AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವು ಗೆದ್ದು ಬಂದ 19 ವರ್ಷದ ಯುವತಿ ಹಂಸ: ಸತತ 12 ಗಂಟೆ ಕಾಲ ನಡೆದ ರೋಚಕ ಕಾರ್ಯಾಚರಣೆ

ತುಮಕೂರು ತಾಲೂಕಿನ ಮೈದಾಳ ಕೆರೆಯಲ್ಲಿ ಸೆಲ್ಪಿ ತೆಗೆದುಕೊಳ್ಳುವಾಗ 19 ವರ್ಷದ ಯುವತಿ ಕಾಲು ಜಾರಿ ಬಿದಿದ್ದು, ಸತತ 12 ಗಂಟೆಗಳ ಕಾರ್ಯಚರಣೆ ಬಳಿಕ ಪವಾಡ ಸದೃಶ್ಯವಾಗಿ ಬದುಕುಳಿದು ಬಂದಿರುವಂತಹ ಘಟನೆ ನಡೆದಿದೆ.  ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸಾವು ಗೆದ್ದು ಬಂದ 19 ವರ್ಷದ ಯುವತಿ ಹಂಸ: ಸತತ 12 ಗಂಟೆ ಕಾಲ ನಡೆದ ರೋಚಕ ಕಾರ್ಯಾಚರಣೆ
ಸಾವು ಗೆದ್ದು ಬಂದ 19 ವರ್ಷದ ಯುವತಿ ಹಂಸ: ಸತತ 12 ಗಂಟೆ ಕಾಲ ನಡೆದ ರೋಚಕ ಕಾರ್ಯಾಚರಣೆ
ಮಹೇಶ್ ಇ, ಭೂಮನಹಳ್ಳಿ
| Edited By: |

Updated on: Oct 28, 2024 | 7:39 PM

Share

ತುಮಕೂರು, ಅಕ್ಟೋಬರ್​ 28: ಆಕೆ ತನ್ನ ಸ್ನೇಹಿತೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಕೆರೆ ಕೋಡಿ ಬಳಿಗೆ ಹೋಗಿದ್ದಾಳೆ, ಸೆಲ್ಪಿಯೂ (Selfie) ತೆಗೆದುಕೊಂಡಿದ್ದಾಳೆ, ಬೇರೆಯವರಿಗೆ ಫೋನ್​ ನೀಡಿ ಫೋಟೋಸ್​ ತೆಗೆದುಕೊಂಡಿದ್ದಾರೆ. ಜೊತೆಗೆ ರೀಲ್ಸ್ ಕೂಡ ಮಾಡಿದ್ದಾರೆ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಕಾಲು ಜಾರಿ ಬಿದ್ದಿದ್ದಾಳೆ. ನಿನ್ನೆ ಮಧ್ಯಾಹ್ನ 2.30 ಸುಮಾರಿಗೆ ತುಮಕೂರು ತಾಲೂಕಿನ ಮಂದಾರಗಿರಿ ಬಳಿಯಿರುವ ಮೈದಾಳ ಕೆರೆ ಬಳಿ  ಘಟನೆ ನಡೆದಿದ್ದು, 12 ಗಂಟೆಗಳ ಕಾರ್ಯಚರಣೆಯಿಂದ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾಳೆ.

ಬದುಕಿಬಂದ ಹಂಸ 

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಶಿವರಾಮ್ ಪುರ ಗ್ರಾಮದ ನಿವಾಸಿ ಹಂಸ ಬದುಕುಳಿದ ಯುವತಿ. ತುಮಕೂರಿನಲ್ಲಿ ಸಿದ್ದಗಂಗಾ ಕಾಲೇಜ್​ನಲ್ಲಿ ಬಿ ಟೇಕ್ ಮಾಡುತ್ತಿದ್ದಾಳೆ. ನಿನ್ನೆ ತನ್ನ ಹೈಸ್ಕೂಲ್​ ಸ್ನೇಹಿತೆ ಕೀರ್ತನಾ ಬಂದಳು ಎಂದು ಹಾಸ್ಟೆಲ್​ನಿಂದ ತುಮಕೂರು ತಾಲೂಕಿನ ಮಂದಾರಗಿರಿ ಬಳಿಯಿರುವ ಮೈದಾಳ ಕೆರೆ ಬಳಿ ಹೋಗಿದ್ದಾರೆ. ಇತ್ತಿಚೆಗೆ ಮಳೆ ಬಂದ ಕಾರಣ ಕೆರೆ ಕೋಡಿ ಬಿದ್ದು ಹರಿದಿದೆ. ನೋಡಲು ಸುಂದರವಾಗಿರುವ ಕೆರೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೂಡ ಸಾಕಷ್ಟು ವೈರಲ್ ಆಗಿತ್ತು.

ಇದನ್ನೂ ಓದಿ: ತುಮಕೂರು: ನಡು ರಸ್ತೆಯಲ್ಲಿ ತಲ್ವಾರ್​ನಿಂದ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಣೆ

ಹೀಗೆ ಕೋಡಿ ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಹಂಸ ಕಾಲು ಜಾರಿ ಬಿದ್ದಿದ್ದಾಳೆ. ಕೂಡಲೇ ಜೊತೆಯಲ್ಲಿ ಇದ್ದ ಸ್ನೇಹಿತೆ ಕೀರ್ತನಾ ತನ್ನ ತಂದೆ-ತಾಯಿ ಹಾಗೂ ಹಂಸಳ ತಂದೆ ಸೋಮನಾಥ್​ಗೂ ಕರೆ ಮಾಡಿ‌ ಮಾಹಿತಿ ನೀಡಿದ್ದಾಳೆ. ಕೂಡಲೇ ಗಾಬರಿಯಾದ ಹಂಸಾ ಕುಟುಂಬ ಕಂಗಲಾಗಿ ಓಡಿ ಬಂದಿದ್ದಾರೆ. ಅಷ್ಟರಲ್ಲಿ ಸ್ಥಳಕ್ಕೆ ಅಗ್ನಿ ಶಾಮಕದಳ ಹಾಗೂ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಹಂಸಾ ಹುಟುಕಾಟ ಆರಂಭಿಸಿದ್ದರು.

ಅಗ್ನಿ ಶಾಮಕದಳ ಪೊಲೀಸರು, ಗ್ರಾಮಸ್ಥರ ನಿರಂತರ ಹುಡುಕಾಟ

ನೀರಿನ ಹರಿವು ಹೆಚ್ಚಳ ಇದ್ದ ಕಾರಣ ಹಂಸಾಳನ್ನ ರಕ್ಷಿಸಲು ನಡೆಸಿದ ಕಾರ್ಯಾಚರಣೆಗೆ ತಡೆಯಾಗಿದೆ. ಇತ್ತ ಈಗಾಗಲೇ ಹಂಸ ಬದುಕುಳಿಯುದಿಲ್ಲ ಅಂತಾ ಕುಟುಂಬ ಕಣ್ಣಿರುಡುತ್ತಾ ಕಾದಿದ್ದರು. ರಾತ್ರಿವರೆಗೂ ಸಿಗದ ಹಂಸಾ ಕತ್ತಲಾದ ಕಾರಣ ಬೆಳಿಗ್ಗೆಯಿಂದ ಮತ್ತೆ ಕಾರ್ಯಾಚರಣೆ ಶುರು ಮಾಡಿದ್ದಾರೆ. ಮೊದಲಿಗೆ ಹಂಸ ಮೃತ ದೇಹವಾದರೂ ಸಿಗಲಿ ಅಂತಾ ಅಗ್ನಿ ಶಾಮಕದಳ ಪೊಲೀಸರು, ಗ್ರಾಮಸ್ಥರ ನಿರಂತರ ಹುಡುಕಾಟ ನಡೆಸಿದ್ದಾರೆ. ಅಲ್ಲದೇ ಹರಿಯುವ ನೀರನ್ನ ಡೈವರ್ಟ್ ಮಾಡಿ ಮರಳಿನ ಮೂಟೆಗಳಿಂದ ಹರಿಯುವ ಪ್ರಮಾಣ ಕಡಿಮೆ ಮಾಡಿದ್ದಾರೆ.

ಮುಂಜಾನೆಯಿಂದಲೂ ಗುಬ್ಬಿ ಶಾಸಕ ಶ್ರೀನಿವಾಸ್ ತಹಶಿಲ್ದಾರ್ ಹಾಗೂ ಎಸ್​ಪಿ ಅಶೋಕ್ ವೆಂಕಟ್ ಮೊಕ್ಕಾಂ ಹೂಡಿ ಹಂಸಾಗಾಗಿ ಹುಡುಕಾಟ ನಡೆಸಿದ್ದರು. ಸತತ 20 ಗಂಟೆಗಳ ಬಳಿಕ ಬೆಳಿಗ್ಗೆ 12 ಗಂಟೆ ಸುಮಾರಿಗೆ ಹಂಸಾ ಜೀವಂತವಾಗಿ ಪತ್ತೆ ಆಗಿದ್ದಾಳೆ.

ಬದುಕುಳಿದ ಹಂಸ ಹೇಳಿದ್ದೇನು?

ಇನ್ನೂ ಹಂಸ ಇರುವ ಜಾಗ ಪತ್ತೆ ಮಾಡಿದ ಅಗ್ನಿ ಶಾಮಕದಳ ಪೊಲೀಸರು ಆಕೆಗೆ ನೀರು ಕೊಡಿಸಿ ಸುಧಾರಿಸಿದ್ದಾರೆ. ಹಂಸ ಬದುಕಿರುವ ವಿಚಾರ ತಿಳಿದು ನೆರೆದಿದ್ದವರು ಮತ್ತು ಪೋಷಕರು ಖುಷಿಯಾಗಿದ್ದಾರೆ. ನಿನ್ನೆ ಸ್ನೇಹಿತೆ ಜೊತೆಗೆ ಬಂದು ಕಾಲು ಜಾರಿ ಬಿದ್ದೆ. ಇನ್ನೂ ರಾತ್ರಿಯಿಡಿ ಮಂಡಿ ಮೇಲೆ ಕಾದುಕುಳಿತಿದ್ದೆ.  ಅಪ್ಪ-ಅಮ್ಮ ನೆನೆದು ಧೈರ್ಯವಾಗಿ ಇದ್ದೆ. ಅಲ್ಲದೇ ಯಾರಾದರೂ ಕಾಪಾಡಲು ಬರುತ್ತಾರೆಂಬ ನಂಬಿಕೆ ಇತ್ತು, ಭಯ ಇರಲಿಲ್ಲ ಎಂದು ಬದುಕಿಬಂದ ಹಂಸ ಹೇಳಿದ್ದಾರೆ.

ಇನ್ನೂ ಹಂಸ ಬದುಕುಳಿದ ಕಾರಣ ತಂದೆ ಸೋಮನಾಥ್ ಹಾಗೂ ಕುಟುಂಬಸ್ಥರು, ಸ್ನೇಹಿತೆ ಕೀರ್ತನಾ ಹಾಗೂ ಶಾಸಕರು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ತನ್ನ ಮಗಳು ವಾಪಸ್ ಬಂದ ಕಾರಣ ತಂದೆ ಸೋಮನಾಥ್ ಭಾವುಕರಾಗಿದ್ದು, ಜಿಲ್ಲಾಡಳಿತಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಮಧ್ಯಾಹ್ನವಾದರೂ ತುಮಕೂರು-ಶಿರಾ ಹೆದ್ದಾರಿಯಲ್ಲಿ ಕ್ಲಿಯರ್​ ಆಗದ ಟ್ರಾಫಿಕ್​​​ ಜಾಮ್

ಹಂಸ ಬದುಕುಳಿಯಲ್ಲ ಎನ್ನುವಷ್ಟರಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕಿ ಬಂದು ಎಲ್ಲರಿಗೂ ಶಾಕ್ ನೀಡಿದ್ದಾಳೆ‌. ರಾತ್ರಿ ಮಳೆ ಬಾರದಿರುವುದು ಹಾಗೂ ಅಗ್ನಿ ಶಾಮಕ ದಳ ಪೊಲೀಸರ ಸತತ ಕಾರ್ಯಾಚರಣೆ ಮತ್ತು ದೇವರ ದಯೆಯಿಂದ ಹಂಸ ಬರಲು ಸಾಧ್ಯವಾಗಿದೆ. ಸದ್ಯ ಹಂಸ ವಾಪಸ್​ ಆಗಿದ್ದರಿಂದ ಇಡೀ ತುಮಕೂರು ಜಿಲ್ಲೆಯ ಜನರು ಹಾಗೂ ಜಿಲ್ಲಾಡಳಿತ ಸಂತಸಗೊಂಡಿದ್ದಾರೆ. ಇನ್ನಾದರೂ ಸೆಲ್ಪಿ ಹುಚ್ಚಿರುವವರು ಮುಂಜಾಗ್ರತಾ ಕ್ರಮವಾಗಿ ಇರಬೇಕೆಂಬುದು ಎಲ್ಲರ ಆಶಯವಾಗಿದೆ.

Follow Us