Tv9 Digital Live: ಕೊರೊನಾ ತಡೆಗಟ್ಟಲು ಇನ್ನಾದರೂ ಜನ ಎಚ್ಚೆತ್ತುಕೊಳ್ಳಲಿ; ತಜ್ಞರಿಂದ ಗಂಭೀರ ಎಚ್ಚರಿಕೆ
ಕೊರೊನಾ 2ನೇ ಅಲೆಯ ಹಿನ್ನೆಲೆಯಲ್ಲಿ ಜನರಿಗೆ ಎಚ್ಚರಿಕೆಯ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಈ ಕುರಿತಂತೆ ಟಿವಿ9 ಕನ್ನಡ ಡಿಜಿಟಲ್ ಲೈವ್ನಲ್ಲಿ ಚರ್ಚಿಸಲಾಗಿದೆ.

ಕೊರೊನಾ 2ನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಿನ್ನೆಯಿಂದ (ಮಾರ್ಚ್ 24) ಕಠಿಣ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಅದೇನೆಂದರೆ ಕೊರೊನಾ ತಡೆಗಟ್ಟಲು ಜಾರಿಗೆ ತಂದ ನಿಯಮಾವಳಿಗಳನ್ನು ಪಾಲಿಸದಿದ್ದರೆ ದಂಡ ವಿಧಿಸುವುದು. ಒಂದು ಪ್ರಬುದ್ಧ ಸಮಾಜದವರಾಗಿ ನಾವು ಕೊವಿಡ್ ನಿಯಂತ್ರಣ ನಿಯಮವನ್ನು ಪಾಲಿಸುತ್ತಿದ್ದೇವೆಯೇ? ಇಲ್ಲವೇ?. ನಿಯಮ ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಲ್ಲವೇ? ಈ ಕುರಿತು ಟಿವಿ9 ಕನ್ನಡ ಡಿಜಿಟಲ್ ಲೈವ್ನಲ್ಲಿ ಚರ್ಚೆ ನಡೆಸಲಾಯಿತು. ತಜ್ಞರಾದ ಡಾ.ಸುನೀಲ್, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಗಿರಿಧರ್ ಬಾಬು ಹಾಗೂ ಬಿಬಿಎಂಪಿ ನೋಡೆಲ್ ಅಧಿಕಾರಿ ಸುಶೀಲ್ ಕುಮಾರ್ ಪಾಲ್ಗೊಂಡಿದ್ದರು. ಆ್ಯಂಕರ್ ಆನಂದ್ ಬುರಲಿ ವಿಷಯ ತಜ್ಞರ ಜೊತೆ ಚರ್ಚಿಸಿದರು.
ಹೋದ್ಯಾ ಪಿಶಾಚಿ ಅಂದರೆ ಬಂದ್ಯಾ ಗವಾಕ್ಷಿ ಎಂಬಂತೆ ಕೊರೊನಾ 2ನೇ ಅಲೆ ಜನರನ್ನು ಕಾಡಲು ಪ್ರಾರಂಭಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಎಚ್ಚರದ ಆದೇಶವನ್ನು ಹೊರಡಿಸಿದೆ. ಮಾಸ್ಕ್ ಧರಿಸದಿದ್ದರೆ ಅಥವಾ ನಿಯಮನ್ನು ಉಲ್ಲಂಘಿಸಿ ಸಭೆ-ಸಮಾರಂಭವನ್ನು ಆಚರಿಸುವುದಾದರೆ ದಂಡ ವಿಧಿಸಲಾಗುವುದು ಎಂಬುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜನರು ನಿಯಮ ಪಾಲಿಸುತ್ತಿದ್ದಾರೆಯೇ? ಸರಕಾರ ಹೊರಡಿಸಿದ ಆದೇಶವನ್ನು ಜನರು ಅರಿಯುತ್ತಾರೆಯೇ? ಎಂಬ ವಿಷಯಕ್ಕೆ ಸಂಬಂಧಿಸಿ ಚರ್ಚೆ ನಡೆಸಲಾಗಿದೆ.
ನಿಯಮ ಪಾಲಿಸದಿದ್ದರೆ ಸರಕಾರ ದಂಡ ವಿಧಿಸುವುದಾಗಿ ಆದೇಶ ಹೊರಡಿಸಿದೆ. ಈ ಕುರಿತು ಜನರು ಎಷ್ಟರ ಮಟ್ಟಿಗೆ ಆದೇಶಕ್ಕೆ ಹೊಂದಿಕೊಳ್ಳಬಹುದು ಎಂಬ ಪ್ರಶ್ನೆಗೆ ಡಾ. ಸುನೀಲ್ ಮಾತನಾಡಿ, ಜನರು ನಿಯಮವನ್ನು ಸರಿಯಾಗಿ ಪಾಲಿಸದಿದ್ದರೆ 2ನೇ ಅಲೆ ಹೆಚ್ಚಾಗಿ ಆವರಿಸುತ್ತದೆ. ಇದರಿಂದಾಗಿ ಜನರು ವೈಯಕ್ತಿಕವಾಗಿ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ ನಿಯಮ ಪಾಲಿಸಬೇಕಿದೆ. ಮಾಸ್ಕ್ ಧರಿಸಲೂ ರೀತಿ ನೀತಿ ಇದೆ. ಮೂಗು ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಿ ಎಂದು ಹೇಳಿದರು. ಕೊರೊನಾ ಸಾಂಕ್ರಾಮಿಕ ರೋಗ ರಾಜ್ಯಕ್ಕೆ ಬರುವುದಕ್ಕಿಂತ ಮೊದಲು ಜನರು ಆರಾಮಾಗಿ ಎಲ್ಲೆಡೆ ತಿರುಗಾಡುತ್ತಿದ್ದರು. ಸಮಾರಂಭಗಳಿಗೆ ಮುಕ್ತರಾಗಿ ಆಗಮಿಸುತ್ತಿದ್ದರು. ಆದರೆ ಕೊರೊನಾ ಎಂಬ ಸಾಂಕ್ರಾಮಿಕ ಕಾಲಿಟ್ಟಾಗಿನಿಂದ ಇವೆಲ್ಲದಕ್ಕೆ ಕಡಿವಾಣ ಬಿದ್ದಿದೆ. ಆದರೆ ಇದು ಅನಿವಾರ್ಯ ಎಂಬುದನ್ನು ಜನರು ಅರಿತರೆ ಇನ್ನಷ್ಟು ಜನ ಕೊರೊನಾಕ್ಕೆ ಬಲಿಯಾಗುತ್ತಿರುವುದನ್ನು ಕಡಿಮೆ ಮಾಡಬಹುದು ಎಂಬ ಸಂದೇಶವನ್ನು ಸಾರಿದರು.
ಬಿಬಿಎಂಪಿ ಮೇಲೆ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಅತಿಹೆಚ್ಚು ಜವಾಬ್ದಾರಿ ಇದೆ. ಈ ಕುರಿತಾಗಿ ಬಿಬಿಎಂಪಿ ಯಾವ ಅಂಶಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳುತ್ತಿದೆ ಎಂಬ ಪ್ರಶ್ನೆಗೆ ಸಂಬಂಧಿಸಿ ಮಾತನಾಡಿದ ಸುಶೀಲ್, ‘ಮದುವೆಗಳಲ್ಲಿ- ಪಾರ್ಟಿಗಳಲ್ಲಿ ಹೆಚ್ಚು ಜನರು ಸೇರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ 500 ಜನ ಮಾತ್ರ ಸೇರಲು ಅವಕಾಶವಿದೆ. ಆದರೂ ಜನ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೊರೊನಾ 2ನೇ ಅಲೆ ಹೆಚ್ಚಾಗಲು ಇದೇ ಕಾರಣ. ಒಬ್ಬರಿಂದ ಒಬ್ಬರಿಗೆ ಕೊರೊನಾ ಹರಡುತ್ತಾ ಹೋಗುತ್ತದೆ ಎಂದರು. ವ್ಯಾಕ್ಸಿನೇಷನ್ ಬಗ್ಗೆ ಮಾತನಾಡುವುದಾದರೆ, ಜನ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯುತ್ತಿದ್ದಾರೆ. ಕೊರೊನಾ ಹರಡುತ್ತಿದ್ದ ಪ್ರಾರಂಭದಲ್ಲಿ ಜನರು ಅಷ್ಟು ಅರಿತಿರಲಿಲ್ಲ. ಆದರೆ ಇದೀಗ ಲಸಿಕೆ ಪಡೆಯಲು ಅವರಾಗಿಯೇ ಬರುತ್ತಿರುವುದು ಒಳ್ಳೆಯ ನಿರ್ಧಾರ ಎಂದು ಮಾತನಾಡಿದರು.
ಇನ್ನು, ಲಸಿಕೆ ನೀಡುವ ವಿಚಾರಕ್ಕೆ ಬಂದಾಗ ಬಿಬಿಎಂಪಿ ಆಶಾ ಕಾರ್ಯಕರ್ತೆಯರ ಮೂಲಕ ಜನರಿಗೆ ಅರಿವು ಮೂಡಿಸಿ ಸ್ಲಂಗಳಲ್ಲಿ ವಾಸಿಸುತ್ತಿರುವ ಜನರನ್ನು ಕರೆದುಕೊಂಡು ಬಂದು ಲಸಿಕೆ ನೀಡುತ್ತಿದೆ.. ಇನ್ನಿತರ ಜನರು ತಾವಾಗಿಯೇ ಬಂದು ಲಸಿಕೆ ಪಡೆಯುತ್ತಿದ್ದಾರೆ. ಮಾಸ್ಕ್ ಬಗ್ಗೆ ಹೇಳುವುದಾದರೆ, ಪೊಲೀಸರು, ಮಾರ್ಷಲ್ಗಳು ಹೇಳುತ್ತಿದ್ದಾರೆ ಎಂಬ ಮಾತ್ರಕ್ಕೆ ನಿಯಮ ಪಾಲಿಸುವುದನ್ನು ಬಿಟ್ಟು ಜನರು ತಾವು ಆರೋಗ್ಯದಲ್ಲಿ ಚೆನ್ನಾಗಿರಬೇಕು ಎಂದು ತಾವೇ ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸಬೇಕು ಎಂಬ ನಿರ್ಧಾರ ಜನರಲ್ಲಿ ಬರಬೇಕಿದೆ ಎಂದು ಅಭಿಪ್ರಾಯ ಹಂಚಿಕೊಂಡರು.
ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಗಿರಿಧರ್ ಬಾಬು ಮಾತನಾಡಿ, ‘ಮುಂದಿನ ದಿನಗಳಲ್ಲಿ ಕೊರೊನಾ ಏರುತ್ತ ಹೋಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸುವುದಾದರೆ, ಕೊರೊನಾ 2ನೇ ಅಲೆ ಜನರನ್ನು ಇನ್ನಷ್ಟು ಆತಂಕಕ್ಕೆ ಒಳಗಾಗಿಸುವಂತದ್ದು. ಏಕೆಂದರೆ ಮೊದಲನೇ ಅಲೆಗಿಂತ 2ನೇ ಅಲೆ ಹೆಚ್ಚು ತೀವ್ರತೆಯನ್ನು ಹೊಂದಿದೆ. ಹಾಗಾಗಿ ಜನರು ಎಚ್ಚರದಿಂದ ಇರಬೇಕು. ಜನ ನಿಯಮಗಳನ್ನು ಪಾಲಿಸದೇ ಇರುವುದರಿಂದ ಕೊರೊನಾ ಎಲ್ಲೆಡೆ ಹರಡುವಿಕೆಯ ಹೆಚ್ಚಳಕ್ಕೆ ಕಾರಣ. ಕರ್ನಾಟಕದಲ್ಲಿ ಕೊರೊನಾ ಟೆಸ್ಟಿಂಗ್ ಅನ್ನು ಸರಿಯಾಗಿ ಮಾಡಬೇಕು. ಹಾಗೂ ಕೊರೊನಾ ಹರಡುವಿಕೆ ಹೇಗೆ ಆಗುತ್ತಿದೆ ಎಂಬುದನ್ನು ಅರಿಯಬೇಕು ಎಂದಾದರೆ, ಸಂಪರ್ಕ ಮತ್ತು ಸಂಪರ್ಕದ ಟ್ರಾಕಿಂಗ್ಗಳನ್ನು ಸರಿಯಾಗಿ ನಡೆಸಬೇಕು. ಕೊರೊನಾ ಪಾಸಿಟಿವ್ ಬಂದಿರುವ ಜನ ಯಾರೊಂದಿಗೆ ಬೆರೆತಿದ್ದಾರೆ. ಎಲ್ಲೆಲ್ಲಿ ತಿರುಗಾಡಿದ್ದಾರೆ ಎಂಬುದು ಗೊತ್ತಾದರೆ ಸರಿಯಾಗಿ ಮುಂದಿನ ನಿರ್ಧಾರ ಕೈಗೊಳ್ಳಲು ಸಹಾಯವಾಗುತ್ತದೆ.
2ನೇ ಅಲೆಯನ್ನು ನಾವು ತಡೆಯುವ ಕುರಿತಾಗಿ ಯೋಚಿಸಬೇಕು. ಕೊರೊನಾ ಟೆಸ್ಟ್ ಹೆಚ್ಚಿಸಬೇಕು. ಜನರು ತಪ್ಪದೇ ಲಸಿಕೆ ಪಡೆಯಬೇಕು. ಜೊತೆಗೆ ನಿಯಮಗಳಾದ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡುವುದು ಕಡ್ಡಾಯ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಎಲ್ಲಾ ಕಡೆಗಳಲ್ಲಿ ಜನಸಂದಣಿಗಳೇ ಕಾಣುತ್ತಿವೆ. ನಮ್ಮ ಜವಾಬ್ದಾರಿ ಏನು ಎಂಬುದನ್ನು ಅರಿತರೆ ಕೊರೊನಾ 2ನೇ ಅಲೆಯನ್ನು ತಡೆ ಹಿಡಿಯಬಹುದು ಎಂದು ಅಭಿಪ್ರಾಯ ಹಂಚಿಕೊಂಡರು.
ಇದನ್ನೂ ಓದಿ: Tv9 Digital Live | 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಗೆ ಕೇಂದ್ರ ಸರ್ಕಾರ ಅನುಮತಿ
Corona Cases and Lockdown News Live: ಕೊರೊನಾ ಸೋಂಕಿನ ಕುರಿತು ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆಯಾ?