ಕಾರವಾರ, ಜನವರಿ 30: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದಲ್ಲಿ ಧ್ವಜ (Flag) ದಂಗಲ್ ಮುಂದುವರೆದಿದೆ. ಹಿಂದೂ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದೆ. ಧ್ವಜ ಕಟ್ಟೆ ಇದ್ದ ಸ್ಥಳದಲ್ಲೇ ಇದೀಗ ಕೇವಲ 20 ನಿಮಿಷದಲ್ಲಿ ಧ್ವಜ ಕಟ್ಟೆಯನ್ನು ಹಿಂದೂ ಕಾರ್ಯಕರ್ತರು ನಿರ್ಮಾಣ ಮಾಡಿದ್ದಾರೆ. ಧ್ವಜ ಕಟ್ಟೆ ನಿರ್ಮಾಣಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದು, ನಾವು ಕಟ್ಟೆಯನ್ನು ಕಟ್ಟಿ ಧ್ವಜವನ್ನ ಹಾರಿಸುತ್ತೇವೆ ಎಂದು ಪಟ್ಟು ಹಿಡಿದಿದ್ದರು. ಪೊಲೀಸರ ವಿರೋಧದ ನಡುವೆಯೂ ತೆಂಗಿನಗುಂಡಿಯಲ್ಲಿ ಧ್ವಜಕಟ್ಟೆ ನಿರ್ಮಾಣ ಮಾಡಲಾಗಿದೆ. ಪೊಲೀಸರು ಹೇದರಿಸಿದರೂ ಕ್ಯಾರೇ ಮಾಡದೆ ಮೊದಲಿಗಿಂತಲೂ ದೊಡ್ಡ ಧ್ವಜಕಟ್ಟೆ ನಿರ್ಮಿಸಲಾಗಿದೆ.
ಸ್ಥಳದಲ್ಲಿ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರು, ಸ್ಥಳೀಯರಿಗೆ ವಾಗ್ವಾದ ಉಂಟಾಗಿದೆ. ಸ್ಥಳದಲ್ಲಿದ್ದ ಪಿಡಿಒನನ್ನು ಬಿಜೆಪಿ ನಾಯಕರು ಹಾಗೂ ಸ್ಥಳೀಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ತಿಪ್ಪೇಸ್ವಾಮಿ ಭೇಟಿ ನೀಡಿ ಶಾಂತಿ ಕದಡದಂತೆ ಜನರಲ್ಲಿ ಮನವಿ ಮಾಡಿದರು. ಜನರ ಮನವೊಲಿಸಿ ಸಂಪೂರ್ಣ ಪ್ರಕರಣವನ್ನು ಆಲಿಸಿದ್ದಾರೆ.
ಇದನ್ನೂ ಓದಿ: ಕಾರವಾರ: ಭಟ್ಕಳದಲ್ಲಿ ಸಾವರ್ಕರ್ ವೃತ್ತ ಮತ್ತು ಭಗವಾಧ್ವಜ ತೆರವು, ಗ್ರಾಮಸ್ಥರ ಪ್ರತಿಭಟನೆ
ಭಟ್ಕಳದ ತೆಂಗಿನಗುಂಡಿ ಬೀಚ್ನಲ್ಲಿ ವೀರ ಸಾರ್ವಕರ್ ವೃತ್ತದ ನಾಮಫಲಕ ಮತ್ತು ಭಗವಾಧ್ವಜ ಕಟ್ಟೆ ತೆರವುಗೊಳಿಸಲಾಗಿತ್ತು. ಬಿಜೆಪಿ ಮುಖಂಡರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರ ನೇತೃತ್ವದಲ್ಲಿ ಇಂದು ತೆಂಗಿನಗುಂಡಿ ಗ್ರಾಮ ಪಂಚಾಯ್ತಿ ಮುಂದೆ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಮಾಜಿ ಅಧ್ಯಕ್ಷ ಗೋವಿಂದ್ ನಾಯ್ಕ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುಬ್ರಾಯ ದೇವಾಡಿಗ ಹಾಗೂ ಪಂಚಾಯತ್ ಸದಸ್ಯರಿಂದ ಪ್ರತಿಭಟನೆ ಮಾಡಲಾಗಿದೆ.
ಪಂಚಾಯತ್ನಲ್ಲಿ ಈ ಹಿಂದೆ ವೀರ ಸಾವರ್ಕರ್ ನಾಮಫಲಕ ಅಳವಡಿಕೆಗೆ ಒಪ್ಪಿಗೆ ನೀಡಲಾಗಿತ್ತು. ಆದರೆ ಈಗ ಏಕಾಏಕಿ ಜೆಸಿಬಿ ಬಳಸಿ ನಾಮಫಲಕ, ಕಟ್ಟೆ ಸಹಿತ ಭಗವಾಧ್ವಜ ಹಾಕಿದ್ದ ಕಂಬವನ್ನು ಪಿಡಿಒ ತೆರವುಗೊಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಧ್ವಜ ವಿವಾದ ಪ್ರಕರಣ: ಕೆರೆಗೋಡು ಪಂಚಾಯ್ತಿಯ ನಡಾವಳಿ ಬುಕ್ ನಾಪತ್ತೆ
ಪಿಡಿಒ ಕೃತ್ಯದ ವಿರುದ್ಧ ಬಿಜೆಪಿ ಮುಖಂಡರು, ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯರಿಂದ ಬಾರಿ ವಿರೋಧ ವ್ಯಕ್ತವಾಗಿತ್ತು. ಬಳಿಕ ಪಿಡಿಒನನ್ನು ಬಿಜೆಪಿ ಮುಖಂಡ ಗೋವಿಂದ ನಾಯ್ಕ್ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.