ತುಮಕೂರಿನಲ್ಲಿ ಒಂದೆರಡು ವರ್ಷಗಳಲ್ಲಿ ಒಂದೂವರೆ ಸಾವಿರದಷ್ಟು ಡಿವೋರ್ಸ್ ಕೇಸ್, ವಿಚ್ಛೇದನಕ್ಕೆ ಕಾರಣವೇನು?
Divorce: ತುಮಕೂರು ಜಿಲ್ಲೆಯಲ್ಲಿ ಒಂದೆರಡು ವರ್ಷಗಳಲ್ಲಿ ಒಂದೂವರೆ ಸಾವಿರದಷ್ಟು ಡಿವೋರ್ಸ್ ಕೇಸ್ ದಾಖಲಾಗಿದೆ. ಒಂದೂವರೆ ವರ್ಷದಲ್ಲಿ 1500ಕ್ಕೂ ಹೆಚ್ಚು ಪ್ರಕರಣಗಳು ವಿಚ್ಚೇದನಕ್ಕಾಗಿ ಕೋರ್ಟ್ ಮೊರೆ ಹೋಗಿರುವುದು ಬೆಳಕಿಗೆ ಬಂದಿದೆ.

ತುಮಕೂರು, ಸೆ.05: ಮದುವೆ, ಸಂಬಂಧಗಳನ್ನು ನಿಭಾಯಿಸುವುದರಲ್ಲಿ ಕರ್ನಾಟಕ ಹೆಸರುವಾಸಿಯಾಗಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ವಿಚ್ಛೇದನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು ಅಂದಾಜು 50% ರಿಂದ 60% ರಷ್ಟು ಏರಿಕೆ ಕಂಡಿದೆ ಎಂದು ಕೆಲವರು ಅಂದಾಜಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಒಂದೆರಡು ವರ್ಷಗಳಲ್ಲಿ ಒಂದೂವರೆ ಸಾವಿರದಷ್ಟು ಡಿವೋರ್ಸ್ ಕೇಸ್(Divorce) ದಾಖಲಾಗಿದೆ. ಒಂದೂವರೆ ವರ್ಷದಲ್ಲಿ 1500ಕ್ಕೂ ಹೆಚ್ಚು ಪ್ರಕರಣಗಳು ವಿಚ್ಚೇದನಕ್ಕಾಗಿ ಕೋರ್ಟ್ ಮೊರೆ ಹೋಗಿರುವುದು ಬೆಳಕಿಗೆ ಬಂದಿದೆ. ಗಂಡ-ಹೆಂಡತಿ ನಡುವೆ ಸರಿ ಹೋಗದಿರುವುದು, ಅತ್ತೆ-ಸೊಸೆ ಜಗಳ ಹೀಗೆ ಅನೇಕ ಕಾರಣಗಳಿಂದಾಗಿ ದಂಪತಿ ಡಿವೋರ್ಸ್ ಪಡೆಯಲು ಕೋರ್ಟ್ ಮೊರೆ ಹೋಗುತ್ತಿದ್ದಾರೆ. ಮದುವೆಯಾಗಿ ಕೆಲವೇ ದಿನಗಳಾಗಿದ್ರೂ ಡಿವೋರ್ಸ್ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.
ವಿಚ್ಛೇದನಕ್ಕೆ ಕಾರಣಗಳೇನು?
- ಇತ್ತೀಚಿನ ದಿನಗಳಲ್ಲಿ ತಮ್ಮ ಮಕ್ಕಳಿಗೆ ಯಾವುದೇ ಕಷ್ಟ ತೋರಿಸದೇ ಬೆಳೆಸುತ್ತಿರುವುದರಿಂದ ಮದುವೆಯಾದ ಮೇಲೆ ಎದುರಾಗುವ ಕಷ್ಟಗಳಿಂದ ಮದುವೆ ಮುರಿದು ಬೀಳುತ್ತಿದೆ.
- ಒಬ್ಬಳೇ ಮಗಳು, ಒಬ್ಬನೇ ಮಗ ಎಂದು ಪ್ರೀತಿಯಿಂದ ಬೆಳೆಸುತ್ತಿರುವುದು.
- ಜೊತೆಗೆ ಅವಶ್ಯಕತೆಗೆ ತಕ್ಕಾಗೆ ಏನು ಬೇಕೋ ಅದು ನೀಡಿ ಮಕ್ಕಳನ್ನ ಬೆಳೆಸುತ್ತಿರುವುದು. ಗಂಡನ ಮನೆಗೆ ಹೋದ ಸಂದರ್ಭದಲ್ಲಿ ಆ ಮನೆಗೆ ಹೊಂದಿಕೊಳ್ಳದೇ ಇರುವುದು.
- ಶಿಕ್ಷಣದ ಜೊತೆಗೆ ತಾವು ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಮಾಡಿಕೊಡುತ್ತಿರುವುದು ಕೂಡ ವಿಚ್ಛೇದನಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
- ಪತಿ ಮೇಲೆ ಪತ್ನಿ ಅವಲಂಬಿಯಾಗಿರದೇ ಇರುವುದು, ಪತ್ನಿ ಮೇಲೆ ಪತಿ ಅವಲಂಬಿಸದೇ ಇರುವುದು ಕೂಡ ವಿಚ್ಛೇದನಕ್ಕೆ ಕಾರಣ.
- ಈ ಹಿಂದೆ ಪತಿಗೆ ಪತ್ನಿ ಆಸರೆ, ಪತ್ನಿಗೆ ಪತಿ ಆಸರೆಯಾಗಿ ನಿಲ್ಲುತ್ತಿದ್ದರು. ಆದರೆ ಇದು ಇತ್ತೀಚೆಗೆ ಕಣ್ಮರೆಯಾಗಿದೆ.
- ಈ ಹಿಂದೆ ತಂದೆ ತಾಯಿ ಪೋಷಕರು ಮರ್ಯಾದೆಗೆ ಅಂಜಿ ಜೀವನ ಮಾಡಲು ಬುದ್ದಿವಾದ ಹೇಳುತ್ತಿದ್ದರು, ಮರ್ಯಾದೆಗೆ ಅಂಜಿ ಹೋದ ಮನೆಯಲ್ಲಿ ಅನುಸರಿಸಿಕೊಂಡು ಜೀವನ ಮಾಡುತ್ತಿದ್ದರು. ಆದರೆ ಈಗ ಯಾರು ಪಾಲಿಸುತ್ತಿಲ್ಲ, ಯಾರು ಮರ್ಯಾದೆಗೆ ಹೆದರುತ್ತಿಲ್ಲ.
- ತಂದೆ ತಾಯಿಗಳು ಕೂಡ ಹೋದ ಮನೆಯಲ್ಲಿ ಹೇಗೆ ಇರಬೇಕು ಎಂದು ತಮ್ಮ ಮಕ್ಕಳಿಗೆ ಹೇಳಿಕೊಡುತ್ತಿಲ್ಲ ಇದು ಕೂಡ ವಿಚ್ಛೇದನಕ್ಕೆ ಕಾರಣವಾಗಿದೆ.
- ಇನ್ನೂ ಪ್ರಮುಖವಾಗಿ ಈಗೋ ಎನ್ನುವುದು ವಿಚ್ಛೇದನಕ್ಕೆ ಪ್ರಮುಖ ಕಾರಣವಾಗಿದೆ. ಪರಸ್ಪರ ಪತಿ ಪತ್ನಿಗೆ ಈಗೋ ಹರ್ಟ್ ಆಗಿ ತ್ವರಿತಗತಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಿದ್ದಾರೆ.
- ಇನ್ನೂ ಈ ಹಿಂದೆ ಒಂದು ಗಂಡಿಗೆ ಒಂದು ಹೆಣ್ಣು, ಒಂದು ಹೆಣ್ಣಿಗೆ ಒಂದು ಗಂಡು ಅಂತಾ ಮದುವೆ ನಿಶ್ವಯ ಮೂಲಕ ಸಂಬಂದ ಗಟ್ಟಿಗೊಳಿಸಲಾಗುತ್ತಿತ್ತು. ಆದರೆ ಈಗ ಮದುವೆಯಾಗಿದ್ದೇ ತಡ ಇಷ್ಟಬಂದಂತೆ ಬದಲಾಗುವ ಸನ್ನಿವೇಶ ಸೃಷ್ಟಿಯಾಗಿದೆ.
- ತಮಗೆ ಇಷ್ಟ ಬಂದ ಹುಡುಗನ ಜೊತೆಗೆ ಅಥವಾ ಹುಡುಗಿ ಜೊತೆ ಸಂಬಂಧ ಬೆಳೆಸುವ ಇಷ್ಟಾನುಸಾರ ಇರಲು ವಾತಾವರಣ ಇರುವುದು ಕೂಡ ಅತಿಹೆಚ್ಚು ವಿಚ್ಛೇದನಕ್ಕೆ ಕಾರಣವಾಗಿದೆ.
- ಪುರುಷ ಹಾಗೂ ಮಹಿಳೆಯರು ಮದುವೆಯಾದ ಬಳಿಕ ಪತಿ ಇಲ್ಲಾಂದ್ರೂ ಅಥವಾ ಪತ್ನಿ ಇಲ್ಲಾಂದ್ರು ಜೀವನ ನಡೆಸುವ ಸನ್ನಿವೇಶ ಸೃಷ್ಟಿಯಾಗಿರುವುದು ಕೂಡ ವಿಚ್ಛೇದನಕ್ಕೆ ಪ್ರಮುಖ ಕಾರಣ ಎನ್ನಬಹುದು.
- ಇನ್ನೂ ಪತ್ನಿ ಮನೆಗೆ ಬಂದಾಗ ಪತಿಗೆ ಸರಿಯಾಗಿ ಸ್ಪಂದಿಸದೇ ಇರುವುದು ತಂದೆ ತಾಯಿಗೆ ಬೆಲೆ ಕೋಡದೇ ಇರುವುದು, ಅಡುಗೆ ಸರಿಯಾಗಿ ಮಾಡದೇ ಇರುವುದು, ಬೆಳಿಗ್ಗೆ ಎದ್ದು ಪೂಜೆ ಪುನಸ್ಕಾರ ಮಾಡದೆ ಇರುವುದು ಕೂಡ ವಿಚ್ಛೇದನಕ್ಕೆ ಕಾರಣವಾಗುತ್ತಿದೆ.
- ಈ ಹಿಂದೆ ತಂದೆ ತಾಯಿ ತನ್ನ ಮಗಳನ್ನ ಮುಂಜಾನೆಯೇ ಎಬ್ಬಿಸಿ ಮನೆ ಕೆಲಸಗಳನ್ನು ಕಲಿಸಿ ಕೆಲಸ ಮಾಡಿಸುತ್ತಿದ್ದರು. ಆದರೆ ತನ್ನ ಮಗಳು ಸುಖವಾಗಿ ಇರಲಿ ಎಂದು ಬೆಳಿಗ್ಗೆ 9 ಗಂಟೆವರೆಗೂ ನಿದ್ದೆ ಮಾಡಲು ಅವಕಾಶ ನೀಡುವುದು, ಇದು ಯಥಾವತ್ತಾಗಿ ಗಂಡನ ಮನೆಯಲ್ಲಿ ಮುಂದುವರೆಯುವುದರಿಂದಲೂ ವಿಚ್ಛೇದನವಾಗುತ್ತಿದೆ .
- ಐಷಾರಾಮಿ ಜೀವನ, ವೈಭೋಗದ ಜೀವನ ಸದ್ಯ ಪರಸ್ಪರ ಅರ್ಥಮಾಡಿಕೊಂಡು ಸಂಗಾತಿಯಾಗಿ ಬಾಳಲು ಆಗದೇ ಹೆಚ್ಚು ವಿಚ್ಛೇದನಗಳು ಆಗ್ತಿವೆ.
- ಇನ್ನೂ ಗಂಡನಿಗೆ ಅಥವಾ ಪತ್ನಿಗೆ ಅವರ ಮನಸ್ಸಿನ ಭಾವನೆಗಳಿಗೆ ಸ್ಪಂದಿಸದೇ ಇರುವುದು ಕೂಡ ವಿಚ್ಛೇದನಕ್ಕೆ ಕಾರಣ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸಾ ಅವರು ತಿಳಿಸಿದ್ದಾರೆ.
ತುಮಕೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ