ಟ್ವೀಟ್​ ಮಾಡಿ.. ಸಿಡಿ ವಿಚಾರದಲ್ಲಿ ಮಹಾನಾಯಕಿಯನ್ನು ಎಳೆದು ತಂದ ಬಿಜೆಪಿ! ಯಾರದು?

ಬಿಜೆಪಿ-ಕಾಂಗ್ರೆಸ್​ ಎರಡೂ ಪಕ್ಷಗಳ ಟ್ವಿಟರ್​ ಅಕೌಂಟ್​ನಲ್ಲಿ ಸಾಲುಸಾಲು ಆರೋಪ-ಪ್ರತ್ಯಾರೋಪಗಳನ್ನೊಳಗೊಂಡ ಟ್ವೀಟ್ ಸಮರ ನಡೆಯುತ್ತಿದ್ದು, ಹಳೆಯ ವಿಚಾರಗಳನ್ನು ಸಹ ಮುನ್ನೆಲೆಗೆ ತಂದು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಾರೆ.

ಟ್ವೀಟ್​ ಮಾಡಿ.. ಸಿಡಿ ವಿಚಾರದಲ್ಲಿ ಮಹಾನಾಯಕಿಯನ್ನು ಎಳೆದು ತಂದ ಬಿಜೆಪಿ! ಯಾರದು?
ಡಿ.ಕೆ.ಶಿವಕುಮಾರ್​ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​
Edited By: ಸಾಧು ಶ್ರೀನಾಥ್​

Updated on: Mar 16, 2021 | 3:48 PM

ಬೆಂಗಳೂರು: ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ವಿಚಾರದಲ್ಲಿ ‘ಮಹಾನಾಯಕ’ರೊಬ್ಬರ ಕೈವಾಡ ಇದೆ ಎಂಬ ಆರೋಪ ರಾಜ್ಯ ರಾಜಕಾರಣದಲ್ಲಿ ಇದೀಗ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಮಹಾನಾಯಕ ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದ್ದು, ಆ ಸಂಗತಿಯೀಗ ಬಿಜೆಪಿ ಮತ್ತು ಕಾಂಗ್ರೆಸ್​ ನಡುವಿನ ಟ್ವೀಟ್​ ಕದನಕ್ಕೆ ನಾಂದಿ ಹಾಡಿದೆ. ಈ ಹಿಂದೆ ಡಿ.ಕೆ.ಶಿವಕುಮಾರ್​ ಅದೇಕೆ ತಮ್ಮನ್ನು ತಾವು ‘ಮಹಾನಾಯಕ’ ಎಂದುಕೊಂಡು ಆರೋಪವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಅಂತ ತಿಳಿಯುತ್ತಿಲ್ಲವೆಂದು ಬಿಜೆಪಿ ನಾಯಕರೂ ಸೇರಿದಂತೆ ಪಕ್ಷ ಭೇದ ಮರೆತು ಅನೇಕ ನಾಯಕರು ಹೇಳಿಕೆ ನೀಡಿದ್ದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಹ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಮುಂದುವರಿದ ಭಾಗವಾಗಿ, ಇದೀಗ ಕರ್ನಾಟಕ ಬಿಜೆಪಿಯ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಲ್ಲಿ ಕಾಂಗ್ರೆಸ್​ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಕಾಲೆಳೆಯಲಾಗಿದ್ದು, ಎರಡೂ ಪಕ್ಷಗಳ ನಡುವಿನ ಟ್ವೀಟ್​ ಸಮರದ ಕಾವು ಮತ್ತಷ್ಟು ಏರಿದೆ.

‘ನನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಮಹಾನಾಯಕರೊಬ್ಬರು ಹೇಳಿದ್ದಾರೆ. ಈ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಬರುತ್ತಿದೆ, ಗೊತ್ತಾಗುತ್ತಿಲ್ಲ ಎಂದು ಮಹಾನಾಯಕಿಯೊಬ್ಬರು ಹೇಳಿದ್ದಾರೆ. ಏನಿದೆಲ್ಲಾ? ಬೆಂಕಿಯಿಲ್ಲದೆ ಹೊಗೆಯಾಡುವುದೇ? ಪಕ್ಷ ತೊರೆದವರ ವಿರುದ್ಧ ಕಾಂಗ್ರೆಸ್‌ ಹಗೆತನ ಸಾಧಿಸುತ್ತಿದೆ’. ಎಂದು ಬಿಜೆಪಿಯ ಅಧಿಕೃತ ಅಕೌಂಟ್​ನಲ್ಲಿ ಟ್ವೀಟ್​ ಮಾಡಲಾಗಿದೆ. ಸದರಿ ಟ್ವೀಟ್​ನಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಹೇಳಿಕೆಗಳನ್ನು ಲಗತ್ತಿಸಲಾಗಿದ್ದು, ಮಹಾನಾಯಕ ಹಾಗೂ ಮಹಾನಾಯಕಿ ಎಂದು ಇಬ್ಬರೆಡೆಗೂ ಬೊಟ್ಟು ಮಾಡಿದಂತಾಗಿದೆ.

ಇತ್ತ ಕಾಂಗ್ರೆಸ್​ ಪಕ್ಷದವರು ಸಹ ತಮ್ಮ ಟ್ವಿಟರ್​ ಖಾತೆಯಲ್ಲಿ ಬಿಜೆಪಿ ವಿರುದ್ಧ ಒಂದರ ಹಿಂದೊಂದು ಟ್ವೀಟ್​ ಮಾಡುತ್ತಿದ್ದು, ‘ನಿಮ್ಮ ಶ್ರೀನಿವಾಸ್ ಪ್ರಸಾದ್ ಹೇಳಿದಂತೆ ವಾಮ ಮಾರ್ಗದ ಸರ್ಕಾರ. ನಿಮ್ಮವರೇ ಹೇಳಿದಂತೆ ಬ್ಲಾಕ್ಮೇಲ್‌ ಸಂಪುಟ. ಹನಿಟ್ರಾಪ್‌ ಮೂಲಕ ಆಪರೇಷನ್ ಕಮಲ. ಯತ್ನಾಳ್ ಹೇಳಿದಂತೆ ಬಿಎಸ್​ವೈ ಫ್ಯಾಮಿಲಿ ಸರ್ಕಾರ. ‘ದಂಡ’ದ ಸರ್ಕಾರಕ್ಕೆ ‘ಮಾನ’ ಎಲ್ಲಿದೆ? ತಾಕತ್ತಿದ್ದರೆ ಆಪರೇಷನ್ ಕಮಲದ ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಬನ್ನಿ’. ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಇದಿಷ್ಟೇ ಅಲ್ಲದೇ ಎರಡೂ ಪಕ್ಷಗಳ ಟ್ವಿಟರ್​ ಅಕೌಂಟ್​ನಲ್ಲಿ ಸಾಲುಸಾಲು ಆರೋಪ-ಪ್ರತ್ಯಾರೋಪಗಳನ್ನೊಳಗೊಂಡ ಟ್ವೀಟ್ ಸಮರ ನಡೆಯುತ್ತಿದ್ದು, ಹಳೆಯ ವಿಚಾರಗಳನ್ನು ಸಹ ಮುನ್ನೆಲೆಗೆ ತಂದು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಾರೆ.

ಬಿಜೆಪಿ ಟ್ವೀಟ್​ ಖಂಡನೀಯ
ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಟ್ವೀಟ್​ ಮಾಡಿರುವುದು ಖಂಡನೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ. ಬಿಜೆಪಿ ಒಂದು ಸುಳ್ಳಿನ ಕಾರ್ಖಾನೆ. ಅಪರಾಧ ಮಾಡುವವರು ಅವರೇ ಆದರೂ ನಮ್ಮ ನಾಯಕರ ಮೇಲೆ ಸುಮ್ಮನೆ ಆರೋಪ ಮಾಡ್ತಾರೆ. ಅವರ ನಡೆ ಉಲ್ಟಾ ಚೋರ್ ಕೊತ್ವಾಲ್ ಕೋ ಡಾಂಟೆ ಎಂಬಂತೆ ಇದೆ. ಸಿಡಿ ವಿಚಾರದಲ್ಲಿ ಎಸ್​ಐಟಿಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಹೀಗಾಗಿ ಹೈಕೋರ್ಟ್ ನಿಗಾದಲ್ಲಿ ಈ ಪ್ರಕರಣದ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

Loading...
Unable to load recommendations.
Follow Us