ಉತ್ತರ ಕನ್ನಡ: ಗೌರಿ ನಾಯ್ಕ್​ಗೆ​ ಬಾವಿ ತೋಡಲು ಅನುಮತಿ ನೀಡಿದ ಜಿಲ್ಲಾಡಳಿತ

| Updated By: ವಿವೇಕ ಬಿರಾದಾರ

Updated on: Feb 21, 2024 | 3:01 PM

ಉತ್ತರ ಕನ್ನಡ ಜಿಲ್ಲೆ ಶಿರಸಿಯ ಗಣೇಶನಗರದ ಅಂಗನವಾಡಿ ಮಕ್ಕಳ ದಾಹ ತಣಿಸಲು ಬಾವಿ ತೋಡುತ್ತಿದ್ದ ಗೌರಿ ನಾಯ್ಕ್ ಅವರ ಕಾರ್ಯಕ್ಕೆ​ ಜಿಲ್ಲಾಡಳಿತ ಅಡ್ಡಿಪಡಿಸಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇದೀಗ ಬಾವಿ ತೋಡಲು ಗೌರಿ ನಾಯ್ಕ್​ ಅವರಿಗೆ ಅನುಮತಿ ನೀಡಿದೆ.

ಉತ್ತರ ಕನ್ನಡ: ಗೌರಿ ನಾಯ್ಕ್​ಗೆ​ ಬಾವಿ ತೋಡಲು ಅನುಮತಿ ನೀಡಿದ ಜಿಲ್ಲಾಡಳಿತ
ಗೌರಿ ನಾಯ್ಕ್​
Follow us on

ಕಾರವಾರ, ಫೆಬ್ರವರಿ 21: ಉತ್ತರ ಕನ್ನಡ (Uttar Kannada) ಜಿಲ್ಲೆ ಶಿರಸಿಯ (Sirasi) ಗಣೇಶನಗರದ ಅಂಗನವಾಡಿಯಲ್ಲಿ (Anganwadi) ಬಾವಿ (well) ತೋಡಲು ಗೌರಿ ನಾಯ್ಕ್ (55 ವರ್ಷ) (Gauri Naik) ಅವರಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಅನುಮತಿ ನೀಡಿದ್ದಾರೆ.

ಏನಿದು ಘಟನೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶನಗರದಲ್ಲಿ ಬೇಸಿಗೆ ಬಂತೆಂದರೇ ನೀರಿನ ಕೊರತೆಯಿಂದ ಜನರು ಪರದಾಡುತ್ತಾರೆ. ಇನ್ನು ಬೇಸಿಗೆ ಕಾಲದಲ್ಲಿ ಗ್ರಾಮ ಪಂಚಾಯಿತಿ ವಾರದಲ್ಲಿ ಎರಡು ದಿನ ನೀರು ಬಿಡುತ್ತದೆ. ಆದರೆ ಈ ನೀರು ಕುಡಿಯಲು ಸಹ ಸಾಲುವುದಿಲ್ಲ. ಅಲ್ಲದೆ ಈ ನೀರು ಶುದ್ಧವಾಗಿರುವುದಿಲ್ಲ ಎಂಬ ಆರೋಪವೂ ಇದೆ. ಮತ್ತು ಗಣೇಶನಗರದಲ್ಲಿ ಅಂಗನವಾಡಿಯೊಂದು ಇದ್ದು, ಮಕ್ಕಳಿಗೆ ಕುಡಿಯಲು ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಇದನ್ನು ಮನಗಂಡ ಗೌರಿ ನಾಯ್ಕ್​ ಅವರು ಅಂಗನವಾಡಿ ಆವರಣದಲ್ಲಿ ಏಕಾಂಗಿಯಾಗಿ ಬಾವಿ ತೋಡಲು ಪ್ರಾರಂಭಿಸಿದ್ದಾರೆ.

ಜನವರಿ 30 ರಿಂದ ಗೌರಿನಾಯ್ಕ ಅವರು ಅಂಗನವಾಡಿಯ ಆವರಣದಲ್ಲಿ ಯಾರ ಸಹಾಯವನ್ನೂ ಪಡೆಯದೇ ಬಾವಿ ತೋಡಲು ಆರಂಭಿಸಿದ್ದರು. ಇವರು ಏಕಾಂಗಿಯಾಗಿ 30 ಅಡಿ ಬಾವಿ ತೋಡಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಮಕ್ಕಳಿಗೆ ಕುಡಿಯುವ ನೀರು ಪೂರೈಸುವಲ್ಲಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ಸರ್ಕಾರಕ್ಕೆ ಛೀಮಾರಿ ಹಾಕಿದ್ದರು.

ಇದನ್ನೂ ಓದಿ: ಜೀವ ಬಿಟ್ಟೆನೂ, ಆದ್ರೆ ಬಾವಿ ತೆಗೆಯುವುದನ್ನ ನಿಲ್ಲಿಸುವುದಿಲ್ಲ ಎಂದ ಶಿರಸಿಯ ಗೌರಿ ನಾಯ್ಕ್​

ಈ ವಿಚಾರ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿರಸಿ ವಿಭಾಗದ ಸಿಡಿಪಿಓ ವೀಣಾ ಶಿರ್ಸಿಕರ್ ಅವರು “ಭದ್ರತೆ” ಕಾರಣ ನೀಡಿ ಬಾವಿ ಮುಚ್ಚುವಂತೆ ಫೆ.12 ರಂದು ನೋಟಿಸ್​ ನೀಡಿದ್ದರು. ಸರ್ಕಾರದ ನೋಟಿಸ್​ಗೆ ಬಗ್ಗದ ಗೌರಿ ಅವರು ಬಾವಿ ತೋಡುವುದನ್ನು ಮುಂದುವರೆಸಿದ್ದರು. ಆದರೆ ಮಂಗಳವಾರ (ಫೆ.19) ರಂದು ಅಧಿಕಾರಿಗಳು ಸ್ಥಳಕ್ಕೆ ಬಂದು ಹಲಗೆಯಿಂದ ಬಾವಿ ಮುಚ್ಚಿದ್ದರು.

ಇದನ್ನು ವಿರೋಧಿಸಿ ಗೌರಿ ನಾಯ್ಕ ಹಾಗೂ ಅವರು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಇಂದು (ಫೆ.21) ಶಿರಸಿ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವಿಚಾರ ಟಿವಿ9ನಲ್ಲಿ ಪ್ರಸಾರವಾಗುತ್ತಿದ್ದಂತೆ ಸ್ಥಳಕ್ಕೆ ಸಂಸದ ಅನಂತಕುಮಾರ್ ಹೆಗಡೆ ಭೇಟಿ ನೀಡಿದರು. ಸ್ಥಳದಿಂದಲೇ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್​ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಬಾವಿ ತೋಡಲು ಅನುಮತಿ ನೀಡುವಂತೆ ತಾಕೀತು ಮಾಡಿದರು. ಆಗ ಜಿಲ್ಲಾಧಿಕಾರಿಗಳು “ಬಾವಿ ತೋಡಲು ಯಾವುದೇ ಸಮಸ್ಯೆ ಇಲ್ಲ” ಎಂದು ಹೇಳಿದರು.
ಬಳಿಕ ಗೌರಿ ನಾಯ್ಕ್​ ಅವರೊಂದಿಗೆ ಮಾತನಾಡಿದ ಅನಂತ ಕುಮಾರ್​ ಹೆಗಡೆ “ಬಾವಿ ತೋಡುವುದನ್ನು ಮುಂದುವರಿಸಿ, ನೀರು ಬಂದ ನಂತರ ಬಾವಿಗೆ ಗೌರಿ ಅಂತ ಹೆಸರಿಡುವ” ಭರವಸೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ