ಬಸ್ ಫ್ರೀ ನೀಡಿ ದೊಡ್ಡ ಸಮಸ್ಯೆಯಾಗಿದೆ: ಬಿಜೆಪಿ ನಾಯಕರ ಮುಂದೆಯೇ ಗ್ಯಾರಂಟಿ ಬಗ್ಗೆ ವ್ಯಂಗ್ಯವಾಡಿದ ಕಾಂಗ್ರೆಸ್​​​​ ಶಾಸಕ ದೇಶಪಾಂಡೆ

ಆರ್.ವಿ. ದೇಶಪಾಂಡೆ ದಾಂಡೇಲಿಯಲ್ಲಿ ಬಿಜೆಪಿ ಸಚಿವ ವಿ. ಸೋಮಣ್ಣರನ್ನು ಶ್ಲಾಘಿಸಿ, ತಮ್ಮದೇ ಪಕ್ಷದ 'ಶಕ್ತಿ' ಯೋಜನೆ ಬಗ್ಗೆ ವ್ಯಂಗ್ಯವಾಡಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಪುರುಷರಿಗೆ ತೊಂದರೆಯಾಗುತ್ತಿದೆ ಎಂದು ಹಾಸ್ಯಭರಿತವಾಗಿ ಟೀಕಿಸಿದರು. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆ ಸೃಷ್ಟಿಸಿದ್ದು, ಗ್ಯಾರಂಟಿ ಯೋಜನೆಗಳ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕನ ಅಸಮಾಧಾನವನ್ನು ಎತ್ತಿ ತೋರಿಸಿದೆ. ರೈಲು ಸಂಪರ್ಕ ಸುಧಾರಿಸಲು ಅವರು ಸಲಹೆ ನೀಡಿದ್ದಾರೆ.

ಬಸ್ ಫ್ರೀ ನೀಡಿ ದೊಡ್ಡ ಸಮಸ್ಯೆಯಾಗಿದೆ: ಬಿಜೆಪಿ ನಾಯಕರ ಮುಂದೆಯೇ ಗ್ಯಾರಂಟಿ ಬಗ್ಗೆ ವ್ಯಂಗ್ಯವಾಡಿದ ಕಾಂಗ್ರೆಸ್​​​​ ಶಾಸಕ ದೇಶಪಾಂಡೆ
ಆರ್.ವಿ. ದೇಶಪಾಂಡೆ
Edited By:

Updated on: Feb 07, 2026 | 6:51 PM

ಕಾರವಾರ, ಫೆ.7: ಉತ್ತರ ಕನ್ನಡದ ದಾಂಡೇಲಿಯಲ್ಲಿ ನಡೆದ ರೈಲ್ವೆ ಇಲಾಖೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಹಿರಿಯ ಶಾಸಕ ಮತ್ತು ಮಾಜಿ ಸಚಿವ ಆರ್.ವಿ. ದೇಶಪಾಂಡೆ (RV Deshpande) ಬಿಜೆಪಿ ನಾಯಕರನ್ನ ಹೊಗಳಿ ಗ್ಯಾರಂಟಿಗಳ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಇದೀಗ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಸ್ವಪಕ್ಷದ ‘ಶಕ್ತಿ’ ಯೋಜನೆ ಬಗ್ಗೆ ಅವರು ಮಾಡಿರುವ ವ್ಯಂಗ್ಯ ಮತ್ತು ಬಿಜೆಪಿ ಸಚಿವರ ಬಗ್ಗೆ ತೋರಿದ ಪ್ರೀತಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಕಾರ್ಯವೈಖರಿಯನ್ನು ದೇಶಪಾಂಡೆ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಸೋಮಣ್ಣ ಅವರು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಶ್ರಮದಿಂದಲೇ ಇಂದು ದಾಂಡೇಲಿ-ಅಳ್ನಾವರ ರೈಲು ಸಂಚಾರ ಮತ್ತೆ ಶುರುವಾಗಿದೆ,” ಎಂದಿದ್ದಾರೆ.

ಪಕ್ಷ ಬೇರೆಯಾಗಿದ್ದರೂ ಸತ್ಯ ಹೇಳಲು ನಾನು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ತಮ್ಮ ಪಕ್ಷ ತಂದಿರುವ ಗ್ಯಾರಂಟಿಗಳನ್ನು ಟೀಕಿಸಿದ್ದಾರೆ. ಸಿದ್ದರಾಮಯ್ಯ ಮಹಿಳೆಯರಿಗೆ ಬಸ್ ಫ್ರೀ ಮಾಡಿದ್ದಾರೆ, ಈಗ ಯಾವುದೇ ಬಸ್ ನೋಡಿದರೂ ಫುಲ್ ಇರುತ್ತವೆ. ಗಂಡಸರು ಮತ್ತು ಮಕ್ಕಳಿಗೆ ಬಸ್ ಹತ್ತಲು ಜಾಗವೇ ಇಲ್ಲದಂತಾಗಿದೆ. ಎಂದು ಹೇಳಿದ್ದಾರೆ. ಬಸ್‌ನಲ್ಲಿ ಅಪ್ಪಿತಪ್ಪಿ ಮಹಿಳೆಯರಿಗೆ ಕೈ ತಗುಲಿದರೆ ಸಾಕು, ಅಲ್ಲಿಗೆ ಹೆಣವೇ ಬಿದ್ದಂತೆ! ಗಂಡಸರು ಆ ಕಡೆ ಈ ಕಡೆ ನೋಡಿಕೊಂಡು ಬಹಳ ಎಚ್ಚರಿಕೆಯಿಂದ ಓಡಾಡಬೇಕಾದ ಪರಿಸ್ಥಿತಿ ಇದೆ ಎಂದು ತಮಾಷೆಯಾಗಿ ಹೇಳಿದರು.

ಇದನ್ನೂ ಓದಿ: ಅಬಕಾರಿ ಹಗರಣದ ಆರೋಪದ ನಡುವೆಯು ಆರ್.ಬಿ. ತಿಮ್ಮಾಪುರಗೆ ಸಿಎಂ ಭಾಗ್ಯ?: ‘ಕೊರವಂಜಿ’ ಭವಿಷ್ಯಕ್ಕೆ ಸಚಿವ ಫುಲ್​​​ ಖುಷ್

ಬಸ್ಸುಗಳ ಮೇಲಿನ ಒತ್ತಡ ಕಡಿಮೆ ಮಾಡಲು ಅಳ್ನಾವರದಿಂದ ಬೆಳಗಾವಿ ಮತ್ತು ಹುಬ್ಬಳ್ಳಿಗೆ ರೈಲು ಸಂಪರ್ಕ ಕಲ್ಪಿಸಬೇಕು. ರೈಲು ಕನೆಕ್ಟಿವಿಟಿ ಹೆಚ್ಚಾದರೆ ಬಸ್ಸುಗಳಲ್ಲಿನ ಈ ‘ರಶ್’ ಕಡಿಮೆಯಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ. ಆರ್.ವಿ. ದೇಶಪಾಂಡೆ ಅವರು ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕರಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಸರ್ಕಾರದ ಕೆಲವು ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ. ವಿಶೇಷವಾಗಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ಆತಂಕವನ್ನು ಅವರು ಈ ಹಿಂದೆಯೂ ಪರೋಕ್ಷವಾಗಿ ವ್ಯಕ್ತಪಡಿಸಿದ್ದರು. ಈಗ ನೇರವಾಗಿ ಹಾಸ್ಯದ ರೂಪದಲ್ಲಿ ಶಕ್ತಿ ಯೋಜನೆಯ ಅಡ್ಡಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
Follow Us