
ವಿಜಯಪುರ, ಜನವರಿ 23: ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ವಿಜಯಪುರ ಗ್ರಾಮೀಣ ಪೊಲೀಸರು ಅಂತರ್ ಜಿಲ್ಲೆ ಮತ್ತು ಅಂತಾರಾಜ್ಯ ಕಳ್ಳರು, ಖದೀಮರು ಸೇರಿ ಒಟ್ಟು 14 ಮಂದಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳಿಂದ ನಗದು, ಚಿನ್ನಾಭರಣ ಮತ್ತು ವಾಹನಗಳು ಸೇರಿ 1.17 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಖಾಕಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜಪ್ತಿ ಮಾಡಿದ ಹಣ ಮತ್ತು ಚಿನ್ನವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
2025ರ ಮೇ 30ರಂದು ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯ ಬ್ಯಾಗ್ನಲ್ಲಿದ್ದ 65 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಗ್ಯಾಂಗ್ನ ಪತ್ತೆ ಮಾಡಿರುವ ಪೊಲೀಸರು, ಪ್ರಕರಣ ಸಂಬಂಧ ಕಲಬುರಗಿಯ ಪ್ರಶಾಂತ, ಆತನ ಪತ್ನಿ ಮಂಜುಳಾ, ಮಹಾರಾಷ್ಟ್ರದ ಅಂಕುಶ ಜಾಧವ್, ಗೋವರ್ಧನ ಪವಾರ, ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಶಿವು ಹಾಗೂ ಆತನ ಪತ್ನಿ ರಜನಿಯನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಇನ್ನು ನಕಲಿ ಚಿನ್ನದ ನಾಣ್ಯಗಳನ್ನು ಅಸಲಿ ಎಂದು ನಂಬಿಸಿ ಮಹಾರಾಷ್ಟ್ರದ ಲಾತೂರ್ ಮೂಲದ ರಾಜಕುಮಾರ ಕುಂಡರಗಿ ಎಂಬುವವರಿಗೆ ಮಾರಾಟ ಮಾಡಿದ ಆರೋಪದ ಮೇಲೆ ವಿಜಯನಗರ ಜಿಲ್ಲೆಯ ಮೂಲದ ಹಣಮಂತ ಕೊರಚರ, ರಾಜಾ ಕಾವಾಡಿ, ಹರೀಶ ಕೊರಚರ ಹಾಗೂ ಚಿರಂಜಿವಿ ಕೊರಚರ ಎಂಬ ನಾಲ್ವರನ್ನು ಬಂಧಿಸಿ ನಗದನ್ನು ವಶಕ್ಕೆ ಪಡೆದಿದ್ದಾರೆ. ವಿವಿಧ ಬೈಕ್ ಕಳವು ಪ್ರಕರಣಗಳನ್ನೂ ಭೇದಿಸಿದ್ದು, ವಿಜಯಪುರ ಜಿಲ್ಲೆಯ ಬಾಬು ಜಮಖಂಡಿ, ಸಿದ್ರಾಮ್ ಅರಕೇರಿ, ಮಂಜುನಾಥ ಉಕ್ಕಲಿ, ಆಕಾಶ ಮಠಪತಿ ಎಂಬುವರನ್ನು ಬಂಧಿಸಿ 20 ಬೈಕ್ ಗಳು ಮತ್ತು ಎರಡು ಕಾರ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಚಿಕ್ಕ ಮಕ್ಕಳೆಂದೂ ಲೆಕ್ಕಿಸದೆ ಬಾಸುಂಡೆ ಬರುವಂತೆ ಥಳಿಸಿದ ದುರುಳರು!
ಜಿಲ್ಲೆಯ ಖದೀಮರ ಜೊತೆಗೆ ಅನ್ಯ ಜಿಲ್ಲೆ ಹಾಗೂ ಅಂತಾರಾಜ್ಯದ ಆರೋಪಿಗಳ ಕೈಗೂ ಕೋಳ ಹಾಕಿರುವ ಖಾಕಿ, ಮೋಸ ಹೋದವರಿಗೆ ಮತ್ತು ಕಳ್ಳತನಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವಿಜಯಪುರ ಗ್ರಾಮೀಣ ಡಿವೈಎಸ್ಪಿ ಟಿ. ಎಸ್. ಸುಲ್ಫಿ, ಇನ್ಸ್ಪೆಕ್ಟರ್ಗಳಾದ ರಾಯಗೊಂಡ ಜಾನಾರ, ರಮೇಶ ಆವಜಿ, ಸಬ್ ಇನ್ಸಪೆಕ್ಟರ್ಗಳು ಹಾಗೂ ಪೊಲೀಸ್ ಕಾನ್ಸ್ಟೇಬಲ್ಸ್ಗಳಿಗೆ ಪ್ರಮಾಣಪತ್ರ ನೀಡಿ ಎಸ್ಪಿ ಲಕ್ಷ್ಮಣ ನಿಂಬರಗಿ ಮತ್ತು ಎಎಸ್ಪಿ ರಾಮನಗೌಡ ಹಟ್ಟಿ ಸನ್ಮಾನಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.