Tv9 Impact: 15 ವರ್ಷಗಳಿಂದ ಎದುರಿಸುತ್ತಿದ್ದ ಸಮಸ್ಯೆಗೆ ಸರ್ಕಾರದಿಂದ ಅಭಯ ಹಸ್ತ, ಸೊನ್ನ ಬ್ಯಾರೇಜ್ನಿಂದ ನಡುಗಡ್ಡೆಯಾಗ್ತಿದ್ದ ತಾರಾಪುರ ಸ್ಥಳಾಂತರಕ್ಕೆ ಸಿದ್ಧತೆ
ಆ ಗ್ರಾಮದ ಜನ ಒಂದೂವರೆ ದಶಕದಿಂದ ಸಮಸ್ಯೆಗಳ ಸರಮಾಲೆಯೊಂದಿಗೆ ಬದುಕುತ್ತಿದ್ದರು. ಮುಂಗಾರು ಆರಂಭ ಆದರೆ ಸಾಕು ಹಿಡಿ ಶಾಪ ಹಾಕುತ್ತಿದ್ದರು. ಈ ಭಯ 15 ವರ್ಷಗಳಿಂದ ಕಾಡುತ್ತಿತ್ತು. ಜನರ ಸಂಕಷ್ಟಗಳ ಬಗ್ಗೆ ಟಿವಿ9 ವಿಸ್ತೃತ ವರದಿ ಪ್ರಸಾರ ಮಾಡಿದ ನಂತರ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.

ವಿಜಯಪುರ: ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪುರ ಭೀಮಾನದಿ ತಟದ ಪುಟ್ಟ ಗ್ರಾಮ. ನದಿ ತಟದಲ್ಲಿದ್ರೂ ಸಮಸ್ಯೆಗಳು ಇಲ್ಲಿ ಇರಲಿಲ್ಲಾ. ಹೆಚ್ಚಾಗಿ ಬಡವರು, ಕೃಷಿಕರು ಇಲ್ಲಿ ವಾಸ ಮಾಡುತ್ತಿದ್ದಾರೆ. 2006 ರಲ್ಲಿ ಭೀಮಾನದಿಗೆ ಅಡ್ಡಲಾಗಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಬಳಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಬ್ಯಾರೇಜ್ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿತ್ತು. ನಂತರ ಕಾಮಗಾರಿ ಆರಂಭವಾಗಿ 2008 ರಲ್ಲಿ ಸೊನ್ನ ಬ್ಯಾರೇಜ್ ನಿರ್ಮಾಣವಾಗಿ ನೀರು ನಿಲ್ಲಲು ಆರಂಭವಾಯಿತು. ಭೀಮಾನದಿಗೆ ಅಡ್ಡಲಾಗಿ ಕಟ್ಟಿದ ಸೊನ್ನ ಬ್ಯಾರೇಜ್ನಲ್ಲಿ ನೀರು ನಿಲ್ಲಲು ಯಾವಾಗ ಆರಂಭವಾಯ್ತೋ ಆಗಿನಿಂದಲೇ ತಾರಾಪುರ ಗ್ರಾಮಕ್ಕೆ ಸಮಸ್ಯೆಗಳು ಆರಂಭವಾದವು.
ಸೊನ್ನ ಬ್ಯಾರೇಜಿನ ಹಿನ್ನೀರು ತಾರಾಪುರಕ್ಕೆ ಕಂಟಕವಾಯ್ತು. ಮಳೆಗಾಲದಲ್ಲಿ ಭೀಮಾನದಿ ಉಕ್ಕಿ ಹರಿದರೆ ಇಡೀ ತಾರಾಪುರ ನಡುಗಡ್ಡೆಯಾಗಿ ಮಾರ್ಪಡುತ್ತಿತ್ತು. ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತಿತ್ತು. ಸೊನ್ನ ಬ್ಯಾರೇಜ್ಗಾಗಿ ತಾರಾಪುರವನ್ನ 2008 ರಲ್ಲಿಯೇ ಸ್ಥಳಾಂತರ ಮಾಡಲು ಕರ್ನಾಟಕ ನೀರಾವರಿ ನಿಗಮ ತೀರ್ಮಾನಿಸಿತ್ತು. ತಾರಾಪುರ ಗ್ರಾಮವನ್ನ 3 ಕಿಲೋ ಮೀಟರ್ ದೂರದಲ್ಲಿ 18 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿತ್ತು, ಆದರೆ ತಾರಾಪುರ ಗ್ರಾಮದಲ್ಲಿನ ಕುಟುಂಬಗಳಿಗೆ ಸೂಕ್ತ ನಿವೇಶನ ಹಾಗೂ ಪರಿಹಾರ ಹಣ ನೀಡದ ಕಾರಣ ಸ್ಥಳಾಂತರ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು.
ಗ್ರಾಮದ ಜನರು ಸ್ಥಳಾಂತರವಾಗದ ಕಾರಣ ಇದ್ದಲ್ಲಿಯೇ ಇದ್ದರು. ಪ್ರತಿ ಮಳೆಗಾಲದಲ್ಲಿಯೂ ಜನ ತೊಂದರೆ ಅನುಭವಿಸಿದ್ದರು. ಸ್ಥಳಾಂತರ ಮಾಡಿ ಎಂದು ಜಿಲ್ಲಾಧಿಕಾರಿಗಳು, ಸಚಿವರು ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿ ಸಲ್ಲಿಸಿ ಸುಸ್ತಾಗಿದ್ದರು. ಈ ಕುರಿತು ಟಿವಿ9 ನಿರಂತರ ವರದಿ ಬಿತ್ತರಿಸಿತ್ತು. ಇದ್ರಿಂದ ಎಚ್ಚೆತ್ತ ಅಧಿಕಾರಿಗಳು 1 ವಾರದಲ್ಲಿ ತಾರಾಪುರ ಜನರಿಗೆ ನಿವೇಶನ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ತಾರಾಪುರ
ಪ್ರತಿ ವರ್ಷದ ಮಳೆಗಾಲದಲ್ಲಿ ತಾರಾಪುರ ನಡುಗಡ್ಡೆಯಾಗಿ ಪರಿವರ್ತನೆ ಆಗುತ್ತಿತ್ತು. ಈ ವಿಚಾರವಾಗಿ ಟಿವಿ9 ಎಳೆ ಎಳೆಯಾಗಿ ಸುದ್ದಿ ಬಿತ್ತರಿಸಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ ಹಾಗೂ ಕರ್ನಾಟಕ ನೀರಾವರಿ ನಿಗಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ತಾರಾಪುರ ಗ್ರಾಮದ ಸ್ಥಳಾಂತರಕ್ಕೆ ಮುನ್ನುಡಿ ಬರೆದಿದೆ.
ಒಟ್ನಲ್ಲಿ ಟಿವಿ9 ವರದಿಯ ನಂತರ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಸದ್ಯದಲ್ಲೇ ಹೊಸ ಸೂರು ನೋಡುವ ಆಶಾಭಾವದಲ್ಲಿ ತಾರಾಪುರ ಗ್ರಾಮಸ್ಥರಿದ್ದು, ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ ಅನ್ನೋದು ಸ್ಥಳೀಯರ ಆಶಯ.
ಇದನ್ನೂ ಓದಿ: ಮಳೆ ನಿಂತರೂ ನಿಂತಿಲ್ಲ ಜನರ ಸಂಕಷ್ಟ, ನಿಂತ ನೀರಿನ ಮಧ್ಯೆಯೇ ಜನ-ಜೀವನ
Published On - 7:51 am, Wed, 24 March 21