ದರ್ಗಾವಾಲೆ ಕೊಲೆ ಬೆನ್ನಲ್ಲೇ ಮೀಟರ್ ಬಡ್ಡಿ ದಂಧೆ ಮತ್ತೆ ಆ್ಯಕ್ಟೀವ್: ಬುಡ ಸಮೇತ ಕಿತ್ತೊಗೆಯಲು ಎಸ್ಪಿ ಪ್ಲಾನ್

ಜಮೀರ್ ಹತ್ಯೆ ಬಳಿಕವೂ ಮುಂಡಗೋಡಿನಲ್ಲಿ ಮೀಟರ್ ಬಡ್ಡಿ ದಂಧೆ ಸಕ್ರಿಯವಾಗಿದೆ ಎಂಬ ಟಿವಿ9 ವರದಿ ಗಂಭೀರವಾಗಿ ಪರಿಗಣಿಸಿದ ಎಸ್ಪಿ ದೀಪನ್, ಉತ್ತರ ಕನ್ನಡದಲ್ಲಿ ಈ ದಂಧೆ ಬುಡಮೇಲು ಮಾಡಲು ಯೋಜನೆ ರೂಪಿಸಿದ್ದಾರೆ. ಹತ್ಯೆ ಪ್ರಕರಣದ ತನಿಖೆ ಜೊತೆಗೆ ದಂಧೆಕೋರರ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಇದು ಅನೇಕರಿಗೆ ನಡುಕ ಹುಟ್ಟಿಸಿದೆ.

ದರ್ಗಾವಾಲೆ ಕೊಲೆ ಬೆನ್ನಲ್ಲೇ ಮೀಟರ್ ಬಡ್ಡಿ ದಂಧೆ ಮತ್ತೆ ಆ್ಯಕ್ಟೀವ್: ಬುಡ ಸಮೇತ ಕಿತ್ತೊಗೆಯಲು ಎಸ್ಪಿ ಪ್ಲಾನ್
ಮುಂಡಗೋಡ ಪೊಲೀಸ್​ ಠಾಣೆ
Image Credit source: tv9 kannada
Edited By:

Updated on: May 07, 2026 | 4:56 PM

ಕಾರವಾರ, ಮೇ 07: ಮೀಟರ್ ಬಡ್ಡಿ ದಂಧೆ ಕಿಂಗ್ ಪಿನ್ ಜಮೀರ್ ಅಹ್ಮದ್ ದರ್ಗಾವಾಲೆ​​ ಕೊಲೆ ಪ್ರಕರಣದ (zameer ahmed murder case) ಬೆನ್ನಲ್ಲೆ ಮುಂಡಗೋಡಿನಲ್ಲಿ ಮೀಟರ್ ಬಡ್ಡಿ ದಂಧೆ ಮತ್ತೆ ಆ್ಯಕ್ಟೀವ್​​ ಆಗಿದೆ. ಈ ಬಗ್ಗೆ ಟಿವಿ9 ಬಿತ್ತರಿಸಿದ ವರದಿಯನ್ನು ಗಂಭಿರವಾಗಿ ಪರಿಗಣಿಸಿರುವ ಎಸ್​​ಪಿ ದೀಪನ್, ಮುಂಡಗೋಡ ಮತ್ತು ಹಳಿಯಾಳದಲ್ಲಿ ಮೀಟರ್ ಬಡ್ಡಿ ದಂಧೆಯನ್ನ (Meter interest racket)
ಬುಡ ಸಮೇತ ಕಿತ್ತುಹಾಕಲು ಪ್ಲಾನ್​ ಮಾಡಿದ್ದಾರೆ. ಇನ್ನೊಂದು ಕಡೆ ಕೆಲ ಪೊಲೀಸರಿಗೆ ಈ ತನಿಖೆ ನಡುಕ ಹುಟ್ಟಿಸಿದೆ.

ಮುಖ್ಯಾಂಶಗಳು

  • ಮುಂಡಗೋಡ ಮೀಟರ್ ಬಡ್ಡಿ ದಂಧೆಯ ಬಗ್ಗೆ ಎಷ್ಟ ಹೇಳಿದರು ಸಾಲದು.
  • ಹೆಣ ಉರುಳಿದರು ಇಲ್ಲಿನ ಮೀಟರ್ ಬಡ್ಡಿ ದಂಧೆಕೋರರಿಗೆ ಬಾರದ ಬುದ್ಧಿ.
  • ಮೀಟರ್ ಬಡ್ಡಿ ದಂಧೆ ಮಟ್ಟಹಾಕಲು ಪೊಲೀಸರ ಮಾಸ್ಟರ್​ ಪ್ಲಾನ್.​

ಜಮೀರ್​ ಕೊಲೆ ಪ್ರಕರಣದಲ್ಲಿ 7 ಜನರ ಬಂಧನ

ಮೀಟರ್ ಬಡ್ಡಿ ದಂಧೆ ಕಿಂಗ್ ಪಿನ್ ಜಮೀರ್ ಅಹ್ಮದ್ ದರ್ಗಾವಾಲೆ ಕೊಲೆ ಬೆನ್ನಲ್ಲೆ. ಮುಂಡಗೋಡಿನಲ್ಲಿ ಮೀಟರ್ ಬಡ್ಡಿ ದಂಧೆ ಮತ್ತೆ ಆ್ಯಕ್ಟೀವ್ ಆಗಿದೆ. ಸದ್ಯ ಪ್ರಾಥಮಿಕ ಮೂಲಗಳ ಪ್ರಕಾರ ಜಮೀರ್ ಕೊಲೆ ಮೀಟರ್ ಬಡ್ಡಿ ದಂಧೆಗಾಗಿ ನಡೆದಿದೆ ಎನ್ನಲಾಗಿದೆ. ಇನ್ನು ಕೊಲೆ ಪ್ರಕರಣದಲ್ಲಿ ಇದುವರೆಗೂ 7 ಜನರನ್ನ ಬಂಧಿಸಿರುವ ಪೊಲೀಸರು, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ನೆತೃತ್ವದ ತಂಡದಿಂದ ತನಿಖೆ ಮುಂದುವರೆದಿದೆ. ಕೊಲೆ ಪ್ರಕರಣದ ಜೊತೆ ಜೊತೆಗೆ ಮೀಟರ್ ಬಡ್ಡಿ ದಂಧೆ ಬುಡ ಸಮೇತ ಕಿತ್ತುಹಾಕಲು ಮಾಹಿತಿ ಕಲೆ ಹಾಕುತ್ತಿದ್ದಾರೆ.

ದಂಧೆಕೋರರ ಗಡಿಪಾರಿಗೆ ಸಿದ್ಧತೆ: ಪೊಲೀಸರಿಗೆ ನಡುಕ

ಈಗಾಗಲೇ ಮುಂಡಗೋಡ, ಹಳಿಯಾಳ ಮತ್ತು ದಾಂಡೇಲಿ ಭಾಗದಲ್ಲಿ ಸಕ್ರಿಯವಾಗಿರುವ ಮೀಟರ್ ಬಡ್ಡಿ ದಂಧೆಕೋರರ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು, ಈ ವಾರದಲ್ಲಿ ಅಧಿಕೃತ ಆದೇಶ ಮಾಡಿ ಕೆಲವರನ್ನ ಗಡಿಪಾರಿಗೆ ಮುಂದಾಗಿದ್ದಾರೆ. ಇನ್ನು ಇದರ ಜೊತೆಗೆ ಮೀಟರ್ ಬಡ್ಡಿ ದಂಧೆಗೆ ಕೆಲ ಸ್ಥಳೀಯ ಪೊಲೀಸರ ಬೆಂಬಲ ಇತ್ತು ಎನ್ನಲಾಗುತ್ತಿದೆ. ಹೀಗಾಗಿ ಜಮೀರ್ ಮೊಬೈಲ್ ಫೋನ್ ತನಿಖೆ ಮಾಡಲು ಎಸ್ಪಿ ದೀಪನ್ ಮುಂದಾಗಿದ್ದಾರೆ. ಸದ್ಯ ದೀಪನ್ ನಡೆಯಿಂದ ಜಮೀರ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಪೊಲೀಸರಿಗೆ ನಡುಕ ಹುಟ್ಟಿದೆ. ವಾಟ್ಸಪ್ ಹಾಗೂ ನಾರ್ಮಲ್ ಕಾಲ್ ಮೂಲಕ ಕೆಲ ಪೊಲೀಸರು ಜಮೀರ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಜಮೀರ್ ದರ್ಗಾವಾಲೆ ಕೊಲೆ ಕೇಸ್: ಪ್ರಮುಖ ಆರೋಪಿ ಸೇರಿ ಐವರು ಅರೆಸ್ಟ್​; ಹತ್ಯೆಗೆ ಅದೇ ಕಾರಣ

ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಮೀರ್ ಕೊಲೆ ಬಳಿಕವಾದರೂ ಮೀಟರ್ ಬಡ್ಡಿ ದಂಧೆ ಮಟ್ಟಹಾಕಲು ಪೊಲೀಸರು ಕೈಗೊಂಡಿರುವ ಕಾರ್ಯ ಕೆಲವರಿಗೆ ಖುಷಿ ತಂದಿದ್ದರೆ, ಕೆಲವರಿಗೆ ನಡುಕ ಹುಟ್ಟಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us