AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಬ್ ಸ್ಫೋಟದಂಥ ಪ್ರಕರಣಗಳಲ್ಲಿ ಸುಲೇಮಾನ್ ಸಿಗಬೇಕೇ ವಿನಹ ಶಿವಪ್ಪ ಸಿಗಲ್ಲ: ಬಸನಗೌಡ ಯತ್ನಾಳ್

ವಿಜಯಪುರದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಶಂಕಿತನ ವಶ, ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಹಂಚಿಕೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದರು. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು. ಯಾತ್ನಾಳ್ ಮಾತಿನ ವಿವರ ಇಲ್ಲಿದೆ.

ಬಾಂಬ್ ಸ್ಫೋಟದಂಥ ಪ್ರಕರಣಗಳಲ್ಲಿ ಸುಲೇಮಾನ್ ಸಿಗಬೇಕೇ ವಿನಹ ಶಿವಪ್ಪ ಸಿಗಲ್ಲ: ಬಸನಗೌಡ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ
ಅಶೋಕ ಯಡಳ್ಳಿ, ವಿಜಯಪುರ
| Updated By: Ganapathi Sharma|

Updated on: Mar 08, 2024 | 1:00 PM

Share

ವಿಜಯಪುರ, ಮಾರ್ಚ್​​ 8: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Bengaluru Rameshwaram cafe blast) ಪ್ರಕರಣ ಸಂಬಂಧ ಸುಲೇಮಾನ್ ಎಂಬಾತನನ್ನು ಎನ್​​ಐಎ ಪೊಲೀಸರು (NIA Police) ವಶಕ್ಕೆ ಪಡೆದ ವಿಚಾರವಾಗಿ ವಿಜಯಪುರ ನಗರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ (Basangouda Patil Yatnal) ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಘಟನೆಗಳಲ್ಲಿ ಸುಲೇಮಾನ್ ಎಂಬ ಹೆಸರಿನ ವ್ಯಕ್ತಿ ಸಿಗಬೇಕೇ ವಿನಹ ಶಿವಪ್ಪ ಎಂಬವರು ಸಿಗಲ್ಲ. ಸುಲೇಮಾನ್, ಅಜಗರ್, ಅಹ್ಮದ್ ಇವರೇ ಸಿಗಬೇಕಲ್ಲಾ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಾಂಬ್ ಸ್ಫೋಟ ಪ್ರಕರಣದ ತನಿಖೆ ಇನ್ನೂ ಆಳವಾಗಿ ನಡೆಯಬೇಕು. ಬಾಂಬ್ ಬ್ಲಾಸ್ಟ್ ಸಾಮಾನ್ಯ ಪ್ರಕರಣವಲ್ಲ. ಈ ಘಟನೆಯ ಗಂಭೀರತೆಯನ್ನು ವಿಧಾನಸಭೆಯಲ್ಲಿ ಹೇಳಿದರೂ ಸರ್ಕಾರ ಒಪ್ಪಲಿಲ್ಲ. ಈ ಘಟನೆ ಕುರಿತು ಕಾಂಗ್ರೆಸ್ಸಿನ ಕೆಲ ಸಚಿವರು ಅಪ್ರಬುದ್ಧ ಹೇಳಿಕೆ ಕೊಟ್ಟಿದ್ದಾರೆ. ಇಂದು ಅವರಿಗೆ ಮುಖವಿಲ್ಲ ಎಂದು ಯತ್ನಾಳ್ ಕುಟುಕಿದ್ದಾರೆ.

ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ

ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಗೃಹ ಮಂತ್ರಿಗಳೇ ಛೀಮಾರಿ ಹಾಕಿದ್ದಾರೆ. ಏನು ಗೊತ್ತಿಲ್ಲದೆ ಮಾಧ್ಯಮಗಳ ಮುಂದೆ ಖರ್ಗೆ ಹೇಳಿಕೆ ಕೊಡುತ್ತಾರೆ. ಖರ್ಗೆ ಅವರು ಇಂಥ ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಬಿಟ್ಟು ಇಲಾಖೆಯಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಲಿ. ಗ್ರಾಮೀಣ ಅಭಿವೃದ್ಧಿ ಇಲಾಖೆ ದೊಡ್ಡ ಇಲಾಖೆ. ಅಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಬರೀ ಹಿಂದೂಗಳನ್ನ ಬೈಯುವ ಕೆಲಸ ಮಾಡುತ್ತಿದ್ದಾರೆಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ಕಲಬುರ್ಗಿಯಲ್ಲಿ ದಿನನಿತ್ಯ ಬಿಜೆಪಿ ಕಾರ್ಯಕರ್ತರ ಕೊಲೆಯಾಗುತ್ತಿದೆ. ಕಾನೂನು ಸುವ್ಯವಸ್ಥೆ ಸರಿಪಡಿಸುವ ಕೆಲಸ ಮಾಡುವುದನ್ನು ಬಿಟ್ಟು ಈ ರೀತಿ ಒಟ್ಟಾರೆ ಹೇಳಿಕೆ ನೀಡುವುದರಿಂದ ಅವರ ಗೌರವ ಕಡಿಮೆಯಾಗುತ್ತದೆ ಎಂದು ಯತ್ನಾಳ್ ಹೇಳಿದ್ದಾರೆ.

ನಡ್ಡಾ ಜತೆ ಮಾತನಾಡಿದ್ದೇನೆ: ಯತ್ನಾಳ್

ಲೋಕಸಭಾ ಚುನಾವಣೆಗಾಗಿ ಬೆಳಗಾವಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ರಾಜ್ಯದ ಮುಖಂಡರ ಸಭೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಭೆಯ ಬಳಿಕ ನಡ್ಡಾ ಅವರು ನನ್ನ ಜೊತೆ 10 ರಿಂದ 15 ನಿಮಿಷ ಮಾತನಾಡಿದರು. ಯಾವುದೇ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡಲ್ಲ ಎಂದು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ನನಗೆ ಪ್ರತ್ಯೇಕವಾಗಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದ ಜವಾಬ್ದಾರಿ ನೀಡಬೇಕೆಂದು ಕೇಳಿದ್ದೇನೆ. 28 ಲೋಕಸಭಾ ಕ್ಷೇತ್ರದಲ್ಲಿ ಓಡಾಡಿ ಪ್ರಚಾರ ಮಾಡುತ್ತೇನೆ. 28 ಕ್ಷೇತ್ರಗಳನ್ನು ಗೆಲ್ಲಲು ಕಾರ್ಯಕರ್ತರು ಮಾಡುತ್ತಿರುವ ಕೆಲಸದಲ್ಲಿ ನಾನು ಜತೆಯಾಗುತ್ತೇನೆ ಎಂದು ಹೇಳಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಯತ್ನಾಳ್​ಗೆ ಮಾಡಲು ಕೆಲಸ ಇಲ್ಲ, ಬಸ್ ನಿಲ್ದಾಣದಲ್ಲಿ ಕುಳಿತು ಜ್ಯೋತಿಷ್ಯ ಹೇಳಲಿ -ಮಧು ಬಂಗಾರಪ್ಪ

ವಿಜಯಪುರ ಲೋಕಸಭಾ ಟಿಕೆಟ್ ಹಂಚಿಕೆ ವಿಚಾರವಾಗಿ ಏನೂ ಮಾಹಿತಿ ಇಲ್ಲ. ಯಾರಿಗೆ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇವೆ. ಕಾರಣ ನಮ್ಮ ದೇಶ ಉಳಿಯಬೇಕಿದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬುದು ಮಾತ್ರ ನಮ್ಮ ಮುಂದಿರುವ ವಿಚಾರ. ಟಿಕೆಟ್ ಯಾರಿಗೆ ಕೊಡುತ್ತಾರೋ ಬಿಡುತ್ತಾರೋ ಎಂಬುದು ನಮಗೆ ಗೊತ್ತಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ