ತುಮಕೂರು ವಾಹನ ಸವಾರರಿಗೆ ಸಿಹಿಸುದ್ದಿ: ನೆನೆಗುದಿಗೆ ಬಿದ್ದಿದ್ದ ಚತುಷ್ಪಥ ಕಾಮಗಾರಿ ಆರಂಭ

ತುಮಕೂರು ನಗರದ ಬಹುನಿರೀಕ್ಷಿತ ರಾಷ್ಟ್ರೀಯ ಹೆದ್ದಾರಿ 206 ಅಗಲೀಕರಣ ಕಾಮಗಾರಿಗೆ ಕೊನೆಗೂ ಚಾಲನೆ ದೊರೆತಿದೆ. ಬಟವಾಡಿ-ಮಲ್ಲಸಂದ್ರ ನಡುವಿನ 12 ಕಿ.ಮೀ ದ್ವಿಪಥ ರಸ್ತೆಯನ್ನು 86 ಕೋಟಿ ರೂ ವೆಚ್ಚದಲ್ಲಿ ಚತುಷ್ಪಥವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಹತ್ತು ವರ್ಷಗಳಿಂದ ವಾಹನ ಸವಾರರಿಗೆ ಕಿರಿಕಿರಿಯಾಗಿದ್ದ ಈ ಮಾರ್ಗ ಈಗ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.

ತುಮಕೂರು ವಾಹನ ಸವಾರರಿಗೆ ಸಿಹಿಸುದ್ದಿ: ನೆನೆಗುದಿಗೆ ಬಿದ್ದಿದ್ದ ಚತುಷ್ಪಥ ಕಾಮಗಾರಿ ಆರಂಭ
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಚಾಲನೆ
Image Credit source: tv9 kannada
Edited By:

Updated on: Feb 01, 2026 | 6:54 PM

ತುಮಕೂರು, ಫೆಬ್ರವರಿ 01: ನಗರದ ವಾಹನ ಸವಾರರಿಗೆ ಕೊನೆಗೂ ಸಿಹಿ ಸುದ್ದಿ ದೊರೆತಂತಾಗಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಆ ಮೂಲಕ ಕಾಮಗಾರಿ ಆರಂಭದ ತಯಾರಿ ನಡೆದಿದೆ. ತುಮಕೂರು ನಗರದ ಒಳಗೆ ಹಾದುಹೋಗುವ ಬಟವಾಡಿ- ಮಲ್ಲಸಂದ್ರದ (Batavadi-Mallasandra) ನಡುವಿನ 12 ಕಿ.ಮಿ ರಸ್ತೆ ದ್ವಿಪಥವನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಅಧಿಕೃತವಾಗಿ ಚಾಲನೆ ದೊರೆತಿದೆ.

ರಸ್ತೆ ಇಕ್ಕಟ್ಟಿನಿಂದ ವಾಹನ ಸವಾರರಿಗೆ ಕಿರಿಕಿರಿ

ತುಮಕೂರು ನಗರದಿಂದ ಭೀಮಸಂದ್ರವರೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಸವಾರರಿಗೆ ಕೊಂಚ ಕಿರಿಕಿರಿಯಾಗಿತ್ತು. ಈ ಮಾರ್ಗ ರಾಷ್ಟ್ರೀಯ ಹೆದ್ದಾರಿಯಾದರೂ ಸಹ ಅಗಲೀಕರಣವಾಗದೇ ಹಾಗೆ ಉಳಿದಿತ್ತು. ಕಳೆದ ಹತ್ತು ವರ್ಷಗಳಿಂದ ಅಗಲೀಕರಣದ ನಿರೀಕ್ಷೆಯಲ್ಲೇ ಉಳಿದಿತ್ತು. ರಸ್ತೆ ಇಕ್ಕಟ್ಟಿನಿಂದ ದಿನ ನಿತ್ಯ ವಾಹನ ಸವಾರರು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದರು. ಆದರೆ ಇದೀಗ ಆ ಕಿರಿಕಿರಿಗೆ ಅಂತ್ಯ ಹಾಡುವ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ಏರ್​ಪೋರ್ಟ್ ರಸ್ತೆಯಲ್ಲಿ ಅಪಘಾತ ಹೆಚ್ಚಳ: 1 ವರ್ಷದಲ್ಲಿ 50ಕ್ಕೂ ಅಧಿಕ ಜನ ಸಾವು, ಜಾಗೃತಿ ಮೂಡಿಸಲು ಬಂದ ಯಮ

ಇತ್ತೀಚೆಗೆ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಮೂಲಕ ಹಲವು ವರ್ಷಗಳ ಕನಸು ನನಸಾಗಿದೆ. ಸುಮಾರು 13 ಕಿ.ಮೀ ದೂರದವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ನಡೆಯಲಿದ್ದು, ಈ ಯೋಜನೆಗೆ ಒಟ್ಟು 86 ಕೋಟಿ ರೂ ವೆಚ್ಚ ಅಂದಾಜಿಸಲಾಗಿದೆ. ನಾಲ್ಕು ಲೇನ್ ರಸ್ತೆ ನಿರ್ಮಾಣದಿಂದ ಸಂಚಾರ ಮತ್ತಷ್ಟು ಸುಗಮವಾಗಲಿದೆ.

ಇನ್ನು ಈ ಹೆದ್ದಾರಿ ಅಗಲೀಕರಣದಿಂದ ತುಮಕೂರು ನಗರದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ. ವಾಣಿಜ್ಯ, ಸಾರಿಗೆ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗಲಿದ್ದು, ವಾಹನ ಸವಾರರು ಹಾಗೂ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಿಂಗಳಲ್ಲಿ 15 ಮಂದಿ ಸಾವು: ಮೃತ್ಯುಕೂಪವಾಯ್ತಾ ತುಮಕೂರು ರಾಷ್ಟ್ರೀಯ ಹೆದ್ದಾರಿ?

ಒಟ್ಟಿನಲ್ಲಿ ಹಲವು ವರ್ಷಗಳ ಕಾಯುವಿಕೆಗೆ ತೆರೆ ಎಳೆದಿರುವ ರಾಷ್ಟ್ರೀಯ ಹೆದ್ದಾರಿ, ಕೊನೆಗೂ ಅಗಲೀಕರಣ ಕಾಮಗಾರಿ ಆರಂಭಿಸಿದೆ. ಈ ಮೂಲಕ ತುಮಕೂರು ನಗರದ ಸಂಚಾರ ವ್ಯವಸ್ಥೆಗೆ ಹೊಸ ಆಯಾಮ ನೀಡಲಿದೆ ಅನ್ನೊದು ಎಲ್ಲರ ಮಾತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.