ಕಾರವಾರ: ಡಿಜಿಟಲ್ ಅರೆಸ್ಟ್ ಭೀತಿಗೆ 89.90 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಉತ್ತರ ಕನ್ನಡದ ಶಿರಸಿಯ ರವೀಂದ್ರ ಕೃಷ್ಣ ಹೆಗಡೆ ಅವರು ಡಿಜಿಟಲ್ ಬಂಧನದ ಭಯದಿಂದ 89.9 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ವಂಚಕರು ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಮುಂಬೈ ಪೊಲೀಸರು ಮತ್ತು ಇಡಿ ಅಧಿಕಾರಿಗಳು ಎಂದು ಹೇಳಿಕೊಂಡು ಹಣವನ್ನು ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ಬ್ಯಾಂಕ್ ಖಾತೆಗಳಿಂದ ಹಣವನ್ನು ವರ್ಗಾಯಿಸಲಾಗಿದ್ದು, ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾರವಾರ: ಡಿಜಿಟಲ್ ಅರೆಸ್ಟ್ ಭೀತಿಗೆ 89.90 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ
ಸಾಂದರ್ಭಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Jul 30, 2025 | 10:40 PM

ಕಾರವಾರ, ಜುಲೈ 30: ಡಿಜಿಟಲ್ ಅರೆಸ್ಟ್ (Digital Arrest) ಮಾಡುವುದಾಗಿ ಹೆದರಿಸಿ ಸೈಬರ್ ವಂಚಕರು 89.90 ಲಕ್ಷ ರೂ. ದೋಚಿದ್ದಾರೆ. ಉತ್ತರ ಕನ್ನಡ (Uttar Kannada) ಜಿಲ್ಲೆಯ ಶಿರಸಿಯ (Sirasi) ಪ್ರಗತಿನಗರದ ರವೀಂದ್ರ ಕೃಷ್ಣ ಹೆಗಡೆ ಎಂಬುವರಿಗೆ ವಂಚಿಸಿದ್ದಾರೆ. ಸೈಬರ್​ ವಂಚಕ ಸಂಜಯ ಮತ್ತು ಇತರರು ರವೀಂದ್ರ ಕೃಷ್ಣ ಹೆಗಡೆ ಅವರಿಗೆ ವಾಟ್ಸಾಪ್​ನಲ್ಲಿ​ ವಿಡಿಯೋ ಕಾಲ್​​ ಮಾಡಿ, ಮುಂಬೈನ ಕೊಲಬಾ ಪೊಲೀಸರು ಮತ್ತು ಇಡಿ ಅಧಿಕಾರಿಗಳು ಎಂದು ಹೇಳಿದ್ದಾರೆ. ನಂತರ, ನಿಮ್ಮ ಕೊಲಬಾ ಖಾತೆಗೆ ಜೆಟ ಎರವೆಸನ್ ಮನಿಷ ಗೊಯೆಲಾ ಖಾತೆಯಿಂದ ಸಾಕಷ್ಟು ಕಪ್ಪು ಹಣದ ವ್ಯವಹಾರ ನಡೆದಿದೆ. ನಿಮ್ಮ ಮೇಲೆ ಕಪ್ಪು ಹಣ ಮತ್ತು ಮನಿ ಲಾಂಡ್ರಿಂಗ್ ಕೇಸ್ ದಾಖಲಿಸಲಾಗುತ್ತದೆ ಎಂದು ಹೆದರಿಸಿದ್ದಾರೆ.

ಬಳಿಕ, ರವೀಂದ್ರ ಕೃಷ್ಣ ಹೆಗಡೆ ಅವರಿಂದ ಶಿರಸಿ ನಗರದ ಕೆನರಾ ಬ್ಯಾಂಕ್‌ನ ವ್ಯಾಪಾರ ಖಾತೆ, ಎಸ್‌ಬಿಐ ಬ್ಯಾಂಕ್ ಉಳಿತಾಯ ಖಾತೆ, ಕರ್ನಾಟಕ ಬ್ಯಾಂಕ್‌ನ ಉಳಿತಾಯ ಖಾತೆಯಿಂದ ಹಂತ ಹಂತವಾಗಿ 89,90,000 ರೂ. ಅನ್ನು 5698124209, 22490110042298 ಹಾಗೂ 133805501298 ಸಂಖ್ಯೆಯ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ರವೀಂದ್ರ ಹೆಗಡೆ ಶಿರಸಿ ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೇಸ್​ ದಾಖಲಿಸಿಕೊಂಡು ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಡಿಯೋ ಕಾಲ್​​ ಮುಖಾಂತರ ಸೈಬರ್​ ವಂಚನೆ

ಧಾರವಾಡ: ಸೈಬರ್​ ವಂಚಕರು ವಿಡಿಯೋ ಕರೆ ಮಾಡಿ ಹೆದರಿಸಿ ಅಮಾಯಕನಿಂದ ಹಣ ವಸೂಲಿ ಮಾಡಿರುವ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿತ್ತು. ರಮೇಶ್​ ನೂಲ್ವಿ ಹಣ ಕಳೆದುಕೊಂಡ ಸಂತ್ರಸ್ತ. ಪೊಲೀಸ್ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ರಮೇಶ್​ ನೂಲ್ವಿ ಎಂಬುವರಿಗೆ ವಿಡಿಯೋ ಕರೆ ಮಾಡಿದ್ದನು. ಆತ ಪೊಲೀಸ್ ಠಾಣೆಯಲ್ಲಿ ಕುಳಿತು ಮಾತನಾಡುತ್ತಿರುವಂತೆ ಠಾಣೆಯ ಸೆಟ್ ಕೂಡ ಹಾಕಿಕೊಂಡಿದ್ದನು. ನಿಮ್ಮ ಮೇಲೆ ಭೂ ಅಕ್ರಮ ಹಣ ವರ್ಗಾವಣೆ, ಡ್ರಗ್ಸ್ ಸಾಗಾಣಿಕೆ ಕೇಸು ದಾಖಲಾಗಿದ್ದು, ಕೋರ್ಟ್ ಅರೆಸ್ಟ್ ವಾರೆಂಟ್ ನೀಡಿದೆ ಎಂದು ಹೇಳಿದ್ದನು. ಅಲ್ಲದೇ, ನೀವು ಕೂಡಲೇ ಮುಂಬೈ ಕ್ರೈಮ್ ಬ್ರ್ಯಾಂಚ್​ಗೆ ಹಾಜರಾಗಬೇಕು ಅಂತ ರಮೇಶ್​ ಅವರಿಗೆ ಹೇಳಿದ್ದಾನೆ. ಅಲ್ಲದೇ ನಕಲಿ ವಾರೆಂಟ್ ಪ್ರತಿಯನ್ನು ಕೂಡ ಕಳಿಸಿದ್ದನು.

ಇದನ್ನೂ ಓದಿ
357 ಬ್ಯಾಂಕ್ ಖಾತೆ ಸೈಬರ್ ವಂಚಕರಿಗೆ ಮಾರಾಟ ಮಾಡಿದ್ದ ಗ್ಯಾಂಗ್ ಪತ್ತೆ
ರಜೆ ಮಜಾ ಮಾಡಲು ಹೋಗಿ ಸೈಬರ್ ವಂಚಕರ ಬಲೆಗೆ ಬಿದ್ದ
ನಿಮ್ಮ ಫೋನ್‌ನಲ್ಲಿ 1930 ಸಂಖ್ಯೆಯನ್ನು ಸೇವ್ ಮಾಡಿದ್ದೀರ? ಏನು ಪ್ರಯೋಜನ?
ಸೈಬರ್​ ಕ್ರೈಂ: ವೃದ್ಧೆಯಿಂದ 1 ಕೋಟಿಗೂ ಅಧಿಕ ಹಣ ದೋಚಿದ ವಂಚಕರು

ಇದನ್ನು ನೋಡಿದ ರಮೇಶ ಭಯಗೊಂಡು, ಆರೋಪಿ ಕೇಳಿದ ಖಾತೆಗೆ 3 ಲಕ್ಷ ರೂ. ಕೂಡಲೇ ವರ್ಗಾವಣೆ ಮಾಡಿದ್ದರು. ಬಳಿಕ, ರಮೇಶ್​ ಅವರಿಗೆ ಇವರೆಲ್ಲ ನಕಲಿ ಅಧಿಕಾರಿಗಳು ಎಂಬುವುದು ಗೊತ್ತಾಗಿತ್ತು. ಕೂಡಲೇ ಧಾರವಾಡದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಕರ್ನಾಟಕ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ: ಕಂಪನಿಯ ಸರ್ವರ್ ಹ್ಯಾಕ್​, 378 ಕೋಟಿ ರೂ. ಮಾಯ

ನಾಗರಿಕರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬಹುದು?

2021 ರಲ್ಲಿ ಪ್ರಾರಂಭಿಸಲಾದ CFCFRMS ಪೋರ್ಟಲ್ ಮೂಲಕ, ಇಲ್ಲಿಯವರೆಗೆ 5,489 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ವಂಚಕರ ಕೈಗೆ ಸಿಲುಕದಂತೆ ಉಳಿಸಲಾಗಿದೆ ಎಂದು ಗೃಹ ಸಚಿವರು ಹೇಳಿದರು. ಆನ್‌ಲೈನ್ ವಹಿವಾಟುಗಳನ್ನು ಮಾಡುವಾಗ ಜನರು ಬಹಳ ಜಾಗರೂಕರಾಗಿರಬೇಕು ಎಂದು ಸಚಿವಾಲಯವು ಮನವಿ ಮಾಡಿದೆ. ಯಾವುದೇ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಮತ್ತು ಯಾವುದೇ ರೀತಿಯ ವಂಚನೆ ಸಂಭವಿಸಿದಲ್ಲಿ, ತಕ್ಷಣವೇ NCRP ಪೋರ್ಟಲ್‌ನಲ್ಲಿ ಅಥವಾ ಪೊಲೀಸರಿಗೆ ದೂರು ನೀಡಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:39 pm, Wed, 30 July 25