ಶಿರೂರು ಗುಡ್ಡ ಕುಸಿತ; ಹನ್ನೊಂದನೇ ದಿನದ ಕಾರ್ಯಾಚರಣೆ ಅಂತ್ಯ, ಇಲ್ಲಿದೆ ಸಂಪೂರ್ಣ ವಿವರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 26, 2024 | 7:24 PM

ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿ 11 ದಿನದ ಕಾರ್ಯಾಚರಣೆ ಮುಗಿದಿದೆ. ಆದರೆ, ಇದೀಗ ಕಾಣೆಯಾಗಿದ್ದ 11 ಜನರಲ್ಲಿ ಎಂಟು ಮೃತದೇಹಗಳು ಪತ್ತೆಯಾಗಿದ್ದು, ಮೂವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ನೌಕಾದಳ, ಭೂಸೇನೆಯ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದು ಘಟನಾ ಸ್ಥಳದಲ್ಲಿ ಏನೆಲ್ಲಾ ಕಾರ್ಯಾಚರಣೆ ನಡೆಸುತ್ತಿದೆ. ಈ ಕುರಿತು ವರದಿ ಇಲ್ಲಿದೆ.

ಶಿರೂರು ಗುಡ್ಡ ಕುಸಿತ; ಹನ್ನೊಂದನೇ ದಿನದ ಕಾರ್ಯಾಚರಣೆ ಅಂತ್ಯ, ಇಲ್ಲಿದೆ ಸಂಪೂರ್ಣ ವಿವರ
ಶಿರೂರು ಗುಡ್ಡ ಕುಸಿತ; ಹನ್ನೊಂದನೇ ದಿನದ ಕಾರ್ಯಾಚರಣೆ ಅಂತ್ಯ
Follow us on

ಉತ್ತರ ಕನ್ನಡ, ಜು.26: ಜುಲೈ 16 ರ ಬೆಳಗ್ಗೆ ಅಂಕೋಲಾ(Ankola) ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿದು 11 ಜನ ಮಣ್ಣಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿತ್ತು. ಆಟವಾಡುತಿದ್ದ ಪುಟ್ಟ ಕಂದಮ್ಮಗಳು, ಟೀ ಅಂಗಡಿಯಲ್ಲಿ ಚಹ ಸವಿಯುತಿದ್ದ ಟ್ರಕ್ ಚಾಲಕರು, ಗುಡ್ಡದ ಬದಿಯಲ್ಲಿ ವಿಶ್ರಾಂತಿ ಪಡೆಯುತಿದ್ದ ಚಾಲಕ, ಮನೆಯಲ್ಲಿ ಅಡುಗೆ ಮಾಡುತಿದ್ದ ಮಹಿಳೆ ಸೇರಿ 11 ಜನ ಭೂ ಕುಸಿತ ದುರಂತದಲ್ಲಿ ಕಾಣೆಯಾಗಿದ್ದರು. ಅದರಂತೆ ಗಂಗಾವಳಿ ನದಿ ತೀರದ ಭಾಗದಲ್ಲಿ ಎಂಟು ಶವಗಳು ದೊರೆತಿವೆ‌. ಆದರೆ, ಕೇರಳ ಮೂಲದ ಅರ್ಜುನ್, ಶಿರೂರಿನ ಲೋಕೇಶ್ ನಾಯ್ಕ, ಜಗನ್ನಾಥ ನಾಯ್ಕ ರವರಿಗಾಗಿ ಶೋಧ ಕಾರ್ಯ ನಡೆಯುತಿದೆ.

ಟೀ ಅಂಗಡಿ ಬಳಿ ಮಣ್ಣು ತೆರವು ಮಾಡಿದರೂ ಯಾವ ಗುರುತು ಪತ್ತೆಯಾಗಲೇ ಇಲ್ಲ. ಹೀಗಾಗಿ ಆರ್ಮಿ, ನೇವಿ ಹಾಗೂ ಖಾಸಗಿ ಏಜೆನ್ಸಿ ಸಹಾಯ ಪಡೆದ ಜಿಲ್ಲಾಡಳಿತ. ತಂತ್ರಜ್ಞಾನ ಸಹಾಯದಿಂದ ಘಟನಾ ಸ್ಥಳದ ಸುತ್ತಮುತ್ತ ಶೋಧ ಕಾರ್ಯ ನಡೆಸಿದೆ. ಇನ್ನು ದ್ರೋಣ್ ಹಾಗೂ ಥರ್ಮಲ್ ಸ್ಕ್ಯಾನ್ ಕಾರ್ಯಾಚರಣೆ ನಡೆಸಿದ ಖಾಸಗಿ ಕಂಪನಿಯ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಹೇಳುವಂತೆ ‘ನದಿಯಲ್ಲಿ ರೆಲಿಂಗ್, ಟವರ್, ಲಾರಿ, ಟ್ಯಾಂಕರ್ ಕ್ಯಾಬಿನ್ ಸಿಗಬೇಕಿತ್ತು. ಮೂರು ಸ್ಪಾಟ್‌ಗಳು ಸಿಕ್ಕಿದ್ದು, ಅದರ ಪೈಕಿ ಅರ್ಜುನ್ ಲಾರಿ ಯಾವುದು ಎಂದು ಸಿಗಬೇಕಿದೆ . 60 ಮೀ. ಉದ್ದ ಹಾಗೂ 20 ಮೀ. ಆಳದಲ್ಲಿ ಒಂದು ಮೆಟಲ್ ಡಿಟೆಕ್ಟ್ ಆಗಿದ್ದು, 400 ಲಾಗ್ಸ್ ಟ್ರಕ್‌ನಲ್ಲಿದ್ದರಿಂದ ಹೆಚ್ಚು ಆಳದಲ್ಲಿ ಇರುವ ಸಾಧ್ಯತೆಗಳಿತ್ತು. 500 ಮೀ. ದೂರದಲ್ಲಿ ಮರದ ದಿಮ್ಮಿಗಳು ಸಿಕ್ಕಿದ್ದು, ಲಾರಿಯಿಂದ ಕೆಲವು ದಿಮ್ಮಿಗಳು ದೂರಾಗಿವೆ.

ಇದನ್ನೂ ಓದಿ:ಶಿರೂರು ಗುಡ್ಡ ಕುಸಿತ: ನದಿಯಲ್ಲಿ ಸಿಕ್ತು ಲಾರಿ ಚಾಲಕನ ಅರ್ಧ ಮೃತದೇಹ, DNA ಮೂಲಕ ಗುರುತು ಪತ್ತೆ

ಎರಡು ಸ್ಪಾಟ್‌ಗಳ ಪೈಕಿ ಲಾರಿ ಯಾವುದು ಎಂದು ನೋಡಲಾಗುತ್ತಿದೆ. ತುಂಬಾ‌ ಆಳದಲ್ಲಿರುವ ಸ್ಪಾಟ್ ಲಾರಿಯಾಗಿರಬಹುದು ಎಂದು ಊಹೆ ಮಾಡಲಾಗಿದೆ. ಟ್ರಕ್‌ನ ಉಳಿದ ಭಾಗಗಳ ಜತೆಯೇ ಕ್ಯಾಬಿನ್ ಕೂಡ ಇದೆ. ಅದರೊಳಗೆ ಅರ್ಜುನ್ ಇರುವ ಸಾಧ್ಯತೆಯಿದೆ. ನದಿಯ ನೀರಿನ ಹರಿವಿನ ವೇಗ 8 ನಾಟ್ಸ್ ಇದೆ. ಡೀಪ್ ಡೈವರ್ಸ್‌ಗಳಿಗೆ ಅಲ್ಲಿ ಹೋಗಿ ಪತ್ತೆ ಮಾಡುವುದು ಭಾರಿ ಕಷ್ಟ ಆಗುತ್ತದೆ. ಹಾಗಾಗಿ ನದಿಯ ನೀರಿನ ಹರಿವು ಕಡಿಮೆ ಆಗುವವರೆಗೂ ಡೀಪ್ ಡೈವರ್ಸ್ ಕಾರ್ಯಾಚರಣೆ ಮಾಡುವುದು ಕಷ್ಟವಾಗಿದೆ. ಇನ್ನು ಮಳೆಯೂ ಕೂಡ ಹೆಚ್ಚುಇರುವುದರಿಂದ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಆದಷ್ಟು ಬೇಗ ರೆಸ್ಕ್ಯೂ ಕಾರ್ಯಾಚರಣೆ ನಡೆಸಲಾಗುವುದು ಎಂದು ತಜ್ಞರು ತಿಳಿಸಿದ್ದಾರೆ.

ರಾಜಕೀಯಕ್ಕೂ ತಿರುಗಿದ ಶಿರೂರು ಗುಡ್ಡ ಕುಸಿತ ದುರಂತ

ಇನ್ನು ಶಿರೂರು ಗುಡ್ಡ ಕುಸಿತ ದುರಂತ, ರಾಜಕೀಯಕ್ಕೂ ತಿರುಗಿದ್ದು, ಸದನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಪ್ರಸ್ತಾಪ ಕಾರವಾರದ ಶಾಸಕ ಸತೀಶ್ ಸೈಲ್ ರವರನ್ನ ಕೆರಳಿಸಿದೆ. ಈ ವಿಷಯವನ್ನು ರಾಜಕೀಯಕ್ಕೆ ತರುತಿದ್ದಾರೆ. ಸಾವಿನಲ್ಲಿ ರಾಜಕೀಯ ನಡೆಯುತ್ತಿದೆ, ನಾವೇನೂ ಕೆಲಸ ಮಾಡಿಲ್ಲ ಎಂದು ಸದನದಲ್ಲಿ ಆರೋಪ ಮಾಡಲಾಗಿದೆ. ನನ್ನ ಚುನಾವಣೆಗೂ ಅಷ್ಟು ಕೆಲಸ ಮಾಡಿಲ್ಲ, ಅಷ್ಟು ಇಲ್ಲಿ ಮಾಡಿದ್ದೇನೆ. ಕೇಂದ್ರ ಸಚಿವ ಕುಮಾರಸ್ವಾಮಿ ಬಂದ ಮೇಲೆಯೇ ಕೆಲಸ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ನಾನು ಕೆಲಸ ಮಾಡಿಲ್ಲ ಎಂದು ಸಾಭೀತಾದರೆ ರಾಜೀನಾಮೆ ನೀಡಲೂ ತಯಾರಿದ್ದೇನೆ ಎಂದು ಶಾಸಕ ಸತೀಶ್ ಸೈಲ್ ತಿರುಗೇಟು ನೀಡಿದ್ದಾರೆ. ಇದಲ್ಲದೇ ಗಂಗಾವಳಿ ನದಿಯಲ್ಲಿ ಮುಳುಗಿದ ಟ್ರಕ್ ನಲ್ಲಿ ಕೇರಳ ಮೂಲದ ಅರ್ಜುನ್ ಬದುಕಿರುವ ಸಾಧ್ಯತೆ ಇಲ್ಲ. ನಮ್ಮ ಎಲ್ಲಾ ಪ್ರಯತ್ನ ಮಾಡುತಿದ್ದೇವೆ ಎಂದಿದ್ದಾರೆ.

ಸಧ್ಯ ಅಬ್ಬರದ ಮಳೆ ಮುಂದುವರೆದಿದೆ. ಮಳೆಯ ಅಬ್ಬರಕ್ಕೆ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 1 ಮನೆ ಪೂರ್ಣ ಹಾನಿ, 8 ಮನೆಗಳಿಗೆ ತೀವ್ರ ಹಾನಿ, 53 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಕಾರವಾರದಲ್ಲಿ 2, ಕುಮಟಾ 1 ಮತ್ತು ಅಂಕೋಲಾದ 1 ಸೇರಿದಂತೆ ಒಟ್ಟು 4 ಕಾಳಜಿ ಕೇಂದ್ರಗಳಲ್ಲಿ 205 ಜನರಿಗೆ ಆಶ್ರಯ ಕಲ್ಪಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ