
ಉಡುಪಿ, ಮೇ 9: ಉಡುಪಿಯ (Udupi) ಶ್ರೀ ಕೃಷ್ಣ ಮಠಕ್ಕೆ (Sri Krishna Math) ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ, ದಿನದಿಂದ ದಿನಕ್ಕೆ ಏರುತ್ತಿರುವ ಉರಿಬಿಸಿಲಿನ ನಡುವೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದು ಭಕ್ತರಿಗೆ ದೊಡ್ಡ ಸವಾಲಾಗಿದೆ. ಇದನ್ನು ಮನಗಂಡ ಪ್ರಸಕ್ತ ಪರ್ಯಾಯ ಶೀರೂರು ಮಠದ ಶ್ರೀಗಳು, ಭಕ್ತರ ಅನುಕೂಲಕ್ಕಾಗಿ ಸರದಿ ಸಾಲು ಇರುವ ಭಾಗದಲ್ಲಿ ಶಾಶ್ವತ ಮೇಲ್ಚಾವಣಿ ಅಳವಡಿಸುವ ಮೂಲಕ ಬಿಸಿಲಿನ ತಾಪದಿಂದ ಭಕ್ತರಿಗೆ ದೊಡ್ಡ ಮಟ್ಟದ ರಿಲ್ಯಾಕ್ಸ್ ನೀಡಿದ್ದಾರೆ.
ಉಡುಪಿ ನಗರದಲ್ಲಿ ಈ ಬಾರಿ ಬಿಸಿಲಿನ ತಾಪ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಇದರ ಮಧ್ಯೆಯೇ ಬೇಸಿಗೆ ರಜೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಮಠಕ್ಕೆ ಆಗಮಿಸುತ್ತಿದ್ದಾರೆ. ಕಾಂಕ್ರೀಟ್ ನೆಲದ ಮೇಲೆ ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುವುದು ಭಕ್ತರಿಗೆ, ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಿಗೆ ಹರಸಾಹಸವಾಗಿತ್ತು. ರಥಬೀದಿಯ ಭಾಗದಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದ ಕಾರಣ ಭಕ್ತರು ಸಂಕಷ್ಟ ಅನುಭವಿಸುತ್ತಿದ್ದರು.
ಭಕ್ತರ ಈ ಸಮಸ್ಯೆಯನ್ನು ಮನಗಂಡ ಪರ್ಯಾಯ ಶೀರೂರು ಮಠದ ದಿವಾನರಾದ ಉದಯ ಸರಳ್ತಾಯ ಮತ್ತು ತಂಡದವರು ಶ್ರೀಗಳ ಮಾರ್ಗದರ್ಶನದಲ್ಲಿ ಭಕ್ತರ ಹಿತದೃಷ್ಟಿಯಿಂದ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಗೀತಾ ಮಂದಿರದ ಮೂಲಕ ಸಾಗುವ ಸರದಿಯ ಸಾಲಿನಲ್ಲಿ ಶಾಶ್ವತ ಮೇಲ್ಚಾವಣಿ ನಿರ್ಮಿಸಲಾಗಿದೆ. ಇದರಿಂದಾಗಿ ಭಕ್ತರು ನೆರಳಿನಲ್ಲಿ ನಿಂತು ನಿರಾಳವಾಗಿ ದರ್ಶನ ಪಡೆಯಲು ಸಾಧ್ಯವಾಗುತ್ತಿದೆ. ಅಲ್ಲದೆ, ಸರದಿಯ ವ್ಯವಸ್ಥೆಯನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸಲಾಗಿದ್ದು, ಸಾಲಿನಲ್ಲಿ ನಿಂತವರಿಗೆ ತಂಪು ಪಾನೀಯ ನೀಡುವ ಮೂಲಕ ಮಠವು ಭಕ್ತರ ದಾಹ ತಣಿಸುವ ಕೆಲಸ ಮಾಡುತ್ತಿದೆ.
ಇದನ್ನೂ ಓದಿ: ರಾಜ್ಯದ ವಾಯು ಗುಣಮಟ್ಟದಲ್ಲಿ ಸುಧಾರಣೆ: ಬೆಂಗಳೂರಿನಲ್ಲಿ ಮಳೆ ತಂದ ತಂಪು, ಶಿವಮೊಗ್ಗದ ಗಾಳಿ ಅತ್ಯಂತ ಸ್ವಚ್ಛ!
ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಮಠವು ಕೈಗೊಂಡಿರುವ ಈ ಮುನ್ನೆಚ್ಚರಿಕಾ ಕ್ರಮಗಳಿಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ