
ವಿಜಯಪುರ, ಏಪ್ರಿಲ್ 08: ಕೆರೆಯಲ್ಲಿ ಮುಳುಗಿ ಬೆಂಗಳೂರು ಮೂಲದ ಮೂವರು ಸಾವನ್ನಪ್ಪಿರುವಂತಹ (death) ಘಟನೆ ವಿಜಯಪುರದ ಐತಿಹಾಸಿಕ ಭೂತನಾಳ ಕೆರೆಯಲ್ಲಿ ನಡೆದಿದೆ. ಮೊಹಮ್ಮದ್ ಹಯಾತ್(12), ಹೈದರ್ ಪಾಷಾ(32) ಮತ್ತು ಅಬ್ದುಲ್ ಖುದ್ದೂಸ್(35) ಮೃತರು. ಸದ್ಯ ಕೆರೆಯಿಂದ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕುಟುಂಬ ಸಮೇತ ಒಟ್ಟು 14 ಜನರು ವಿಜಯಪುರಕ್ಕೆ ಪ್ರವಾಸಕ್ಕಾಗಿ ಆಗಮಿಸಿ ಭೂತನಾಳ ಕೆರೆಯ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಬಾಲಕ ಮಹಮ್ಮದ್ ಹಯಾತ್ ನೀರಿಗೆ ಇಳಿದಾಗ ಆಕಸ್ಮಿಕವಾಗಿ ಮುಳುಗಿದ್ದಾನೆ. ಬಾಲಕನನ್ನು ರಕ್ಷಿಸಲು ಹೈದರ್ ಪಾಶಾ ಹಾಗೂ ಅಬ್ದುಲ್ ಖುದ್ದುಸ್ ನೀರಿಗೆ ಇಳಿದಾಗ ಮೂವರು ಮುಳುಗಿ ಅನಾಹುತ ಸಂಭವಿಸಿದೆ.
ಇದನ್ನೂ ಓದಿ: ಸ್ನೇಹಿತನ ಮನೆಗೆ ಊಟಕ್ಕೆ ಬಂದಿದ್ದ ಗೆಳೆಯರು ಸಾವು: ದೇವರಿಗೆ ಹರಕೆ ತೀರಿಸಲು ಹೋಗಿದ್ದ ಮತ್ತಿಬ್ಬರು ನದಿ ಪಾಲು
ಬಾಲಕ ಮೊಹಮ್ಮದ್ ಹಯಾತ್ ಮತ್ತು ಹೈದರ್ ಕೆರೆಯಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಅಬ್ದುಲ್ ಖುದ್ದೂಸ್ ಸಾವನ್ನಪ್ಪಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಯಾಗಿ ಮೃತದೇಹಗಳನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆರೆಯಲ್ಲಿ ಈಜಾಡಲು ಹೋಗಿ ಇಬ್ಬರು ಕ್ಯಾಬ್ ಚಾಲಕರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ರಾಮಸಮುದ್ರ ಕೆರೆಯಲ್ಲಿ ಇತ್ತೀಚೆಗೆ ನಡೆದಿತ್ತು. ಬೆಂಗಳೂರು ಮೂಲದ ಕಿಶೋರ್ ಹಾಗೂ ಗಿರೀಶ್ ಮೃತರು. ಕಿಶೋರ್ ಹಾಗೂ ಗಿರೀಶ್ ಸೇರಿದಂತೆ 8 ಜನ ಸ್ನೇಹಿತರು, ತಮ್ಮ ಎರಡು ಕಾರುಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗಡಿಮಿಂಚೇನಹಳ್ಳಿ ಗ್ರಾಮದ ಸ್ನೇಹಿತ ಜಗದೀಶ ಮನೆಗೆ ಜಾತ್ರೆಗೆ ಬಂದಿದ್ದರು.
ಇದನ್ನೂ ಓದಿ: ಮಕ್ಕಳ ಪಾಲಿಗೆ ಮೃತ್ಯುಕೂಪವಾದ ಕೃಷಿಹೊಂಡ: ಈಜಲು ಹೋದ ನಾಲ್ವರು ಜಲಸಮಾಧಿ
ಜಾತ್ರೆಗೆ ಬಂದದವರು, ಕೆರೆಯಲ್ಲಿ ಈಜಾಡಲು ತೆರಳಿದ್ದ ವೇಳೆ ದುರಂತ ಸಂಭವಿಸಿದೆ. ಇಬ್ಬರ ಮೃತದೇಹಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಪೇರೆಸಂದ್ರ ಹಾಗೂ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.