ಹರಿಹರ ಪೀಠದ ಸ್ವಾಮೀಜಿ ಬೆನ್ನು ಹತ್ತಿದರೆ ಸಿಎಂ ಬೊಮ್ಮಾಯಿ ಕೂಡ ಸೋಲು ಕಾಣಬೇಕಾಗುತ್ತದೆ: ಯತ್ನಾಳ್ ಹೇಳಿಕೆ

ಶಿಗ್ಗಾಂವಿ ಕ್ಷೇತ್ರದಲ್ಲಿ 50 ಸಾವಿರ ಮತದಾರರು ಪಂಚಮಸಾಲಿ ಸಮುದಾಯದವರಿದ್ದೇವೆ. ಆ ಸ್ವಾಮಿಯ ಬೆನ್ನು ಹತ್ತಿದರೆ ನಿಮಗೆ ಸೋಲು ಕಾಣಬೇಕಾಗುತ್ತದೆ ಎಂದು ಪರೋಕ್ಷವಾಗಿ ಹರಿಹರ ಪೀಠದ ಸ್ವಾಮೀಜಿ ಬೆನ್ನು ಹತ್ತಬಾರದೆಂದು‌ ಯತ್ನಾಳ್ ಹೇಳಿದ್ದಾರೆ.

ಹರಿಹರ ಪೀಠದ ಸ್ವಾಮೀಜಿ ಬೆನ್ನು ಹತ್ತಿದರೆ ಸಿಎಂ ಬೊಮ್ಮಾಯಿ ಕೂಡ ಸೋಲು ಕಾಣಬೇಕಾಗುತ್ತದೆ: ಯತ್ನಾಳ್ ಹೇಳಿಕೆ
ಬಸನಗೌಡ ಪಾಟೀಲ್ ಯತ್ನಾಳ್ (ಸಂಗ್ರಹ ಚಿತ್ರ)
Follow us
| Updated By: ganapathi bhat

Updated on:Apr 10, 2022 | 10:41 PM

ವಿಜಯಪುರ: ಹುಚ್ಚು ಸ್ವಾಮಿ ಬೆನ್ನು ಹತ್ತಿದರೆ ಶಿಗ್ಗಾಂವಿನಲ್ಲಿ ಸಿಎಂ ಉಲ್ಟಾ ಹೊಡಿತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ಕೊಟ್ಟಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಸಿಎಂ ಬೊಮ್ಮಾಯಿಗೆ ಯತ್ನಾಳ್ ಒತ್ತಾಯಿಸಿದ್ದಾರೆ. ಚಡಚಣ ತಾಲೂಕಿನ ಇಂಚಗೇರಿ ಗ್ರಾಮದಲ್ಲಿ ನಡೆದ ಪಂಚಮಸಾಲಿ ಮೀಸಲಾತಿಗಾಗಿ ನಡೆದ ಹಕ್ಕೊತ್ತಾಯ ಸಮಾವೇಶದಲ್ಲಿ ಯತ್ನಾಳ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಗಳೇ ಶಿಗ್ಗಾಂವಿ ಕ್ಷೇತ್ರದಲ್ಲಿ 50 ಸಾವಿರ ಮತದಾರರು ಪಂಚಮಸಾಲಿ ಸಮುದಾಯದವರಿದ್ದೇವೆ. ಆ ಸ್ವಾಮಿಯ ಬೆನ್ನು ಹತ್ತಿದರೆ ನಿಮಗೆ ಸೋಲು ಕಾಣಬೇಕಾಗುತ್ತದೆ ಎಂದು ಪರೋಕ್ಷವಾಗಿ ಹರಿಹರ ಪೀಠದ ಸ್ವಾಮೀಜಿ ಬೆನ್ನು ಹತ್ತಬಾರದೆಂದು‌ ಯತ್ನಾಳ್ ಹೇಳಿದ್ದಾರೆ.

ಕೆಲವರು ನಮ್ಮ ಸಮಾಜವನ್ನು ಒಡೆಯಲು ಮುಂದಾಗಿದ್ದರು. ಸಮಾಜ ಒಡೆಯಲು ಮುಂದಾದವರಿಗೆ ಎಲ್ಲವೂ ಅರ್ಥ ಆಗಿದೆ. ಇವತ್ತು ಪಂಚಮಸಾಲಿ ಮೂರನೇ ಪೀಠದ ಕಥೆ ಏನಾಗಿದೆ? ಜಯಮೃತ್ಯುಂಜಯ ಸ್ವಾಮೀಜಿ ಸಮಾಜವನ್ನು ಒಗ್ಗೂಡಿಸಿದ್ದಾರೆ. ನಮ್ಮ ಮೀಸಲಾತಿ ಹೋರಾಟ ಪ್ರಾಮಾಣಿಕವಾಗಿ ನಡೆಯುತ್ತಿದೆ. ಸ್ವಾಮೀಜಿಗಳು ನಮ್ಮ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಮೇಲೆ ಸಂಶಯ ಪಡಬೇಡಿ, ಆರೋಪ ಬರುವುದು ಸಹಜ. ಆರೋಪ ಮಾಡುವುದನ್ನು ಈ ದೇಶದಲ್ಲಿ ಯಾರನ್ನೂ ಬಿಟ್ಟಿಲ್ಲ ಎಂದು ಇಂಚಗೇರಿ ಗ್ರಾಮದಲ್ಲಿ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ನಮ್ಮ ಮೀಸಲಾತಿ ಹೋರಾಟದಿಂದಾಗಿ ಹಲವು ಬದಲಾವಣೆ ಆಗಿದೆ. ಬೇರೆ ಬೇರೆ ಸಮಾಜದಲ್ಲೂ ಮೀಸಲಾತಿ ಬಗ್ಗೆ ಚರ್ಚೆ ನಡೆದಿದೆ. ಮೀಸಲಾತಿ ಬದಲಾವಣೆ ಬಗ್ಗೆ ಸಮಾಜದಲ್ಲಿ ಚರ್ಚೆ ನಡೀತಿದೆ. ನಾವು ಕೇವಲ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೇಳಿಲ್ಲ. ಎಲ್ಲ ಸಮುದಾಯಕ್ಕೂ ಮೀಸಲಾತಿ ಕೇಳಿದ್ದೇವೆ. ಕೂಡಲಸಂಗಮಶ್ರೀಗಳು ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ. ಶ್ರೀಗಳು ಹೊಂದಾಣಿಕೆ ಆದರೆ ಇವತ್ತೇ ಸಿಎಂ 10 ಕೋಟಿ ಕೊಡ್ತಾರೆ. ಆದರೆ ಕೂಡಲಸಂಗಮ ಸ್ವಾಮೀಜಿ ಆಮಿಷಕ್ಕೆ ಒಳಗಾದವರಲ್ಲ. ಜಯಮೃತ್ಯುಂಜಯಶ್ರೀ ನ್ಯಾಯಪರ ಹೋರಾಟ ಮಾಡುತ್ತಿದ್ದಾರೆ. ಕೆಲವು ಸ್ವಾಮೀಜಿಗಳು ನಾಟಕೀಯವಾಗಿ ಹೋರಾಟದಲ್ಲಿ ಭಾಗಿ ಆಗಿದ್ದಾರೆ. ಪಾದಯಾತ್ರೆಯಲ್ಲಿ ಬಂದು ಸ್ವಾಮೀಜಿಗಳು ನಾಟಕ ಮಾಡಿದರು. ಯಾರನ್ನೋ ಮಂತ್ರಿ ಮಾಡುವ ಸಲುವಾಗಿ ನಾಟಕ ಮಾಡಿದರು. ಪಾದಯಾತ್ರೆ ವೇಳೆ ಕತ್ತಲಾಗುತ್ತಿದ್ದಂತೆಯೇ ಕಾರಿನಲ್ಲಿ ಕೂಡುತ್ತಿದ್ದರು ಎಂದು ಶಾಸಕ ಬಸನಗೌಡ ಯತ್ನಾಳ್ ಟೀಕಿಸಿದ್ದಾರೆ.

ಪಂಚಮಸಾಲಿ 2ಎ ಮೀಸಲಾತಿ, ಎಸ್​ಟಿ ಮೀಸಲಾತಿ ಹಾಗೂ ಇತರೇ ಸಮಾಜದ ಮೀಸಲಾತಿ ಶೀಘ್ರದಲ್ಲೇ ನೀಡಲಾಗುತ್ತದೆ ಎಂದು ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಸರ್ವಪಕ್ಷ ಸಭೆ ಕರೆದು ನಿರ್ಣಯ ಮಾಡುವುದಾಗಿ ಹೇಳಿದ್ದಾರೆ. ಇನ್ನೊಂದು ತಿಂಗಳಲ್ಲಿ ಎಸ್​ಟಿ ಮೀಸಲಾತಿ ಹೆಚ್ಚಳ ಜೊತೆಗೆ ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ಸಿಎಂ ನಿರ್ಧರಿಸುತ್ತಾರೆ ಎಂದೂ ಈ ವೇಳೆ ಯತ್ನಾಳ್ ಮಾಹಿತಿ ನೀಡಿದ್ದಾರೆ.

ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರ ನಿರ್ಣಯವೇ ಅಂತಿಮ. ಹೈಕಮಾಂಡ್​ ಏನು ನಿರ್ಣಯ ಮಾಡುತ್ತಾರೋ ಗೊತ್ತಿಲ್ಲ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡ್ತಾರೋ ಗೊತ್ತಿಲ್ಲ. ಕೇಂದ್ರದಿಂದ ಯಾವುದೇ ಸ್ಪಷ್ಟವಾದ ಸಂದೇಶ ಬಂದಿಲ್ಲ. ನಾವು ಏನೇ ಮಾತಾಡಿದ್ರೂ ಅದು ಊಹಾಪೋಹ ಆಗುತ್ತೆ. ಒಟ್ಟಾರೆ ಕಾರ್ಯಕಾರಿಣಿ ನಂತರ ಒಳ್ಳೇ ಬೆಳವಣಿಗೆ ಆಗುತ್ತೆ. ವೈಯಕ್ತಿಕ, ಕಾರ್ಯಕಾರಿಣಿ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದೆ. ಮಂತ್ರಿಯಾಗಲು ಲಾಬಿ‌ ಮಾಡಲು ದೆಹಲಿಗೆ ಹೋಗಿರಲಿಲ್ಲ ಎಂದು ಸಂಪುಟ ಪುನಾರಚನೆ ಬಗ್ಗೆ ಯತ್ನಾಳ್ ಮಾತನಾಡಿದ್ದಾರೆ.

ಇದನ್ನೂ ಓದಿ: ನಾವೊಬ್ಬರೇ ತೈಲ ಬೆಲೆ ಇಳಿಕೆ ಮಾಡೋಕೆ ಆಗಲ್ಲ, ಆದ್ರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಯೋಚಿಸ್ತೇವೆ -ಸಿಎಂ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಸಿಕ್ಕಿಲ್ಲ ಹಸಿರು ನಿಶಾನೆ, ಅದರೆ ತಮ್ಮ ದೆಹಲಿ ಭೇಟಿ ಫಲಪ್ರದ ಎನ್ನುತ್ತಾರೆ ಮುಖ್ಯಮಂತ್ರಿ ಬೊಮ್ಮಾಯಿ

Published On - 4:18 pm, Sun, 10 April 22