ತುಮಕೂರು: ಕಾರಿಗೆ ಖಾಸಗಿ ಬಸ್ ಡಿಕ್ಕಿ; ಧರ್ಮಸ್ಥಳಕ್ಕೆ ತೆರಳುತ್ತಿದ್ದ ಮೂವರು ದುರ್ಮರಣ
ತುಮಕೂರು ತಾಲೂಕಿನ ಬೆಳಧರ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಮೂವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವಂತಹ ಘಟನೆ ನಡೆದಿದೆ. ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಸದ್ಯ ತುಮಕೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತುಮಕೂರು, ಅಕ್ಟೋಬರ್ 04: ಕಾರಿಗೆ ಖಾಸಗಿ ಬಸ್ ಡಿಕ್ಕಿಯಾಗಿ (accident) ಕಾರಲ್ಲಿದ್ದ ಐವರು ಪೈಕಿ ಮೂವರು ದುರ್ಮರಣ (death) ಹೊಂದಿರುವಂತಹ ಘಟನೆ ತುಮಕೂರು ತಾಲೂಕಿನ ಬೆಳಧರ ಗ್ರಾಮದ ಬಳಿ ನಡೆದಿದೆ. ಶಿವಕುಮಾರ್ (27), ಗೋವಿಂದಪ್ಪ (50) ಮತ್ತು ಭೈಚಾರಪುರದ ನಿವಾಸಿ ಶಿವಶಂಕರ್ (30) ಮೃತರು. ಧರ್ಮಸ್ಥಳ ಮಂಜುನಾಥ ದರ್ಶನಕ್ಕೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ಅಪಘಾತದ ನಂತರ ಖಾಸಗಿ ಬಸ್ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ತುಮಕೂರಿನಿಂದ ಪಾವಗಡದತ್ತ ಖಾಸಗಿ ಬಸ್ ತೆರಳುತ್ತಿತ್ತು. ಇದೇ ವೇಳೆ ಕೊರಟಗೆರೆ ಕಡೆಯಿಂದ ತುಮಕೂರು ಕಡೆ ಕಾರ್ ಬರುತ್ತಿತ್ತು. ಈ ವೇಳೆ ಮುಖಾಮುಖಿ ಡಿಕ್ಕಿಯಾಗಿ ಕಾರ್ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಗೋಕಾಕ್: ತಮ್ಮನ ಸಾವಿನ ಸುದ್ದಿ ತಿಳಿದು ಅಣ್ಣನಿಗೆ ಹೃದಯಾಘಾತ, ಮಕ್ಕಳನ್ನ ಕಳೆದುಕೊಂಡು ಹೆತ್ತವರು ಕಂಗಾಲು
ಘಟನೆಯಲ್ಲಿ ಗಾಯಗೊಂಡ ಕೊರಟಗೆರೆ ತಾಲೂಕಿನ ರೆಡ್ಡಿಹಳ್ಳಿಯ ಶಂಕರ್ (28) ನನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ, ಮತ್ತೋರ್ವ ಕಿತ್ತಿನಾಗೇನಹಳ್ಳಿಯ ವೇಣುಗೋಪಾಲ್ (28) ನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮೃತರು ಹಾಗೂ ಗಾಯಾಳುಗಳು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಕ್ಕಪಕ್ಕದ ಹಳ್ಳಿಯ ನಿವಾಸಿಗಳು ಎಂದು ತಿಳಿದುಬಂದಿದೆ.
ಸಾಫ್ಟ್ವೇರ್ ಇಂಜಿನಿಯರ್ ಪತ್ನಿ ಅನುಮಾನಾಸ್ಪದ ಸಾವು
ಸಾಫ್ಟ್ವೇರ್ ಇಂಜಿನಿಯರ್ ಪತ್ನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಜೆ.ಪಿ.ನಗರದ ಆವಲಹಳ್ಳಿಯ ಪತಿ ಮನೆಯಲ್ಲಿ ನಡೆದಿದೆ. ನವ್ಯಾ ಮೃತ ಪತ್ನಿ. 4 ವರ್ಷದ ಹಿಂದೆ ಟೆಕ್ಕಿ ಶೈಲೇಶ್ ಜೊತೆ ನವ್ಯಾ ಮದುವೆಯಾಗಿತ್ತು. ಗರ್ಭಿಣಿಯಾಗಿದ್ದ ನವ್ಯಾಗೆ ಪತಿ ಮನೆಯವರಿಂದ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ.
ಬೆಳಗ್ಗೆ 9.20ರ ಸುಮಾರಿಗೆ ನವ್ಯಾ ಪೋಷಕರಿಗೆ ಕರೆಮಾಡಿದ್ದ ಶೈಲೇಶ್, ನೇಣುಬಿಗಿದುಕೊಂಡಿದ್ದ ನವ್ಯಾಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲುಮಾಡಿದ್ದೆ. ಆದರೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆಂದು ವೈದ್ಯರು ಹೇಳಿದ್ದಾರೆಂದು ನವ್ಯಾ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ.
ಇದನ್ನೂ ಓದಿ: ಕೋಲಾರದಲ್ಲಿ ನಕಲಿ ವೈದ್ಯರ ಹಾವಳಿಗೆ ಹೋಯ್ತು 8 ವರ್ಷದ ಬಾಲಕಿಯ ಜೀವ!
ಸದ್ಯ ತಲಘಟ್ಟಪುರ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದಡಿ ನವ್ಯಾ ಪೋಷಕರು ನೀಡಿದ್ದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ನಾಳೆ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಶವ ಹಸ್ತಾಂತರಿಸಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:50 pm, Sat, 4 October 25



