TV9 Kannada News Live: ಸಂಪುಟ ವಿಸ್ತರಣೆಗೆ ಕೌಂಟ್‌ಡೌನ್‌, ದೆಹಲಿಯಲ್ಲಿ ಕೈ ನಾಯಕರ ಬಿರುಸಿನ ಸಭೆ; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ

Karnataka News Today Live Updates: ಆಗಸ್ಟ್ 1ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಾಗೂ ವಿವೇಕ ಸ್ಮಾರಕ ಉದ್ಘಾಟನೆ, ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರ ಮಹತ್ವದ ಸಚಿವ ಸಂಪುಟ ವಿಸ್ತರಣೆ ಸಭೆ, ಮತ್ತು ಬಿಹಾರದಲ್ಲಿ ಪ್ರತಿಭಟನಾಕಾರರ ಮೇಲಿನ ಕೇಸ್ ವಾಪಸ್ ಸೇರಿದಂತೆ ಇಂದಿನ ಪ್ರಮುಖ ರಾಜಕೀಯ ಹಾಗೂ ರಾಜ್ಯದ ಲೈವ್ ನ್ಯೂಸ್ ಅಪ್‌ಡೇಟ್‌ಗಳನ್ನು ಇಲ್ಲೇ ವೀಕ್ಷಿಸಿ.

TV9 Kannada News Live: ಸಂಪುಟ ವಿಸ್ತರಣೆಗೆ ಕೌಂಟ್‌ಡೌನ್‌, ದೆಹಲಿಯಲ್ಲಿ ಕೈ ನಾಯಕರ ಬಿರುಸಿನ ಸಭೆ; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ
ಸಂಪುಟ ವಿಸ್ತರಣೆ ಕೌಂಟ್‌ಡೌನ್‌

Updated on: Jul 28, 2026 | 10:58 AM

LIVE NEWS & UPDATES

  • 28 Jul 2026 10:58 AM (IST)

    ಗಾಂಜಾ ಮಾರಾಟ ಮಾಡುತ್ತಿದ್ದ ಯುವಕ ಬಲೆಗೆ; 4.8 ಕೆಜಿ ಗಾಂಜಾ ವಶ!

    ತುಮಕೂರಿನ ಚಿಕ್ಕಪೇಟೆ ನಿವಾಸಿ ಸುಹಾಸ್ ಮಲ್ಲ (23) ಎಂಬಾತನನ್ನು ಎನ್‌ಇಪಿಎಸ್ ಪೊಲೀಸರು ಬಂಧಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ನಂತರ ಗಾಂಜಾ ಚಟಕ್ಕೆ ಬಿದ್ದು ಹೊರರಾಜ್ಯದಿಂದ ತಂದು ಮಾರಾಟ ಮಾಡುತ್ತಿದ್ದ ಈತನಿಂದ 4.8 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. 2022 ರಲ್ಲೂ ಬಂಧನಕ್ಕೊಳಗಾಗಿದ್ದ ಈತ ಜೈಲಿನಿಂದ ಬಂದ ಮೇಲೆಯೂ ಕೃತ್ಯ ಮುಂದುವರಿಸಿದ್ದ.

  • 28 Jul 2026 10:58 AM (IST)

    ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ಮೋದಿ ಹೊಸ ದಾಖಲೆ: ಒಂದೇ ವಾರದಲ್ಲಿ 4 ಮಿಲಿಯನ್ ಫಾಲೋವರ್ಸ್ ಹೆಚ್ಚಳ!

    ಪ್ರಧಾನಿ ನರೇಂದ್ರ ಮೋದಿ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 105 ಮಿಲಿಯನ್ ಗಡಿ ದಾಟಿದೆ. ನೀಟ್ ಅಕ್ರಮ ವಿರುದ್ಧದ ಸಿಜೆಪಿ ಧರಣಿ ಹಾಗೂ ‘ಝೆನ್‌ಜಿ’ ಯುವಕರನ್ನು ಉದ್ದೇಶಿಸಿ ಮೋದಿ ಬಿಡುಗಡೆ ಮಾಡಿದ್ದ ವಿಡಿಯೋ ಹೇಳಿಕೆ ಭಾರಿ ವೈರಲ್ ಆಗಿದ್ದು, ಒಂದೇ ವಾರದಲ್ಲಿ ಬರೋಬ್ಬರಿ 40 ಲಕ್ಷಕ್ಕೂ ಹೆಚ್ಚು ಹೊಸ ಫಾಲೋವರ್ಸ್ ಸೇರ್ಪಡೆಯಾಗಿದ್ದಾರೆ.

  • 28 Jul 2026 10:58 AM (IST)

    ಜಮ್ಮು-ಕಾಶ್ಮೀರ: ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಬಸ್; 39 ಅಮರನಾಥ ಯಾತ್ರಿಕರಿಗೆ ಗಾಯ!

    ಜಮ್ಮು-ಕಾಶ್ಮೀರದ ಗಂಡೇರ್‌ಬಾಲ್‌ನ ಹರಿಗನ್ವಾನ್‌ನಲ್ಲಿ ಅಮರನಾಥ ಗುಹಾ ದೇಗುಲದಿಂದ ಹಿಂತಿರುಗುತ್ತಿದ್ದ ಯಾತ್ರಿಕರಿದ್ದ ಬಸ್ ತಿರುವು ದಾಟುವಾಗ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದಿದೆ. ಘಟನೆಯಲ್ಲಿ 39 ಯಾತ್ರಿಕರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್‌ ಅಪಘಾತದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ.

  • 28 Jul 2026 10:57 AM (IST)

    ವಿಪಕ್ಷಗಳ ನಡವಳಿಕೆ ವಿರೋಧಿಸಿ ಸಂಸತ್ ಭವನದ ಮಕರದ್ವಾರದ ಬಳಿ NDA ಸಂಸದರ ಪ್ರತಿಭಟನೆ!

    ಸಂಸತ್ ಭವನದ ಮಕರದ್ವಾರದ ಬಳಿ ಎನ್‌ಡಿಎ ಸಂಸದರು ಧರಣಿ ಪ್ರತಿಭಟನೆ ನಡೆಸಿದರು. ಪರೀಕ್ಷಾ ಅಕ್ರಮ ತಡೆ ವಿಧೇಯಕದ ಕುರಿತು ಮಹತ್ವದ ಚರ್ಚೆಗೆ ವಿರೋಧ ಪಕ್ಷಗಳು ಅವಕಾಶ ನೀಡದೆ ಅಡ್ಡಿಪಡಿಸುತ್ತಿರುವ ವರ್ತನೆಯನ್ನು ವಿರೋಧಿಸಿ ಆಡಳಿತ ಪಕ್ಷದ ಸಂಸದರು ಆಕ್ರೋಶ ವ್ಯಕ್ತಪಡಿಸಿದರು.

  • 28 Jul 2026 09:49 AM (IST)

    ಹುಳಿಮಾವು ಗ್ರಾಮದಲ್ಲಿ ಚಿರತೆ ದಾಳಿ, ಹಸು ಬಲಿ; ಬೋನು ಇರಿಸಿದ ಅರಣ್ಯ ಇಲಾಖೆ!

    ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಳಿಮಾವು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಮಾದಪ್ಪ ಎಂಬುವರ ಹಸುವಿನ ಮೇಲೆ ದಾಳಿ ನಡೆಸಿದೆ. ಇದರಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಎದುರಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನು ಅಳವಡಿಸಿದ್ದಾರೆ.

  • 28 Jul 2026 09:14 AM (IST)

    ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು ಆರೋಪ; ಆಸ್ಪತ್ರೆ ಎದುರು ಸಂಬಂಧಿಕರ ಆಕ್ರೋಶ!

    ಹಾಸನದ ಮಂಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸಂಕೇನಹಳ್ಳಿಯ ನಾರಾಯಣ್ ಎಂಬುವರು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಡಿಸ್ಚಾರ್ಜ್ ಮಾಡುವುದಾಗಿ ಹೇಳಿ, ದಿಢೀರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ತಿಳಿಸಿ, ಡಾ. ರವಿ ಉಡಾಫೆಯಾಗಿ ಉತ್ತರಿಸಿದ್ದಾರೆ ಎಂದು ಆರೋಪಿಸಿ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

  • 28 Jul 2026 09:13 AM (IST)

    ದೆಹಲಿಯಲ್ಲಿ ಇಂದು CWRC ಸಭೆ: ತಮಿಳುನಾಡಿಗೆ ತಕ್ಕ ತಿರುಗೇಟು ನೀಡಲು ಕರ್ನಾಟಕ ಸಿದ್ಧ!

    ಕಾವೇರಿ ನೀರಿಗಾಗಿ ದೆಹಲಿಯಲ್ಲಿ ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಹತ್ವದ ಸಭೆ ನಡೆಯಲಿದೆ. ಜೂನ್-ಜುಲೈ ಪಾಲಿನ ನೀರಿಗೆ ತಮಿಳುನಾಡು ಪಟ್ಟು ಹಿಡಿದಿದ್ದರೆ, ಮಳೆ ಅಭಾವ ಮತ್ತು ಕೆಆರ್‌ಎಸ್‌ನಲ್ಲಿ ಕುಡಿಯುವ ನೀರಿಗಷ್ಟೇ ಸಂಗ್ರಹವಿರುವುದನ್ನು ವಿವರಿಸಿ, ನೀರು ಹರಿಸಲು ಸಾಧ್ಯವಿಲ್ಲವೆಂದು ಕರ್ನಾಟಕ ಸರ್ಕಾರ ತನ್ನ ಖಡಕ್ ವಾದ ಮಂಡಿಸಲಿದೆ.

Breaking News Today Live Updates in Kannada: ಆಗಸ್ಟ್ 1ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡಲಿದ್ದು, ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸ್ವಾಮಿ ವಿವೇಕಾನಂದ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. ಮತ್ತೊಂದೆಡೆ, ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಾವು ಏರಿದ್ದು, 20 ಖಾಲಿ ಸಚಿವ ಸ್ಥಾನಗಳ ಭರ್ತಿಗೆ ಹೈಕಮಾಂಡ್ ಜತೆ ಅಂತಿಮ ಚರ್ಚೆ ನಡೆಸಲು ಸಿಎಂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಬಿ.ಕೆ. ಹರಿಪ್ರಸಾದ್ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ಈ ನಡುವೆ, ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಸಿಜೆಪಿ ನೀಡಿದ್ದ ಎಚ್ಚರಿಕೆಗೆ ಮಣಿದ ಬಿಹಾರ ಸರ್ಕಾರ, ಬಂಧಿತರ ಬಿಡುಗಡೆ ಹಾಗೂ ಎಫ್‌ಐಆರ್‌ಗಳನ್ನು ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

YouTube video player

Published On - 9:13 am, Tue, 28 July 26

Follow Us