ಹಾಸನ: ವಿಶ್ವ ಪಾರಂಪರಿಕ ತಾಣಕ್ಕಿಲ್ಲ ಸುಸಜ್ಜಿತ ರಸ್ತೆ; 630 ಕೋಟಿ ರೂ ಯೋಜನೆಗೆ ಗ್ರಹಣ
ವಿಶ್ವ ಪಾರಂಪರಿಕ ತಾಣ ಬೇಲೂರಿನಿಂದ ಮೈಸೂರಿನ ಬಿಳಿಕೆರೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 373ರ ಕಾಮಗಾರಿ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. 630 ಕೋಟಿ ರೂ.ಗಳ ಈ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆಯ ತೊಡಕಿನಿಂದಾಗಿ ಕುಂಠಿತಗೊಂಡಿದೆ. ಶೀಘ್ರ ಸೂಕ್ತ ಪರಿಹಾರಕ್ಕೆ ಒತ್ತಾಯ ಕೇಳಿಬಂದಿದೆ.

ಹಾಸನ, ಮಾರ್ಚ್ 02: ಅದು ವಿಶ್ವವಿಖ್ಯಾತ ಶಿಲ್ಪ ಕಲೆಗಳ ತವರು, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ದೇವಾಲಯ ಇರುವ ನೆಲೆಬೀಡು, ಕರುನಾಡಿನ ಕಲೆ ವಾಸ್ತು ಶಿಲ್ಪವನ್ನ ಅನಾವರಣಗೊಳಿಸುತ್ತಿರುವ ನಗರ. ನಿತ್ಯವೂ ಸಹಸ್ರಾರು ಪ್ರವಾಸಿಗರು ಬಂದು ಹೋಗುವ ಪಟ್ಟಣ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಬಿಂದು ಇಷ್ಟೆಲ್ಲಾ ವಿಶೇಷತೆ ಇರುವ ಊರಿಗೆ ರಾಷ್ಟೀಯ ಹೆದ್ದಾರಿ (National Highway) ಮಂಜೂರಾಗಿ ಬರೋಬ್ಬರಿ 5 ವರ್ಷವೇ ಕಳೆದಿದೆ. ಕುಂಟುತ್ತಾ, ಉರುಳುತ್ತಾ ಸಾಗಿರುವ ಕಾಮಗಾರಿ ಮಾತ್ರ ಮುಗಿಯುವುದಿರಲಿ ಆರಂಭವೇ ಆಗಿಲ್ಲ. 630 ಕೋಟಿ ರೂ ಬೃಹತ್ ಮೊತ್ತದ ರಾಷ್ಟ್ರೀಯ ಹೆದ್ದಾರಿ 373ಕ್ಕೆ ಭೂಸ್ವಾಧೀನ ಗುಮ್ಮ ಕಾಡುತ್ತಿದ್ದು, ನಿತ್ಯವೂ ಸಾವಿರಾರು ವಾಹನಗಳು ಓಡಾಡುವ ರಸ್ತೆಯ ಕಾಮಗಾರಿ ಬೇಗನೆ ಮುಗಿಯಲಿ ಎನ್ನುವ ಆಗ್ರಹ ಕೇಳಿ ಬಂದಿದೆ.
ದೇಶದಲ್ಲಿ ರಾಷ್ಟೀಯ ಹೆದ್ದಾರಿಗಳ ನಿರ್ಮಾಣ ಶರವೇಗದಲ್ಲಿ ಆಗುತ್ತಿದೆ ಎನ್ನುವ ಮಾತುಗಳನ್ನ ಕೇಂದ್ರ ಸರ್ಕಾರ ಹೆದ್ದಾರಿ ಸಚಿವರು ಪದೇ ಪದೇ ಹೇಳೋದನ್ನ ಕೇಳಿದ್ದೇವೆ. ಆದರೆ ಹಾಸನ ಜಿಲ್ಲೆಯ ಐತಿಹಾಸಿಕ ನಗರ, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯವಿರುವ ಬೇಲೂರಿನಿಂದ ಮೈಸೂರಿನ ಬಿಳಿಕೆರೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 373 ಗ್ರಾಮೀಣ ರಸ್ತೆಗಿಂತಲೂ ಕಡೆಯಾಗಿದೆ. ಸಹಸ್ರಾರು ವಾಹನಗಳು ಓಡಾಡುವ ರಸ್ತೆಯಲ್ಲಿ ಗುಂಡಿಗಳು ಒಂದೆಡೆಯಾದರೆ ಎರಡು ವರ್ಷಗಳ ಹಿಂದೆ ಚತುಷ್ಪತ ರಸ್ತೆ ನಿರ್ಮಾಣಕ್ಕೆಂದು ಅಲ್ಲಲ್ಲಿ ಇರುವ ರಸ್ತೆಯನ್ನ ಬಗೆದು ಮಾಡಿರುವ ಅವಾಂತರ ವಾಹನ ಸವಾರರಿಗೆ ದೊಡ್ಡ ತಲೆನೋವು ತರಿಸಿದೆ.
ಇದನ್ನೂ ಓದಿ: ಹಾಸನ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣಕ್ಕೆ ಹತ್ತಾರು ವಿಘ್ನ: ಕಾಮಗಾರಿ ಮುಗಿಯೋದು ಯಾವಾಗ?
ಹಾಸನದಿಂದ ಸುಮಾರು 35 ಕಿ.ಮೀಟರ್ ಸೇರಿ ಬೇಲೂರಿನಿಂದ ಬಿಳಿಕೆರೆವರೆಗಿನ ಈ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 630 ಕೋಟಿ ರೂ ಹಣ ಮೀಸಲಿಟ್ಟಿದೆ. ಆದರೆ ರಸ್ತೆಗೆ ಬೇಕಾದ ಭೂಸ್ವಾಧೀನ ಮಾಡುವಲ್ಲಿ ಅಧಿಕಾರಿಗಳು ಮಾಡಿರುವ ವಿಳಂಬದಿಂದಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎನ್ನೋದು ಸ್ಥಳೀಯ ಶಾಸಕರ ಆಕ್ರೋಶ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ, ರಾಜ್ಯದ ಲೋಕೋಪಯೋಗಿ ಸಚಿವರು ಕಾಮಗಾರಿ ಬಗ್ಗೆ ಉತ್ಸಾಹ ತೋರಿದ್ದಾರೆ, ಆದರೆ ಭೂಸ್ವಾಧೀನ ಪ್ರಕ್ರಿಯೆ ಮಾಡುವಲ್ಲಿ ಅಧಿಕಾರಿಗಳು ಮಾಡಿದ ವಿಳಂಬದಿಂದ ಸಮಸ್ಯೆ ಆಗಿದೆ ಎನ್ನುವುದು ಜನಪ್ರತಿನಿಧಿಗಳ ಆರೋಪ.
ಹೆಚ್ಚುವರಿಯಾಗಿ 100 ಕೋಟಿ ರೂ ಹಣ ಬೇಕು
ಹಾಸನದಿಂದ ಬೇಲೂರಿಗೆ ತೆರಳಲಿರುವ ಮಾರ್ಗ ಇದೀಗ ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ. ಬೇಲೂರು ಮೂಲಕ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಚಿಕ್ಕಮಗಳೂರು, ಶೃಂಗೇರಿ, ಹೊರನಾಡು ಸೇರಿ ಚಾರ್ಮಾಡಿ ಘಾಟ್ ಮೂಲಕ ಮಂಗಳೂರಿನ ಕಡೆಗೆ ತೆರಳಲು ಇರುವುದು ಕೂಡ ಇದೇ ಮಾರ್ಗ. ಹಾಗಾಗಿಯೇ ಐದು ವರ್ಷಗಳ ಹಿಂದೆಯೇ ಈ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಣ ಮೀಸಲಿಟ್ಟಿತ್ತು. ಆದರೆ ಇಲ್ಲಿಗೆ ಮೀಸಲಿಟ್ಟ ಹಣವನ್ನ ಬೇರೊಂದು ಕಾಮಗಾರಿಗೆ ವರ್ಗಾವಣೆ ಮಾಡಿದ್ದರಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು. ಬಳಿಕ ವರ್ಷದ ಹಿಂದೆ ಮತ್ತೆ ಈ ಯೋಜನೆಗೆ ಮರುಜೀವ ಬಂದು, ಕಾಮಗಾರಿ ಆರಂಭಿಸಲು ಗುತ್ತಿಗೆದಾರರು ಅಲ್ಲಲ್ಲಿ ರಸ್ತೆಯನ್ನ ಬಗೆದು, ಮರಳನ್ನು ಕಡಿಯುವುದಕ್ಕೆ ಶುರು ಮಾಡಿದ್ದರು. ಆದರೆ ಈ ಯೋಜನೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ 109 ಕೋಟಿ ರೂ ಹಣವನ್ನ ಮೀಸಲಿಡಲಾಗಿದ್ದು, ಹಾಸನ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ ಹಾಸನ ನಗರದ ಸುತ್ತಮುತ್ತಲ ಭೂಮಿಯ ಮೌಲ್ಯ ದುಪ್ಪಟ್ಟಾಗಿದೆ. ಹಾಗಾಗಿ ಹೆಚ್ಚುವರಿಯಾಗಿ 100 ಕೋಟಿ ರೂ ಹಣ ಬೇಕು ಎನ್ನೋದು ಒಂದೆಡೆಯಾದರೆ ಭೂಸ್ವಾಧೀನ ಪ್ರಕ್ರಿಯೆ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿ ಕಚೇರಿ ಬೆಂಗಳೂರಿನಲ್ಲಿದ್ದು, ಜನರೊಂದಿಗೆ ಸಂವಹನಕ್ಕೆ ಕೂಡ ಸಮಸ್ಯೆ ಆಗುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಕಾಮಗಾರಿ ನಿಧಾನವಾಗಿರುವ ಬಗ್ಗೆ ಅಧಿಕಾರಿಗಳ ಸಭೆ ನಡೆಸಲಾಗಿದೆ. ಭೂಸ್ವಾಧೀನ ಅಧಿಕಾರಿಗಳ ಕಚೇರಿಯನ್ನು ಕೂಡ ಹಾಸನದಲ್ಲಿ ತೆರೆಯುವ ಬಗ್ಗೆ ಕೂಡ ಚರ್ಚೆ ನಡೆಸಲಾಗಿದ್ದು. ಶೀಘ್ರ ಕಾಮಗಾರಿ ಆರಂಭಿಸುವುದಾಗಿ ಹಾಸನ ಡಿಸಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಸಲಿ ಬದಲು ನಕಲಿ ಚಿನ್ನ ಇಟ್ಟು 3 ಲಕ್ಷ ರೂ. ಮೌಲ್ಯದ ಬಂಗಾರ ಕದ್ದ ಕದೀಮರು!
ಹಾಸನ ಜಿಲ್ಲೆಯ ಅತೀ ಹೆಚ್ಚು ವಾಹನ ಸಂಚಾರ ಇರುವ ರಸ್ತೆಗಳಲ್ಲಿ ಹಾಸನ ಬೇಲೂರು ರಸ್ತೆಯೂ ಒಂದು ರಾಜ್ಯದ ಹಲವು ಪ್ರಮುಖ ಧಾರ್ಮಿಕ ಕೇಂದ್ರ, ಪ್ರವಾಸಿತಾಣಗಳಿಗೆ ಇದೇ ಪ್ರಮುಖ ಮಾರ್ಗವಾಗಿದ್ದು, ವಾಹನಗಳ ಓಡಾಟ ಹೆಚ್ಚಿರುವ ಕಾರಣ ಚತುಷ್ಪಥ ರಸ್ತೆ ಆಗಬೇಕು ಎನ್ನೋದು ಹಲವು ವರ್ಷದ ಯೋಜನೆ. ಅದಕ್ಕಾಗಿ ಹಣವೂ ಮೀಸಲಿಡಲಾಗಿದೆ. ಕಾಮಗಾರಿಯೂ ಶುರುವಾಗಿದೆ. ಆದರೆ ಸಣ್ಣ ಪುಟ್ಟ ತೊಡಕುಗಳನ್ನ ನಿವಾರಣೆ ಮಾಡುವಲ್ಲಿ ಆಗಿರುವ ನಿರ್ಲಕ್ಷ್ಯ ಇಡೀ ಯೋಜನೆಯನ್ನೇ ಮಂಕಾಗಿಸಿದ್ದು, ಈ ಬಗ್ಗೆ ಸರ್ಕಾರ ಯೋಜನೆ ಸಾಕಾರಕ್ಕೆ ಅಗತ್ಯ ಕ್ರಮವಹಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.