ಹಾನಗಲ್ ಗ್ಯಾಂಗ್ ರೇಪ್: ನಮ್ಮ ಬಾಯಿ ಮುಚ್ಚಿಸಲು 50 ಲಕ್ಷ ರೂ. ಆಮಿಷ: ಸಂತ್ರಸ್ತೆ ಪತಿ ಗಂಭೀರ ಆರೋಪ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 15, 2024 | 2:48 PM

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ರೇವಣಕಟ್ಟಾ ಗ್ರಾಮದಲ್ಲಿ ಸಂತ್ರಸ್ತೆ ಪತಿ ತೌಸಿಪ್​ ಟಿವಿ9 ಗೆ ಪ್ರತಿಕ್ರಿಯಿಸಿದ್ದು, ನಮ್ಮ ಬಾಯಿ ಮುಚ್ಚಿಸಲು 50 ಲಕ್ಷದವರೆಗೆ ಆಮಿಶ ಒಡ್ಡಿದ್ದಾರೆ. ನಾವು ಹಾವೇರಿ ಕೊರ್ಟ್, ಪೊಲೀಸ್ ಸ್ಟೇಷನ್​ಗೆ ಹೋದಾಗ ಮೂರ್ನಾಲ್ಕು ಬಾರಿ ನನಗೆ ಗೊತ್ತಿಲ್ಲದ ಹಾಗೆ ನಮ್ಮ ಪತ್ನಿಗೆ ಆಮಿಷ ಒಡ್ಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹಾನಗಲ್ ಗ್ಯಾಂಗ್ ರೇಪ್: ನಮ್ಮ ಬಾಯಿ ಮುಚ್ಚಿಸಲು 50 ಲಕ್ಷ ರೂ. ಆಮಿಷ: ಸಂತ್ರಸ್ತೆ ಪತಿ ಗಂಭೀರ ಆರೋಪ
ಸಂತ್ರಸ್ತೆ ಪತಿ ತೌಸಿಪ್
Follow us on

ಕಾರವಾರ, ಜನವರಿ 15: ಹಾನಗಲ್​ ಗ್ಯಾಂಗ್​ರೇಪ್​ ಪ್ರಕರಣ (Hanagal gang rape case) ಇಡೀ ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿರುವ ಪ್ರಕರಣ. ಸದ್ಯ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ರೇವಣಕಟ್ಟಾ ಗ್ರಾಮದಲ್ಲಿ ಸಂತ್ರಸ್ತೆ ಪತಿ ತೌಸಿಪ್​ ಟಿವಿ9 ಗೆ ಪ್ರತಿಕ್ರಿಯಿಸಿದ್ದು, ನಮ್ಮ ಬಾಯಿ ಮುಚ್ಚಿಸಲು 50 ಲಕ್ಷದವರೆಗೆ ಆಮಿಶ ಒಡ್ಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ನಾವು ಹಾವೇರಿ ಕೊರ್ಟ್, ಪೊಲೀಸ್ ಸ್ಟೇಷನ್​ಗೆ ಹೋದಾಗ ಆಮಿಷ ಒಡ್ಡಿದ್ದಾರೆ. ಮೂರ್ನಾಲ್ಕು ಬಾರಿ ನನಗೆ ಗೊತ್ತಿಲ್ಲದ ಹಾಗೆ ನಮ್ಮ ಪತ್ನಿಗೆ ಆಮಿಷ ಒಡ್ಡಿದ್ದರು. ಆದರೆ ಅವಳು ಅವರ ಆಮಿಷಕ್ಕೆ ಬಗ್ಗದೆ ನನಗೆ ಹೇಳಿದ್ದಾಳೆ. ಅವರ ಆಮಿಷಕ್ಕೆ ನಾವು ಒಪ್ಪಿಲ್ಲ. ನಮಗೆ ನ್ಯಾಯ ಬೇಕು ಹಣವಲ್ಲ ಎಂದು ಹೇಳಿದ್ದಾರೆ.

ರಾಜಕೀಯ ಮಾಡುವುದು ಬೇಡ: ನ್ಯಾಯ ಕೊಡಿಸಲಿ

ನನ್ನ ಪತ್ನಿ ಆರೋಗ್ಯ ಸರಿಯಿಲ್ಲ, ಏನೂ ಹೇಳವ ಸ್ಥಿತಿಯಲ್ಲಿ ಇಲ್ಲ. ಘಟನೆ ನೆಡೆದಾಗಲೂ ನನ್ನ ಬಳಿ ಏನೂ ಹೇಳಿರಲಿಲ್ಲ. ಪತ್ನಿಗೆ ಆದ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ನಾನು ಆಕೆಯೊಂದಿಗಿದ್ದೇನೆ. ಪತ್ನಿ ಆರೋಗ್ಯ ಸರಿ ಇಲ್ಲದ ಕಾರಣ ಸಹೋದರಿ ಮನೆಯಲ್ಲಿ ಇದ್ದಾರೆ. ರಾಜಕಾರಣಿಗಳು ನ್ಯಾಯ ಕೊಡಿಸುವುದಾದರೇ ಬರಲಿ ರಾಜಕೀಯ ಮಾಡುವುದು ಬೇಡ ನ್ಯಾಯ ಕೊಡಿಸಲಿ ಎಂದಿದ್ದಾರೆ.

ಇದನ್ನೂ ಓದಿ: ಹಾನಗಲ್‌ ಗ್ಯಾಂಗ್ ರೇಪ್ ಕೇಸ್: ಸಂತ್ರಸ್ತೆ ಮಹಿಳೆಯ ಮೊದಲ ಪ್ರತಿಕ್ರಿಯೆ, ಗಂಭೀರ ಆರೋಪ

ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಇಂದು ಬಂಧನವಾದರು ಸಹ ಅತ್ಯಾಚಾರದಲ್ಲಿ ಭಾಗಿಯಾಗಿದ್ದಾರೆ. ಹಾವೇರಿಗೆ ಸಿಎಂ ಬರುತ್ತಿದ್ದರಿಂದ ನಮ್ಮ ಕುಟುಂಬದವರು ಅಲ್ಲಿಗೆ ತೆರಳಿದ್ದಾರೆ‌‌‌. ಊರಿನಲ್ಲಿ ನಮ್ಮ ಸಮುದಾಯದವರು ಬೆಂಬಲ ನೀಡಿದ್ದಾರೆ. ಅಧಿಕಾರಿಗಳು ಯಾರು ಏನೂ ಕೇಳಲು ಬಂದಿಲ್ಲ. ನನ್ನ ಪತ್ನಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂಬುವುದು ನಮ್ಮ ಆಗ್ರಹ ಎಂದು ಹೇಳಿದ್ದಾರೆ.

ರಾತ್ರಿ ಹೈಡ್ರಾಮಾ ಮುಂಜಾನೆ ಸಂತ್ರಸ್ತೆ ಶಿಫ್ಟ್

ಕೇಸ್‌ ಸಂಪೂರ್ಣ ರಾಜಕೀಯಕ್ಕೆ ತಿರುಗಿದೆ. ಘಟನೆ ಖಂಡಿಸಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಅಷ್ಟೇ ಅಲ್ಲ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಬಿಜೆಪಿ ಮಹಿಳಾ ಘಟಕ ನಿನ್ನೆ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಲು ಪ್ಲ್ಯಾನ್‌ ಮಾಡಿಕೊಂಡಿತ್ತು.

ಇದನ್ನೂ ಓದಿ: ಹಾನಗಲ್ ಗ್ಯಾಂಗ್ ರೇಪ್ ಬಗ್ಗೆ ಸಿದ್ದರಾಮಯ್ಯ ಯಾಕೆ ಮೌನ: ಬಸವರಾಜ ಬೊಮ್ಮಾಯಿ ಪ್ರಶ್ನೆ

ಆದರೆ ಮೊನ್ನೆ ರಾತ್ರಿಯೇ ಬ್ಯಾಡಗಿ ಕಾಂಗ್ರೆಸ್‌ ಶಾಸಕ ಬಸವರಾಜ ಶಿವಣ್ಣನವರ್‌ ನೇತೃತ್ವದಲ್ಲಿ ಸಾಂತ್ವನ ಕೇಂದ್ರಕ್ಕೆ ಹೋಗಿದ್ದ ಕಾಂಗ್ರೆಸ್ ನಾಯಕರು, ಸಂತ್ರಸ್ತೆಯನ್ನ ಶಿಫ್ಟ್ ಮಾಡಲು ಮುಂದಾಗಿದ್ದರು. ಆಗ ಹೈಡ್ರಾಮಾ ನಡೆದಿದ್ರಿಂದ ನಿನ್ನೆ ಬೆಳಗ್ಗೆ ಸಂತ್ರಸ್ತೆಯನ್ನ ಶಿರಸಿಗೆ ಶಿಫ್ಟ್ ಮಾಡಿದ್ದಾರೆ.

ಪ್ರಕರಣದಲ್ಲಿ 7 ಮಂದಿ ವಿರುದ್ಧ ಕೇಸ್‌ ದಾಖಲಾಗಿದ್ದು, ನಿನ್ನೆ ಮತ್ತಿಬ್ಬರು ಆರೋಪಿಗಳನ್ನ ಅರೆಸ್ಟ್‌ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.