ಪ್ರಶ್ನೆ ಪತ್ರಿಕೆ, OMR ಸೀಟ್ ನಂಬರ್ ಮಿಸ್ ಮ್ಯಾಚ್: ಗೊಂದಲಗಳಿಗೆ ಡಿಸಿ ತೆರೆ

Police Constable Exam: ಪೊಲೀಸ್​​ ಕಾನ್ಸ್‌ಟೇಬಲ್​ ನೇಮಕಾತಿ ಪ್ರವೇಶ ಪರೀಕ್ಷೆ ವೇಳೆ ಗೊಂದಲ ಉಂಟಾಗಿದ್ದು, ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯುವುದಿಲ್ಲ ಎಂದು ಹೊರಬಂದಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟ ಪಟ್ಟಣದ ಶಾರದಾಂಬಾ ಶಿಕ್ಷಣ ಸಂಸ್ಥೆಯ ಪರೀಕ್ಣಾ ಕೇಂದ್ರದಲ್ಲಿ ನಡೆದಿದೆ. ಈ ಘಟನೆ ಬಗ್ಗೆ ಜಿಲ್ಲಾಧಿಕಾರಿ ಆನಂದ್ ಕೆ ಸ್ಪಷ್ಟನೆ ಕೂಡ ನೀಡಿದ್ದಾರೆ.

ಪ್ರಶ್ನೆ ಪತ್ರಿಕೆ, OMR ಸೀಟ್ ನಂಬರ್ ಮಿಸ್ ಮ್ಯಾಚ್: ಗೊಂದಲಗಳಿಗೆ ಡಿಸಿ ತೆರೆ
ಪೊಲೀಸ್​​ ಕಾನ್ಸ್‌ಟೇಬಲ್​ ನೇಮಕಾತಿ ಪರೀಕ್ಷೆ
Image Credit source: tv9 kannada
Edited By:

Updated on: Aug 02, 2026 | 5:40 PM

ಮುಖ್ಯಾಂಶಗಳು

  • ಪೊಲೀಸ್​​ ಕಾನ್ಸ್‌ಟೇಬಲ್​ ನೇಮಕಾತಿ ಪರೀಕ್ಷೆ ವೇಳೆ ಗೊಂದಲ
  • ವಿಜಯಪುರ ಜಿಲ್ಲೆಯ ತಿಕೋಟ ಪಟ್ಟಣದ ಶಾರದಾಂಬಾ ಶಿಕ್ಷಣ ಸಂಸ್ಥೆಯಲ್ಲಿ ಘಟನೆ
  • ಗೊಂದಲಗಳಿಗೆ ತೆರೆ ಎಳೆದ ಜಿಲ್ಲಾಧಿಕಾರಿ ಆನಂದ್​ ಕೆ

ವಿಜಯಪುರ, ಆಗಸ್ಟ್​​ 02: ರಾಜ್ಯದಲ್ಲಿ ಇಂದು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ (Police Constable Recruitment) ಲಿಖಿತ ಪರೀಕ್ಷೆ ನಡೆಯಿತು. ಆದರೆ ಇತ್ತ ಜಿಲ್ಲೆಯಲ್ಲಿ ಪರೀಕ್ಷೆ ವೇಳೆ ಗೊಂದಲ ಉಂಟಾಗಿದೆ. ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್​ ಶೀಟ್ ನೀಡುವುದು ವಿಳಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ ಸೀರಿಯಲ್ ನಂಬರ್ ಹೊಂದಾಣಿಕೆ ಆಗಿಲ್ಲ ಎನ್ನಲಾಗಿದೆ. ಹೀಗಾಗಿ ಪರೀಕ್ಷಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ ಘಟನೆ ಜಿಲ್ಲೆಯ ತಿಕೋಟ ಪಟ್ಟಣದ ಶಾರದಾಂಬಾ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

ನಡೆದಿದ್ದೇನು? 

ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್​ ಶೀಟ್ ನೀಡಲು ವಿಳಂಬ ಮಾಡಲಾಗಿದೆ ಮತ್ತು ಅವುಗಳ ಸೀರಿಯಲ್ ನಂಬರ್ ಪರಸ್ಪರ ತಾಳೆಯಾಗುತ್ತಿಲ್ಲ ಎಂದು ಆರೋಪಿಸಿದ ಪರೀಕ್ಷಾರ್ಥಿಗಳು, ಪರೀಕ್ಷಾ ಕೇಂದ್ರದ ಹೊರಗೆ ಬಂದು ಪ್ರತಿಭಟಿಸಿದರು. ಓಎಂಆರ್ ಶೀಟ್ ಹಾಗೂ ಪ್ರಶ್ನೆ ಪತ್ರಿಕೆಗಳ ಸಮೇತವೇ ಕ್ಯಾಂಪಸ್‌ನಿಂದ ಹೊರಬಂದು ಗದ್ದಲ ಸೃಷ್ಟಿಸಿದರು. ಹೀಗಾಗಿ ಕೆಲಕಾಲ ಗೊಂದಲ ಉಂಟಾಗಿತ್ತು.

ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ಶೀಟ್​​ಗೆ ಒಂದೇ ನಂಬರ್ ಇರಬೇಕೆಂದಿಲ್ಲ: ಡಿಸಿ ಆನಂದ ಕೆ

ಘಟನೆ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಆನಂದ ಕೆ. ‘ಪರೀಕ್ಷಾ ಕೇಂದ್ರಕ್ಕೆ ಓಎಂಆರ್ ಶೀಟ್ ಹಾಗೂ ಪ್ರಶ್ನೆ ಪತ್ರಿಕೆಗಳನ್ನು ಸರಿಯಾದ ಸಮಯಕ್ಕೇ ತರಲಾಗಿತ್ತು. ನಿಯಮದಂತೆ ಪರೀಕ್ಷಾರ್ಥಿಗಳ ಸಮ್ಮುಖದಲ್ಲೇ ಅವುಗಳನ್ನು ತೆರೆಯಲಾಗಿದೆ. ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ಶೀಟ್‌ಗಳ ಸೀರಿಯಲ್ ನಂಬರ್ ಒಂದೇ ಇರಬೇಕು ಎಂಬ ನಿಯಮವಿಲ್ಲ. ಓಎಂಆರ್ ಶೀಟ್ ಮೇಲೆ ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ನಮೂದಿಸಿ ಪರೀಕ್ಷೆ ಮುಂದುವರಿಸಲು ಅವಕಾಶವಿತ್ತು. ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್ ಶೀಟ್‌ಗೆ ಯಾವುದೇ ಟ್ಯಾಗಿಂಗ್ ಅಥವಾ ಬೈಂಡಿಂಗ್ ಇರುವುದಿಲ್ಲ’ ಎಂದು ಅವರು ವಿವರಿಸಿದರು.

ಪರೀಕ್ಷಾ ಕೇಂದ್ರದಿಂದ ಹೊರಬಂದ ಅಭ್ಯರ್ಥಿಗಳು 

‘ಪರೀಕ್ಷಾ ಕೇಂದ್ರದ ಮುಖ್ಯಸ್ಥರು ತಿಳಿಹೇಳಿದಾಗ್ಯೂ ಕೆಲ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದಿಲ್ಲ ಎಂದು ಕ್ಯಾಂಪಸ್‌ನಿಂದ ಹೊರಗೆ ಬಂದಿದ್ದಾರೆ. ನಿಯಮದ ಪ್ರಕಾರ ಲಾಸ್ಟ್ ಬೆಲ್ ಆಗುವವರೆಗೆ ಯಾರೂ ಹೊರಗೆ ಬರುವಂತಿಲ್ಲ. ಒಮ್ಮೆ ಪರೀಕ್ಷಾ ಕೊಠಡಿಯಿಂದ ಹೊರಹೋದ ಅಭ್ಯರ್ಥಿಗಳನ್ನು ಮತ್ತೆ ಒಳ ಹೋಗುವುದು ಪರೀಕ್ಷಾ ಕಾನೂನಿಗೆ ವಿರುದ್ಧವಾದದ್ದು. ಆದರೆ, ಓಎಂಆರ್ ಶೀಟ್ ಹಾಗೂ ಪ್ರಶ್ನೆ ಪತ್ರಿಕೆಗಳೊಂದಿಗೆ ಹೊರಹೋದ ಅಭ್ಯರ್ಥಿಗಳು ಕೆಲ ಸಮಯದ ಬಳಿಕ ಮತ್ತೆ ಪರೀಕ್ಷೆ ಬರೆಯಲು ಒಳಗೆ ಹೋಗಬೇಕೆಂದು ಪಟ್ಟು ಹಿಡಿದಿದ್ದರು’ ಎಂದಿದ್ದಾರೆ.

ಇದನ್ನೂ ಓದಿ: ಕೈಯಲ್ಲಿ ಕೂಸು, ಕಣ್ಣಲ್ಲಿ ಸರ್ಕಾರಿ ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು

ಇನ್ನು ಇಷ್ಟೆಲ್ಲಾ ಗೊಂದಲಗಳ ನಡುವೆಯೂ ಕೇಂದ್ರದಲ್ಲಿ 115ಕ್ಕೂ ಅಧಿಕ ಅಭ್ಯರ್ಥಿಗಳು ಶಾಂತಿಯುತವಾಗಿ ಪರೀಕ್ಷೆ ಬರೆದಿದ್ದಾರೆ. ಇಡೀ ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದರ ಸಂಪೂರ್ಣ ವರದಿಯನ್ನು ಪರೀಕ್ಷಾ ಮಂಡಳಿಗೆ ಸಲ್ಲಿಸಲಾಗುವುದು ಎಂದು ಡಿಸಿ ಆನಂದ ಕೆ ತಿಳಿಸಿದ್ದಾರೆ.

Police Constable Exam: ಪೊಲೀಸ್ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಗೊಂದಲ.. ಜಿಲ್ಲಾಧಿಕಾರಿ ಶಾಕಿಂಗ್ ರಿಯಾಕ್ಷನ್‌
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:31 pm, Sun, 2 August 26

Loading...
Unable to load recommendations.
Follow Us