Vijayapura News: ಬೈಕ್​ಗೆ ಡಿಕ್ಕಿ ಹೊಡೆದ ಟಿಪ್ಪರ್: ಸ್ಥಳದಲ್ಲೇ ಅತ್ತೆ, ಅಳಿಯ ಸಾವು, ಮಕ್ಕಳಿಬ್ಬರಿಗೆ ಗಾಯ

|

Updated on: May 25, 2023 | 11:04 PM

ಬೈಕ್​ಗೆ ಟಿಪ್ಪರ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಅತ್ತೆ ಹಾಗೂ ಅಳಿಯ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

Vijayapura News: ಬೈಕ್​ಗೆ ಡಿಕ್ಕಿ ಹೊಡೆದ ಟಿಪ್ಪರ್: ಸ್ಥಳದಲ್ಲೇ ಅತ್ತೆ, ಅಳಿಯ ಸಾವು, ಮಕ್ಕಳಿಬ್ಬರಿಗೆ ಗಾಯ
ಪ್ರಾತಿನಿಧಿಕ ಚಿತ್ರ
Follow us on

ವಿಜಯಪುರ: ಬೈಕ್​ಗೆ ಟಿಪ್ಪರ್​ ಡಿಕ್ಕಿ (accident) ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಅತ್ತೆ ಹಾಗೂ ಅಳಿಯ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಮುದ್ನಾಳ ಗ್ರಾಮದ ಶರಣಮ್ಮ ಕಂಬಳಿ, ನಾಗೇಶ್ ಶಿವಪುರ ಮೃತರು. ಇಬ್ಬರು ಮಕ್ಕಳಿಗೆ ಗಂಭೀರ ಗಾಯವಾಗಿದ್ದು, ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮುದ್ದೇಬಿಹಾಳದಿಂದ ಮುದ್ನಾಳ ಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಘಟನೆ ಬಳಿಕ ಟಿಪ್ಪರ್ ವಾಹನ ಸಮೇತ ಚಾಲಕ ಪರಾರಿಯಾಗಿದ್ದು, ಬೆನ್ನಟ್ಟಿ ಟಿಪ್ಪರ್ ವಾಹನದ ಚಾಲಕನನ್ನು ಸ್ಥಳೀಯ ನಿವಾಸಿಗಳು ಹಿಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಸಾಗಾಟ: ಇಬ್ಬರ ಬಂಧನ

ಬೀದರ್​: ಮಹಾರಾಷ್ಟ್ರ ಸರ್ಕಾರಿ ಬಸ್​ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್​​ನಿಂದ ಬೀದರ್​​ ಮೂಲಕ ಮಹಾರಾಷ್ಟ್ರಕ್ಕೆ ತೆರಳಿದ್ದ ಬಸ್​​ನಲ್ಲಿ ಸಾಗಾಟ ಮಾಡಲಾಗುತ್ತಿದ್ದ 10 ಲಕ್ಷ ಮೌಲ್ಯದ 10 ಕೆಜಿ ಗಾಂಜಾವನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ‌ಡಿಸಿ ಮೊಹಮ್ಮದ್ ಇಸ್ಮಾಯಿಲ್ ಇನಾಮದಾರ್​ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಬೀದರ್ ತಾಲೂಕಿನ ಬಂಗೂರು‌ ಚೆಕ್​​​ಪೋಸ್ಟ್​​​ನಲ್ಲಿ ಗಾಂಜಾ‌ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Hasan News: ಪಿತ್ರಾರ್ಜಿತ ಆಸ್ತಿಗಾಗಿ ದಾಯಾದಿಗಳ ನಡುವೆ ಗಲಾಟೆ: ಸಿನಿಮೀಯ ರೀತಿಯಲ್ಲಿ ಮಚ್ಚಿನಿಂದ ಹಲ್ಲೆಗೈದ ಆರೋಪ

4ನೇ ಮಹಡಿಯಿಂದ ಜಿಗಿದು ಆರೋಪಿ ಸಾವು

ಬೆಂಗಳೂರು: ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಆರೋಪ ಬೆತ್ತಲೆಯಲ್ಲೇ ಕಟ್ಟಡದ ಮೇಲಿಂದ ಬಿದ್ದು ವ್ಯಕ್ತಿ ಮೃತಪಟ್ಟಿರುವ ಪ್ರಕರಣದ ತನಿಖೆ ಮಾಡಲು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಅಪರಾಧ ಪ್ರಕರಣದ ವಿಚಾರಣೆ ಸಲುವಾಗಿ ನಿನ್ನೆ (ಮೇ 24) ವಶಕ್ಕೆ ಪಡೆಯಲು ಪೊಲೀಸರು ತೆರಳಿದಾಗ ಆರೋಪಿ ಮೊಹಮ್ಮದ್ ಹುಸೇನ್ (31) ಬೆಂಗಳೂರಿನ ಬೇಗೂರು ರಸ್ತೆಯ ಮನೆಯೊಂದರ 3ನೇ ಮಹಡಿಯಿಂದ ಕೆಳಗೆ ಜಿಗಿದು ಮೃತಪಟ್ಟಿದ್ದ.

ಇದೀಗ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಪೊಲೀಸರೇ ತಳ್ಳಿ ಕೊಂದಿದ್ದಾರೆಂದು ಮೃತ ವ್ಯಕ್ತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಹಿನ್ನಲೆ ಸಂಕ್ಷಿಪ್ತವಾದ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ಕಾರೊಂದು ಮಹಿಳೆಗೆ ಡಿಕ್ಕಿ

ಹಾವೇರಿ: ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ಕಾರೊಂದು ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ದುರ್ಮರಣ ಹೊಂದಿದ್ದಾರೆ. ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಪ್ರವಾಸಿ ಮಂದಿರದ ಬಳಿ ಘಟನೆ ನಡೆದಿದೆ. ಕಾರು ಡಿಕ್ಕಿ ಹೊಡೆದ ಧಾರುಣ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅಪಘಾತದ ದೃಶ್ಯ ಎದೆ ಝಲ್ ಎನ್ನಿಸುವಂತಿದೆ.

ಇದನ್ನೂ ಓದಿ: ಅತ್ಯಾಚಾರಿ ಆರೋಪಿಗೆ 20 ವರ್ಷ ಜೈಲು, ಮೃತಳ ಕುಟುಂಬಕ್ಕೆ 9 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಸೂಚನೆ

ಮೃತ ಮಹಿಳೆಯನ್ನು ಕುಂದೂರ ಗ್ರಾಮದ (40) ರತ್ನವ್ವ ಸಂಶಿ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಶಿಗ್ಗಾಂವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಪಘಾತದ ನಂತರ ಪರಾರಿಯಾಗಿರುವ ವಾಹನಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:58 pm, Thu, 25 May 23