ಪ್ರವಾಸೋದ್ಯಮ ಕಚೇರಿಯಲ್ಲೇ ಅಧಿಕಾರಿಯ ಬೆಡ್ರೂಂ! ಮಂಚ, ಹಾಸಿಗೆ ನೋಡಿ ಬೆಚ್ಚಿಬಿದ್ದ ಎಸಿ
ಇದು ಸರ್ಕಾರಿ ಕಚೇರಿಯೋ ಅಲ್ಲಾ ಅಧಿಕಾರಿಯ ಬೆಡ್ ರೂಮೋ? ಪ್ರವಾಸೋದ್ಯಮ ಇಲಾಖೆಯ ಉತ್ತರ ಕನ್ನಡ ಜಿಲ್ಲಾ ಉಪನಿರ್ದೇಶಕರ ಕಚೇರಿ ನೋಡಿದ ಎಸಿಯೇ ಶಾಕ್ಗೆ ಒಳಗಾಗಿದ್ದರು. ಅಲ್ಲಿ ಕೆಲಸ ಮಾಡಲು ಸರಿಯಾಗಿ ಜಾಗ ಇತ್ತೋ ಇಲ್ಲವೋ, ಆದರೆ, ಮಂಚ, ಹಾಸಿಗೆ ಎಲ್ಲವೂ ಇತ್ತು! ಇದೇನಿದರು ಪ್ರಕರಣ? ವಿವರಗಳಿಗೆ ಮುಂದೆ ಓದಿ.

ಕಾರವಾರ, ಫೆಬ್ರವರಿ 20: ಅದು ಪ್ರವಾಸೋದ್ಯಮ ಇಲಾಖೆಯ ಕಚೇರಿ. ಸರಿಯಾಗಿ ಆಡಳಿತ ನಡೆಸುವುದಕ್ಕೇ ಅದರಲ್ಲಿ ಜಾಗವಿಲ್ಲ. ಆದಾಗ್ಯೂ ಮಂಚ, ಹಾಸಿಗೆ ಎಲ್ಲ ಇದೆ! ಮೇಲ್ನೋಟಕ್ಕೆ ಅದು ಸರ್ಕಾರಿ ಕಚೇರಿಯೋ ಅಥವಾ ಅಧಿಕಾರಿಯ ಬೆಡ್ರೂಮಾ ಎಂಬ ಅನುಮಾನ ಬರುವಂತಿದೆ. ಪ್ರವಾಸೋದ್ಯಮ ಇಲಾಖೆಯ ಉತ್ತರ ಕನ್ನಡ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ಕಂಡುಬಂದ ಅವಸ್ಥೆ ಇದು. ಈ ರೀತಿಯ ವ್ಯವಸ್ಥೆಯನ್ನು ನೋಡಿ ಖುದ್ದು ಎಸಿ ಕನಿಷ್ಕ ಅವರೇ ಆಘಾತಗೊಂಡಿದ್ದಾರೆ.
ಯಾರಿಗೂ ಗೊತ್ತಿಲ್ಲದ ಹಾಗೆ ಅಧಿಕಾರಿ ಕಚೇರಿಯನ್ನೇ ಬೆಡ್ರೂಂ ಮಾಡಿಕೊಂಡಿದ್ದರೇ? ಅದರ ಬಗ್ಗೆ ಮಾಹಿತಿ ಹೊರಬಾರದಂತೆ ನೋಡಿಕೊಂಡಿದ್ದರೇ ಎಂಬ ಅನುಮಾನ ಈಗ ವ್ಯಕ್ತವಾಗಿದೆ.
ಬಯಲಿಗೆ ಬಂದಿದ್ದು ಹೇಗೆ?
ಬೆಡ್ ರೂಂ ಬಾಗಿಲು ಕಾಣಿಸದಂತೆ ಟ್ರೆಶರಿ ಇಡಲಾಗಿತ್ತು. ಹೀಗಾಗಿ ಅದು ಮೇಲ್ನೋಟಕ್ಕೆ ಗಮನಕ್ಕೆ ಬರುತ್ತಿರಲಿಲ್ಲ. ಇಂಥ ಸಂದರ್ಭದಲ್ಲಿ ಪ್ರವಾಸೋದ್ಯಮ ಕಚೇರಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸ್ಥಳಾಂತರ ಮಾಡಬೇಕಾಗಿ ಬಂದಿತ್ತು. ಹೀಗೆ ಸ್ಥಳಾಂತರ ಮಾಡುವಾಗ ಬೆಡ್ ರೂಂ ಪ್ರಕರಣ ಬೆಳಕಿಗೆ ಬಂದಿದೆ.

ಪ್ರವಾಸೋದ್ಯಮ ಇಲಾಖೆಯ ಉತ್ತರ ಕನ್ನಡ ಜಿಲ್ಲಾ ಉಪನಿರ್ದೇಶಕರ ಕಚೇರಿ
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಬೃಹತ್ ಕೈಗಾರಿಕಾ ಇಲಾಖೆ ಅಧಿಕಾರಿ ಆಗಿರುವ ಜಯಂತ ಕಳೆದ ಕೆಲವು ತಿಂಗಳಿನಿಂದ ಹೆಚ್ಚುವರಿಯಾಗಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಬೃಹತ್ ಕೈಗಾರಿಕೆ ಇಲಾಖೆಯ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಜಯಂತ ಹೋಗಿದ್ದ ಹಿನ್ನೆಲೆ, ಪ್ರವಾಸೊದ್ಯಮ ಇಲಾಖೆಯ ಚಾರ್ಜ್ ಕಾರವಾರ ಎಸಿ ಕನಿಷ್ಕಗೆ ಕೊಟ್ಟಿದ್ದರು. ಕಾರವಾರ ಸಾರ್ವಜನಿಕ ಆಸ್ಪತ್ರೆಗೆ ನೇರ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಡಿಸಿ ಆದೇಶದ ಮೇರೆಗೆ ಕಚೇರಿ ಸ್ಥಳಾಂತರ ಮಾಡಲು ಎಸಿ ಕನಿಷ್ಕ ಮುಂದಾಗಿದ್ದಾರೆ. ಈ ವೇಳೆ ಮಂಚ, ಹಾಸಿಗೆ ಎಲ್ಲ ಕಾಣಿಸಿದೆ. ಈ ಬಗ್ಗೆ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದ್ದಿಗೆ ಕೇಳಿದರೆ ಯಾರೂ ಕೂಡ ಉತ್ತರ ಕೊಟ್ಟಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಕಾರವಾರ ನೌಕಾಪಡೆಯ ಸೂಕ್ಷ್ಮ ಮಾಹಿತಿ ಪಾಕ್ಗೆ ನೀಡುತ್ತಿದ್ದ ಮತ್ತೋರ್ವ ಅರೆಸ್ಟ್: ಬಂಧಿತರ ಸಂಖ್ಯೆ 8ಕ್ಕೆ ಏರಿಕೆ
ಸರ್ಕಾರಿ ಕಚೇರಿಯನ್ನು ಮನೆ ರೀತಿಯಲ್ಲಿ ಬಳಿಸಿಕೊಂಡ ಬಗ್ಗೆ ಇದೀಗ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಮಾಹಿತಿ ಕೇಳಿದ್ದಾರೆ. ಪ್ರವಾಸೋದ್ಯಮ ಉಪನಿರ್ದೇಶಕ ಜಯಂತ್ಗೆ ನೋಟಿಸ್ ಕೊಟ್ಟಿದ್ದಾರೆ. ಮೂರು ದಿನದಲ್ಲಿ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ. ಆದರೆ, ಆ ಗಡುವು ಮುಗಿದಿದ್ದು, ಇನ್ನೂ ಜಯಂತ್ ಉತ್ತರ ಕೊಟ್ಟಿಲ್ಲ ಎನ್ನಲಾಗಿದೆ.