ನೀರೆಂದು ಮದ್ಯದಲ್ಲಿ ಆ್ಯಸಿಡ್ ಹಾಕಿಕೊಂಡು ಕುಡಿದು ವ್ಯಕ್ತಿ ಸಾವು: ಬಿಜೆಪಿ ಮುಖಂಡನ ವಿರುದ್ಧ ದೂರು

| Updated By: ಗಂಗಾಧರ​ ಬ. ಸಾಬೋಜಿ

Updated on: Jan 29, 2025 | 9:41 PM

ವಿಜಯಪುರದ ಸಿದ್ದಾರ್ಥ ಬಾರ್‌ನಲ್ಲಿ ನಡೆದ ದುರ್ಘಟನೆಯಲ್ಲಿ 40 ವರ್ಷದ ವ್ಯಕ್ತಿ ಆ್ಯಸಿಡ್​ನ್ನು ನೀರು ಎಂದು ತಿಳಿದು ಕುಡಿದು ಮೃತಪಟ್ಟಿದ್ದಾರೆ. ಬಾರ್‌ನ ನಿರ್ಲಕ್ಷ್ಯದಿಂದಾಗಿ ಟೇಬಲ್ ಮೇಲೆ ಇರಿಸಿದ್ದ ಆ್ಯಸಿಡ್​ನ್ನು ಕುಡಿದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಾರ್ ಮಾಲೀಕ, ಮ್ಯಾನೇಜರ್ ಮತ್ತು ವೇಟರ್ ವಿರುದ್ಧ ದೂರು ದಾಖಲಾಗಿದೆ.

ನೀರೆಂದು ಮದ್ಯದಲ್ಲಿ ಆ್ಯಸಿಡ್ ಹಾಕಿಕೊಂಡು ಕುಡಿದು ವ್ಯಕ್ತಿ ಸಾವು: ಬಿಜೆಪಿ ಮುಖಂಡನ ವಿರುದ್ಧ ದೂರು
ನೀರೆಂದು ಮದ್ಯದಲ್ಲಿ ಆ್ಯಸಿಡ್ ಹಾಕಿಕೊಂಡು ಕುಡಿದು ವ್ಯಕ್ತಿ ಸಾವು: ಬಿಜೆಪಿ ಮುಖಂಡನ ವಿರುದ್ಧ ದೂರು
Follow us on

ವಿಜಯಪುರ, ಜನವರಿ 29: ನೀರೆಂಬು ಭಾವಿಸಿ ಟೇಬಲ್ ಮೇಲಿಟ್ಟಿದ್ದ ಆ್ಯಸಿಡ್​ನ್ನು ಮದ್ಯದಲ್ಲಿ ಹಾಕಿಕೊಂಡು ಕುಡಿದು ಅಸ್ವಸ್ಥನಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿರುವಂತಹ (death) ಘಟನೆ ನಗರದಲ್ಲಿ ನಡೆದಿದೆ. ಮಹಮ್ಮದ ಶಫೀಕ್ ಮನಿಯಾರ್ (40) ಮೃತ ವ್ಯಕ್ತಿ. ಮಹಮ್ಮದ ಸಾವಿಗೆ ಬಾರ್ ಮಾಲೀಕ, ಮ್ಯಾನೇಜರ್ ಹಾಗೂ ವೇಟರ್ ನಿರ್ಲಕ್ಷವೇ ಕಾರಣವೆಂದು ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ವಿಜಯಪುರ ನಗರದ ಎಲ್​ಬಿಎಸ್ ಮಾರುಕಟ್ಟೆ ಮೇಲಿರುವ ಸಿದ್ದಾರ್ಥ್​ ಬಾರ್​ನಲ್ಲಿ ಘಟನೆ ನಡೆದಿತ್ತು. ಮೊಹಮ್ಮದ್ ಪತ್ನಿ ಶಾಹೀದಾಳಿಂದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಬಾರ್ ಮಾಲೀಕ ಹಾಗೂ ಬಿಜೆಪಿ ಮುಖಂಡ ವಿಜುಗೌಡ ಎಸ್​ ಪಾಟೀಲ್​, ಮ್ಯಾನೇಜರ್ ಅಪ್ಪಾಸಾಬ್ ಮಮದಾಪೂರ, ವೇಟರ್ ಆನಂದ ಶಿಂಧೆ ಮೇಲೆ ಬಿಎನ್ಎಸ್ ಕಾಯ್ದೆ 106 (1), 3 (5) ಕಲಂ ಪ್ರಕಾರ ದೂರು ದಾಖಲಿಸಲಾಗಿದೆ. ಬಾರ್ ಟೇಬಲ್ ಮೇಲೆ ನಿರ್ಲಕ್ಷ್ಯದಿಂದ ಆ್ಯಸಿಡ್ ಬಾಟಲ್ ಇಟ್ಟಿದ್ದೇ ಮೊಹಮ್ಮದ ಸಾವಿಗೆ ಕಾರಣವೆಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಡೆದದ್ದೇನು?

ನಿನ್ನೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ಸಿದ್ದಾಸಿದ್ದಾರ್ಥ್ ಬಾರ್​​ಗೆ ತೆರಳಿ ಮದ್ಯ ಸೇವಿಸಿದ್ದ ಮೊಹಮ್ಮದ್, ಕುಡಿಯುತ್ತಲೇ ಹೊಟ್ಟೆಯುರಿ ಎಂದು ಹೇಳಿದಾಗ ನೀರಿನ ಬದಲಾಗಿ ಟೈಲ್ಸ್ ಕ್ಲೀನ್ ಮಾಡುವ ಆ್ಯಸಿಡ್ ಹಾಕಿಕೊಂಡು ಕುಡಿದಿದ್ದೀಯಾ ಎಂದು ವೇಟರ್ ಹೇಳಿದ್ದಾನೆ.

ಬಳಿಕ ಮೊಹಮ್ಮದನನ್ನು ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೊಹಮ್ಮದ ಮೃತಪಟ್ಟಿದ್ದಾರೆ. ಇನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಮೊಹಮ್ಮದ ಶವ ತಂದು ಪ್ರತಿಭಟನೆ ಮಾಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಎಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್​​ಪಿ ಬಸವರಾಜ ಯಲಿಗಾರ ಘಟನೆ ಕುರಿತು ದೂರು ದಾಖಲು ಮಾಡಲಾಗಿದೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: 500 ರೂ ಕದ್ದಿದ್ದಾನೆಂದು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಕಿಡ್ನ್ಯಾಪ್: ಕಂಬಕ್ಕೆ ಕಟ್ಟಿ ಥಳಿತ

ಭರವಸೆ ಬೆನ್ನಲ್ಲೇ ಪ್ರತಿಭಟನೆ ಮೊಟಕುಗೊಳಿಸಬೇಕೆಂದ ಅಧಿಕಾರಿಗಳು, ನಂತರ ಮೊಹಮ್ಮದ ಶವವನ್ನು ಸಂಬಂಧಿಕರು ಹಾಗೂ ಜನರು ತೆಗೆದುಕೊಂಡು ಹೋಗಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.