ಹೊಸಪೇಟೆಯ ಡಾಣಾಪುರ ಬಳಿ ಸರಣಿ ಅಪಘಾತ: ಬೈಕ್, ಕಾರು, ಬಸ್​ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ; ಇಬ್ಬರು ಸಾವು

ವಿಜಯನಗರ ಜಿಲ್ಲೆಯ ಹೊಸಪೇಟೆಯ ಡಾಣಾಪುರ ಬಳಿ ನಡೆದ ಸರಣಿ ಅಪಘಾತದಲ್ಲಿ ಬೈಕ್, ಕಾರು ಹಾಗೂ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ನಾಲ್ವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್​​ ಜಾಮ್​​ ಉಂಟಾಗಿದೆ.

ಹೊಸಪೇಟೆಯ ಡಾಣಾಪುರ ಬಳಿ ಸರಣಿ ಅಪಘಾತ: ಬೈಕ್, ಕಾರು, ಬಸ್​ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ; ಇಬ್ಬರು ಸಾವು
ಪಲ್ಟಿಯಾಗಿರುವ ಲಾರಿ
Image Credit source: Tv9 Kannada
Edited By:

Updated on: Apr 19, 2026 | 12:31 PM

ವಿಜಯನಗರ, ಏಪ್ರಿಲ್​​ 19: ಹೊಸಪೇಟೆ ತಾಲೂಕಿನ ಡಾಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸರಣಿ ಅಪಘಾತ ಸಂಭವಿಸಿದೆ. ಬೈಕ್, ಕಾರು, ಬಸ್​ಗೆ ಲಾರಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.  ಸುಜಾತಾ ಮತ್ತು ಹುಲಗಪ್ಪ ಮೃತ ದುರ್ದೈವಿಗಳು. ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿಯ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಆರಂಭದಲ್ಲಿ ನಾಲ್ವರು ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತಾದರೂ, ಮೃತಪಟ್ಟಿರೋದು ಇಬ್ಬರು ಮಾತ್ರ ಎಂದು ಎಸ್ಪಿ ಜಾಹ್ನವಿ ಮಾಹಿತಿ ನೀಡಿದ್ದಾರೆ.

ಸರಣಿ ಅಪಘಾತ ನಡೆದಿದ್ದೇಗೆ?

ಮರಿಯಮ್ಮನಹಳ್ಳಿ, ಹೊಸಪೇಟೆಗೆ ಮಾರ್ಗವಾಗಿ ಬೆಳ್ಳುಳ್ಳಿ ತುಂಬಿದ್ದ ಲಾರಿ ಚಿತ್ರದುರ್ಗಕ್ಕೆ ತೆರಳುತ್ತಿತ್ತು. ತಡವಾಗಿದ್ದ ಕಾರಣ ಟೈಮ್ ಕವರ್ ಮಾಡಲು ಚಾಲಕ ವೇಗವಾಗಿ ಲಾರಿಯನ್ನು ಚಾಲನೆ ಮಾಡುತ್ತಿದ್ದ. ಬಿಎಂಎಂ ಫ್ಯಾಕ್ಟರಿ ಬಳಿ ಎದುರಿಗೆ ಬರುತ್ತಿದ್ದಂತೆ ನಿಯಂತ್ರಣ ತಪ್ಪಿದ ಲಾರಿ ಬೈಕ್​​ಗೆ ಗುದ್ದಿದೆ. ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳಲು ಹೋಗಿ ಮತ್ತೊಂದು ಕಾರು, KSRTC ಬಸ್​​ಗೆ ಲಾರಿಯನ್ನು ಚಾಲಕ ಡಿಕ್ಕಿ ಹೊಡೆಸಿದ್ದಾನೆ. ಅಂತಿಮವಾಗಿ ಬಸ್​​ಗೆ ಗುದ್ದಿದ ರಭಸಕ್ಕೆ ಲಾರಿ ಪಲ್ಟಿಯಾಗಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಆ ಪೈಕಿ ಐವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳಕ್ಕೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ: 6 ಮಂದಿ ಸಜೀವ ದಹನ; ಅಪಘಾತ ಅದೆಷ್ಟು ಭಯಾನಕವಾಗಿದೆ ನೋಡಿ

2 ಕಿ.ಮೀ. ಟ್ರಾಫಿಕ್​​ ಜಾಮ್​​

ಸರಣಿ ಅಪಘಾತದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸುಮಾರು ಎರಡು ಕಿಲೋ ಮೀಟರ್​​ನಷ್ಟು ದೂರದವರೆಗೂ ವಾಹನಗಳು ಸಾಲುಗಟ್ಟಿನಿಂತ ಪರಿಣಾಮ ಭಾರಿ ಟ್ರಾಫಿಕ್​​ ಜಾಮ್​​ ಉಂಟಾಗಿದೆ. ಪೊಲೀಸರು ಸುಗಮ ಸಂಚಾರಕ್ಕೆ ಅನುವುಮಾಡಿಕೊಡುವ ನಿಟ್ಟಿನಲ್ಲಿ ಸಕಲ ಪ್ರಯತ್ನ ನಡೆಸುತ್ತಿದ್ದಾರೆ. ಇನ್ನು ಅಪಘಾತವಾಗಿ ಹೆದ್ದಾರಿ ಪಕ್ಕಕ್ಕೆ ಉರುಳಿದ್ದಿರುವ ಲಾರಿಯನ್ನು ಕ್ರೇನ್​​ ಮೂಲಕ ಮೇಲಕ್ಕೆ ಎತ್ತುವ ಕಾರ್ಯವನ್ನೂ ನಡೆಸಲಾಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:02 am, Sun, 19 April 26

Follow Us