ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ಗಳು ಪತ್ತೆ: ಜನರ ಕೈ ಸೇರಬೇಕಿದ್ದ ಇವು ನೀರು ಪಾಲಾಗಿದ್ದೇಗೆ?
ಮಂಗಳೂರಿನ ನೇತ್ರಾವತಿ ನದಿ ತೀರದಲ್ಲಿ ನೂರಾರು ಆಧಾರ್ ಕಾರ್ಡ್ಗಳು ಪತ್ತೆಯಾಗಿವೆ. ಇದರಿಂದ ಸಾರ್ವಜನಿಕರು ಆಘಾತಕ್ಕೊಳಗಾಗಿದ್ದು, ಅಂಚೆ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಆಧಾರ್ ಕಾರ್ಡ್ಗಳು ತಮಗೆ ತಲುಪದ ಕಾರಣ ಅನೇಕರು ಅಧಿಕಾರಿಗಳ ಬೇಜವಾಬ್ದಾರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯು.ಟಿ. ಖಾದರ್ ಅವರು ಈ ಘಟನೆಯ ಸಮಗ್ರ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಮಂಗಳೂರು, ಮಾರ್ಚ್ 05: ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಗ್ರಾಮದ ಫರಂಗಿಪೇಟೆಯ ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ಗಳು ಪತ್ತೆಯಾಗಿವೆ. ನದಿ ತೀರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಆಧಾರ್ ಕಾರ್ಡ್ಗಳನ್ನು ಕಂಡು ಸಾರ್ವಜನಿಕರು ಶಾಕ್ ಆಗಿದ್ದು, ಈ ಬಗ್ಗೆ ಪಂಚಾಯತ್ ಅಧ್ಯಕ್ಷರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧ್ಯಕ್ಷರು ಸಾರ್ವಜನಿಕರ ಜೊತೆಗೂಡಿ ನೂರಾರು ಆಧಾರ್ ಕಾರ್ಡ್ಗಳನ್ನು ಸಂಗ್ರಹಿಸಿದ್ದಾರೆ. ಘಟನೆ ಬಗ್ಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದು, ಅಂಚೆ ಇಲಾಖೆಯಿಂದ ಸರಿಯಾದ ವಿಳಾಸಕ್ಕೆ ಆಧಾರ್ ಕಾರ್ಡ್ ತಲುಪುತ್ತಿಲ್ಲವೆಂದು ಆರೋಪಿಸಿದ್ದಾರೆ.
ತಮ್ಮ ಕುಟುಂಬದವರ ಎಲ್ಲರ ಅಧಾರ್ ಕಾರ್ಡ್ ನದಿಯಲ್ಲಿ ಸಿಕ್ಕಿದೆ. ಗ್ರಾಮದ ನೂರಾರು ಜನರ ಕಾರ್ಡ್ಗಳು ಸಹ ಇದರಲ್ಲಿವೆ. ಹಣ ಪಾವತಿಸಿ ವಿಳಾಸ, ಹೆಸರು ಬದಲಾವಣೆ ಮಾಡಿಸಿದವರು ಪರಿಷ್ಕೃತ ಕಾರ್ಡ್ ಈಗ ಬರಬಹುದು, ಆಗ ಬರಬಹುದು ಎಂದು ಕಾಯುತ್ತಿದ್ದರೆ ಅವೆಲ್ಲವೂ ಈಗ ನದಿ ನೀರಲ್ಲಿ ತೇಲಿಬರುತ್ತಿರೋದು ಕಂಡುಬಂದಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಈ ಘಟನೆ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೆಕು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬದಲಿಸುವುದು ಹೇಗೆ?
ತನಿಖೆಗೆ ಸೂಚಿಸಿದ ಸ್ಪೀಕರ್ ಯು.ಟಿ. ಖಾದರ್
ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ನೇತ್ರಾವತಿ ನದಿ ತೀರದಲ್ಲಿ ಮಾರ್ಚ್ 03, 2026ರಂದು ಅಪಾರ ಪ್ರಮಾಣದ ಆಧಾರ್ ಕಾರ್ಡ್ಗಳು ನದಿ ತಟದಲ್ಲಿರುವುದನ್ನು ಕಂಡು ಸಾರ್ವಜನಿಕರು ಸ್ಥಳೀಯ ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕನಾದ ನನಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಬಂದಿದೆ. ಆಧಾರ್ ಕಾರ್ಡ್ಗಳು ಇಷ್ಟೊಂದು ಪ್ರಮಾಣದಲ್ಲಿ ನದಿ ತಟದಲ್ಲಿ ಪತ್ತೆಯಾಗಲು ಕಾರಣವೇನು? ಮತ್ತು ಇದಕ್ಕೆ ಕಾರಣರಾದವರು ಯಾರೆಂಬುದನ್ನು ತನಿಖೆ ನಡೆಸಿ ಪತ್ತೆ ಹಚ್ಚಿ ತಮ್ಮ ಇಲಾಖೆಯ ಮುಖಾಂತರ ಕೂಡಲೇ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಯು.ಐ.ಡಿ.ಎ.ಐ ಯೋಜನಾ ವ್ಯವಸ್ಥಾಪಕರಿಗೆ ವಿಧಾನ ಸಭೆ ಸ್ಪೀಕರ್ ಮತ್ತು ಸ್ಥಳೀಯ ಶಾಸಕ ಯು.ಟಿ. ಖಾದರ್ ಸೂಚಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:56 pm, Thu, 5 March 26