1 ಕೋಟಿ ವಿದ್ಯುತ್​ ಬಿಲ್​ ಬಾಕಿ ಉಳಿಸಿಕೊಂಡ ವಿಶ್ವವಿದ್ಯಾಲಯ: ಕರೆಂಟ್​​​ ಕಟ್ ಆತಂಕ

| Updated By: ವಿವೇಕ ಬಿರಾದಾರ

Updated on: Feb 19, 2024 | 9:48 AM

ಕನ್ನಡ ಸಂಶೋಧನೆಗೆಂದು ಇರುವ ರಾಜ್ಯದ ಏಕೈಕ ವಿಶ್ವವಿದ್ಯಾಲಯಕ್ಕೆ ಮತ್ತೆ ಕಗ್ಗತ್ತಲಿನ ಆತಂಕ ಶುರುವಾಗಿದೆ. ಹೌದು ವಿಜಯನಗರ ಜಿಲ್ಲೆಯಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ​1 ಕೋಟಿ 5 ಲಕ್ಷ 74 ಸಾವಿರ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿ ಕೊಂಡಿದೆ.

1 ಕೋಟಿ ವಿದ್ಯುತ್​ ಬಿಲ್​ ಬಾಕಿ ಉಳಿಸಿಕೊಂಡ ವಿಶ್ವವಿದ್ಯಾಲಯ: ಕರೆಂಟ್​​​ ಕಟ್ ಆತಂಕ
ಹಂಪಿ ವಿಶ್ವವಿದ್ಯಾಲಯಕ್ಕೆ ನೋಟಿಸ್​ ನೀಡಿದ ಜೆಸ್ಕಾಂ
Follow us on

ವಿಜಯನಗರ, ಫೆಬ್ರವರಿ 19: ಹಂಪಿ ಕನ್ನಡ ವಿಶ್ವವಿದ್ಯಾಲಯ (Hampi Kannada University) 1 ಕೋಟಿ 5 ಲಕ್ಷ 74 ಸಾವಿರ ರೂ. ವಿದ್ಯುತ್ ಬಿಲ್ (Current Bill) ಬಾಕಿ ಉಳಿಸಿ ಕೊಂಡಿದ್ದು, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (GESCOM) ನೋಟಿಸ್​ ನೀಡಿದೆ. ವಿದ್ಯುತ್​ ಬಿಲ್​ ಬಾಕಿ ಉಳಿಸಿಕೊಂಡಿದ್ದರಿಂದ, ಜೆಸ್ಕಾಂ ಅಧಿಕಾರಿಗಳು ವಿಶ್ವವಿದ್ಯಾಲಯಕ್ಕೆ ವಿದ್ಯುತ್​ ಸರಬರಾಜು ಅನ್ನು ಸ್ಥಗಿತಗೊಳಿಸಿತ್ತು. ಆದರೆ “ನುಡಿ ಹಬ್ಬ” ಇದ್ದ ಕಾರಣ ವಿದ್ಯುತ್​ ಸರಬರಾಜು ಮಾಡಿ ಎಂದು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಜೆಸ್ಕಾಂಗೆ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಜೆಸ್ಕಾಂ ಮತ್ತೆ ವಿದ್ಯುತ್​ ಸರಬರಾಜು ಆರಂಭಿಸಿದೆ.

ಇದೀಗ ಜೆಸ್ಕಾಂ ಬಾಕಿ ಬಿಲ್ ​ಪಾವತಿಸುವಂತೆ ನೋಟಿಸ್​ ಮೇಲೆ ನೋಟಿಸ್​ ನೀಡುತ್ತಿದೆ. ಜೆಸ್ಕಾಂ ನೋಟಿಸ್ ನೀಡಿದರು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಮತ್ತು ಉನ್ನತ ಶಿಕ್ಷಣ ಇಲಾಖೆ ಕ್ಯಾರೆ ಎನ್ನುತ್ತಿಲ್ಲ.​ ಹೀಗಾಗಿ ಜೆಸ್ಕಾಂ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ವಿದ್ಯುತ್​ ಸರಬಾರಜು ಸ್ಥಗಿತಗೊಳಿಸುವ ಸಾಧ್ಯತೆ ಇದೆ.

ಇನ್ನು ವಿಜಯನಗರ ಜಿಲ್ಲೆ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಇತ್ತೀಚಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ತಿಂಗಳೊಳಗೆ ಸಮಸ್ಯೆ ಬಗೆಹರಿಸುವುದಾಗ ಭರವಸೆ ನೀಡಿದೆ. ಆದರೆ ಸಚಿವ ಜಮೀರ್ ಬಂದೋಗಿ 15 ದಿನ ಕಳೆದರು ಬಾಕಿ ಬಿಲ್ ಇನ್ನೂ ಪಾವತಿಯಾಗಿಲ್ಲ. ಹೀಗಾಗಿ ಜೆಸ್ಕಾಂ ನೋಟೀಸ್ ಜಾರಿಮಾಡಿದೆ.

ಇದನ್ನೂ ಓದಿ: ಹಂಪಿ‌ ವಿಶ್ವವಿದ್ಯಾಲಯದಲ್ಲಿ ಜಕಣಾಚಾರಿ ಅಧ್ಯಯನ ಪೀಠ ಸ್ಥಾಪನೆ: ಸಿದ್ದರಾಮಯ್ಯ ಭರವಸೆ

2019 ರಿಂದ ಈವರೆಗೂ ಕನ್ನಡ ವಿವಿಗೆ 1.74 ಕೋಟಿ ರೂ. ಕರೆಂಟ್ ಬಿಲ್ ಬಂದಿದೆ. ಈ ಪೈಕಿ 40 ಲಕ್ಷ ರೂ. ಬಿಲ್ ಮಾತ್ರ ಪಾವತಿಸಲಾಗಿದೆ. 15 ದಿನಗಳ ಹಿಂದಷ್ಟೇ ವಿವಿಯ ವಿದ್ಯುತ್ ಸಂಪರ್ಕ ಬಂದ್ ಮಾಡಲಾಗಿತ್ತು. ಮತ್ತೆ ವಿದ್ಯುತ್ ಸಂಪರ್ಕ ಕಡಿತ ಮಾಡುವ ನೋಟಿಸ್ ಬಂದಿದೆ.

ಸರ್ಕಾರಕ್ಕೆ ಪತ್ರ ಬರೆದ ಕುಲಪತಿ

ಜೆಸ್ಕಾಂಗೆ ವಿದ್ಯುತ್ ಬಿಲ್ ವಿನಾಯಿತಿ ಕೋರಿ ಕುಲಪತಿ ಡಾ. ಪರಮಶಿವಮೂರ್ತಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಬಿಲ್ ವಿನಾಯತಿ ಕುರಿತು ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬದಲಾಗಿ ವಿಶ್ವವಿದ್ಯಾಲಯ ಬರೆದ ಪತ್ರವನ್ನೇ ಸರ್ಕಾರಕ್ಕೆ ಜೆಸ್ಕಾಂ ಇಲಾಖೆಯು ಶಿಫಾರಸು ಮಾಡಿದೆ. ವಿದ್ಯುತ್ ವಿನಾಯಿತಿ ಮಾಡಲು ಸಾಧ್ಯವೆ ಇಲ್ಲ ಅಂತ ಜೆಸ್ಕಾಂ ಅಧಿಕಾರಿಗಳು ವಿಶ್ವವಿದ್ಯಾಲಯದ ಕುಲಪತಿಗಳಿಗೆ ತಿಳಿಸಿದ್ದಾರೆ. ಇದಷ್ಟೆ ಅಲ್ಲದೆ ವಿಶ್ವವಿದ್ಯಾಲಯದ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಜೆಸ್ಕಾಂ ಎಚ್ಚರಿಕೆ ನೀಡಿದ್ದರು. ಸರ್ಕಾರ ಬೇಗ ಅನುದಾನ ಬಿಡುಗಡೆ ಮಾಡಬೇಕು ಅಂತಾ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ