಗೆ? ಇದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ‌ ಬಹಳ ಕೆಟ್ಟ ಪರಿಣಾಮ ಆಗುತ್ತದೆ. ಇದೇ ರೀತಿ ಆಡಳಿತವು ಮುಂದುವರಿದರೆ ರಾಜ್ಯವು ಸಾಲದ ಸುಳಿಯಲ್ಲಿ ಸಿಲುಕುವ ಬಗ್ಗೆ ಯಾವುದೇ ಸಂಶಯ ಇರಿಸಿಕೊಳ್ಳಬೇಡಿ ಎಂದು ಎಚ್ಚರಿಸಿದರು. ಹಣಕಾಸು ಆಯೋಗದಲ್ಲಿ ನಮಗೆ ಅನ್ಯಾಯವಾಗಿದೆ. ಈ ವಿಷಯವನ್ನು ಇಲ್ಲಿನ ವಿಧಾನ ಸಭೆಯಲ್ಲಿ ಹೇಳಿದರೆ ಆಯಿತೇ? ನರೇಂದ್ರ ಮೋದಿ ಅವರ ಎದುರು ಕುಳಿತು ನಮ್ಮ ಸಿಎಂ ತಮ್ಮ ಧಮ್, ತಾಕತ್ತು ತೋರಿಸಬೇಕು. ರಾಜ್ಯದ ಪಾಲಿನ ಜಿಎಸ್​ಟಿ ಪಾಲು ತರಬೇಕು ಎಂದರು.

ಇದನ್ನೂ ಓದಿ: ಪಂಚರತ್ನ ಯಾತ್ರೆ ವೇಳೆ ಅಭಿಷೇಕ್ ಪರ ಜೈ ಕಾರ ಹಾಕಿದ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು

ಮೋದಿ ತಾಯಿ ನಿಧನಕ್ಕೆ ಸಂತಾಪ

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ನಿಧನ ಕುರಿತು ಪ್ರಸ್ತಾಪಿಸಿದ ಅವರು, ಮೋದಿ ಅವರು ತಮ್ಮ ತಾಯಿಯ ಬಗ್ಗೆ ದೊಡ್ಡ ಮಟ್ಟದ ಬಾಂಧವ್ಯ ಇರಿಸಿಕೊಂಡಿದ್ದರು. ತಾಯಿಯ ಸಾವು, ಮಗನಿಗೆ ದುಃಖ ತರುವುದರಲ್ಲಿ ಸಂಶಯವಿಲ್ಲ. ತಾಯಿಯ ನಿಧನದ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕೋರಿದರು.

ದಾಖಲೆ ಬರೆದ ಹಾರಗಳು

ಪಂಚರತ್ನ ಯಾತ್ರೆಯ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ಬಂದ ವಿವಿಧ ರೀತಿಯ ಬೃಹತ್ ಹಾರಗಳ ಸಂಖ್ಯೆಯು 500 ದಾಟಿದ ಹಿನ್ನೆಲೆಯಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್​​ ದಾಖಲೆಗೆ ಸೇರ್ಪಡೆಯಾಗಿದೆ. ದೆಹಲಿಯಿಂದ ಬಂದಿದ್ದ ಇಂಡಿಯನ್ ಬುಕ್ ಆಪ್ ರೆಕಾರ್ಡ್ಸ್​‌ನ ಅಮಿತ್ ಹಾಗೂ ವತ್ಸ ಎನ್ನುವವರು ಈ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಕುಮಾರಸ್ವಾಮಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅಧಿಕಾರಿಗಳು ಮೆಡಲ್ ನೀಡಿ ಗೌರವಿಸಿದರು. ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ಗೂ ಹಾರಗಳ ದಾಖಲೆ ಸೇರಿದೆ.